Advertisement

ಒಂದೇ ಬದಿಯ ಕಡಲು

01:01 PM Apr 18, 2019 | Hari Prasad |

ಗಂಡು ಹೆಣ್ಣು ಒಬ್ಬರಿಗೊಬ್ಬರು ಹೊಂದಿಕೊಳ್ಳುತ್ತಾರೋ ಇಲ್ಲವೋ ಎನ್ನುವುದಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಅವರಿಬ್ಬರ ವೃತ್ತಿಗಳಿಗೂ ನೀಡುವುದು ಈಗೀಗ ಹೆಚ್ಚಾಗುತ್ತಿದೆ. ಹುಡುಗಿ ಎಂ.ಎಸ್‌ ಓದಿದ್ದರೆ ಎಂ.ಎಸ್‌ ಓದಿದವನನ್ನೇ ಹುಡುಕುವುದು, ಹುಡುಗ ಡಾಕ್ಟರ್‌ ಆಗಿದ್ದರೆ ಡಾಕ್ಟರ್‌ ಹುಡುಗಿಯನ್ನೇ ತಂದುಕೊಳ್ಳುವುದು ಇವೆಲ್ಲಾ ಈಗಿನ ದಿನಮಾನಗಳಲ್ಲಿ ಸರ್ವೇ ಸಾಮಾನ್ಯ. ಹುಡುಗ-ಹುಡುಗಿಯರಷ್ಟೇ ಅಲ್ಲದೆ, ಹೆತ್ತವರೂ ಕೂಡಾ ಅದನ್ನೇ ಬಯಸುತ್ತಿದ್ದಾರೆ…

Advertisement

ಮದುವೆಗಳು ಸ್ವರ್ಗದಲ್ಲಿ ನಿಶ್ಚಿತಗೊಳ್ಳುತ್ತವೆ ಎನ್ನುವುದು ಸತ್ಯ ಎಂದು ಹಲವು ಬಾರಿ ಅನ್ನಿಸಿದ್ದಿದೆ. ಎಲ್ಲೋ ಹುಟ್ಟಿ ಬೆಳೆದ ಹೆಣ್ಣು- ಗಂಡು ಪರಸ್ಪರ ಪರಿಚಿತರಾಗಿ, ಜೀವನ ಪರ್ಯಂತ ಒಂದಾಗಿ ಹೊಂದಿ ಬಾಳುವುದನ್ನು ಕಂಡರೆ ಆ ಮಾತಿನ ಮೇಲೆ ನಂಬಿಕೆ ಮೂಡುತ್ತದೆ. ಒಂದೇ ಜೀವ, ಎರಡು ದೇಹ ಎನ್ನುವ ಪರಿಯಲ್ಲಿ ವೈವಾಹಿಕ ಬದುಕಿನ ಆದಿಯಿಂದ ಮುಕ್ತಾಯದ ತನಕ ಬದುಕು ಕಟ್ಟುವುದು ಸೋಜಿಗ ಮತ್ತು ದೈವಿಕ ಕ್ರಿಯೆಯೇ ಸರಿ. ಗಂಡು ಹೆಣ್ಣನ್ನು ಒಂದುಗೂಡಿಸುವ ಪ್ರಕ್ರಿಯೆ ಒಂದು ಪರೀಕ್ಷೆಯೇ ಸರಿ. ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯಗಳನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಈ ಸಂದರ್ಭದಲ್ಲಿರುತ್ತದೆ. ಹಾಗೆಂದು ಜಡ್ಜ್ ಮಾಡುವುದೆಲ್ಲವೂ ನಿಜವೇ ಆಗಿರುತ್ತದೆ ಎಂದು ಹೇಳುವ ಹಾಗೂ ಇಲ್ಲ. ಸರಿ-ತಪ್ಪುಗಳ ನಡುವೆಯೇ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.

