Advertisement

ಹುಣಸೂರು : ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿಗೆ ಸಕಲ ಸಿದ್ದತೆ

11:53 AM Jan 19, 2022 | Team Udayavani |

ಹುಣಸೂರು : ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ರಾಷ್ಟ್ರೀಯ ಹುಲಿ ಗಣತಿ ಅಂಗವಾಗಿ ನಾಗರಹೊಳೆ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಜ.23 ರಿಂದ ಎರಡು ಹಂತದಲ್ಲಿ ಗಣತಿ ಕಾರ್ಯ ನಡೆಯಲಿದ್ದು, ಹುಲಿಯ ಮಾಂಸಾಹಾರ-ಬೃಹತ್ ಸಸ್ಯಹಾರ ಪ್ರಾಣಿಗಳ ಗಣತಿ ಅವುಗಳ ಆಹಾರ ಕುರಿತು ಗಣತಿ ಆರಂಭಗೊಳ್ಳಲಿದೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಐದನೇ ರಾಷ್ಟೀಯ ಹುಲಿ ಗಣತಿಯ ಎಲ್ಲಾ ಪ್ರಕ್ರಿಯೆಯನ್ನು ಇದೇ ಮೊದಲ ಬಾರಿಗೆ ಪೆನ್-ಪೇಪರ್ ಬಳಸದೆ ಎಂ-ಸ್ಟ್ರೈಪ್ಸ್ ಎಕಾಲಾಜಿಕಲ್ ಆಪ್ ಬಳಸಿ ದಾಖಲಿಸಲಾಗುತ್ತಿದ್ದು, ಕೋವಿಡ್-19 ನಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಈ ಬಾರಿಯೂ ಸ್ವಯಂಸೇವಕರಿಲ್ಲದೆ ಉದ್ಯಾನದ ಹುಣಸೂರು, ವೀರನಹೊಸಹಳ್ಳಿ, ಆನೆಚೌಕೂರು, ಮೇಟಿಕುಪ್ಪೆ, ನಾಗರಹೊಳೆ, ಕಲ್ಲಹಳ್ಳ, ಅಂತರಸಂತೆ, ಡಿ.ಬಿ.ಕುಪ್ಪೆ ವಲಯಗಳಲ್ಲಿ 300 ಮಂದಿ ಅರಣ್ಯ ಸಿಬ್ಬಂದಿಗಳ ಮೂಲಕವೇ ಗಣತಿ ನಡೆಯಲಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾನದಂಡದಂತೆ 5ನೇ ಗಣತಿ ಕಾರ್ಯ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ದತೆ ಕೈಗೊಳ್ಳಲಾಗಿದೆ. ಆಪ್ ಮೂಲಕ ಗಣತಿ ಕಾರ್ಯವನ್ನು ದಾಖಲಿಸುವ ಕುರಿತು ಇಲಾಖೆಯ ನುರಿತ ಮಾಸ್ಟರ್ ಟ್ರೈನರ್ ಗಳಿಂದ ಸಿಬ್ಬಂದಿಗೆ ಉದ್ಯಾನದ ದಮ್ಮನಕಟ್ಟೆ, ನಾಗರಹೊಳೆ. ಮತ್ತಿಗೋಡಿನಲ್ಲಿ ತರಬೇತಿ ನೀಡಲಾಗುತ್ತಿದೆ.

