Advertisement

ಮಾನವ ಹಕ್ಕುಗಳ ಹೋರಾಟಗಾರ್ತಿ ನಾಡಿಯಾಗೆ ನೋಬಲ್‌ ಶಾಂತಿ ಪ್ರಶಸ್ತಿ 

06:00 AM Nov 02, 2018 | Team Udayavani |

ಕೆಲವೇ ದಿನಗಳ ಹಿಂದೆ 2018ರ ವಿಶ್ವದ ಅತ್ಯುನ್ನತ ಶಾಂತಿ ಪ್ರಶಸ್ತಿಯಾದ ನೋಬಲ್‌ ಪೀಸ್‌ ಅವಾರ್ಡ್‌ ಪ್ರಕಟವಾಯಿತು. ಈ ಸಲದ ನೋಬೆಲ್‌ ಶಾಂತಿ ಪ್ರಶಸ್ತಿ ಸಿಕ್ಕಿದ್ದು ಈಗ ಜರ್ಮನಿಯಲ್ಲಿ ವಾಸಿಸುತ್ತಿರುವ 25ರ “ನಾಡಿಯಾ ಮುರಾದ್‌ ಬೇಸ್ಸೆ ತಾಹಾ’ಗೆ, ನಾಡಿಯಾ ಮುರದ್‌ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದು 63 ವರ್ಷದ ಕೊಂಗೊದ ಸ್ತ್ರೀರೋಗ ತಜ್ಞ “ಡಾ. ಡೆನಿಸ್‌ ಮುವ್ವೆಜ್‌’ ರೊಂದಿಗೆ. ನಾಡಿಯಾ ಮುರಾದ್‌ ಯಜಿದಿ-ಇರಾಕಿ ಮಾನವ ಹಕ್ಕುಗಳ ಹೋರಾಟಗಾರ್ತಿ. ಯುದ್ಧ ಮತ್ತು ಸಶಸ್ತ್ರ  ಸಂಘರ್ಷದಲ್ಲಿ ಲೈಂಗಿಕ ಹಿಂಸೆಯ ವಿರುದ್ಧ ಹೋರಾಟಕ್ಕೆ ಸಿಕ್ಕಿದ ಪ್ರಶಸ್ತಿಯಿದು. 

Advertisement

ಉತ್ತರ ಇರಾಕಿನ ಹಳ್ಳಿಯೊಂದರಲ್ಲಿ ಹುಟ್ಟಿ ಉಂಡ ನೋವು, ಅನುಭವಿಸಿದ ಸಂಘರ್ಷ, ಅದೇ ನೋವನ್ನು ಮೆಟ್ಟಿ ನಿಂತು ತನ್ನಂತೆಯೇ ನೋವನ್ನು ಉಂಡವರಿಗಾಗಿ ಹೋರಾಟಕ್ಕೆ ಇಳಿದು, ಮಾನವ ಹಕ್ಕುಗಳ ರಾಯಭಾರಿಯಾಗಿ ಟೊಂಕ ಕಟ್ಟಿದ ನಾಡಿಯಾರ ಶ್ರಮವನ್ನು ಗಮನಿಸಿ ನಾರ್ವೆಯ ನೋಬೆಲ್‌ ಕಮಿಟಿ ಸಲ್ಲಿಸಿದ ಗೌರವವಿದು. 

