Advertisement
ಹುಳಿಯಾರಿನ ಶ್ರೀ ಬನಶಂಕರಮ್ಮ ದೇವಸ್ಥಾನದ ಬಳಿ ಶಿಥಿಲಾವಸ್ಥೆಯಲ್ಲಿರುವ ತಮ್ಮ ಮನೆಯಲ್ಲೇ ಕಾಂತಮ್ಮ ಇಡ್ಲಿ ಮಾಡಿ, ಮನೆಮನೆಗೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಬರೋಬ್ಬರಿ 20 ವರ್ಷದಿಂದ ಕಡಿಮೆ ಬೆಲೆಗೆ ಇಡ್ಲಿ ಹಾಗೂ ಶೇಂಗಾ, ಕಡ್ಲೆ ಚಟ್ನಿ ಮಾರುತ್ತಿದ್ದರೂ, ಪ್ರಚಾರ ಬಯಸದೆ ಕಾಯಕ ನಿಷ್ಠರಾಗಿದ್ದಾರೆ. ನಾಲ್ಕಾಣೆಗೆ ಒಂದರಂತೆ ಇಡ್ಲಿ ವ್ಯಾಪಾರ ಆರಂಭಿಸಿ, ಇತ್ತೀಚಿನವರೆವಿಗೂ 2 ರೂ.ಗೆ 3 ಇಡ್ಲಿ ಕೊಡುತ್ತಿದ್ದ ಕಾಂತಮ್ಮ, ಬೆಲೆ ಏರಿಕೆಯ ಹೊಡೆತ ತಾಳಲಾರದೆ 1 ರೂ.ಗೆ 1 ಇಡ್ಲಿ ಕೊಡುತ್ತಿದ್ದಾರೆ. ಆ ಮೂಲಕ ರೈತರು, ಕೂಲಿಕಾರ್ಮಿಕರು, ಬಡವರ ಹಸಿವು ನೀಗಿಸುತ್ತಿದ್ದಾರೆ.
Related Articles
Advertisement
ಲಾಭದ ನಿರೀಕ್ಷೆ ಇಲ್ಲ :
“ಹಣ ಮಾಡಬೇಕು ಎಂದು ನಾನು ಇಡ್ಲಿ ವ್ಯಾಪಾರ ಆರಂಭಿಸಿಲ್ಲ. ಜೀವನ ನಿರ್ವಹಣೆ ಗಾಗಿ ಇಡ್ಲಿ ಮಾರುತ್ತಿದ್ದೇನೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಅತ್ಯಂತ ಕಡಿಮೆ ಬೆಲೆಗೆ ಇಡ್ಲಿ ಕೊಡುತ್ತಿದ್ದೇನೆ. ಇದರಿಂದಲೇ ಮಕ್ಕಳ ಮದುವೆ ಮಾಡಿ, ಬಾಣಂತನ ಸಹ ಮಾಡಿ ದ್ದೇನೆ. ಈಗೇನಿದ್ದರೂ ಸೋರುವ ಮನೆ ಯನ್ನು ರೆಡಿ ಮಾಡಿಕೊಳ್ಳಬೇಕು ಅಷ್ಟೇ. 1 ರೂ.ಗೆ ಇಡ್ಲಿ ಕೊಟ್ಟರೂ ನನಗೆ ನಷ್ಟವಾಗುತ್ತಿಲ್ಲ. ಬದಲಾಗಿ ದಿನಕ್ಕೆ 300-400 ರೂ. ದುಡಿಯುತ್ತಿದ್ದೇನೆ’ ಎನ್ನುತ್ತಾರೆ ಕಾಂತಮ್ಮ.
ಕಾಂತಮ್ಮ ಮಾಡುವ ಇಡ್ಲಿ ರುಚಿಗೆ ಫಿದಾ ಆಗಿದ್ದೇವೆ. 10 ರೂ. ಕೊಟ್ಟು 10 ಇಡ್ಲಿ ತಿಂದರೆ ಹೊಟ್ಟೆ ತುಂಬುತ್ತದೆ. ಬಡವರ ಪಾಲಿಗಂತೂ ಇದು ಇಂದಿರಾ ಕ್ಯಾಂಟಿನ್ ಅನ್ನಬಹುದು. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆವಿಗೂ ಬಿಸಿ ಬಿಸಿ ಇಡ್ಲಿ ಕೊಡುತ್ತಾರೆ.-ಎಚ್.ಆರ್.ಧನುಷ್, ಸ್ಥಳೀಯ ನಿವಾಸಿ
– ಎಚ್.ಬಿ.ಕಿರಣ್ ಕುಮಾರ್