Advertisement

ಕಸದಿಂದ ರಸ ಯೋಜನೆಗೆ ಸಿದ್ಧತೆ

01:15 PM Dec 11, 2019 | Naveen |

„ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ:
ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆ ಹಾಗೂ ಉದ್ಯೋಗ ಸೃಷ್ಟಿ ಉದ್ದೇಶದಿಂದ ಮಹಾನಗರ ಪಾಲಿಕೆ ವಿಶೇಷ ಕಾರ್ಯಕ್ಕೆ ಮುಂದಾಗಿದ್ದು, ಒಣ ಕಸವನ್ನು ಆದಾಯ ಮೂಲವನ್ನಾಗಿ ಕಂಡುಕೊಳ್ಳುವ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ.

Advertisement

ಮಹಾನಗರ ಬೆಳೆದಂತೆಲ್ಲಾ ಘನತ್ಯಾಜ್ಯ ಪ್ರಮಾಣವೂ ಹೆಚ್ಚುತ್ತಿದೆ. ಹು-ಧಾ ಕಸಮಡ್ಡಿಗಳಲ್ಲಿ ಕಸ ಸುರಿಯಲು ಸ್ಥಳವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಒಣ ತ್ಯಾಜ್ಯ ವಿಂಗಡಿಸಿ ಮರುಬಳಕೆ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ.

ಕೆಲ ವಾರ್ಡ್‌ಗಳಲ್ಲಿ ಪ್ರಾಥಮಿಕ ಹಂತದಲ್ಲಿ ಒಣ ಹಾಗೂ ಹಸಿ ತ್ಯಾಜ್ಯ ವಿಂಗಡಣೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಒಣ ಕಸವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಸ ವಿಂಗಡಣಾ ಕೇಂದ್ರಗಳ ಆರಂಭಕ್ಕೆ ಪಾಲಿಕೆ ಒಲವು ತೋರಿದೆ. ಒಣ ತ್ಯಾಜ್ಯಗಳಾದ ಕಾಗದ, ಪ್ಲಾಸ್ಟಿಕ್‌, ಗಾಜು, ಲೋಹ ಸೇರಿದಂತೆ ಇತರೆ ವಸ್ತುಗಳನ್ನು ವಿಂಗಡಿಸಿ ಈ ವಸ್ತುಗಳನ್ನು ಬಳಸಿ ಇತರೆ ಉತ್ಪನ್ನ ತಯಾರಿಸುವವರಿಗೆ ಮಾರಾಟ ಮಾಡುವ ಕಾರಣದಿಂದ ಮಹಾನಗರ ವ್ಯಾಪ್ತಿಯಲ್ಲಿ 5 ಒಣ ಕಸ ವಿಂಗಡಣಾ ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ ನಡೆದಿದೆ. ಎರಡು ಕೇಂದ್ರಗಳು ಈ ವಾರದಲ್ಲಿ ಕಾರ್ಯಾರಂಭ ಮಾಡಲಿವೆ.

ಕೇರಳ ಯೋಜನೆ ಅಧ್ಯಯನ
ಮಹಾನಗರದಲ್ಲಿ ನಿತ್ಯ ಸುಮಾರು 400-450 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ 160 ಟನ್‌ ಒಣ ತ್ಯಾಜ್ಯವಿದೆ. ಇದರದಲ್ಲಿ ಶೇ.80 ಕಸ ವಿಂಗಡಣಾ ಕೇಂದ್ರದ ಮೂಲಕ ಮರುಬಳಕೆಗೆ ಪೂರೈಕೆಯಾದರೆ ಕಸಮಡ್ಡಿಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಈಗಾಗಲೇ ಈ ಯೋಜನೆ ಕೇರಳದ “ಅಳಪೆ’ ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಇಲ್ಲಿನ ಮಹಾನಗರ ಪಾಲಿಕೆ ಘನತಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಅಲ್ಲಿನ ಯೋಜನೆ ಅನುಷ್ಠಾನ, ನಿರ್ವಹಣೆ ಕುರಿತು ಅಧ್ಯಯನ ಮಾಡಿಕೊಂಡು ಬಂದಿದ್ದಾರೆ. ಅದೇ ಮಾದರಿಯಲ್ಲಿ ಮಹಾನಗರದಲ್ಲಿ ಅನುಷ್ಠಾನ ಮಾಡಲು ವಿಸ್ತೃತ ವರದಿ ಸಿದ್ಧಪಡಿಸಲಾಗಿದೆ.

