Advertisement

ಮಣ್ಣಿನ ಜೀವಾಣು ಸಂವರ್ಧನೆಗೆ ಸಜೀವಜಲ

01:35 PM Feb 13, 2020 | Naveen |

ಹುಬ್ಬಳ್ಳಿ: “ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು 3 ಕೋಟಿಯಷ್ಟು ಜೀವಾಣುಗಳು ಇರುತ್ತವೆ. ರಾಸಾಯನಿಕ ಕೃಷಿ ಬೆನ್ನು ಬಿದ್ದ ನಾವು ಕೃಷಿ ಪ್ರೇರಕ ಜೀವಾಣುಗಳನ್ನು ನಿರ್ಲಕ್ಷಿಸಿದ್ದೇವೆ. ಸಜೀವಜಲ ಮೂಲಕ ಜೀವಾಣುಗಳು ಸಜೀವಗೊಳಿಸಬಹುದು. ಸಾವಯವ ಹಾಗೂ ಅಗ್ನಿಹೋತ್ರ ಪದ್ಧತಿಯೊಂದಿಗೆ ಸುಗಂಧ ವಾತಾವರಣ ಸೃಷ್ಟಿಸುವ ಮೂಲಕ ಉತ್ತಮ ಫ‌ಸಲು ತೆಗೆಯಬಹುದು. ಸ್ವತಃ ನಾನು ಸೇರಿದಂತೆ ಹಲವಾರು ರೈತರ ಮೇಲೆ ನಡೆಸಿದ ಈ ಪ್ರಯೋಗ ಯಶಸ್ವಿಯಾಗಿದೆ’ -ಹೀಗೆಂದು ಹೇಳಿದವರು ಮಧ್ಯಪ್ರದೇಶದ ಪ್ರಾಕೃತಿಕ ಕೃಷಿ ಮತ್ತು ಸಂಶೋಧನಾ ಸಂಸ್ಥೆ ಸಂಸ್ಥಾಪಕ ತಾರಾಚಂದ್‌ ಬೇಲ್‌ಜೀ.

Advertisement

ಪ್ರಕೃತಿಯಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿ ಇದೆ. ಸಕಾರಾತ್ಮಕ ಶಕ್ತಿ ಸುಗಂಧ ವಾತಾವರಣ ಸೃಷ್ಟಿಸಿದರೆ, ನಕಾರಾತ್ಮಕ ಶಕ್ತಿ ಅಧೋಗತಿ ಸ್ಥಿತಿ ಸೃಷ್ಟಿಸುತ್ತದೆ. ಇದು ನಿಮಗೆ ಅಚ್ಚರಿ ಅಥವಾ ತಮಾಷೆ ಅನ್ನಿಸಬಹುದು. ವೈಜ್ಞಾನಿಕ ದೃಷ್ಟಿಯಿಂದಲೂ ಇದನ್ನು ಸಾಬೀತು ಪಡಿಸುವ ಕೆಲಸ ಮಾಡುತ್ತಿದ್ದೇನೆ. ಕಳೆದೊಂದು ದಶಕದಿಂದ ಕೈಗೊಂಡ ಪ್ರಕೃತಿಯಾಧಾರಿತ ಕೃಷಿ ಪ್ರಯೋಗ, 100 ಪ್ರಕೃತಿ ಕೃಷಿ ಗ್ರಾಮ ರೂಪನೆ, ಸಜೀವ ಜಲ ಪ್ರಯೋಗ ಸೇರಿದಂತೆ ತಾರಾಚಂದ್‌ ಬೇಲ್‌ಜೀ “ಉದಯವಾಣಿ’ಯೊಂದಿಗೆ ವಿವಿಧ ವಿಚಾರಗಳನ್ನು ಹಂಚಿಕೊಂಡರು.

