Advertisement

ಶತಮಾನ ಕಂಡ ಮದ್ದಲೆ ಮಾಂತ್ರಿಕ

10:07 AM Dec 16, 2019 | mahesh |

ಕರಾವಳಿಯಲ್ಲಿ ಜೋಡಾಟಗಳ ಭರಾಟೆ ನಡೆಯುತ್ತಿದ್ದ ಕಾಲದಲ್ಲಿ ಮೊಣಕೈ ಉದ್ದದ ಪುಟ್ಟ ಮದ್ದಲೆಯನ್ನು ಹಿರಿಯಡಕ ಗೋಪಾಲರಾಯರು ಪರಿಚಯಿಸಿದರು. ಯಕ್ಷಗಾನ ಕ್ಷೇತ್ರದಲ್ಲಿ ಸಾಂಪ್ರದಾಯಿಕತೆ ಉಳಿಯಬೇಕೆಂದು ಸದಾ ಶ್ರಮಿಸಿದ ವಿದ್ವಾಂಸ. ಜೀವನ್ಮುಖಿ ರಾಯರು ಇಂದು 101ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

Advertisement

ಯಕ್ಷಗಾನದ ಎಲ್ಲ ಆಯಾಮಗಳು, ಆಯುರ್ವೇದವೇ ಮೊದಲಾದ ವಿಷಯಗಳ ಆಳ ಜ್ಞಾನವುಳ್ಳ ಹಿರಿಯಡಕ ಗೋಪಾಲ ರಾಯರು ಜನಿಸಿದ್ದು ಇಂದಿಗೆ ನೂರು ವರ್ಷಗಳ ಹಿಂದೆ, 1919ರ ಡಿಸೆಂಬರ್‌ 15ರಂದು.

ಗೋಪಾಲ ರಾಯರಿಗೆ ತಂದೆ ಹಿರಿಯಡಕ ಶೇಷಗಿರಿ ರಾಯರೇ ಗುರು. ತಂದೆಯವರು ಆಯುರ್ವೇದ ವೈದ್ಯರಾಗಿ, ಯಕ್ಷಗಾನದ ಸವ್ಯಸಾಚಿಯಾಗಿದ್ದವರು. ಉಡುಪಿ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿದ್ದ ಅನಂತೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಓದಿದ ಗೋಪಾಲ ರಾಯರು ಮತ್ತೆ ಹಿರಿಯಡಕಕ್ಕೆ ಹೋದರು. ಆದರೆ ಓದನ್ನು ಬಹುಕಾಲ ಮುಂದುವರಿಸಲಿಲ್ಲ.

ಹಿರಿಯಡಕದ ಪಟ್ಟಣಶೆಟ್ಟಿ ನಾಗಪ್ಪ ಕಾಮತ್‌ ಅವರಲ್ಲಿ ಹೆಜ್ಜೆಗಾರಿಕೆ ಕಲಿತರೂ ಅಪ್ಪನಿಗೆ ಮಗ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರೆಯುವುದು ಇಷ್ಟವಿರಲಿಲ್ಲ. ಆದರೆ ಕಲಿಕೆಯ ಆಸಕ್ತಿಯನ್ನು ಬಚ್ಚಿಡುವುದು ಹೇಗೆ. ಹಾಗಾಗಿ ಅಪ್ಪನಿಗೆ ಗೊತ್ತಾಗದ ಹಾಗೆ ಗೋಪಾಲರಾಯರ ಯಕ್ಷಗಾನ ಕಲಿಕೆ ಮುಂದುವರೆಯಿತು. ಹಾಸ್ಯಗಾರರಾಗಿಯೂ, ಮದ್ದಲೆಗಾರರಾಗಿಯೂ ಆಗಿದ್ದ ಪೆರ್ಡೂರು ವೆಂಕಟರಾವ್‌ ಅವರಲ್ಲಿ ಮದ್ದಲೆ ಕಲಿತರು. ಹಿರಿಯಡಕ ಮೇಳದಲ್ಲಿ ಕೆಲ ಕಾಲ ಸಣ್ಣಪುಟ್ಟ ವೇಷಗಳನ್ನು ಮಾಡಿದರು. ಹೆಸರಾಂತ ಭಾಗವತರಾಗಿದ್ದ ನಾರ್ಣಪ್ಪ ಉಪ್ಪೂರರ ತಂದೆ ಶ್ರೀನಿವಾಸ ಉಪ್ಪೂರರ ಭಾಗವತಿಕೆ ಜತೆ ಗೋಪಾಲರಾಯರ ಕಂಠವೂ ಪಳಗಿತು. ಶಿವರಾಮಯ್ಯರ ಜತೆ ಒತ್ತು ಮದ್ದಲೆಗಾರರಾಗಿ ಗುರುತಿಸಿಕೊಂಡರು.

