Advertisement

ಮಾನವೀಯ ಸಂಬಂಧಗಳ ಕಟ್ಟುವ ರಿಬ್ಬನ್‌

11:08 AM Jul 14, 2018 | |

“ಹಣ ಸಣ್ಣದು. ಮನುಷ್ಯ ಸಹ ಸಣ್ಣವನಾಗಬೇಕಾ …’ ಬಹುಶಃ ಹಾಗಾಗಬಹುದು ಎಂದು ಆಕೆ ಕನಸಿನಲ್ಲಿಯೂ ಎಣಿಸಲಿರಕ್ಕಿಲ್ಲ. ಅತ್ತೆ ಅಂತ ಬಾಯ್ತುಂಬ ಕೂಗುವವನು, ಮನೆಮಗನಂತೆ ಒಳ್ಳೆಯದನ್ನೇ ಬಯಸುವವನು, ಹಬ್ಬಕ್ಕೆ ಕರೆದು ಸಂಭ್ರಮಿಸುವವನು … ಬೆನ್ನಿಗೆ ಚೂರಿ ಹಾಕಬಹುದು ಎಂದು ಆಕೆ ನಿರೀಕ್ಷಿಸಿರುವುದಿಲ್ಲ. ಆದರೆ, ಅಂಥದ್ದೊಂದು ದಿನ ಎದುರಾಗೇಬಿಡುತ್ತದೆ.

Advertisement

ತಾವು ಜಮೀನಿಗೆಂದು ಕೊಟ್ಟ ದುಡ್ಡನ್ನು ಅವನು ನುಂಗಿದ್ದು ಕೇಳಿ ಆಘಾತವಾಗುತ್ತದೆ. ತಾವು ಮೋಸ ಹೋದೆವು ಅಂತ ತಿಳಿದು ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಗುತ್ತದೆ. ಆಗ ಆಕೆಯ ಬಾಯಿಂದ ಬರುವುದೇ, “ಹಣ ಸಣ್ಣದು. ಮನುಷ್ಯ ಸಹ ಸಣ್ಣವನಾಗಬೇಕಾ …’ ಎಂಬ ಮಾತು. ಇದುವರೆಗೂ ಗೀತರಚನೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಸಾಹಿತಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಇದೇ ಮೊದಲ ಬಾರಿಗೆ “ಹಸಿರು ರಿಬ್ಬನ್‌’ ಎಂಬ ಸಿನಿಮಾ ಮಾಡಿದ್ದಾರೆ.

ಸಾಹಿತಿಗಳೊಬ್ಬರು ಸಿನಿಮಾ ಮಾಡುವಾಗ, ಎಲ್ಲಿ ತಮ್ಮ ತನವನ್ನು ಕಳೆದುಕೊಳ್ಳುತ್ತಾರೋ ಎಂಬ ಭಯ ಅವರ ಓದುಗವಲಯದಲ್ಲಿ ಸಹಜವಾಗಿಯೇ ಇರುತ್ತದೆ. ಆದರೆ, ವೆಂಕಟೇಶಮೂರ್ತಿಗಳು ತಮ್ಮ ತನವನ್ನು ಕಳೆದುಕೊಳ್ಳದೆಯೇ, ಮನೆ ಮಂದಿಯೆಲ್ಲಾ ಕುಳಿತು ಒಂದು ಸದಭಿರುಚಿಯ ಚಿತ್ರವನ್ನು ಮಾಡಿದ್ದಾರೆ. ಇಲ್ಲಿ ಅವರು ಕಳೆದು ಹೋಗುತ್ತಿರುವ ಮಾನವೀಯ ಸಂಬಂಧಗಳ ಬಗ್ಗೆ, ಹಣಕ್ಕಾಗಿ ಸಂಬಂಧವನ್ನು ದೂರ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳುವ ಪ್ರಯತ್ನ ಮಾಡಿದ್ದಾರೆ.