ನಾಡಿಯಾ ಮುರಾದ್‌ ಹುಟ್ಟಿದ್ದು ಇರಾಕಿನ ಸಿಂರ್ಜಾ ಜಿಲ್ಲೆಯ ಕೊಜೊ ಹಳ್ಳಿಯ ರೈತ ಕುಟುಂಬದಲ್ಲಿ, ಯಜಿದಿ ಎಂಬ ಕುರ್ದಿಶ್‌ ಧರ್ಮದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವಳು. ಆಗ ಇರಾಕ್‌ ಮತ್ತು ಸಿರಿಯಾದಲ್ಲಿ “ಇಸ್ಲಾಮಿಕ್‌ ಸ್ಟೇಟ್‌ ಆಫ್ ಇರಾಕ ಮತ್ತು ಸಿರಿಯಾ (ಐಖಐಖ)’ದ ಹೋರಾಟಗಾರರ ಸಂಘಟನೆ ಪ್ರಬಲವಾಗಿತ್ತು, ದಂಗೆ ಎಬ್ಬಿಸಿ ಯಜಿದಿಗಳನ್ನು ಇರಾಕಿನಿಂದ ಓಡಿಸುವುದು ಅವರ ಗುರಿಯಾಗಿತ್ತು. 2014ರ ಆಗಸ್ಟ್‌ ತಿಂಗಳು, ನಾಡಿಯಾಗಿನ್ನೂ 21 ವರ್ಷ, ಸಿಂಜಾರದಲ್ಲಿ ದಾಳಿ ಇಟ್ಟ ಇಸ್ಲಾಮಿಕ್‌ ರಾಜ್ಯ ಹೋರಾಟಗಾರರು ಯಜಿದಿ ಸಮುದಾಯದವರನ್ನು ಹಾಡುಹಗಲೇ ಹತ್ಯೆಗೆ ತೊಡಗಿದರು, ಕೊಜೊ ಹಳ್ಳಿಯಲ್ಲೇ ಸುಮಾರು 600 ಜನರು ಹತ್ಯೆಗೆ ಒಳಗಾದರು, ಅದರಲ್ಲಿ ನಾಡಿಯಾಳ 6 ಜನ ಅಣ್ಣ, ತಮ್ಮಂದಿರು ಮತ್ತು ಅಮ್ಮನೂ ಮೃತಪಟ್ಟರು, ಪ್ರಾಯದ ಸಾವಿರಗಟ್ಟಲೆ ಹೆಣ್ಣುಮಕ್ಕಳನ್ನು ಬಂಧಿಸಿ ಕೊಂಡೊಯ್ಯಲಾಯಿತು, ಇವರೊಂದಿಗೆ ನಾಡಿಯಾ ಮತ್ತು ಅವಳ ಅಕ್ಕ, ತಂಗಿಯರೂ ಸಿಕ್ಕಿಬಿದ್ದರು. ನಂತರ ನಾಡಿಯಾಳನ್ನು ಮೊಸುಲ… ಪಟ್ಟಣಲ್ಲಿ ಬಂಧಿಸಿ ಇಡಲಾಯಿತು, ಹೊಡೆತ, ಬಡಿತ, ಸಿಗರೇಟಿನಿಂದ ಸುಡುವುದು, ಅತ್ಯಾಚಾರ ನಿತ್ಯದ ಗೋಳಾಗಿತ್ತು, ಸುಮಾರು ಮೂರು ತಿಂಗಳು ಬಂಧನದಲ್ಲಿದ್ದಳು. ಒಂದು ಬೆಳಿಗ್ಗೆ ನಾಡಿಯಾಳ ಬಂಧಕ ಬೀಗ ಹಾಕದೆ ಹೊರಗೆ ಹೋದಾಗ ನಾಡಿಯ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಸಫ‌ಲಳಾದಳು. ಅಲ್ಲಿಂದ ಮುಂದೆ ನಾಡಿಯಾಳ ಓಟ ಶುರುವಾಯಿತು, ಮೊದಲು ಅಕ್ಕಪಕ್ಕದವರ ಸಹಾಯದಿಂದ ನಾಡಿಯಾ ದುಹೋಕ ಎಂಬಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ತಲುಪಿದಳು, ಅಲ್ಲಿಂದ ರವಾಂಗ ಶಿಬಿರಕ್ಕೆ, ರವಾಂಗ ಶಿಬಿರದಲ್ಲಿದ್ದುಕೊಂಡೇ ಬೆಲ್ಜಿಯಮ್ಮಿನ ಲಾ ಲಿಬ್ರೆ ಬೆಲ್ಜಿಕ್‌ ಪತ್ರಿಕೆಗೆ ಸಂದರ್ಶನವನ್ನು ಕೊಡುವುದರ ಮೂಲಕ ಈ ಶತಮಾನದಲ್ಲೂ ಇನ್ನೂ ಚಾಲ್ತಿಯಲ್ಲಿರುವ ಗುಲಾಮಗಿರಿ, ಮಾರಾಟ ಮತ್ತು ಮನುಷ್ಯರನ್ನು ಪ್ರಾಣಿಗಳಂತೆ ಸರಬರಾಜು, ಸಾಗಣಿಕೆಯಂತಹ ಸಮಸ್ಯೆಗಳತ್ತ ಜನರು ಗಮನಹರಿಸುವಂತೆ ಮಾಡಿದಳು. ಆಗ ಬಂದದ್ದು ಒಂದು ವರದಾನ, ನೈರುತ್ಯ ಜರ್ಮನಿಯ ಬಾಡೆನ್‌-ವುರ್ಟೆಂಬರ್ಗ್‌ ರಾಜ್ಯ ನಾಡಿಯಾರಂತಹ ನಿರಾಶ್ರಿತರಿಗೆ ಆಶ್ರಯ ಕೊಡಲು ತೀರ್ಮಾನಿಸಿತು, ಇದರ ಪ್ರಯೋಜನವನ್ನು ನಾಡಿಯಾ ಪಡೆದು ಜರ್ಮನಿಯಲ್ಲಿ ಬಂದು ನೆಲೆಸಿದಳು.


