Advertisement

Human trafficking;ದೇಶದಲ್ಲಿ ಹೆಚ್ಚುತ್ತಿದೆ ಮಾನವ ಕಳ್ಳಸಾಗಣೆ!

12:48 AM Jan 02, 2024 | Team Udayavani |

ದೇಶವಿದೇಶಗಳಲ್ಲಿ ಹರಡಿದೆ ಮಾನವ ಕಳ್ಳಸಾಗಣೆ ಜಾಲಕಾರ್ಮಿಕರು, ನಿರುದ್ಯೋಗಿಗಳೇಬಲಿಪಶು
ಅಮೆರಿಕ ಸಹಿತ ವಿದೇಶಗಳಿಗೆ ಎಗ್ಗಿಲ್ಲದೆ ನಡೆಯುತ್ತಿದೆ ಮಾನವ ಕಳ್ಳಸಾಗಣೆ,ಅಕ್ರಮ ವಲಸೆ ಪಂಜಾಬ್‌ ಹರಿಯಾಣಗಳಿಂದ ಅಧಿಕ ಪ್ರಮಾಣದಲ್ಲಿ ವಿದೇಶಗಳಿಗೆ ಅಕ್ರಮ ವಲಸೆ…!!!

Advertisement

ವಾರದ ಹಿಂದೆ ಸೌದಿ ಅರೇಬಿಯಾದಿಂದ ನಿಕರಾಗುವಾಕ್ಕೆ ಹೊರಟ್ಟಿದ್ದ ವಿಮಾನದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಬಲವಂತವಾಗಿ ಇಳಿಸಲಾಗಿತ್ತು. ಫ್ರಾನ್ಸ್‌ನ ಸರಕಾರದ ವತಿಯಿಂದ ವಿಚಾರಣೆ ಮತ್ತು ತನಿಖೆಯ ಪ್ರಕ್ರಿಯೆ ಮುಕ್ತಾಯದ ಬಳಿಕ ವಿಮಾನದ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ದಿನಗಳ ಹಿಂದೆಯಷ್ಟೇ 276 ಮಂದಿ ಪ್ರಯಾಣಿಕರು ಮುಂಬಯಿಗೆ ಬಂದು ತಲುಪಿದ್ದಾರೆ. ಈ ಘಟನೆಯ ಬಳಿಕ ಭಾರತದಿಂದ ಮಾನವ ಕಳ್ಳಸಾಗಣೆ ನಿರಂತರವಾಗಿ ನಡೆಯುತ್ತಿರುವ ಬಗೆಗೆ ಹಲವಾರು ವರದಿಗಳು ಬಹಿರಂಗಗೊಳ್ಳತೊಡಗಿವೆ. ಅಷ್ಟು ಮಾತ್ರವಲ್ಲದೆ ದೇಶದಲ್ಲಿ ಮಾನವ ಕಳ್ಳಸಾಗಣೆ ಒಂದು ದಂಧೆಯಾಗಿ ಮಾರ್ಪಟ್ಟಿದ್ದು ದೇಶವಿದೇಶಗಳಲ್ಲಿ ಇದರ ಜಾಲ ವ್ಯಾಪಕವಾಗಿ ಹರಡಿದೆ ಎಂಬ ಆತಂಕಕಾರಿ ಮಾಹಿತಿ ತನಿಖೆಯ ವೇಳೆ ಬಯ ಲಾಗಿದೆ. 2022ರಲ್ಲಿ ಬೆಳಕಿಗೆ ಬಂದಿದ್ದ ಮಾನವ ಕಳ್ಳ ಸಾಗಣೆ ಪ್ರಕರಣದ ಸೂತ್ರಧಾರಿ ಹೈದರಾಬಾದ್‌ನ ಶಶಿಕಿರಣ್‌ ರೆಡ್ಡಿ ಎಂಬಾತನೇ ಈ ಪ್ರಕರಣದ ಹಿಂದೆ ಇದ್ದಾನೆ ಎಂದು ಹೇಳಲಾಗುತ್ತಿದೆ.