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಐದನೇ ರಾಷ್ಟ್ರೀಯ ಹುಲಿ ಗಣತಿಗಾಗಿ 2021ರ ಏಪ್ರಿಲ್-ಮೇ ಮಾಹೆಯಲ್ಲೇ ಕ್ಯಾಮರಾ ಟ್ರಾಪಿಂಗ್ ಮೂಲಕ ಹುಲಿ ಗಣತಿ ನಡೆಸಲಾಗಿದೆ. ಇದೀಗ ಐದನೇ ಹುಲಿ ಗಣತಿಯು ಉದ್ಯಾನದಲ್ಲಿ ಜ.23ರಿಂದ ಫೆ.7ರವರೆಗೆ ಟ್ರಾನ್ಸಾಕ್ಟ್ ಲೈನ್ ಆಧಾರಿತ ಸಸ್ಯಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇಧಗಳ ಜೊತೆಗೆ 2019-20ರ ವನ್ಯಜೀವಿ ಸಪ್ತಾಹದ ಧ್ಯೆಯವಾಗಿದ್ದ ರಣಹದ್ದುಗಳ ಸಂರಕ್ಷಣೆ ಕುರಿತ ಯೋಜನೆಯಿಂದಾಗಿ ಈ ಬಾರಿಯ ಹುಲಿ ಗಣತಿ ನಡೆಯುವ ಈ ವೇಳೆ ಸಸ್ಯಹಾರಿ ಪ್ರಾಣಿಗಳು ಹಾಗೂ ಸಸ್ಯ ಪ್ರಭೇಧಗಳ ಸಮೀಕ್ಷೆ ಜೊತೆಗೆ ರಣಹದ್ದುಗಳು ಹಾಗೂ ಮಾಂಸಹಾರಿ ಪಕ್ಷಿ ಪ್ರಬೇಧಗಳ ಮಾಹಿತಿಯನ್ನೂ ಸಂಗ್ರಹಿಸಲಾಗುವುದು.

ಇದನ್ನೂ ಓದಿ : ಎಸ್ ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ

Advertisement

ಜ.23 ರಿಂದ 25ರವರೆಗೆ ಮಾಂಸಹಾರಿಗಳ ಪ್ರಾಣಿಗಳ ಗಣತಿ:
ಮೊದಲ ಹಂತದಲ್ಲಿ ಉದ್ಯಾನದ ಎಲ್ಲಾ 91 ಬೀಟ್‌ಗಳಲ್ಲೂ ಸಿಬ್ಬಂದಿಗಳು ದಿನಕ್ಕೆ 5ಕಿ.ಮೀ.ನಂತೆ ಮೂರು ದಿನಗಳ ಕಾಲ 15ಕಿ.ಮೀ.ಕಾಲ್ನಡಿಗೆಯಲ್ಲಿ ಸಂಚರಿಸಿ. ಇಲ್ಲಿ ಮಾಂಸಹಾರಿ ಪ್ರಾಣಿಗಳು ಹಾಗೂ ಬೃಹತ್ ಸಸ್ಯಹಾರಿ ಪ್ರಾಣಿಗಳನ್ನು ವೀಕ್ಷಿಸುವುದು, ಅವುಗಳ ಹೆಜ್ಜೆ, ಮಲ-ಮೂತ್ರ, ಧ್ವನಿ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆಪ್‌ನಲ್ಲಿ ದಾಖಲಿಸಲಿದ್ದಾರೆ.

