Advertisement

ಸಂಶೋಧನಾ ಪ್ರವೃತ್ತಿ ರೂಢಿಸಿಕೊಳ್ಳಿ

03:56 PM Aug 26, 2019 | Naveen |

ಹುಮನಾಬಾದ: ಸ‌ಂಶೋಧನಾ ಪ್ರವೃತ್ತಿ ಹೆಚ್ಚಿಸುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ವರ್ಗ ಕೋಣೆಯಲ್ಲಿ ಪ್ರಶ್ನೆ ಕೇಳುವ ವಿದ್ಯಾರ್ಥಿಗಳನ್ನು ಶಿಕ್ಷಕರು ನಿರ್ಲಕ್ಷಿಸದೇ ಪ್ರೋತ್ಸಾಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಇಸ್ರೋ ನಿವೃತ್ತ ಖ್ಯಾತ ವಿಜ್ಞಾನಿ ಪಿ.ಜೆ.ಭಟ್ ಸಲಹೆ ನೀಡಿದರು.

Advertisement

ರಾಜ್ಯ ವಿಜ್ಞಾನ ಪರಿಷತ್‌, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕರಾವಿಪ ಜಿಲ್ಲಾ ಘಟಕದ ಹಾಗೂ ಶ್ರೀವೀರಭದ್ರೇಶ್ವರ ಶಿಕ್ಷಣ ದತ್ತಿಯ ಔಷಧ ವಿಜ್ಞಾನ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ಪದವಿ ಕಾಲೇಜು ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಸ್ಯೆ ಎದುರಾಗುವ ಮುನ್ನವೇ ತಮ್ಮನ್ನು ತಾವು ಅಸಮರ್ಥರೆಂದು ನಿರ್ಧರಿಸಿಕೊಂಡಿದ್ದಾರೆ. ಜೀವನದಲ್ಲಿ ಸಾಧನೆಗೆ ಅಸಾಧ್ಯವಾದದ್ದು, ಯಾವುದು ಇಲ್ಲ. ನಿರ್ದಿಷ್ಟ ಗುರಿ, ಉತ್ತಮ ಗುರುವಿನ ಜತೆಗೆ ಸತತ ಪರಿಶ್ರಮ ಪಡುವವರಿಗೆ ಸಮಸ್ಯೆ ಎಷ್ಟೇ ಕಠಿಣವಿದ್ದರೂ ಅತ್ಯಂತ ಸರಳವಾಗಿ ಬಗೆಹರಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚೆನಶೆಟ್ಟಿ ಮಾತನಾಡಿ, ಮನುಷ್ಯನ ರಕ್ತದೊಂದಿಗೆ ಬರುವ ಮಾತೃಭಾಷೆ ಅತ್ಯಂತ ಶ್ರೇಷ್ಠ. ಕನಸು ಕೊಡಲು ಸಾಧ್ಯವಾಗದ ಭಾಷೆಯಿಂದ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ವಿದ್ಯಾರ್ಥಿಗಳ ಬುದ್ಧಿ ಶಕ್ತಿ ತಿಳಿಯಲು ಅಂಕಗಳು ಮಾನದಂಡವಾಗದೇ ನೈಜ ಜ್ಞಾನ ಅಳತೆ ಗೋಲಾಗಿಸಬೇಕು. ವೈಜ್ಞಾನಿಕ ಮನೋಭಾವ ವೃದ್ಧಿಗೊಳಿಸುವುದರ ಭರದಲ್ಲಿ ಜೀವನ ಮೌಲ್ಯ ಕಲಿಸಿಕೊಡುವುದರಿಂದ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ವಂಚಿತರನ್ನಾಗಿಸಬಾರದು ಎಂದರು.

ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೆವಾಡ್‌, ನಾಡೋಜ ಡಾ.ಎಚ್.ನರಸಿಂಹಯ್ಯ ಅವರ ಸಾರಥ್ಯದಲ್ಲಿ 1980ರಲ್ಲಿ ಸ್ಥಾಪಿಸಲ್ಪಟ್ಟ ಕರಾವಿಪ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ ನೆರವಿನ ರಾಜ್ಯ ಮಟ್ಟದ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ. ವಿಜ್ಞಾನ, ವೈಜ್ಞಾನಿಕ ಮನೋಭಾವ, ಔಪಚಾರಿ ಹಾಗೂ ಅನೌಪಚಾರಿಕ ಶಿಕ್ಷಣ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯಲ್ಲಿ 11ರಾಜ್ಯಗಳ, 11ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷರೂ ಆದ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಸಂವಿಧಾನದ ಕಲಂ 51-ಸಿಎದಲ್ಲಿ ಹೇಳಿರುವಂತೆ ಪ್ರತಿಯೊಬ್ಬರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು. ನಮ್ಮವರಿಗೆ ಮಾತ್ರ ಗೊತ್ತು ಎಂದರು.

ಕರಾವಿಪ ಕಾರ್ಯಕಾರಿ ಸಮಿತಿ ಸದಸ್ಯ ಕುಂಟೆಪ್ಪ ಗೌರಿಪೂರ, ಕರಾವಿಪ ಜಿಲ್ಲಾ ಘಟಕದ ಅಧ್ಯಕ್ಷ ಶಾಂತವೀರ ಎನ್‌.ಯಲಾಲ್, ಕರಾವಿಪ ಜಿಲ್ಲಾ ಮಾಜಿ ಅಧ್ಯಕ್ಷ ಪ್ರಕಾಶ ಲಕಶೆಟ್ಟಿ, ಪಂಡಿತ್‌.ಕೆ ಬಾಳೂರೆ, ಇ.ಬಸವರಾಜ, ವೀರಭದ್ರೇಶ್ವರ ಔಷಧ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ.ನಾಗೇಂದ್ರಪ್ಪ ಧುಮ್ಮನಸೂರ, ತಾಲೂಕು ಕಸಾಪ ಅಧ್ಯಕ್ಷ ಸಚ್ಚಿದಾನಂದ ಮಠಪತಿ ಇದ್ದರು.

Advertisement

ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಸಂಯೋಜಕ ಜಗನ್ನಾಥ ಹಲಮಡ್ಗಿ ಸ್ವಾಗತಿಸಿದರು. ರಾಜಶೇಖರ ಬಿ.ಪಾಟೀಲ ನಿರೂಪಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿಟಗುಪ್ಪ ಶಿಕ್ಷಕ ಮಹಾರುದ್ರಪ್ಪ ಆಣದೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next