ಈಗಂತೂ ಗಂಡು ಹೆಣ್ಣು ಒಬ್ಬರಿಗೊಬ್ಬರು ಹೊಂದಿಕೊಳ್ಳುತ್ತಾರೋ ಇಲ್ಲವೋ ಎನ್ನುವುದಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಅವರಿಬ್ಬರ ವೃತ್ತಿಗಳಿಗೂ ನೀಡುತ್ತಾರೆ. ಹುಡುಗಿ ಎಂ.ಎಸ್‌. ಓದಿದ್ದರೆ ಎಂ.ಎಸ್‌. ಓದಿದವನನ್ನೇ ಹುಡುಕುವುದು, ಹುಡುಗ ಡಾಕ್ಟರ್‌ ಆಗಿದ್ದರೆ ಡಾಕ್ಟರ್‌ ಹುಡುಗಿಯನ್ನೇ ತಂದುಕೊಳ್ಳುವುದು ಇವೆಲ್ಲಾ ಈಗ ಸರ್ವೇ ಸಾಮಾನ್ಯ. ಹೀಗಾಗಿ ಮದುವೆ ಮಾತ್ರವಲ್ಲ, ವಧೂ ವರರ ವೃತ್ತಿಗಳು ಕೂಡ ಸ್ವರ್ಗದಲ್ಲೇ ತೀರ್ಮಾನವಾಗಿರುತ್ತದೆ ಎನ್ನಿಸುತ್ತದೆ.

ಪರಿಚಿತ ಕುಟುಂಬದವರು ಅವರ ಮಗನಿಗೆ ಹುಡುಗಿ ಹುಡುಕುತ್ತಿದ್ದರು. ಮೊನ್ನೆ ಭೇಟಿಯಾದಾಗ ಮಗನ ಬಗ್ಗೆ ಪ್ರಸ್ತಾಪಿಸುತ್ತಾ, ‘ಇನ್ನೂ ಸರಿಯಾದ ಹುಡುಗಿ ಸಿಕ್ಕಿಲ್ಲ’ ಎಂದಿದ್ದರು. ‘ಯಾಕೆ, ಏನಾಯ್ತು?’ ಎಂದು ವಿಚಾರಿಸಿದಾಗ, ನಮ್ಮಲ್ಲಿ ಡಾಕ್ಟರ್‌ ಹುಡುಗಿಯರು ತುಂಬಾ ಕಮ್ಮಿ. ಹಲವು ಪ್ರಪೋಸಲ್‌ಗ‌ಳು ಬಂದಿದ್ದವು. ಜಾತಕ ಹೊಂದಿದರೆ ರೂಪ ಸಾಲದು, ರೂಪವಿದ್ದರೆ ಇವನ ಹೈಟ್‌ಗೆ ಕಮ್ಮಿ. ಹೆತ್ತವರ ಜವಾಬ್ದಾರಿಯ ಹೊಣೆ ಕೆಲವರಿಗೆ.

ಯಾಕೋ ಡಾಕ್ಟರ್‌ ಆಗಿರೋ ಮಗನಿಗೆ ಡಾಕ್ಟರ್‌ ಹುಡುಗಿ ಸಿಗ್ತಾನೇ ಇಲ್ಲ. ಒಂದು ವರ್ಷವಾಯ್ತು ಕನ್ಯೆ ಹುಡುಕಲು ಶುರು ಮಾಡಿ ಎಂದರು. ಡಾಕ್ಟರ್‌ ಹುಡುಗಿಯೇ ಆಗಬೇಕು ಎನ್ನುವುದು ಅವರೆಲ್ಲರ ಆಸೆ. ಬೇರೆ ವೃತ್ತಿಯಲ್ಲಿರುವ ಹುಡುಗಿ ಯಾಕೆ ಬೇಡ, ಎಂದು ಕೇಳಿದ್ದಕ್ಕೆ ಅವರು ಹೇಳಿದ್ದರು- “ಡಾಕ್ಟರ್‌ ಯುವಕನಿಗೆ ಅದೇ ಕೋರ್ಸ್‌ ಮಾಡಿದ ಕನ್ಯೆಯೇ ಆಗಬೇಕು. ಹಾಗಿದ್ದರೆ ಮಾತ್ರ ಇಬ್ಬರ ನಡುವೆ ಚೆನ್ನಾಗಿ ಹೊಂದಾಣಿಕೆ ಮೂಡಿ ಬರುತ್ತದೆ. ಮಗನ ಆಸೆ ಕೂಡಾ ಅದೇ. ಟೀಚಿಂಗ್‌, ಬ್ಯಾಂಕ್‌ ಜಾಬ್‌, ಎಂಜಿನಿಯರ್‌ ಹುಡುಗಿಯರು ಇದ್ದಾರೆ. ಆದರೆ ಅದು ಸರಿ ಹೋಗುವುದಿಲ್ಲ’.