ನಾಡಿಯಾ-ಡಾ. ಮುಕ್ವೆಜ್‌

ನಿರಂತರ ಹೋರಾಟಗಾರ್ತಿ
ಅಲ್ಲಿಂದ ಮುಂದೆ ನಾಡಿಯಾ ಸುಮ್ಮನೆ ಕೂರಲಿಲ್ಲ, ತನ್ನಂತೆಯೇ ನೊಂದವರಿಗಾಗಿ ಹೋರಾಡಲು ತೀರ್ಮಾನಿಸಿದಳು. 2015ರಲ್ಲಿ ಯೂನೈಟೆಡ್‌ ನೇಶನ್ಸ್‌ ಸೆಕ್ಯೂರಿಟಿ ಕೌನ್ಸೆಲ್‌ (UNSC)ನ ಮುಂದೆ ನಾಡಿಯಾ ಮನುಷ್ಯರ ಸಾಗಾಟ, ಅವರಿಗೆ ನೀಡಲಾಗುವ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳವನ್ನು ಮನಮುಟ್ಟುವಂತೆ ವಿವರಿಸಿದಳು. ಯೂನೈಟೆಡ್‌ ನೇಶನ್ಸ್‌ ಸೆಕ್ಯೂರಿಟಿ ಕೌನ್ಸೆಲ್‌ ನಾಡಿಯಾಳನ್ನು ರಾಯಭಾರಿಯನ್ನಾಗಿ ನಿಯಮಿಸಿತು, ಮನುಷ್ಯರ ಕಳ್ಳ ಸಾಗಾಣಿಕೆ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ತಿಳುವಳಿಕೆ ಕೊಡುವ ಕಾರ್ಯಗಳಲ್ಲಿ ಭಾಗವಹಿಸಲು ನಿಯಮಿಸಿದರು, ಇದರ ಭಾಗವಾಗಿ ನಾಡಿಯಾ ಹಲವು ನಿರಾಶ್ರಿತರ, ದಾಸ್ಯದಿಂದ ತಪ್ಪಿಸಿಕೊಂಡ, ನರಮೇಧದಲ್ಲಿ ಬದುಕಿ ಉಳಿದವರನ್ನು ಬೇಟಿಯಾದಳು.  

2016ರಲ್ಲಿ ಅಮಲ್‌ ಕ್ಲೂನಿ ಎಂಬ ವಕೀಲೆಯೊಬ್ಬಳು ಇಸ್ಲಾಮಿಕ್‌ ರಾಜ್ಯ ಹೋರಾಟಗಾರರ ವಿರುದ್ಧ ಕಾನೂನಿನ ಕ್ರಮವನ್ನು ಕೈಗೊಳಲು ನಾಡಿಯಾಳನ್ನು ಸಾಕ್ಷಿಯನ್ನಾಗಿ ಉಪಯೋಗಿಸಲು ತೀರ್ಮಾನಿಸಿದಳು. ಕ್ಲೂನಿಯ ಪ್ರಕಾರ ಮಾನವ ಮಾರುಕಟ್ಟೆ, ದಾಸ್ಯದ ವ್ಯಾಪಾರ ಫೇಸ್‌ಬುಕ್‌ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಪ್ರಮಾಣದಲ್ಲಿ ಸಕ್ರೀಯವಾಗಿದೆ. ನಾಡಿಯಾ ಇಂತಹ ಕಾರ್ಯಗಳಲ್ಲಿ ಮುಂದುವರಿಯುತ್ತಿದ್ದಂತೆ ಜೀವಕ್ಕೆ ಅಪಾಯ ಒಡ್ಡುವ ಬೆದರಿಕೆಯ ಕರೆಗಳು ಬರತೊಡಗಿದವು. 