2005ರಿಂದ 2009ರವರೆಗೆ ನಾನಾಜಿ ದೇಶಮುಖ್‌ ಅವರ ಚಿತ್ರಕೂಟದಲ್ಲಿ ಜೈವಿಕ ಕೃಷಿ ಅಧ್ಯಯನದಲ್ಲಿ ತೊಡಗಿದ್ದೆ. 2009ರಿಂದ ನನ್ನದೇ ಸಂಶೋಧನೆ ಹಾಗೂ ಪ್ರಯೋಗಕ್ಕೆ ಮುಂದಾದೆ. ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಖಮೆರಿಯಾ ಗ್ರಾಮದಲ್ಲಿ ಆರಂಭದಲ್ಲಿ 13 ಎಕರೆ ಜಮೀನು ಗುತ್ತಿಗೆ ಪಡೆದು ಐದು ಮಾದರಿಯಲ್ಲಿ ಜೈವಿಕ ಹಾಗೂ ಅಗ್ನಿಹೋತ್ರ ಪದ್ಧತಿಯಾಧಾರಿತ ಕೃಷಿ ಮಾಡಲು ಮುಂದಾದೆ. ಕಬ್ಬು, ಬೆಂಡೆ, ಪೇರಲ ಸೇರಿದಂತೆ ನಾಲ್ಕು ಬೆಳೆ ಬೆಳೆಯಲು ಮುಂದಾದೆ. ಮೂರು ವರ್ಷದಲ್ಲಿ ರಾಸಾಯನಿಕ ಕೃಷಿಗಿಂತಲೂ ದುಪ್ಪಟ್ಟು ಫ‌ಸಲು ಬಂತು, ವೆಚ್ಚವೂ ಕಡಿಮೆ ಇತ್ತು.

ಸುಗಂಧಿ ವಾತಾವರಣ: ಕೃಷಿ, ಪಶುಪಾಲನೆ ಹಾಗೂ ಮನುಷ್ಯ ಬದುಕುಲು ಸುಗಂಧಿ ವಾತಾವರಣ ಅತ್ಯಂತ ಮುಖ್ಯ. ಇದನ್ನು ಕೆಲವರು ನಂಬಲಿಕ್ಕಿಲ್ಲ. ಕಳೆದೊಂದು ದಶಕದಲ್ಲಿ ಕೈಗೊಂಡ ನನ್ನ ಪ್ರಯೋಗದಲ್ಲಿ ಇದನ್ನು ವೈಜ್ಞಾನಿಕ ದಾಖಲೆಗಳೊಂದಿಗೆ ಸಾಬೀತು ಪಡಿಸಿದ್ದೇನೆ. ನಮ್ಮ ಪ್ರಾಚೀನದ ಹಲವು ಗ್ರಂಥಗಳಲ್ಲಿಯೂ ಇದರ ಪ್ರಸ್ತಾಪವಿದೆ. ಐದು ತರಹದ ಸುಗಂಧಿ ವಾತಾವರಣ ಸಾಧ್ಯವಾಗಲಿದೆ. ರೂಪ, ಬಣ್ಣ, ಸ್ವರ ಹಾಗೂ ಸ್ಪರ್ಶ ರೂಪದಲ್ಲಿ ಇರಲಿದೆ. ಬೆಳೆ ಅಥವಾ ನಮ್ಮ ದೇಹಕ್ಕೆ ಈ ಸುಗಂಧಿ ವಾತಾವರಣ ಹೆಚ್ಚು ಇರಬೇಕಾಗಿದೆ. ಈ ಸುಗಂಧಿ ವಾತಾವರಣ ಹೆಚ್ಚಳ ನಿಟ್ಟಿನಲ್ಲಿ ಪ್ರಕೃತಿ ಕೃಷಿ ಸಂಶೋಧನಾ ಸಂಸ್ಥೆ ತನ್ನದೇ ಫಾರ್ಮುಲಾ ಕಂಡುಕೊಂಡಿದೆ.

ಅಗ್ನಿಹೋತ್ರ ಜಲ ಶೇ.50ರಷ್ಟು, ಜೈವಿಕ ರಸಾಯನ ಶೇ.0.1ರಷ್ಟು, ಭಸ್ಮ ರಸಾಯನ ಶೇ.1ರಷ್ಟು , ಮಣ್ಣಿನ ದ್ರವ್ಯ ರಸಾಯನ ಶೇ.20ರಷ್ಟು ಸೇರಿಸಿ ನೀರಿನಲ್ಲಿ ಕಲಿಸುವ ಮೂಲಕ ಇದನ್ನು ಭೂಮಿ ಹಾಗೂ ಬೆಳೆಗಳ ಮೇಲೆ ಸಿಂಪರಣೆ ಮಾಡಿದರೆ ಖಂಡಿತವಾಗಿಯೂ ಸುಗಂಧಿ ವಾತಾವರಣ ಸೃಷ್ಟಿಗೆ ಪೂರಕವಾಗಿದೆ. ಉತ್ತಮ ಫ‌ಸಲಿಗೂ ಪೂರಕವಾಗಲಿದೆ.