ಪಾಲಿಕೆಗೆ ಹೊರೆಯಾಗಲ್ಲ
ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ನಿರ್ಮಿಸಿರುವ ಕ್ಯಾಂಪ್ಯಾಕ್ಟರ್‌ ಸ್ಟೇಶನ್‌ ಬಳಿಯೇ ಈ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆಯಾ ಭಾಗದಲ್ಲಿ ದೊರೆಯುವ ಒಣ ಕಸದ ಆಧಾರದ ಮೇಲೆ 50/80 ಅಡಿ ವಿಸ್ತೀರ್ಣದ ಕೇಂದ್ರ ಹಾಗೂ ಸಂಗ್ರಹಕ್ಕೆ ಯೋಗ್ಯವಾದ ರೀತಿಯಲ್ಲಿ ಕೇಂದ್ರ ನಿರ್ಮಾಣವಾಗಲಿದೆ. ಆದಷ್ಟು ಕನಿಷ್ಠ ವೆಚ್ಚದಲ್ಲಿ ಕೇಂದ್ರ ನಿರ್ಮಿಸಬೇಕು ಎನ್ನುವ ಉದ್ದೇಶವಿದ್ದು, ಸುಮಾರು 2 ಲಕ್ಷ ರೂ.
ಗೂ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಲಿವೆ.

Advertisement

ನಿರ್ವಹಣೆ ಯಾರ ಹೆಗಲಿಗೆ?
ಯೋಜನೆ ಅನುಷ್ಠಾನಕ್ಕೆ ಬೇಕಾದ ಮೂಲಸೌಲಭ್ಯ ಸೇರಿದಂತೆ ಮಾರುಕಟ್ಟೆ ವ್ಯವಸ್ಥೆ ಪಾಲಿಕೆ ಕಲ್ಪಿಸಲಿದೆ. ಆದರೆ ಕಸ ವಿಂಗಡಣೆ ಯಾರಿಗೆ ವಹಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ನಲ್ಮ್ ಯೋಜನೆಯಡಿ ಇರುವ ಸ್ತ್ರೀ ಶಕ್ತಿ ಸಂಘಗಳಿಗೆ ವಹಿಸಬೇಕು ಎನ್ನುವ ಚಿಂತನೆ ನಡೆದಿದೆ. ಈ ಕುರಿತು ಸರಕಾರಕ್ಕೆ ಮಹಾನಗರ ಪಾಲಿಕೆಯಿಂದ ಪತ್ರ ವ್ಯವಹಾರ ಕೂಡ ನಡೆದಿದೆ. ಸರಕಾರ ಹಾಗೂ ಸ್ತ್ರೀ ಶಕ್ತಿ ಸಂಘಗಳಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾದರೆ ಇವರ ಪಾಲಾಗಿವೆ. ಒಂದು ವೇಳೆ ಇದು ಕೈಗೂಡದಿದ್ದರೆ ಈಗಾಗಲೇ ಸಮೀಕ್ಷೆ ಮಾಡಿರುವಂತೆ ಮಹಾನಗರ ವ್ಯಾಪ್ತಿಯಲ್ಲಿ 1000 ಜನ ಚಿಂದಿ ಆಯುವವರಿದ್ದು, ಅವರಿಗೆ ಈ ಹೊಣೆಗಾರಿಕೆ ನೀಡುವ ಮೂಲಕ ಅವರನ್ನು ಸ್ವಚ್ಛ ಭಾರತ ಯೋಜನೆಯಡಿ ತೊಡಗಿಸಿಕೊಂಡಂತೆ ಆಗುತ್ತದೆ. ಅವರಿಗೆ ನಿಶ್ಚಿತ ಆದಾಯ ಕಲ್ಪಿಸಿದಂತಾಗಲಿದೆ.