ಏನಿದು ಘಟನೆ?
2022ರ ಡಿ.21ರಂದು ಸೌದಿ ಅರೇಬಿಯಾದಿಂದ ಸುಮಾರು 303 ಪ್ರಯಾಣಿಕರನ್ನು ಹೊತ್ತು ನಿಕರಾಗುವಾಕ್ಕೆ ತೆರಳುತ್ತಿದ್ದ ರೊಮೇನಿಯಾ ಮೂಲದ ಲೆಜೆಂಡ್‌ ಏರ್‌ಲೈನ್ಸ್‌ಗೆ ಸೇರಿದ ಬಾಡಿಗೆ ವಿಮಾನವನ್ನು ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಈ ವಿಮಾನದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಭದ್ರತಾ ಅಧಿಕಾರಿಗಳು ಈ ವಿಮಾನವನ್ನು ವ್ಯಾಟ್ರಿ ನಿಲ್ದಾಣದಲ್ಲಿ ಇಳಿಸುವಂತೆ ಪೈಲಟ್‌ಗೆ ಸೂಚನೆ ನೀಡಿದ್ದರು. ವಿಮಾನದಲ್ಲಿದ್ದ 303 ಪ್ರಯಾಣಿಕರ ಪೈಕಿ 11 ಮಂದಿ ಅಪ್ರಾಪ್ತ ವಯಸ್ಕರು ಇದ್ದರು. ಮಾನವ ಕಳ್ಳಸಾಗಣೆಯ ಸುಳಿವು ಸಿಕ್ಕೊಡನೆ ಫ್ರಾನ್ಸ್‌ನ ಸರಕಾರವು ಎಲ್ಲ ಪ್ರಯಾಣಿಕರನ್ನು ವಿಚಾರಣೆಗೆ ಒಳಡಿಸಿತು. ತನಿಖೆಯ ಪ್ರಕ್ರಿಯೆಗಳು ಮುಗಿದ ಅನಂತರ ಪ್ರಯಾಣವನ್ನು ಮುಂದುವರಿಸಲು ಯಾನಿಗಳಿಗೆ ಅನುವು ಮಾಡಿಕೊಡಲಾಗಿತ್ತು.

ಅಮೆರಿಕದತ್ತ ಪ್ರಯಾಣ !
ಮಾಧ್ಯಮ ಸಂಸ್ಥೆ ಎಎಫ್ಪಿಯ ವರದಿಯ ಪ್ರಕಾರ ಭಾರತೀಯ ಪ್ರಯಾಣಿಕರಲ್ಲಿ ಹೆಚ್ಚಿನವರು ಪಂಜಾಬ್‌ ಹಾಗೂ ಗುಜರಾತ್‌ ರಾಜ್ಯದವರೆಂದು ಹೇಳಿಕೊಂಡಿದ್ದಾರೆ. ಇವರೆಲ್ಲರೂ ನಿಕರಾಗುವಾದ ಮೂಲಕ ಅಮೆರಿಕಕ್ಕೆ ಹೋಗಲು ಬಯಸಿದ್ದರು. ಖಾಸಗಿ ಬಾಡಿಗೆ ವಿಮಾನದ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದೂ ಸಂಸ್ಥೆ ವರದಿ ಮಾಡಿದೆ. 303 ಪ್ರಯಾಣಿಕರ ಪೈಕಿ 276 ಮಂದಿ ಮಾತ್ರ ಸದ್ಯ ಮುಂಬಯಿಗೆ ಬಂದಿಳಿದ್ದಾರೆ. ಅಪ್ರಾಪ್ತರನ್ನು ಒಳಗೊಂಡಂತೆ ಉಳಿದ 27 ಮಂದಿ ಫ್ರಾನ್ಸ್‌ನಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡಲು ಕೋರಿದ್ದಾರೆ.