Advertisement

ಎಂಬಿಬಿಎಸ್‌ ನಂತರ ಪಿ.ಜಿ. ಓದಿದ್ದರೆ ಅದೇ ಕ್ವಾಲಿಫಿಕೇಷನ್‌ ಇರುವ ಯುವಕ ಅಥವಾ ಯುವತಿಯರನ್ನು ಮೊದಲ ಆಯ್ಕೆಯಾಗಿ ಪರಿಗಣಿಸುತ್ತಾರೆ. ಎಂ.ಬಿ.ಬಿ.ಎಸ್‌. ಕಲಿತ ಯುವಕನಿಗೆ ತನ್ನದೇ ಕೋರ್ಸ್‌ನ ಯುವತಿ ಸಿಗದಿದ್ದಾಗ ಆಯುರ್ವೇದ, ಹೋಮಿಯೋಪತಿ ಓದಿದ ಸಂಗಾತಿಯನ್ನು ಒಪ್ಪಿಕೊಳ್ಳುವುದಿದೆ.

ಬ್ಯಾಂಕ್‌ ಉದ್ಯೋಗಸ್ಥರ ಮೊದಲ ಆಯ್ಕೆ ಬ್ಯಾಂಕ್‌ ನೌಕರಿಯಲ್ಲಿರುವವರೇ ಆಗಿರುತ್ತಾರೆ. ಎಂಜಿನಿಯರ್‌, ಟೀಚಿಂಗ್‌, ಲಾಯರ್‌ ಹೀಗೆ ಎಲ್ಲರೂ ತಮ್ಮದೇ ವೃತ್ತಿಯಲ್ಲಿರುವ ಸಂಗಾತಿಯನ್ನು ಬಯಸುವುದು ಸಾಮಾನ್ಯ. ಇನ್ನು ಸಣ್ಣ ಪುಟ್ಟ ಉದ್ಯೋಗಿಗಳು, ಕೃಷಿ ಕ್ಷೇತ್ರದವರು, ಅರ್ಚಕರು, ಅಡುಗೆ ವೃತ್ತಿಯಲ್ಲಿರುವವರ ಆಯ್ಕೆಯೂ ಅದೇ ರೀತಿ ಇರುತ್ತದೆ. ಸಮ ಸಮ ವಿದ್ಯೆ, ಸಮಾನ ಮಟ್ಟದ ಉದ್ಯೋಗ ಇದ್ದವರನ್ನೇ ಹೆತ್ತವರು ಕೂಡಾ ಬಯಸುತ್ತಾರೆ.

ಸುಖಮಯ ಜೀವನ ನಡೆಸಲು ಸಂಗಾತಿಯ ವಿದ್ಯೆ, ಉದ್ಯೋಗ ಹೊಂದಿಕೆಯಾಗ­ಬೇಕೆಂಬುದು ನಿಜಕ್ಕೂ ಹೌದಾ? ಇದು ಯೋಚಿಸಬೇಕಾದ ವಿಷಯವೇ. ಈ ಮನೋಭಾವ ನಿಶ್ಶಬ್ದವಾಗಿ ಸಮಾಜದಲ್ಲಿ ಬೆಳೆದು, ಗಟ್ಟಿಯಾಗಿ ಬೇರೂರಿ ನಿಂತಿರುವುದಂತೂ ಸತ್ಯ. ಇದಕ್ಕೆ ಕಾರಣ, ತಮ್ಮ ವೃತ್ತಿರಂಗದ ಸಮಸ್ಯೆ, ನೋವು-ನಲಿವುಗಳು ಸಂಗಾತಿಗೂ ಅರ್ಥವಾಗುವಂತಿ­ದ್ದರೆ ಚೆಂದ ಎಂಬ ಮನೋಭಾವ ಇರಬಹುದು. ವೈದ್ಯರಾದವರಿಗೆ ಮನೆ, ಕುಟುಂಬ, ಮಕ್ಕಳು ಎಂದು ಸಮಯ ಕೊಡಲು ಸಾಧ್ಯವಿಲ್ಲ. ನಡುರಾತ್ರಿ ಕರೆದರೂ ಆತ ರೋಗಿಗಳ ಸೇವೆಗೆ ಹೊರಟು ನಿಲ್ಲಬೇಕು. ಪತಿ, ಪತ್ನಿಯರಿಬ್ಬರೂ ವೈದ್ಯರಾಗಿದ್ದರೆ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ.