Advertisement

2017ರ ಸೆಪ್ಟೆಂಬರ್‌ ತಿಂಗಳಲ್ಲಿ ನಾಡಿಯಾ “ನಾಡಿಯಾ ಇನಿಶೇಟಿವ್‌’ ಅನ್ನು ಹುಟ್ಟು ಹಾಕಿ ಅದರ ಮೂಲಕ ನರಮೇಧದಲ್ಲಿ ಬದುಕಿ ಉಳಿದವರಿಗೆ ಸಹಾಯ ಮತ್ತು ವಕಾಲತ್ತು ವಹಿಸಲು ನಿರ್ಧರಿಸಿದಳು. ಈಗ ನಾಡಿಯಾ ಮತ್ತು ಅವಳ ತಂಡ ಸಿಂಜಾರದ ಸ್ಥಿರತೆ ಮತ್ತು ಪುನರಾಭಿವೃದ್ಧಿಗೋಸ್ಕರ ಹಗಲು, ಇರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸಹಾಯ ಮಾಡಲು ಫಾನ್ಸ್‌ ದೇಶವೂ ಮುಂದೆ ಬಂದಿದೆ.  ಯುಎನ್‌ಓಡಿಸಿ (UNODC)  ನಾಡಿಯಾಳನ್ನು ಮಾನವ ಮಾರಾಟದಲ್ಲಿ ಬದುಕಿ ಉಳಿದವರ ಮೊದಲ ಸೌಹಾರ್ದ ರಾಯಭಾರಿಯಾಗಿ ನೇಮಕ ಮಾಡಿತು. 

ಇದೇ ವಿಷಯದಲ್ಲಿ ನಾಡಿಯಾಳು ವೆಟಿಕನ್‌ ಸಿಟಿಯಲ್ಲಿ ಪೋಪ್‌ ಫ್ರಾನ್ಸಿಸ್‌ ಮತ್ತು ಆರ್ಚ್‌ ಬಿಷಪ್‌ರನ್ನು ಬೇಟಿಯಾಗಿ ಇಸ್ಲಾಮಿಕ್‌ ರಾಜ್ಯ ಹೋರಾಟಗಾರರ ಸೆರೆಯಲ್ಲಿರುವ ಯಜಿದಿಗಳ ಮತ್ತು ಇರಾಕ್‌ ಮತ್ತು ಸಿರಿಯಾದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಅವರ ಸಹಾಯ ಹಸ್ತವನ್ನು ಬೇಡಿದಳು. ಒಂದು ಅಂದಾಜಿನ ಪ್ರಕಾರ ಇನ್ನೂ 3,000ಕ್ಕೂ ಅಧಿಕ ಯಜಿದಿಗಳು ಖೈದಿಯಲ್ಲಿದ್ದಾರಂತೆ, ಮೂರು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರ ಕ್ಯಾಂಪಿನಲ್ಲಿದ್ದಾರೆ, 

ಯಜಿದ್‌ಗಳ ಮುಖ್ಯ ತಾಣವಾದ ಸಿಂಜಾರ ಅಂತೂ ವಾಸಿಸಲು ಯೋಗ್ಯವಾಗಿಲ್ಲ. ನಾಡಿಯಾಳ ಆತ್ಮ ಚರಿತ್ರೆ ದಿ ಲಾಸ್ಟ್‌ ಗರ್ಲ್: ಮೈ ಸ್ಟೋರಿ ಆಫ್ ಕ್ಯಾಪ್ಟಿವಿಟಿ ಮತ್ತು ಮೈ ಫೈಟ್‌ ಅಗೈನೆಸ್ಟ್‌ ಇಸ್ಲಾಮಿಕ್‌ ಸ್ಟೇಟ್‌ 2017ರಲ್ಲಿ ಹೊರಬಂತು, ಇದೇ ಪುಸ್ತಕ ಮುರಾದಳಿಗೆ 2018ರಲ್ಲಿ ನೋಬೆಲ್‌ ಶಾಂತಿ ಪ್ರಶಸ್ತಿಯನ್ನು ತಂದುಕೊಡುವಲ್ಲಿ ಸಹಾಯ ಮಾಡಿತು. ನಾಡಿಯಾ 2018 ಆಗಸ್ಟಿನಲ್ಲಿ ತಮ್ಮಂತೆಯೇ ಯಜಿದಿಗಳ ಹಕ್ಕುಗಳ ಹೋರಾಟದಲ್ಲಿ ತೊಡಗಿದ ಅಬಿದ್‌ ಶಾಮಿನ್‌ನೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಳು, ಈ ಹಿಂದೆ ನಾಡಿಯಾ ದುಃಖದಿಂದ ಹೊರಬರಲು ಅಬಿದ್‌ ಸಹಾಯ ಮಾಡಿದ್ದರಂತೆ.  