ದಂಧೆಯ ಕಿಂಗ್‌ಪಿನ್‌ ಶಶಿಕಾಂತ್‌ ರೆಡ್ಡಿ ಕೈವಾಡ
ಕಳೆದ ವರ್ಷ ಗುಜರಾತ್‌ನ ಕುಟುಂಬವನ್ನು ಅಕ್ರಮವಾಗಿ ಅಮೆರಿಕಕ್ಕೆ ಸಾಗಣೆ ಮಾಡುವ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದರ ರೂವಾರಿ ಯಾಗಿದ್ದ ಶಶಿಕಾಂತ್‌ ರೆಡ್ಡಿಯೇ ಈ ಘಟನೆಯ ಮಾಸ್ಟರ್‌ವೆುçಂಡ್‌ ಎಂಬ ಶಂಕೆ ವ್ಯಕ್ತ ವಾಗಿದೆ. 2022ರ ಜನವರಿಯಲ್ಲಿ ಗುಜರಾತ್‌ ಕುಟುಂಬದ 4 ಮಂದಿ ಅಮೆರಿಕಕ್ಕೆ ಅಕ್ರಮವಾಗಿ ಹೋಗುವಾಗ ಕೆನಡಾದ ಮನಿತೋಬಾ ಎಂಬಲ್ಲಿ ಅತೀ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗುಜರಾತ್‌ನಿಂದ 11 ಮಂದಿ ಅಕ್ರಮವಾಗಿ ಯುಎಸ್‌ಗೆ ಹೋಗಲು ಪ್ರಯತ್ನಿಸಿದ್ದರು. ಆ ಗುಂಪಿನಲ್ಲಿ ಇಬ್ಬರು ಅಪ್ರಾಪ್ತರನ್ನು ಗುರುತಿಸಲಾಗಿತ್ತು. ಇದರ ವಿಚಾರಣೆಯ ವೇಳೆ ಹೈದರಾಬಾದ್‌ ಮೂಲದ ಶಶಿಕಾಂತ್‌ ರೆಡ್ಡಿ ಇದರ ಕಿಂಗ್‌ಪಿನ್‌ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಈತ ಕಳೆದ 15 ವರ್ಷಗಳಿಂದ ಮಾನವ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದ್ದಾನೆ ಎಂಬುದು ವಿಚಾರಣೆಯ ವೇಳೆ ತಿಳಿಯಲಾಗಿತ್ತು. ಅಮೆರಿಕಕ್ಕೆ ಸುಲಭವಾಗಿ ವಲಸೆ ಹೋಗಬಹುದಾದ ಮಾರ್ಗವಾದ ದುಬಾೖಯಿಂದ ನಿಕರಾಗುವಾಕ್ಕೆ ಚಾರ್ಟರ್‌ ವಿಮಾನಗಳನ್ನು ವ್ಯವಸ್ಥೆ ಮಾಡುವಲ್ಲಿ ಈತ ನಿಸ್ಸೀಮನಾಗಿರುವುದು ತನಿಖೆಯ ವೇಳೆ ಬಹಿರಂಗವಾಗಿತ್ತು. ಕಳೆದ ಎರಡು ತಿಂಗಳುಗಳಲ್ಲಿ ಪ್ರವಾಸಿಗರು ಎಂಬ ಹಣೆಪಟ್ಟಿಯನ್ನು ನೀಡಿ ಸುಮಾರು 800 ಭಾರತೀಯರನ್ನು ಈತ ಅಕ್ರಮವಾಗಿ ವಲಸೆ ಮಾಡಿಸಿದ್ದಾನೆ ಎಂಬ ವಿಷಯವೂ ಈಗ ಬಯಲಾಗಿದೆ. 2022ರ ಪ್ರಕರಣದಲ್ಲಿ ಗುಜರಾತ್‌ ಪೊಲೀಸರು ಸರಿಯಾದ ದಾಖಲೆಗಳು ಮತ್ತು ಸಾಕ್ಷಾಧಾರಗಳು ಲಭಿಸದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಿದ್ದರು.

Advertisement

ದಂಧೆಕೋರರಿಂದ ಅಡ್ಡ ಹಾದಿ ಬಳಕೆ
ವಿದೇಶಗಳಲ್ಲಿ ಉತ್ತಮ ವೇತನದ ಕೆಲಸ ಕೊಡಿಸುವ ಭರವಸೆ ನೀಡಿ ವಿದ್ಯಾವಂತ ಯುವಕರನ್ನು ಮತ್ತು ಕಾರ್ಮಿಕರನ್ನು ತಮ್ಮತ್ತ ಸೆಳೆಯುವ ಈ ದಂಧೆಕೋರರು ಮತ್ತವರ ಏಜೆಂಟರು ಇವರೆಲ್ಲರನ್ನು ವಿವಿಧ ಅಡ್ಡ ಹಾದಿಗಳಲ್ಲಿ ಕರೆದೊಯ್ದು ವಿದೇಶಗಳಿಗೆ ತಲುಪಿಸುತ್ತಾರೆ. ವಿಮಾನ, ಹಡಗು, ಸರಕು ಸಾಗಣೆ ನೌಕೆಗಳಾದಿಯಾಗಿ ವಿವಿಧ ಸಂಚಾರ ವ್ಯವಸ್ಥೆಯನ್ನು ಬಳಸಿಕೊಂಡು ಅಕ್ರಮವಾಗಿ ಕರೆದೊಯ್ಯುವ ವೇಳೆ ಕನಿಷ್ಠ ಭದ್ರತೆಯನ್ನೂ ಅವರಿಗೆ ಒದಗಿಸಲಾಗುವುದಿಲ್ಲ. ಇವೆಲ್ಲವೂ ವ್ಯವಸ್ಥಿತ ಕಾರ್ಯತಂತ್ರದ ಮೂಲಕವೇ ನಡೆದರೂ ಯಾವುದೇ ಕ್ಷಣದಲ್ಲಿ ಭದ್ರತಾ ಸಿಬಂದಿಗೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆಗಳು ಇದ್ದೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿಯೂ ಈ ದಂಧೆಕೋರರು ಈ ಯುವಕರ ರಕ್ಷಣೆಗೆ ಬರುವುದಿಲ್ಲ. ಇನ್ನು ಹಾದಿ ಮಧ್ಯೆ ಅವಘಡವೇನಾದರೂ ಸಂಭವಿಸಿದಲ್ಲಿ ಕೇಳುವವರೇ ಇರುವುದಿಲ್ಲ.