ಆದರೆ, ಇಬ್ಬರೂ ಹೀಗೆ ಹಗಲಿರುಳು ಡ್ಯೂಟಿಯೇ ಮುಖ್ಯವೆಂದರೆ ಮನೆ, ಮಕ್ಕಳು, ಹಿರಿಯರು, ಸಂಬಂಧಗಳು ಎಂದು ಗಮನ ಕೊಡಲು ವೇಳೆ ಎಲ್ಲಿರುತ್ತದೆ? ಅವರದೇ ಕರುಳ ಕುಡಿಗಳನ್ನು ವಿಚಾರಿಸಿಕೊಳ್ಳಲು, ಮಮತೆ, ಪ್ರೀತಿ, ವಿಶ್ವಾಸದ ಸವಿ ಉಣ್ಣಿಸಲಾದರೂ ಸಮಯವೆಲ್ಲಿದೆ? ಎಲ್ಲ ಇದ್ದೂ ಅನಾಥರ ಹಾಗೆ ಶೈಶವ, ಬಾಲ್ಯ ಕಳೆವ ಕಂದಮ್ಮಗಳಿಗೆ ಆ ವಾತ್ಸಲ್ಯ ಪಡೆಯುವ ಹಕ್ಕಿದೆ ಎಂದು ಯಾರು ಅರ್ಥ ಮಾಡಿಕೊಳ್ಳುತ್ತಾರೆ?

ಹೆಚ್ಚಿನ ಕುಟುಂಬದ ಸ್ಥಿತಿಯೂ ಅದೇ. ಅಧ್ಯಾಪಕ ದಂಪತಿಗಾದರೆ ಸಾಕಷ್ಟು ರಜೆ ಸಿಗುತ್ತದೆ. ಐ.ಟಿ. ಕ್ಷೇತ್ರದಲ್ಲಿ ಹಗಲು ಇರುಳಾಗಿ; ಇರುಳು ಹಗಲಾಗುತ್ತದೆ. ನವದಂಪತಿಗೆ ಉದ್ಯೋಗಕ್ಕೇ ಹೆಚ್ಚಿನ ಸಮಯ ಮೀಸಲಿಡಬೇಕಾಗಿ ಬಂದು ಅದರಲ್ಲೇ ಹೆಚ್ಚಿನ ಸಮಯ ಸರಿದು ಹೋಗುತ್ತದೆ. ಖಾಸಗಿ ಜೀವನಕ್ಕೆ ಸಮಯವೇ ಇರುವುದಿಲ್ಲ. ಒಂದು ರೀತಿಯಲ್ಲಿ ತಮ್ಮದೇ ಮನೆಗೆ ತಾವು ಅತಿಥಿಗಳು ಎಂದರೆ ಸುಳ್ಳಲ್ಲ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರದೂ ಇದೇ ಕಥೆ.

ಮನೆಯಲ್ಲಿ ಅಡುಗೆ ಮನೆ ಬರೀ ಹೆಸರಿಗಷ್ಟೆ. ಹೊರಗಿನ ರೆಸ್ಟುರಾಗಳಲ್ಲೇ ಊಟ ತಿಂಡಿ ಕಾಫಿ ಎಲ್ಲವೂ ಮುಗಿದುಹೋಗುತ್ತದೆ. ಮನೆಯಲ್ಲಿ ಆಹಾರ ತಯಾರಿಸುತ್ತಾ ಇದ್ದರೆ ಬಿಡುವಿಗೆ ಸಿಗುವ ಅತ್ಯಲ್ಪ ವೇಳೆಯೂ ವ್ಯರ್ಥವಾಗುತ್ತದೆ. ಅದಕ್ಕಾಗಿ ಹೋಟೆಲ್‌ಗ‌ಳ ಮೊರೆ ಹೋಗುತ್ತಾರೆ. ಅಲ್ಲಾದರೆ ಬೇಕಾದ್ದು ಸಿಗುತ್ತದೆ. ದೇಶ, ವಿದೇಶಗಳ ಪುಡ್‌ ಕ್ಷಣಾರ್ಧದಲ್ಲಿ ಎದುರಿಗೆ ಬರುತ್ತದೆ. ಆರೋಗ್ಯ ಕೆಡುವ ತನಕವೂ ಅದಕ್ಕೇ ಶರಣು.

