Advertisement

ಹೊಸ ವರ್ಷಕೆ ಹೊಸ ವರ್ಷಕ್ಕೆ ನೂರಾರು ನಿರೀಕೆ ನೂರಾರು ನಿರೀಕ್ಷೆ

10:57 AM Jan 01, 2019 | |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಮಟ್ಟಿಗೆ 2018ನೇ ವರ್ಷ ಆಶಾದಾಯಕವಲ್ಲವೆನಿಸಿದರೂ, ಜನ ಹಲವು ನಿರೀಕ್ಷೆಗಳೊಂದಿಗೆ 2019ನ್ನು ಸ್ವಾಗತಿಸಿದ್ದಾರೆ. ಈ ವರ್ಷದಲ್ಲಾದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳಾಗಿ ಹಲವು ಸಮಸ್ಯೆಗಳು ಬಗೆಹರಿಯಬೇಕು ಎಂಬ ಆಶಾಭಾವ ಜನರದ್ದಾಗಿದೆ.

Advertisement

ರಾಜಕೀಯ ಸ್ಥಾನಪಲ್ಲಟ, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಇನ್ನಿತರೆ ಹಲವು ಕಹಿ ಘಟನೆಗಳು ಹಾಗೂ ಸಣ್ಣಪುಟ್ಟ ಸಿಹಿ ನೆನಪಿನೊಂದಿಗೆ 2018 ನೇ ವರ್ಷಕ್ಕೆ ತಿಲಾಂಜಲಿ ಹಾಡಿದ ಜಿಲ್ಲೆಯ ಜನ, ಬಹು ನಿರೀಕ್ಷೆ ಹಾಗೂ ಅಭಿವೃದ್ಧಿಯ ಕನಸನ್ನು ಹೊತ್ತು 2019ನ್ನು ಸ್ವಾಗತಿಸಿದ್ದಾರೆ.
 
ಕಳೆದ ವರ್ಷ ಜಿಲ್ಲೆಯ ಅಭಿವೃದ್ಧಿ, ರೈತರಿಗೆ ಸಮರ್ಪಕ ನೀರು, ನಿರುದ್ಯೋಗ ಸಮಸ್ಯೆ ನಿವಾರಣೆ ಸೇರಿದಂತೆ ಹಲವು ಅಭಿವೃದ್ಧಿ ನಿರೀಕ್ಷಿಸಲಾಗಿತ್ತಾದರೂ, ಇವೆಲ್ಲ ನಿರೀಕ್ಷಿತ ಪ್ರಮಾಣದಲ್ಲಿ ಈಡೇರಲಿಲ್ಲ. ಆದರೆ, 2018ರಲ್ಲಿ ಆಗಲಾರದ ಕೆಲಸ ಕಾರ್ಯಗಳು 2019ರಲ್ಲಾದರೂ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಲಿ ಎಂಬುದು ಜನರ ಒತ್ತಾಯ.

ಬರ ನೀಗಲಿ: 2018ರಲ್ಲಿ ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷೆಗೂ ನೀರು ಹರಿದು ಬಂತು. 1.03 ಲಕ್ಷ ಕ್ಯೂಸೆಕ್‌ ಒಳಹರಿವು ದಾಖಲಾಗಿತ್ತು. ಅಲ್ಲದೇ ಅವಧಿಗೆ ಮುನ್ನವೇ ಮುಂಗಾರು ಆರಂಭವಾಗಿದ್ದರಿಂದ ತುಂಗಭದ್ರಾ ಜಲಾಶಯ ಸಹ ಅವಧಿಗೆ ಮುನ್ನವೇ ಭರ್ತಿಯಾಗಿತ್ತು. ಇದರಿಂದ ಜಲಾಶಯದಿಂದ ಈ ಬಾರಿ ಎರಡು ಬೆಳೆಗೆ ನೀರು ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಕೊನೆಗೆ ವರುಣನ ಅಭಾವ ಕಾಡಿತು. ಸಮರ್ಪಕ ಮಳೆಯಾಗದೆ, ಜಲಾಶಯ ಭರ್ತಿಯಾದರೂ ಬರ ಪರಿಸ್ಥಿತಿಯಿಂದ ಪಾರಾಗಲಿಲ್ಲ.

ಪರಿಣಾಮ ಜಿಲ್ಲೆಯ ರೈತರು ಸಾಕಷ್ಟು ಸಮಸ್ಯೆ ಎದುರಿಸಿದರು. ಹಾಗಾಗಿ 2019ರಲ್ಲಿ ಜಲಾಶಯ ಭರ್ತಿಯಾಗುವ ಜತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿ ಸಮೃದ್ಧ ಬೆಳೆಯ ನರೀಕ್ಷೆ ರೈತರದ್ದು.