ನೋಬೆಲ್‌ ಪ್ರಶಸ್ತಿ ಬಂದಾಗ ನಾಡಿಯಾ ಮಾಡಿದ ಟ್ಟಿಟ್‌ ಇದು- ನನಗೆ ಗೊತ್ತು, ನಾನು ಆಘಾತ ಮತ್ತು ನಿಂದೆಯನ್ನು ಅನುಭವಿಸಿದ್ದೇನೆ. ಇದನ್ನು ಡಾ. ಮುಕ್ವೆಜ್‌ ಹಲವು ವರ್ಷಗಳ ಕಾಲ ಅನುಭವಿಸುತ್ತ ಬಂದಿದ್ದಾರೆ, ಪ್ರತಿದಿನ ಲೈಂಗಿಕ ಹಿಂಸೆಗೆ ಒಳಗಾದ ಹೆಂಗಸರನ್ನು ಚಿಕಿತ್ಸೆ ನೀಡುತ್ತಿದ್ದಾರೆ. ಗೆಳೆಯ ಡಾ. ಮುಕ್ವೆಜ್‌ ಈ ಪ್ರಶಸ್ತಿಗೆ ಅರ್ಹರು, ಇವರೊಂದಿಗೆ ಪ್ರಶಸ್ತಿ ಹಂಚಿಕೊಳ್ಳುವುದು ನನಗೆ ಹೆಮ್ಮೆಯ ಸಂಗತಿ, ನಾವು ಹೋರಾಟವನ್ನು ಮುಂದುವರಿಸುತ್ತೇವೆ. 