ಸಂಪ್ರದಾಯಬದ್ಧ ಕಲಾವಿದ
ಹಿಂದಿನಿಂದಲೂ ಗೋಪಾಲ ರಾಯರಿಗೆ ಮಂದಾರ್ತಿ ಮೇಳಕ್ಕೆ ಸೇರಬೇಕೆಂಬ ಆಸಕ್ತಿ ಇತ್ತು. ಮಂದಾರ್ತಿ ಮೇಳ ಆ ಕಾಲದ ವಿಶೇಷ ಆಕರ್ಷಣೆ. ಅಂತಹ ಅವಕಾಶ ಒದಗಿಯೂ ಬಂತು. ಮಂದಾರ್ತಿ ಮೇಳದಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದರು. ಆಗ ಪ್ರಸಿದ್ಧರಾಗಿದ್ದ ಕುಂಜಾಲು ಶೇಷಗಿರಿ ಕಿಣಿ ಭಾಗವತರು, ಅನಂತರ ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್‌, ಗುಂಡ್ಮಿ ರಾಮಚಂದ್ರ ನಾವಡ ಅವರ ಜತೆ ಮದ್ದಲೆಗಾರರಾಗಿ ಮಿಂಚಿದರು. ಅಂದಿನ ಕಾಲದ ಸ್ಟಾರ್‌ ಕಲಾವಿದರೆನಿಸಿಕೊಂಡರು.

Advertisement

ಯಕ್ಷಗಾನದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದಾಗ ಗೋಪಾಲರಾಯರಿಗೆ ಸಂಪ್ರದಾಯಕ್ಕೆ ಧಕ್ಕೆ ಆಗುತ್ತಿದೆ ಎಂದೆನಿಸಿತು. ಹೀಗಾಗಿ, ಸುಮಾರು 58ನೆಯ ವಯಸ್ಸಿನಲ್ಲಿ ಮೇಳವನ್ನು ಬಿಟ್ಟರು. ಆದರೆ, ಯಕ್ಷ ಕಲೆಯ ವ್ಯವಸಾಯವನ್ನು ಕೈಬಿಡಲಿಲ್ಲ. ತಾಳಮದ್ದಲೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು.

ಜೋಡಾಟ ಅಬ್ಬರದಿಂದ ನಡೆಯುತ್ತಿದ್ದ ಕಾಲದಲ್ಲಿ ಸ್ಪರ್ಧೆಗಾಗಿ ಗೋಪಾಲ ರಾಯರು 30 ಇಂಚಿನ ಅಗಲದ ಮದ್ದಲೆ ಬದಲು ಮೊಣಕೈ ಉದ್ದದ ಮದ್ದಲೆಯನ್ನು ಜಾರಿಗೆ ತಂದರು. ಈಗಲೂ ಮಧ್ಯರಾತ್ರಿವರೆಗೆ ದೊಡ್ಡ ಮದ್ದಲೆ (ಇಳಿ ಶ್ರುತಿ), ಅನಂತರ ಸಣ್ಣ ಮದ್ದಲೆಯನ್ನು (ಏರು ಶ್ರುತಿ) ನುಡಿಸುತ್ತಾರೆ.