ಕೇರಳದ “ಅಳಪೆ’ ಮಾದರಿ ಹೇಗಿದೆ?
ಕೇರಳ ರಾಜ್ಯದ “ಅಳಪೆ ಎನ್ನುವ ಪಟ್ಟಣದಲ್ಲಿ ಈ ಯೋಜನೆ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿದೆ. ಅಲ್ಲಿನ ರಾಜ್ಯ ಸರಕಾರ ಗ್ರೀನ್‌ ಕೇರಳ ಹೆಸರಿನಲ್ಲಿ ಈ ಯೋಜನೆ ಆರಂಭಿಸಿದ್ದು, ಅಲ್ಲಿನ ನಲ್ಮ್ ಯೋಜನೆಯಲ್ಲಿನ ಸ್ತ್ರೀ ಶಕ್ತಿ ಸಂಘಗಳು 30 ಕೇಂದ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಕೇಂದ್ರದ ಸಾಮರ್ಥ್ಯದ ಮೇಲೆ 10-30 ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರಕಾರ ಪ್ರತಿ ತಿಂಗಳು 5000 ರೂ. ಗೌರವ ಧನ ನೀಡುತ್ತಿದೆ. ಒಣ ಕಸದಿಂದ ಬರುವ ಆದಾಯ ಸಂಪೂರ್ಣ ಸ್ತ್ರೀ ಶಕ್ತಿ ಸಂಘಗಳಿಗೆ ನೇರವಾಗಿ ಖರೀದಿದಾರರಿಂದ ಸಂದಾಯವಾಗುತ್ತದೆ. ಕೇಂದ್ರ ನಿರ್ವಹಿಸುತ್ತಿರುವ ಆಸಕ್ತರಿಗೆ ಹೊಲಿಗೆ, ಮೇಣಬತ್ತಿ ತಯಾರಿಕೆ ಸೇರಿದಂತೆ ವಿವಿಧ ತರಬೇತಿಗಳನ್ನು ಸರಕಾರ ಉಚಿತವಾಗಿ ನೀಡುತ್ತಿದೆ. ನೀಡುವ ಗೌರವಧನಕ್ಕಿಂತ ಒಣ ತ್ಯಾಜ್ಯದಿಂದ ಬರುವ ಆದಾಯವೇ ಹೆಚ್ಚಾಗಿದೆ. ಹೀಗಾಗಿ ಸ್ತ್ರೀ ಶಕ್ತಿ ಸಂಘಗಳು ಹೆಚ್ಚು ಉತ್ಸುಕವಾಗಿವೆ ಎಂಬುದು ಅಲ್ಲಿಗೆ ಭೇಟಿ ನೀಡಿದ್ದ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರ ಅಭಿಪ್ರಾಯ.

ಕಸ ವಿಂಗಡಣೆ ಕಡ್ಡಾಯವಾಗಿರುವುದರಿಂದ ಒಣ ತ್ಯಾಜ್ಯ ಮರುಬಳಕೆ ಅನಿವಾರ್ಯವಾಗಿದೆ. ಪ್ರಾಥಮಿಕವಾಗಿ ಈ ವಾರದಲ್ಲಿ ಎರಡು ಕೇಂದ್ರಗಳು ಆರಂಭವಾಗಲಿವೆ. ಚಿಂದಿ ಆಯುವವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ತನ್ಮೂಲಕ ಅವರಿಗೆ ಸ್ಥಿರ ಆದಾಯ ಕಲ್ಪಿಸಿದಂತಾಗುತ್ತದೆ. ಈ ಕಾರ್ಯದಿಂದ ಪ್ರಮುಖವಾಗಿ ಕಸಮಡ್ಡಿಗೆ ಬರುವ ಕಸದ ಪ್ರಮಾಣ ತಗ್ಗಲಿದೆ.
ಡಾ| ಸುರೇಶ ಇಟ್ನಾಳ,
ಮಹಾನಗರ ಪಾಲಿಕೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next