ನಾಡಿಯಾಳ ನೋವು ಅವಳ ಮಾತಲ್ಲೇ ಹೇಳುವುದಾದರೆ, “”ಗುಲಾಮರ ಮಾರುಕಟ್ಟೆ ರಾತ್ರಿ ಹೊತ್ತು ತೆರೆಯುತ್ತದೆ. ನಮ್ಮನ್ನು ಅಟ್ಟದ ಮೇಲೆ ಕೂಡಿಡುತ್ತಿದ್ದರು. ಕೆಳಗೆ ಸೇರುತ್ತಿದ್ದ ಉಗ್ರವಾದಿಗಳ ಮಾತುಕತೆ, ಗಲಾಟೆಗಳು ಮೇಲಿನವರೆಗೂ ಕೇಳಿ ಬರುತ್ತಿತ್ತು. ಕೆಳಗೆ ಉಗ್ರವಾದಿಗಳು ಹೆಸರನ್ನು ನೋಂದಾಯಿಸಿ ಮೇಲೆ ಬರುತ್ತಿದ್ದಂತೆ ಹುಡುಗಿಯರು ತಾರಕ ಸ್ವರದಲ್ಲಿ ಕಿರಿಚಿ, ಗಲಾಟೆ  ಮಾಡಿ, ಒಬ್ಬರು ಮತ್ತೂಬ್ಬರನ್ನು ತಳ್ಳಿ, ವಾಂತಿಯನ್ನೂ ಮಾಡಿ ಅವರನ್ನು ದೂರವಾಗಿಸಲು ಪ್ರಯತ್ನಿಸುತ್ತಿದ್ದರು, ಆದರೆ, ಉಗ್ರಗಾಮಿಗಳು ಮಾತ್ರ ಹಿಂದಕ್ಕೆ ಹೋಗುತ್ತಿರಲಿಲ್ಲ. ನಂತರ ಅಲ್ಲಸಲ್ಲದ ಪ್ರಶ್ನೆಗಳು, ಕಿತ್ತಾಟ, ಎಳೆದಾಟ ಮತ್ತು ತರಕಾರಿ, ಪ್ರಾಣಿಗಳಂತೆ ಮಾನವನ ವ್ಯಾಪಾರ. ನನ್ನನ್ನು ಯಾರೋ ಒಬ್ಬ ದಡಿಯ ಎಳೆದುಕೊಂಡು ಹೋಗುವುದರಲ್ಲಿದ್ದ. ಆಗ ಅಲ್ಲಿದ್ದ ಸಪೂರದ ಮನುಷ್ಯನೊಬ್ಬನೊಂದಿಗೆ, “ನನ್ನನ್ನು ಕರೆದುಕೊಂಡು ಹೋಗಿ ಏನಾದರೂ ಮಾಡಿಕೊ’ ಎಂದು ಬೇಡಿದೆ. ಸಪೂರದ ಮನುಷ್ಯ ಮೊಸುಲಿನಲ್ಲಿ ಜಡ್ಜ್  ಆಗಿದ್ದವನು ಇದಕ್ಕೆ ಒಪ್ಪಿ ನನ್ನನ್ನು ಕೊಂಡೊಯ್ದು ಬಂಧನದಲಿಟ್ಟ, ಅವನ ಅತ್ಯಾಚಾರ, ಚಾಟಿಯ ಹೊಡೆತ ದಿನನಿತ್ಯದ ಹಾಡಾಗಿತ್ತು. ಮೂರು ತಿಂಗಳಾಗುತ್ತಿದ್ದಂತೆ ಅವನಿಲ್ಲದ ಒಂದು ಬೆಳಿಗ್ಗೆ ಅಲ್ಲಿಂದ ತಪ್ಪಿಸಿಕೊಂಡೆ, ಸತ್ಯ ಹೇಳುವುದು, ಪ್ರಮಾಣಿಕವಾಗಿರುವುದು ಕಷ್ಟ ಆದರೂ ಎಲ್ಲವನ್ನೂ ಹೇಳಿಕೊಳ್ಳಬೇಕೆನಿಸುತ್ತದೆ, ಇದೇ ನನ್ನಲ್ಲಿರುವ ಅತೀ ದೊಡ್ಡ ಅಸ್ತ್ರವೂ ಹೌದು. ಇಂತಹ ನರಮೇಧದ ವಿರುದ್ಧ ವಿಶ್ವದ ಮುಂದಾಳಕರು ಒಟ್ಟಾಗಬೇಕಾಗಿದೆ. ಇಂತಹ ಕಥೆಯಿರುವ ಕೊನೆಯ ಹುಡುಗಿಯಾಗಬೇಕು ನಾನು. 

ಯಜಿದಿ – ಕುರ್ದಿಶ್‌ ಧರ್ಮದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಯಜಿದಿಗಳು. ಯಜಿದಿಗಳು ಉತ್ತರ ಮೆಸಪೊಟೆಮಿಯಾ ಪ್ರಾಂತ್ಯದಲ್ಲಿದ್ದವರು, ಈಗ ಮುಖ್ಯವಾಗಿ ಇರಾಕ್‌, ಸಿರಿಯಾ, ಉತ್ತರ ಜರ್ಮನಿಯಲ್ಲಿ¨ªಾರೆ, ಅಲ್ಪ ಪ್ರಮಾಣದಲ್ಲಿ ಆರ್ಮೇನಿಯ ಮತ್ತು ರಷ್ಯಾದಲ್ಲೂ ಇದ್ದಾರೆ. ಸರ್ವಾಧಿಕಾರಿಯಾದ ದೇವರು ಒಬ್ಬನೇ ಎನ್ನುವವರು, ಮುಸ್ಲಿಂ, ಕ್ರಿಶ್ಚಯನ್‌, ಝೊರಾಸ್ಟ್ರಿಯನ್‌ ಹೀಗೆ ಹಲವು ಧರ್ಮದವರ ಅಂಶಗಳನ್ನು ಇವರಲ್ಲಿ ನೋಡಬಹುದು. ಮದುವೆ ಇವರ ಧರ್ಮದವರೊಡನೆ ಮಾತ್ರ, ಎಲ್ಲಾದರೂ ಇತರ ಧರ್ಮದವರೊಡನೆ ಮದುವೆಯಾದರು ಅವರು ಜಾತಿಯಿಂದ ಹೊರಗೆ ಹೋದಂತೆ. 

ಗೀತಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next