ಹೂಳಿಗೆ ಸಿಗಲಿ ಮುಕ್ತಿ: ಅಂತಾರಾಜ್ಯ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸುಮಾರು 30 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ ಎಂಬ ಮಾತುಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಹೂಳು ತೆಗೆಯುವುದು
ಅವೈಜ್ಞಾನಿಕ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ, ಪರ್ಯಾಯ ಕ್ರಮಗಳನ್ನಾದರೂ ಕೈಗೊಂಡು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕಿದ್ದ ಸರ್ಕಾರಗಳು ಇತ್ತ ಗಮನಹರಿಸುತ್ತಿಲ್ಲ. ಹಿಂದಿನ ಕಾಂಗ್ರೆಸ್‌ ಆಡಳಿತವಿದ್ದಾಗ ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವುದಾಗಿ ಭರವಸೆ ನೀಡಿ ತ್ತಾದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ 2019ರಲ್ಲಾದರೂ ಈ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಜಲಾಶಯ ವ್ಯಾಪ್ತಿಯ ರೈತರನ್ನು ಸತತ ಬರದ ಸಂಕಷ್ಟದಿಂದ ಪಾರು ಮಾಡಬೇಕಾಗಿದೆ.

Advertisement

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಾರ್ವಜನಿಕ ಸೇವೆಗೆ ಅಣಿಯಾಗಲಿ: ನಗರದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. 2018ರಲ್ಲಿ ಚಾಲನೆ ಪಡೆದುಕೊಂಡಿದ್ದ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಆದರೆ, ಆಸ್ಪತ್ರೆ ಸಾರ್ವಜನಿಕ ಸೇವೆಗೆ ಅಣಿಯಾಗಲು ವಿಳಂಬಕ್ಕೆ ತಾಂತ್ರಿಕ ಕಾರಣಗಳೇನು ಗೊತ್ತಿಲ್ಲ. ಆದರೆ, ಇದು ಆರಂಭಗೊಂಡರೆ ದೂರದ ಊರುಗಳಲ್ಲಿ ಸಿಗುವ ಉನ್ನತ ವೈದ್ಯಕೀಯ ಸೇವೆಗಳು ನಗರದಲ್ಲೇ ದೊರೆಯಲಿದ್ದು, 2019ರಲ್ಲಾದರೂ ಕಾಮಗಾರಿ ಸಂಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಅಣಿಯಾಗಬೇಕಾಗಿದೆ. ಇವುಗಳ ಜತೆಗೆ ಇನ್ನು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಕಳೆದ 2018ರಲ್ಲಿ ವಿಧಾನಸಭೆ, ಸ್ಥಳೀಯ ಸಂಸ್ಥೆ, ಲೋಕಸಭೆ ಉಪಚುನಾವಣೆ ನಡೆದ ಹಿನ್ನೆಲೆಯಲ್ಲಿ ಬಹುತೇಕ ದಿನಗಳು ನೀತಿ ಸಂಹಿತೆ ಜಾರಿಯಿದ್ದ ಕಾರಣ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕುಂಠಿತಕ್ಕೆ ಕಾರಣವಾಗಿದೆ. ಅದೇ ರೀತಿ 2019ರಲ್ಲೂ ಲೋಕಸಭೆ ಸಾರ್ವತ್ರಿಕ ಚುನಾವಣೆ, ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ಇವುಗಳ ನಡುವೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ ಎಂಬುದು ಜಿಲ್ಲೆಯ ನಾಗರಿಕರ ಆಶಯವಾಗಿದೆ.

ಕೈಗಾರಿಕೆಗಳು ಕೈ ಹಿಡಿಯಲಿ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ಅತ್ಯಂತ ಹೇರಳವಾಗಿದ್ದರೂ, ನಿರುದ್ಯೋಗ ಸಮಸ್ಯೆ ದಿನೇ
ದಿನೇ ಹೆಚ್ಚುತ್ತಿದೆ. ಕಳೆದ 2000ನೇ ದಶಕದಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆಂದು ಜಿಲ್ಲೆಯ ಕುಡಿತಿನಿ, ವೇಣಿವೀರಾಪುರ, ಜಾನಕುಂಟೆ, ಹರಗಿನಡೋಣಿ ಗ್ರಾಮಗಳ ಬಳಿ ಮಿತ್ತಲ್‌, ಎನ್‌ಎಂಡಿಸಿ ಸೇರಿದಂತೆ ಇತರೆ ಬೃಹತ್‌ ಕಂಪನಿಗಳು ಜಮೀನು ಖರೀದಿಸಿವೆಯಾದರೂ, ಈವರೆಗೂ ಕೈಗಾರಿಕೆಗಳ
ಸ್ಥಾಪನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ಗಣಿಜಿಲ್ಲೆಯನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಿಸಲಿ ಎಂಬದು ಜನರ ಆಶಯ.

371(ಜೆ) ಸಮರ್ಪಕ ಅನುಷ್ಠಾನವಾಗಲಿ ಹೈಕ ಭಾಗಕ್ಕೆ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸುವ 371(ಜೆ) 2018ರಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಲ್ಲಿ ಅಸಮಾಧಾನವಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ
ಜಾಗೃತಿ ಕೊರತೆ ಕಾರಣವಾಗಿರಬಹುದು. ಆದರೆ, 2019ರಲ್ಲಾದರೂ, ಜಿಲ್ಲೆಯ ಜನಪ್ರತಿನಿಧಿದಿಗಳೆಲ್ಲರೂ ಒಗ್ಗೂಡಿ, ಪಕ್ಷಾತೀತವಾಗಿ 371(ಜೆ) ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next