ಲೈನ್ ಟ್ರಾನ್ಸಾಕ್ಟ್:
ಜ.27ರಿಂದ ಫೆ.1ರವರೆಗೆ ಎರಡು ಬ್ಲಾಕ್‌ಗಳಲ್ಲಿ ಲೈನ್ ಟ್ರಾನ್ಸಾಕ್ಟ್ ಮೂಲಕ ಗಣತಿ ನಡೆಯಲಿದ್ದು, ಒಟ್ಟು 105 ಬೀಟ್‌ಗಳಲ್ಲಿ 2 ಕಿ.ಮೀವರೆಗೆ ಸಂಚರಿಸಿ, ಚದರ ಕಿ.ಮೀ.ಪ್ರದೇಶದಲ್ಲಿ ಹುಲಿಯ ಆಹಾರವಾದ ಚುಕ್ಕಿಜಿಂಕೆ, ಕಾಡೆಮ್ಮೆ, ಕಾಡುಕುರಿ, ಕಡವೆ ಮತ್ತಿತರ ಸಸ್ಯಹಾರಿ ಪ್ರಾಣಿಗಳ ಗಣತಿ ಜೊತೆಗೆ ಸಸ್ಯಪ್ರಭೇಧಗಳ ಸಾಂದ್ರತೆಯನ್ನು ಸಮೀಕ್ಷೆ ಮಾಡಿ, ಎಂ-ಸ್ಟ್ರೈಪ್ಸ್ ಎಕೋಲಾಜಿಕಲ್ ಆಪ್ ಮೂಲಕ ಮಾಹಿತಿ ದಾಖಲಿಸಿಕೊಳ್ಳಲಿದ್ದಾರೆ. ಇದರೊಟ್ಟಿಗೆ ರಣಹದ್ದು ಹಾಗೂ ಪಕ್ಷಿಗಳ ಗುರುತಿಸುವಿಕೆಯೂ ನಡೆಯಲಿದೆ. ಸಸ್ಯ ಪ್ರಾಣಿಗಳ ಆಹಾರ ಹುಲ್ಲು ಹಾಗೂ ಇತರೆ ಆಹಾರ ಸಸ್ಯಗಳನ್ನು ಗುರುತಿಸುವುದು. ಐದು ಕಡೆ ಮಾಂಸಹಾರಿಗಳ ಹಿಕ್ಕೆಗಳನ್ನು ಸಂಗ್ರಹಿಸಲಿದ್ದಾರೆ.

2018ರಲ್ಲಿ ನಡೆದ ಹುಲಿ ಗಣತಿಯಲ್ಲಿ ಕರ್ನಾಟಕ 524 ಹುಲಿಗಳನ್ನು ಹೊಂದಿತ್ತು, ಹುಲಿ ಸಾಂದ್ರೆತೆಯಲ್ಲಿ ಪ್ರತಿ ಚ.ಕಿ.ಮೀಗೆ 12 ಹುಲಿಗಳಂತೆ 123 ಹುಲಿಗಳನ್ನು ಹೊಂದುವ ಮೂಲಕ ದೇಶದಲ್ಲಿ ನಾಗರಹೊಳೆ ಉದ್ಯಾನ ಮೂರನೇ ಸ್ಥಾನದಲ್ಲಿದೆ. ಈ ಬಾರಿ ಯಾವುದೇ ಪೆನ್-ಕಾಗದ ಬಳಸದೆ ಎಂ-ಸ್ಟ್ರೈಪ್ಸ್ ಎಕೋಲಾಜಿಕಲ್ ಆಫ್ ಮೂಲಕ ಮಾಹಿತಿ ದಾಖಲಿಸುತ್ತಿರುವುದು ವಿಶೇಷ. ಈಗಾಗಲೆ ರಾಷ್ಟೀಯ ಹುಲಿ ಪ್ರಾಧಿಕಾರಕ್ಕೆ ಕ್ಯಾಮರಾ ಟ್ರಾಪಿಂಗ್ ಮೂಲಕ ನಡೆದಿದ್ದ ಹುಲಿಗಣತಿಯನ್ನು ಸಲ್ಲಿಸಲಾಗಿದ್ದು, ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಹುಲಿಗಳ ಸಂಖ್ಯೆ ಹೆಚ್ಚಳವಾಗುವ ಆಶಾ ಭಾವನೆಯಿಂದಿದ್ದೇವೆ. ಈ ಬಾರಿಯ ಗಣತಿವೇಳೆ ಎಂ-ಸ್ಟ್ರೈಪ್ ಆಪ್ ಎಕೋಲಾಜಿಕಲ್ ಆಪ್ ಮೂಲಕ ಸಂಗ್ರಹಿಸುವ ಸಮಗ್ರ ಮಾಹಿತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು.
– ಡಿ.ಮಹೇಶ್‌ಕುಮಾರ್, ಮುಖ್ಯಸ್ಥರು, ಹುಲಿಯೋಜನೆ, ನಾಗರಹೊಳೆ.

Advertisement

Udayavani is now on Telegram. Click here to join our channel and stay updated with the latest news.

Next