ಅಮೆರಿಕಕ್ಕೆ ಅಧಿಕ ಪ್ರಮಾಣದಲ್ಲಿ ಅಕ್ರಮ ವಲಸೆ
ಭಾರತದಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹಾಗೂ ಮಾನವ ಕಳ್ಳಸಾಗಣೆ ಹೆಚ್ಚುತ್ತಿರುವ ವಿಷಯ ಈ ಪ್ರಕರಣದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಅಮೆರಿಕದ ಗಡಿ ಮತ್ತು ಕಸ್ಟಮ್ಸ್‌ ಇಲಾಖೆಯ ಅಂಕಿಅಂಶದ ಪ್ರಕಾರ ಅಕ್ಟೋಬರ್‌ 2022ರಿಂದ ಸೆಪ್ಟಂಬರ್‌ 2023ರ ವರೆಗೆ 96,917 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದಿದ್ದಾರೆ. ಇದರಲ್ಲಿ 30,010 ಮಂದಿ ಯುಎಸ್‌- ಕೆನಡಾ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿ ದ್ದಾರೆ. ಇನ್ನು 41,770 ಮಂದಿ ಯುಎಸ್‌-ಮೆಕ್ಸಿಕೋ ಗಡಿಯಲ್ಲಿ ಸೆರೆಯಾಗಿದ್ದಾರೆ. ಹೀಗೆ ಸಿಕ್ಕಿ ಹಾಕಿಕೊಳ್ಳುವ ಅಕ್ರಮ ವಲಸಿಗರು ಆಯಾಯ ದೇಶಗಳಲ್ಲಿ ಆಶ್ರಯ ಕೋರಿ ಸರಕಾರದ ಮೊರೆ ಹೋಗುತ್ತಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತವಾದವರನ್ನು ಮಾತ್ರವೇ ಸರಕಾರ ನಿರಾಶ್ರಿತ ರನ್ನಾಗಿ ಪರಿಗಣಿಸಿ ಆಶ್ರಯ ನೀಡುತ್ತದೆ. ಇದೇ ವೇಳೆ ಈ ಪ್ರಕ್ರಿಯೆಗೆ ತಿಂಗಳುಗಳೇ ಹಿಡಿಯುವುದರಿಂದ ಅಲ್ಲಿಯವರೆಗೆ ಸಿಕ್ಕಿಹಾಕಿಕೊಂಡ ಅಕ್ರಮ ವಲಸಿಗರಿಗೆ ದೇಶದಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ದೇಶದ ಕಾನೂನು ದುರ್ಬಲ: ಅಮೆರಿಕ
ಭಾರತದಿಂದ ಸಾವಿರಾರು ಸಂಖ್ಯೆಯಲ್ಲಿ ಅಕ್ರಮವಾಗಿ ವಲಸೆ ಹೋಗಲು ಹಾಗೂ ಮಾನವ ಕಳ್ಳಸಾಗಣೆ ಹೆಚ್ಚಲು ಭಾರತದ ನೀತಿಯೇ ಕಾರಣ ಎಂಬುದು ಅಮೆರಿಕದ ವಾದವಾಗಿದೆ. ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಭಾರತದ ಕಾನೂನು ನಿಯಮಾವಳಿಗಳು ತೀರಾ ದುರ್ಬಲವಾಗಿವೆ. ಹಾಗಾಗಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಮೆರಿಕದ ವರದಿಗಳು ಹೇಳುತ್ತವೆ. ಭಾರತ ಸರಕಾರ ಈ ನಿಟ್ಟಿನಲ್ಲಿ ಗಮನಹರಿಸಿ, ಕಾನೂನು ನಿಯಮಾವಳಿಗಳಲ್ಲಿ ಕೆಲವೊಂದು ಮಾರ್ಪಾಡು ಗಳನ್ನು ಮಾಡಿದ್ದರೂ ಅದು ನಿರೀಕ್ಷಿತ ಫ‌ಲವನ್ನು ಕಂಡಿಲ್ಲ. ಈ ವಿಷಯದಲ್ಲಿ ಇನ್ನಷ್ಟು ಬಿಗಿ ನಿಲುವನ್ನು ಸರಕಾರ ತಾಳಬೇಕಿದೆ ಎಂಬುದು ಅಮೆರಿಕದ ವಲಸೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮಾನವ ಕಳ್ಳಸಾಗಣೆಯ ನಿರ್ಮೂಲನೆ ಯಲ್ಲಿ ಕನಿಷ್ಠ ಮಾನದಂಡವನ್ನು ಸಂಪೂರ್ಣವಾಗಿ ಪೂರೈಸಿಲ್ಲವಾದರೂ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನವನ್ನು ಮಾಡುತ್ತಿದೆ ಎಂದು ಅಮೆರಿಕದ ಗಡಿ ಮತ್ತು ಕಸ್ಟಮ್ಸ್‌ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖೀಸಿದೆಯಾದರೂ ಈ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಸುಧಾರಣೆ ಅತ್ಯಗತ್ಯ ಎಂದು ಬೆಟ್ಟು ಮಾಡಿದೆ.