ಅದಕ್ಕಾಗಿ ತಮ್ಮದೇ ಆತ್ಮಚರಿತ್ರೆಯಾದ “ಅನಾತ್ಮಕ ಕಥನ’ದಿಂದ ಒಂದು ಅಧ್ಯಾಯವನ್ನು ತೆಗೆದುಕೊಂಡಿದ್ದಾರೆ. ವೆಂಕಟೇಶಮೂರ್ತಿ ಅವರ “ಹಸಿರು ರಿಬ್ಬನ್‌’ ಚಿತ್ರದ ವಿಶೇಷವೆಂದರೆ, ಇದೊಂದು ಸಾಮಾನ್ಯ ಮನುಷ್ಯರ ಕಥೆ. ಒಬ್ಬ ಸಾಮಾನ್ಯ ಮನುಷ್ಯ ಯಾವುದೇ ಘಟನೆಗೆ ಹೇಗೆ ಪ್ರತಿಕ್ರಯಿಸುತ್ತಾನೋ, ಅದನ್ನೇ ತೆರೆಯ ಮೇಲೆ ತರಲಾಗಿದೆ. ಪ್ರೇಕ್ಷಕರಿಗೆ ಇಡೀ ಕಥೆ ತಮ್ಮ ಸುತ್ತಮುತ್ತಲೇ ನಡೆಯುತ್ತಿದೆಯೇನೋ ಎನಿಸುವಷ್ಟು ಆಪ್ತವಾಗಿ ಇಡೀ ವಾತಾವರಣವನ್ನು ಕಟ್ಟಿಕೊಡಲಾಗಿದೆ.

ಚಿತ್ರದಲ್ಲಿರುವುದು ಕೆಲವೇ ಕೆಲವು ಪಾತ್ರಗಳು. ಮೊದಲಾರ್ಧ ಆ ಪಾತ್ರಗಳ ಪರಿಚಯ, ಸಂಬಂಧದ ಕುರಿತಾಗಿ ಸಾಗಿದರೆ, ದ್ವಿತೀಯಾರ್ಧವು ಗಂಭೀರವಾಗುತ್ತಾ ಹೋಗುತ್ತದೆ. ಅದರಲ್ಲೂ ಕೊನೆಯ ಕೆಲವು ನಿಮಿಷಗಳ ಕಾಲ ಪ್ರೇಕ್ಷಕರನ್ನು ಗದ್ಗದಿತರನ್ನಾಗಿ ಮಾಡುವಲ್ಲಿ ವೆಂಕಟೇಶಮೂರ್ತಿಗಳು ಸಫ‌ಲರಾಗಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದಲ್ಲಿರುವುದು ಕೆಲವೇ ಪಾತ್ರಗಳು.

Advertisement

ಆ ಪೈಕಿ ಗಿರಿಜಾ ಲೋಕೇಶ್‌ ತಮ್ಮ ಅಭಿನಯದಿಂದ ಎಲ್ಲರ ಮನಗೆಲ್ಲುತ್ತಾರೆ. ನಿಖೀಲ್‌ ಮಂಜು, ಚೈತ್ರ, ಸುಪ್ರಿಯಾ ರಾವ್‌ ಮುಂತಾದವರು ಸಹ ಗಮನಸೆಳೆಯುತ್ತಾರೆ. ಉಪಾಸನಾ ಮೋಹನ್‌ ಅವರ ಸಂಗೀತದಲ್ಲಿ “ಸಕ್ಕರೆಯ ಪಾಕದಲಿ ಅದ್ದಿರುವ ಜಾಮೂನು …’ ಹಾಡು ಚಿತ್ರದ ಹೈಲೈಟು. ಇನ್ನು ಪಿ.ವಿ.ಆರ್‌. ಸ್ವಾಮಿ ಅವರ ಛಾಯಾಗ್ರಹಣದಲ್ಲಿ ಇಡೀ ಪರಿಸರ ಆಪ್ತವೆನಿಸುತ್ತದೆ.

ಚಿತ್ರ: ಹಸಿರು ರಿಬ್ಬನ್‌
ನಿರ್ದೇಶನ: ಎಚ್‌.ಎಸ್‌. ವೆಂಕಟೇಶಮೂರ್ತಿ
ನಿರ್ಮಾಣ: ಕುಮಾರ್‌
ತಾರಾಗಣ: ನಿಖೀಲ್‌ ಮಂಜು, ಗಿರಿಜಾ ಲೋಕೇಶ್‌, ಬಿ. ಜಯಶ್ರೀ ಮುಂತಾದವರು

* ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next