Advertisement

ಮಾದರಿ ಉದ್ಯಾನ ನಿರ್ಮಾಣಕ್ಕೆ ಹುಡಾ ನಿರ್ಧಾರ

10:01 AM Apr 01, 2022 | Team Udayavani |

ಹುಬ್ಬಳ್ಳಿ: ಅವ್ಯವಸ್ಥೆಯ ಆಗರವಾಗಿರುವ ಆಯ್ದ ಉದ್ಯಾನಗಳನ್ನು ಗುರುತಿಸಿ ಮಾದರಿ ಉದ್ಯಾನಗಳನ್ನಾಗಿ ನಿರ್ಮಿಸಲು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

Advertisement

ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ಒಂದು ಉದ್ಯಾನವನ್ನು ಪಿಕ್ನಿಕ್‌ ತಾಣವನ್ನಾಗಿ ಮಾಡಲು ಮುಂದಾಗಿದೆ. ಇದಕ್ಕಾಗಿ 16 ಕೋಟಿ ರೂ. ಮೀಸಲಿಟ್ಟಿದ್ದು, ಶಾಸಕರು ಪ್ರಸ್ತಾವನೆ ಸಲ್ಲಿಸುವುದೊಂದೇ ಬಾಕಿ.

ಹು-ಧಾ ಮಹಾನಗರದಲ್ಲಿ ಉದ್ಯಾನಗಳಿಗೆ ಕೊರತೆಯಿಲ್ಲ. ಸುಮಾರು 400ಕ್ಕೂ ಹೆಚ್ಚು ಉದ್ಯಾನಗಳಿವೆ. ಆದರೆ ಇದರಲ್ಲಿ ಕೆಲವು ಮಾತ್ರ ಸ್ಥಳೀಯರ ಉತ್ತಮ ನಿರ್ವಹಣೆಯಿಂದ ಸುಸ್ಥಿತಿಯಲ್ಲಿವೆ. ಆದರೆ ಕೆಲವಂತೂ ಇದೊಂದು ಉದ್ಯಾನದ ಸ್ಥಳವೇ ಎನ್ನುವ ಪ್ರಶ್ನೆ ಮೂಡಿಸುವಂತಿವೆ. ಮಹಾನಗರದ ಜನತೆಗೆ ಮೂರ್‍ನಾಲ್ಕು ಉದ್ಯಾನಗಳೇ ಅನಿವಾರ್ಯ ಎನ್ನುವಂತಾಗಿದೆ. ದೂರದ ಪ್ರದೇಶಗಳಿಂದ ಇಲ್ಲಿಗೆ ಬರುವಂತಾಗಿದೆ. ಹೀಗಾಗಿ ಇದಕ್ಕೆ ಪ್ರತಿಯಾಗಿ ಆಯಾ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಬೇಕೆನ್ನುವ ಉದ್ದೇಶಿಸಲಾಗಿದೆ. ಇದೀಗ ಇಂತಹ ಪಾರ್ಕ್‌ಗಳನ್ನು ಹೊರತುಪಡಿಸಿ ದೊಡ್ಡ ಉದ್ಯಾನಗಳನ್ನು ಪಿಕ್ನಿಕ್‌ ಸ್ಪಾಟ್‌ಗಳನ್ನಾಗಿ ಮಾಡಲು ಹುಡಾ ಮುಂದಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಇಂತಹ ಉದ್ಯಾನಗಳು ಆಗಬೇಕೆನ್ನುವ ಗುರಿಯಿದ್ದು, ಉದ್ಯಾನಗಳ ಆಯ್ಕೆಯನ್ನು ಆಯಾ ಕ್ಷೇತ್ರದ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ.