ವರದಿ ಏನು ಹೇಳುತ್ತದೆ ?

ಭಾರತವು ಮಾನವ ಕಳ್ಳಸಾಗಣೆಯ ಪ್ರಕರಣಗಳನ್ನು ಗುರುತಿಸುವಿಕೆ ಹಾಗೂ ಶಿಕ್ಷೆಯನ್ನು ವಿಧಿಸುವುದರಲ್ಲಿ ತೀರಾ ನಿಧಾನಗತಿಯನ್ನು ಹೊಂದಿದೆ. ಅಲ್ಲದೇ ಈ ಶೋಷಣೆಗೆ ಒಳಗಾಗುವ ಕಾರ್ಮಿಕರ ಗುರುತಿಸುವಿಕೆ ಯಲ್ಲಿಯೂ ಶೇ.75ರಷ್ಟು ಕುಸಿತ ಕಂಡಿದೆ.

ಐಪಿಸಿ ಸೆಕ್ಷನ್‌ 370ನೇ ವಿಧಿ ಅಡಿ ಎಲ್ಲ ರೀತಿಯ ಕಳ್ಳಸಾಗಣೆಯನ್ನು ಅಪರಾಧೀಕರಿಸುವ ತಿದ್ದುಪಡಿಯನ್ನು ಭಾರತ ಸರಕಾರ ಮಾಡಿಲ್ಲ ಎಂದು ಹೇಳಿದೆ. ಸದ್ಯ ಈ ವಿಧಿಯು ಯಾವುದೇ ವ್ಯಕ್ತಿಯನ್ನು ಗುಲಾಮನಂತೆ ರಫ್ತು, ಆಮದು, ಮಾರಾಟ ಮಾಡುವುದು ಮತ್ತು ಬಂಧಿ ಸುವುದನ್ನು ಅಪರಾಧ ಎಂದು ಗುರುತಿಸಿದೆ. ಇತ್ತೀಚೆಗೆ ಭಿಕ್ಷೆ ಬೇಡುವುದನ್ನು ಕಳ್ಳಸಾಗಣೆಯ ಅಡಿಯಲ್ಲಿಯೇ ಗುರುತಿಸಲಾಗಿದೆ.

ಮಾನವ ಕಳ್ಳಸಾಗಣೆ ಮತ್ತು ಅಕ್ರಮ ವಲಸೆಯನ್ನು ತಡೆಗಟ್ಟಲು ಭಾರತ ಸರಕಾರ ಇನ್ನಷ್ಟು ಕಠಿನ ಕಾನೂನು ನಿಯಮಾವಳಿಗಳನ್ನು ರೂಪಿಸುವುದರ ಜತೆಯಲ್ಲಿ ಕಟ್ಟುನಿಟ್ಟಿನ ತಪಾಸಣೆಯನ್ನು ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next