Advertisement

ಫೋನ್‌ನಲ್ಲಿ ಹೆಚ್ಚು ಮಾತಾಡಿದ್ದಕ್ಕೆ ಪತ್ನಿ ಕೊಂದ!

10:48 AM Mar 27, 2022 | Team Udayavani |

ಬೆಂಗಳೂರು: ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಪತ್ನಿಯ ವರ್ತನೆಗೆ ಬೇಸತ್ತ ಪತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿ ರುವ ಘಟನೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನೇಪಾಳ ಮೂಲದ ಕಮಲಾದೇವಿ (45) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಈಕೆ ಪತಿ ತೇಜ್‌ ಬಹದ್ದೂರ್‌ (52)ನನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ದಂಪತಿ 6 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದು, ಈ ಮೊದಲು ಸಂಜಯ ನಗರದಲ್ಲಿ ವಾಸವಾಗಿದ್ದರು. ನಂತರ 3 ವರ್ಷಗಳ ಹಿಂದೆ ಬಿ.ಚನ್ನಸಂದ್ರಕ್ಕೆ ಸ್ಥಳಾಂತರಗೊಂಡಿದ್ದರು. ದಂಪತಿಗೆ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಈ ಇಬ್ಬರು ಹೆಣ್ಣು ಮಕ್ಕಳು ನೇಪಾಳದಲ್ಲಿ ವಾಸವಾಗಿದ್ದಾರೆ.

ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ತೇಜ್‌ ಬಹ ದ್ದೂರ್‌ ಪತ್ನಿ, ಮಗನನ್ನು ಬಿಟ್ಟು ಬೇರೆ ಹೋಗಿದ್ದರು. ಬಿ.ಚನ್ನಸಂದ್ರದಲ್ಲಿ ತಾಯಿ-ಮಗ ಇಬ್ಬರೇ ವಾಸವಾಗಿದ್ದರು. ಮಗ ಪುಸ್ತಕ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ತೇಜ್‌ ಬಹದ್ದೂರ್‌ ವಾಪಸ್‌ ಮನೆಗೆ ಬಂದು “ನಿಮ್ಮ ಜತೆಯಲ್ಲಿ ಇಲ್ಲಿಯೇ ಇರುತ್ತೇನೆ’ ಎಂದು ಹೇಳಿದ್ದಾನೆ. ಈ ಮಧ್ಯೆ ಪತ್ನಿ ಕಮಲಾದೇವಿ ಆಗಾಗ್ಗೆ ಬೇರೆಯವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವುದನ್ನು ಗಮನಿಸಿದ ಪತಿ ಇದೇ ವಿಚಾರವಾಗಿ ಜಗಳವಾಡಿದ್ದಾನೆ.

ಶುಕ್ರವಾರ ರಾತ್ರಿ ಕೂಡ ದಂಪತಿ ನಡುವೆ ಇದೇ ವಿಚಾರವಾಗಿ ಗಲಾಟೆ ನಡೆಸಿದ್ದು, ಅದು ವಿಕೋ ಪಕ್ಕೆ ಹೋದಾಗ ಆರೋಪಿ ಪತಿ ಅಡುಗೆ ಮನೆಯಲ್ಲಿದ್ದ ಚಾಕು ತಂದು ಮೂರು ಬಾರಿ ಪತ್ನಿ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ದಂಪತಿ ಕೂಗಾಟ ಕೇಳಿ ಸ್ಥಳೀಯರು ಮನೆ ಬಳಿ ಬಂದು ನೋಡಿದಾಗ ಕಮಲಾದೇವಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ರಾಮಮೂರ್ತಿನಗರ ಠಾಣೆ ಪೊಲೀಸರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next