ಆಯುರ್ವೇದ ವೈದ್ಯರು
ತಂದೆಯಿಂದ ವೈದ್ಯಕೀಯ ಜ್ಞಾನವನ್ನೂ ಕಲಿತಿದ್ದ ಗೋಪಾಲರಾಯರು ಉತ್ತಮ ವೈದ್ಯರೂ ಆಗಿದ್ದರು. ಪಾರ್ಶ್ವವಾಯು, ಅಪಸ್ಮಾರ ಕಾಯಿಲೆಗಳಿಗೆ ಇವರ ಔಷಧಿ ರಾಮಬಾಣವಾಗಿತ್ತು. ಸ್ವತಃ ಔಷಧಿ ತಯಾರಿಸುತ್ತಿದ್ದರು. ಆಗ ಹಿರಿಯಡಕದಲ್ಲಿದ್ದ ಪ್ರಸಿದ್ಧ ಅಲೋಪತಿ ವೈದ್ಯ ಡಾ| ಚಂದಯ್ಯ ಹೆಗ್ಡೆ ಅವರು ಪಾರ್ಶ್ವವಾಯು ರೋಗಿಗಳಿಗೆ ಗೋಪಾಲರಾಯರ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ಮಾಡುತ್ತಿದ್ದರು. ಅನಂತರ ಸರಕಾರದ “ಲೈಸನ್ಸ್‌ರಾಜ್‌’ ಆಡಳಿತ, ಲೆಕಪತ್ರ ಶೋಧನೆ ಇತ್ಯಾದಿ ಕಿರಿಕಿರಿಯಿಂದ ವೈದ್ಯ ವೃತ್ತಿಯನ್ನು ಕೈಬಿಟ್ಟರು.

1969-70ರ ವೇಳೆ ಡಾ| ಶಿವರಾಮ ಕಾರಂತರ ಒಡನಾಟ ಗೋಪಾಲರಾಯರಿಗೆ ಆಯಿತು. ಅದೇ ವೇಳೆ ಅಮೆರಿಕದಿಂದ ಅಧ್ಯಯನಕ್ಕಾಗಿ ಉಡುಪಿಗೆ ಭೇಟಿ ನೀಡಿದ ಮಾರ್ತಾ ಆ್ಯಸ್ಟರ್ನ್ ಮತ್ತು ಶಿವರಾಮ ಕಾರಂತರ ಜತೆ ಗೋಪಾಲರಾಯರು ಸಂಘಟಕರಾಗಿ, ಕಲಾವಿದರಾಗಿಯೂ ಕೆಲಸ ಮಾಡಿದರು. ಮಾರ್ತಾ ಆ್ಯಸ್ಟರ್ನ್ ಅವರ ಇಚ್ಛೆಯಂತೆ ರಾಯರು ಈಶ್ವರನ ಪಾತ್ರವನ್ನೂ ಮಾಡಿದ್ದರು. ದೀವಟಿಗೆಯ ಬಳಕೆ, ಶ್ರುತಿಗೆ ಪುಂಗಿಯ ಬಳಕೆಯನ್ನು ಮಾರ್ತಾ ಬಹಳ ಇಷ್ಟಪಟ್ಟರು. ಕಾರಂತರು ರಂಗ ಅಭಿನಯಕ್ಕೆ ಒತ್ತು ಕೊಟ್ಟು ಕಿನ್ನರ ನೃತ್ಯ, ಮೂಕನೃತ್ಯ ಪ್ರಸ್ತುತಿಗಾಗಿ ರಚಿಸಿದ ತಂಡದಲ್ಲಿಯೂ ಗೋಪಾಲ ರಾವ್‌ ತೊಡಗಿಸಿಕೊಂಡರು. ಕಲಿತ ವಿದ್ಯೆಯನ್ನು ಇತರರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ತರಗತಿಗಳನ್ನೂ ನಡೆಸುತ್ತಿದ್ದರು. 1971ರಲ್ಲಿ ಉಡುಪಿ ಎಂಜಿಎಂ ಯಕ್ಷಗಾನ ತರಬೇತಿ ಕೇಂದ್ರ ಆರಂಭವಾದಾಗ ಗೋಪಾಲರಾಯರು ಅಲ್ಲಿ ಗುರುಗಳಾಗಿ ಸೇರಿದರು.

93ನೆಯ ವಯಸ್ಸಿನಲ್ಲೂ ಅವರು ಹಿರಿಯಡಕದಿಂದ ಉಡುಪಿಗೆ ಬಸ್ಸಿನಲ್ಲಿ ಬಂದು ಹೋಗುತ್ತಿದ್ದ ಹಿರಿಯಡಕ ಗೋಪಾಲರಾಯರು ಯೋಗಾಸನವನ್ನು ಮಾಡುತ್ತಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ಇಂದು ಉಡುಪಿ ಬಳಿಯ ಹಿರಿಯಡಕದಲ್ಲಿ ಗೋಪಾಲ ರಾಯರಿಗೆ 101ನೆಯ ಹುಟ್ಟುಹಬ್ಬದ ಅಭಿನಂದನೆಯಿದೆ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next