ದೊಡ್ಡ ಉದ್ಯಾನಗಳ ಗುರಿ: 2013-14 ರಿಂದ 2018-19ರವರೆಗೆ ಖಾಲಿ ನಿವೇಶನಗಳ ಹೆಸರಲ್ಲಿ ಹುಡಾದಿಂದ ಶುಲ್ಕ ವಸೂಲು ಮಾಡಲಾಗಿದ್ದು, ಸುಮಾರು 16 ಕೋಟಿ ರೂ. ಸಂಗ್ರಹವಾಗಿದೆ. ಆದರೆ ಈ ನಿಧಿಯನ್ನು ನಗರದ ಉದ್ಯಾನಗಳಿಗಲ್ಲದೆ ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ. ಹೀಗಾಗಿ ಪ್ರಸ್ತಾವನೆ ಸಲ್ಲಿಸಿದರೆ ಸರಕಾರ ಅನುಮತಿ ನೀಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾನಗರದ ಕೆಲ ಉದ್ಯಾನಗಳನ್ನು ಪಿಕ್ನಿಕ್‌ ಸ್ಥಳವನ್ನಾಗಿ ಮಾಡುವ ನಿರ್ಧಾರಕ್ಕೆ ಬಂದಿದೆ. ಪ್ರತಿಯೊಂದು ಉದ್ಯಾನಗಳಿಗೆ ಹಣವನ್ನು ಹಂಚಿದರೆ ಯಾವ ಕಾರ್ಯಗಳು ಪೂರ್ಣಗೊಳ್ಳಲ್ಲ. ಇದರಿಂದ ಮೂಲ ಉದ್ದೇಶ ಈಡೇರಲ್ಲ. ಹೀಗಾಗಿ ಪ್ರತಿ ವಿಧಾನ ಕ್ಷೇತ್ರಕ್ಕೆ ಒಂದರಂತೆ ಸುಮಾರು 2 ಎಕರೆ ಮೇಲ್ಪಟ್ಟ ಉದ್ಯಾನಗಳನ್ನು ಗುರುತಿಸಿ ಮಾದರಿ ಉದ್ಯಾನವನ್ನಾಗಿ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಮಾದರಿ ಉದ್ಯಾನ: ಪ್ರತಿ ವಿಧಾನ ಕ್ಷೇತ್ರವೊಂದಕ್ಕೆ ಒಂದರಂತೆ ಉದ್ಯಾನ ಗುರುತಿಸುವ ಹೊಣೆಗಾರಿಕೆ ಆಯಾ ಕ್ಷೇತ್ರದ ಶಾಸಕರ ಮೇಲಿದೆ. ಶಾಸಕರು ಉದ್ಯಾನ ಗುರುತಿಸಿದ ನಂತರ ಪರಿಶೀಲಿಸಿದ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರದಿಂದ ಅನುಮೋದನೆ ಪಡೆಯುವ ಕೆಲಸ ಆಗಲಿದೆ. ಈಗಾಗಲೇ ಬೆಂಗಳೂರು, ಮೈಸೂರಿನಲ್ಲಿ ಮಾದರಿ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಶಾಸಕರು ಉದ್ಯಾನ ಗುರುತಿಸಿದರೆ ಹುಡಾ ನಿಯೋಗವೊಂದು ಮಾದರಿ ಉದ್ಯಾನಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಉದ್ಯಾನದಲ್ಲಿ ವಾಯುವಿಹಾರಕ್ಕೆ ಸ್ಥಳ, ಮಕ್ಕಳಿಗೆ ಆಟ, ಕುಳಿತುಕೊಳ್ಳಲು ಆಸನ, ತೆರೆದ ವೇದಿಕೆ, ಕುಡಿಯುವ ನೀರು, ಶೌಚಾಲಯ, ಜಿಮ್‌ ಹೀಗೆ ಇದೊಂದು ಮಾದರಿ ಉದ್ಯಾನಗಳ ಗುರಿಯಿದೆ. ಒಂದು ವೇಳೆಯಲ್ಲಿ ದೊಡ್ಡ ಉದ್ಯಾನ ದೊರೆಯ ದಿದ್ದರೆ ಹೊಸದಾಗಿ ಹೊರ ಭಾಗದಲ್ಲಿ ಜಾಗ ಖರೀದಿಸಿ ಖಾಸಗಿ ಗಾರ್ಡನ್‌ ಮಾದರಿಯಲ್ಲಿ ಮಾಡಬೇಕೆನ್ನುವ ಚಿಂತನೆಯಿದೆ. ಹುಬ್ಬಳ್ಳಿ- ಧಾರವಾಡದಲ್ಲಿ ಒಂದು ಇಂತಹ ಗಾರ್ಡನ್‌ ಮಾಡಿದರೆ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನುವ ಚರ್ಚೆ ಕೂಡ ಆಗಿದೆ. ಆದರೆ ಊರ ಹೊರಗೆ ಮಾಡುವುದರಿಂದ ಜನರಿಗೆ ಅನುಕೂಲವಾಗಲ್ಲ ಎನ್ನುವ ಅಭಿಪ್ರಾಯಗಳು ಶಾಸಕರಿಂದ ವ್ಯಕ್ತವಾಗಿದೆ. ಹೀಗಾಗಿ ಅವರ ಕ್ಷೇತ್ರದಲ್ಲಿನ ಉದ್ಯಾನಗಳ ಅಭಿವೃದ್ಧಿಯೇ ಅಂತಿಮ ಎನ್ನುವ ನಿರ್ಧಾರಕ್ಕೆ ಬರಲಿದೆ.

