ವಿಜಯಪುರ: ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ದೇಶದ ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಅಲ್ಲದೇ ಸಮಾಜದಲ್ಲಿ ಎಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆ ನಡೆಯದಂತೆ ನೋಡಿಕೊಳ್ಳುವುದು ಕೂಡ ನಮ್ಮೆಲ್ಲರ ಹೊಣೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಎಚ್.ಬಿ. ಬೂದೆಪ್ಪ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಪ್ರತಿಯೊಬ್ಬ ಪ್ರಜೆ ಸಂವಿಧಾನ ಬದ್ಧವಾದ ಕರ್ತವ್ಯಗಳನ್ನು ಪ್ರಾಮಾಣಿಕ ರೀತಿಯಲ್ಲಿ ಮಾಡಿದಾಗ ಹಕ್ಕುಗಳನ್ನು ಸಹ ಕೇಳಲು ಅವಕಾಶವಿದೆ. ಅದರಂತೆ ಮಾನವ ಹಕ್ಕುಗಳ ರಕ್ಷಣೆಗಾಗಿ ಅನೇಕ ರೀತಿಯ ಕಾನೂನುಗಳು ಸಹ ಜಾರಿಯಲ್ಲಿದ್ದು, ಎಲ್ಲರೂ ಉತ್ತಮ ನಾಗರಿಕರಾಗಿ ಬಾಳುವ ಬಗ್ಗೆ ಚಿಂತನೆ ನಡೆಸುವಂತೆ ಸಲಹೆ ನೀಡಿದರು.
ಸಮಾಜದಲ್ಲಿಂದು ಮಾನವ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳು ಸೇರಿದಂತೆ ದುರ್ಬಲರ ಹಕ್ಕುಗಳನ್ನು ರಕ್ಷಿಸುವಂತಹ ಕಾರ್ಯ ನಡೆಯಬೇಕು. ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುವುದರಿಂದ ಉತ್ತಮ ನಾಗರಿಕರಾಗಿ ಬಾಳಲು ಸಾಧ್ಯವಿದೆ ಎಂದು ಹೇಳಿದರು.
ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ, ಮುಖ್ಯ ದಂಡಾಧಿಕಾರಿ ಪ್ರಭಾಕರರಾವ್ ಮಾತನಾಡಿ, ದೇಶದ ನಾಗರಿಕರೆಲ್ಲರೂ ಪರಸ್ಪರ ಸಹಕಾರ ಮತ್ತು ಗೌರವ ಭಾವನೆಯಿಂದ ಜೀವನ ನಡೆಸುವುದರಿಂದ ಮಾನವ ಹಕ್ಕುಗಳಿಗೆ ಗೌರವ ನೀಡಿದಂತಾಗುತ್ತದೆ. ಪ್ರಕೃತಿದತ್ತವಾಗಿ ಮನುಷ್ಯನಿಗೆ ಲಭ್ಯವಾಗಿರುವ ವ್ಯಕ್ತಿ ಸ್ವಾತಂತ್ರ್ಯದ ಗೌರವ ಘನತೆಯನ್ನು ಎತ್ತಿ ಹಿಡಿದರೆ ಮಾನವ ಹಕ್ಕುಗಳ ಸಹಜ ಸಂರಕ್ಷಣೆ ಸಾಧ್ಯ ಎಂದರು.
ಜಿಲ್ಲಾ ಸರ್ಕಾರಿ ಅಭಿಯೋಜಕ ಆರ್.ಪಿ. ಭೀಡೆ, ಜಿಲ್ಲಾ ಕೇಂದ್ರ ಕಾರಾಗೃಹದ ಮಲ್ಲಿಕಾರ್ಜುನಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ಶಶಿಧರ, ಅಂಜುಮನ್ ಕಾಲೇಜಿನ ಉಪನ್ಯಾಸ ಡಾ| ಎಸ್.ಎಸ್. ನಾಗಠಾಣ ಇದ್ದರು.