ಹೀಗಾಗಿ ಎಷ್ಟೋ ಮಂದಿ ಹೆತ್ತವರು ಒಂದೇ ವೃತ್ತಿಯಲ್ಲಿರುವವರನ್ನು ಆರಿಸುವುದಿಲ್ಲ. ಇದರಿಂದ ಸಂಸಾರ ನಿರ್ವಹಣೆ ಸುಲಭವಾಗುತ್ತದೆ ಎನ್ನುವುದು ಅವರ ನಂಬಿಕೆ. ಬಹಳಷ್ಟು ಸಲ ಅದು ನಿಜವೆಂದು ಸಾಬೀತೂ ಆಗಿದೆ. ಇದರಿಂದ ಮನೆ ಕೆಲಸಗಳು ಸುಸೂತ್ರವಾಗಿ ಸಾಗುತ್ತದೆ. ಅಡುಗೆ ಕೆಲಸ, ಮಕ್ಕಳನ್ನು ಶಾಲೆಗೆ ಬಿಡುವುದು, ವಾಪಸ್‌ ಕರೆತರುವುದು, ಸಂಜೆ ತರಕಾರಿ- ದಿನಸಿ ಸಾಮಗ್ರಿ ತರುವುದು ಹೀಗೆ ಇತ್ಯಾದಿ ಕೆಲಸಗಳೆಲ್ಲವನ್ನೂ ಗಂಡ- ಹೆಂಡತಿ ತಮ್ಮ ತಮ್ಮ ಸಮಯಕ್ಕೆ ಅನುಸಾರವಾಗಿ ಹಂಚಿಕೊಳ್ಳ­ಬಹುದು. ಇಬ್ಬರೂ ಒಂದೇ ವೃತ್ತಿಯಲ್ಲಿದ್ದರೆ, ಇಬ್ಬರ ಕೆಲಸದ ವೇಳೆಯೂ ಒಂದೇ ರೀತಿಯಿದ್ದರೆ ಎಷ್ಟೋ ಕೆಲಸಗಳು ಉಳಿದು­ಹೋಗ­ಬಹುದು ಅಥವಾ ಮಾಡಿ­ಕೊಳ್ಳಲು ತೊಂದರೆಯಾಗಬಹುದು.

ಪರಸ್ಪರ ಹೊಂದಾಣಿಕೆಯ ವಿಷಯಕ್ಕೆ ಬಂದಾಗ ಒಂದೇ ವೃತ್ತಿಯ ಹುಡುಗ ಹುಡುಗಿ ಒಬ್ಬರನ್ನೊ­ಬ್ಬರು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ ಎನ್ನುವುದು ನಿಜ. ಹುಡುಗ-ಹುಡುಗಿ ಬೇರೆ ಬೇರೆ ವೃತ್ತಿಯಲ್ಲಿದ್ದರೆ ಸಂಸಾರವನ್ನು ಬ್ಯಾಲೆನ್ಸ್‌ ಆಗಿ ತೂಗಿಸಿಕೊಂಡು ಹೋಗಬಹುದು ಎನ್ನುವುದು ಕೂಡಾ ನಿಜ. ಎರಡೂ ಸಂದರ್ಭಗಳಲ್ಲಿ ಅದರದ್ದೇ ಆದ ಸವಾಲುಗಳಿರುತ್ತವೆ, ಪ್ರಯೋಜನಗಳೂ ಇರುತ್ತವೆ. ಹುಡುಗ ಹುಡುಗಿಯರು ತಮ್ಮ ಬದುಕನ್ನು ಯಾವ ರೀತಿ ರೂಪಿಸಿಕೊಂಡು ಹೋಗಬೇಕು ಅಂದು ಕೊಂಡಿರುತ್ತಾರೋ ಅದಕ್ಕೆ ತಕ್ಕ ಹಾಗೆ ಸಂಗಾತಿಯನ್ನು ಆರಿಸಿಕೊಳ್ಳಬಹುದು.

— ಕೃಷ್ಣವೇಣಿ ಕಿದೂರ್‌

Advertisement

Udayavani is now on Telegram. Click here to join our channel and stay updated with the latest news.

Next