Advertisement

ನಿರ್ವಹಣೆ ಕೊರತೆ: ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ ಮಹಾತ್ಮ ಗಾಂಧಿ ಉದ್ಯಾನವನ, ಉಣಕಲ್ಲ ಕೆರೆ ಉದ್ಯಾನಕ್ಕೆ ಸುರಿಯಲಾಗಿದೆ. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಪುನಃ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಹತ್ತು ವರ್ಷದಲ್ಲೇ ದುಪ್ಪಟ್ಟು ಹಣ ಖರ್ಚು ಮಾಡುವಂತಾಗಿದೆ. ಹೀಗಾಗಿ ಹುಡಾದಿಂದ ಅಭಿವೃದ್ಧಿ ಉದ್ಯಾನಗಳ ಸಮರ್ಪಕ ನಿರ್ವಹಣೆ ಯಾವುದಾದರೂ ಸಮರ್ಥ ಸಂಸ್ಥೆಗೆ ನೀಡಬೇಕೆನ್ನುವ ಚಿಂತನೆಯಿದೆ. ಲಾಭ-ನಷ್ಟವಿಲ್ಲದ ಆಧಾರದ ಮೇಲೆ ಪಾಲಿಕೆ ಬೇರೆ ಸಂಸ್ಥೆಗೆ ನೀಡಿದರೆ ಸುಸ್ಥಿತಿಯಲ್ಲಿ ಉಳಿಯುತ್ತವೆ ಎನ್ನುವುದು ಹುಡಾ ಅಧಿಕಾರಿಗಳ ಅಭಿಪ್ರಾಯವಾಗಿದೆ.

 

ಸಂಗ್ರಹವಾಗಿರುವ ನಿಧಿಯನ್ನು ಬೇರಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಕಳೆದ ಏಳೆಂಟು ವರ್ಷದಿಂದ ಹಣ ಹಾಗೆಯೇ ಉಳಿದಿದೆ. ಎಲ್ಲಾ ಉದ್ಯಾನಗಳಿಗೆ ಹಂಚಿಕೆ ಮಾಡುವುದರಿಂದ ಯಾವುದೇ ಕಾಮಗಾರಿಗಳು ಪೂರ್ಣಗೊಳ್ಳಲ್ಲ. ಹೀಗಾಗಿ ಸಮಗ್ರ ಅಭಿವೃದ್ಧಿ ಆಗಬೇಕೆನ್ನುವ ನಿಟ್ಟಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದ ಒಂದು ಅಥವಾ ಎರಡು ಉದ್ಯಾನಗಳ ಗುರಿಯಿದೆ. ಅಭಿವೃದ್ಧಿಗಾಗಿ ಉದ್ಯಾನ ಗುರುತಿಸುವಂತೆ ಆಯಾ ಕ್ಷೇತ್ರದ ಶಾಸಕರಿಗೆ ಕೋರಲಾಗಿದೆ.

-ನಾಗೇಶ ಕಲಬುರ್ಗಿ, ಅಧ್ಯಕ್ಷ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ

 

ಸರಕಾರದಿಂದ ಒಮ್ಮೆ ಅನುಮೋದನೆ ತಡೆದುಕೊಂಡು ಉದ್ಯಾನ ಅಭಿವೃದ್ಧಿ ಮಾಡುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಶಾಸಕರು ತಮ್ಮ ಕ್ಷೇತ್ರದ ಉದ್ಯಾನದ ಅಭಿವೃದ್ಧಿ ಕುರಿತು ಪ್ರಸ್ತಾವನೆ ನೀಡಿದರೆ ಸರಕಾರ ಸಲ್ಲಿಸಲು ಅನುಮೋದನೆ ಪಡೆಯಲಾಗುವುದು. ಸುಮಾರು 16 ಕೋಟಿ ರೂ. ಸಂಗ್ರಹವಾಗಿದೆ. ಈ ಹಣವನ್ನು ಉದ್ಯಾನದ ಅಭಿವೃದ್ಧಿಗೆ ಬಳಸಲಾಗುವುದು.

-ಎಂ.ರಾಜಶೇಖರ, ಇಇ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next