Advertisement

ಜ್ಯೋತಿಷಿ ಮಾತು ಕೇಳಿ ಪತ್ನಿಗೆ ನಿಂದಿಸಿದ ಪತಿ! ಮನನೊಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ

10:23 PM Nov 14, 2020 | sudhir |

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜ್ಯೋತಿಷಿ ಮಾತು ಕೇಳಿ ಪತಿ ನಿಂದಿಸಿದ್ದಕ್ಕೆ ನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಅಶ್ವಿ‌ನಿ (25) ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಸಂಬಂಧ ಅಶ್ವಿ‌ನಿ ಪತಿ ಯುವರಾಜ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಾಣಸವಾಡಿಯ ಅಶ್ವಿ‌ನಿ ಹಾಗೂ ಯುವರಾಜ ಕೆಲವರ್ಷಗಳಿಂದ ಪ್ರೀತಿಸುತ್ತಿದ್ದು ಇದೇ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಹುಳಿಮಾವು ಅಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರೂ ವಾಸಿಸುತ್ತಿದ್ದರು. ಅಶ್ವಿ‌ನಿ ಕಂಪೆನಿಯೊಂದರಲ್ಲಿ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಕೆಲತಿಂಗಳಿನಿಂದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಶುಕ್ರವಾರ ಅಶ್ವಿ‌ನಿ ತಾಯಿ ಉಮಾ ಅವರು ಮನೆಗೆ ಬಂದಿದ್ದು, ಆಗಲೂ ದಂಪತಿ ಜಗಳ ಆಡಿದ್ದರು. ತಾನು ಹಬ್ಬಕ್ಕೆ ಮನೆಗೆ ಬರುವುದಾಗಿ ತಿಳಿಸಿ ಅಶ್ವಿ‌ನಿ ತಾಯಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ಆಧಾರ್‌ ಮಾದರಿಯಲ್ಲೇ ಕೋವಿಡ್ ಲಸಿಕೆ ಹಂಚಿಕೆ ಮಾಡುವುದು ಸೂಕ್ತ : ನಂದನ್‌ ನಿಲೇಕಣಿ ಅಭಿಪ್ರಾಯ

Advertisement

ಶನಿವಾರ ಬೆಳಿಗ್ಗೆ ಅಶ್ವಿ‌ನಿ ತಮ್ಮ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಇದನ್ನು ಗಮನಿಸಿದ ಯುವರಾಜ್‌ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಶ್ವಿ‌ನಿ ತಾಯಿ ಉಮಾ ಅವರು ಮಗಳ ಸಾವಿಗೆ ಅಳಿಯ ಯುವರಾಜನೇ ಕಾರಣ ಎಂದು ಆರೋಪಿಸಿ ದೂರು ನೀಡಿದ್ದಾರೆ. ಪ್ರತಿ ಬಾರಿ ಜಗಳ ಆಡಿದಾಗ ಜ್ಯೋತಿಷಿ ಹೇಳಿದ್ದಾನೆ ನಿನಗೆ ಮಕ್ಕಳಾಗಲ್ಲ ಎಂದು ಚುಚ್ಚಿ ಮಾತನಾಡಿ ಆಕೆಗೆ ಕಿರುಕುಳ ನೀಡುತ್ತಿದ್ದ. ಶುಕ್ರವಾರ ನಡೆದ ಜಗಳದಲ್ಲೂ ಇದೇ ಮಾತನ್ನು ಆಡಿ ಮಗಳ ಮನಸ್ಸಿಗೆ ಘಾಸಿ ಉಂಟು ಮಾಡುತ್ತಿದ್ದ. ಈ ಕಾರಣಕ್ಕೆ ಆಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಹೀಗಾಗಿ ಮಗಳ ಸಾವಿಗೆ ಕಾರಣವಾದ ಯುವರಾಜ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆರೋಪಿಸಿ ದೂರು ನೀಡಿದ್ದಾರೆ.

ಉಮಾ ಅವರ ದೂರು ಆಧರಿಸಿ ಆರೋಪಿ ಯುವರಾಜ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಮೃತ ಅಶ್ವಿ‌ನಿಯವರ ಮರಣೋತ್ತರ ಪರೀಕ್ಷಾ ವರದಿ ಬರಬೇಕಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next