Advertisement

ಕೃಷಿಯಲ್ಲಿ ಅಣು-ಜೀವಾಣುಗಳಿಗೆ ಮಹತ್ವದ ಸ್ಥಾನವಿದೆ. ಆದರೆ, ನಾವು ಜೀವಾಣುಗಳನ್ನು ನಿರ್ಲಕ್ಷಿಸಿದ್ದೇವೆ. ಜೀವಾಣುಗಳ ಸುರಕ್ಷತೆ ಹಾಗೂ ಸಂವರ್ಧನೆಗೆ ಸಜೀವಜಲ ಸಿಂಪರಣೆ ಮಾಡಲಾಗುತ್ತದೆ. ಸಜೀವ ಜಲ ಹಾಗೂ ಗೋಕೃಪ ಅಮೃತ ಶೇ.100ರಷ್ಟು ಪಂಚಗವ್ಯ ಶೇ.2ರಷ್ಟು ಸೇರಿಸಿ ಐದು ಸಾವಿರ ಲೀಟರ್‌ ನೀರಿನಲ್ಲಿ ಬೆರೆಸಿ ಎರಡು ವರ್ಷಗಳಲ್ಲಿ ಇದನ್ನು ಒಂದು ಎಕರೆ ಹೊಲಕ್ಕೆ ಹಾಕಿದರೆ ಮಣ್ಣು ನಕಾರಾತ್ಮಕ ಶಕ್ತಿಯಿಂದ ಹೊರಬಂದು ಸಕಾರಾತ್ಮಕ ಶಕ್ತಿ ಪಡೆದುಕೊಳ್ಳಲಿದೆ.

ತಾರಾಚಂದ್‌ ಬೇಲ್‌ಜೀ ಅವರು ಪೇರಲ, ಗೋಧಿ, ಕಡಲೆ ಇನ್ನಿತರ ಬೆಳೆ ಬೆಳೆಯುತ್ತಿದ್ದು, ವಾರ್ಷಿಕ 4-5 ಲಕ್ಷ ರೂ.ಗಳ ಆದಾಯ ಪಡೆಯುತ್ತಿದ್ದಾರೆ. 2,500ಕ್ಕೂ ಹೆಚ್ಚು ರೈತರನ್ನು ತಮ್ಮ ಪದ್ಧತಿಯ ಕೃಷಿಗೆ ಅಳವಡಿಸುವ ಸಾಧನೆ ತೋರಿದ್ದಾರೆ.

3ಜಿ, 4ಜಿ ಕಟಿಂಗ್‌!
ಬಿತ್ತನೆಯಲ್ಲಿ ಬೀಜ, ನೀರು, ನಿಶ್ಚಿತ ನಕ್ಷತ್ರ, ಶಕ್ತಿ ನಿರ್ವಹಣೆ ಬಗ್ಗೆ ಗಮನ ನೀಡಬೇಕಾಗಿದೆ. ಬೆಳೆಯುವ ಬೆಳೆಗಳಿಗೆ ಪರಾಗಸ್ಪರ್ಶದ ಅವಶ್ಯಕತೆ ಇದ್ದು, ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಬೇಕು. ಬೆಳೆ ಬೆಳೆದು ಇನ್ನೇನು ಫ‌ಸಲು ಬಿಡುತ್ತಿದೆ ಎನ್ನುವ ಸಂದರ್ಭದಲ್ಲಿ ಬೆಳೆಯ ಮೇಲ್ತುದಿಗಳನ್ನು ಕತ್ತರಿಸಬೇಕು. ಇದಕ್ಕೆ ನಾವು 3ಜಿ, 4ಜಿ ಕಟಿಂಗ್‌ ಎಂದು ಕರೆಯುತ್ತೇವೆ. ಇದನ್ನು ಕತ್ತರಿಸುವ ವೇಳೆ ಕೆಲವೊಂದು ಮುಜಾಂಗ್ರತೆ ವಹಿಸಿ ಕತ್ತರಿಸಿದರೆ, ಹೆಚ್ಚಿನ ಫ‌ಸಲು ಬರುತ್ತದೆ. ಅಗತ್ಯ ಕ್ರಮ ವಹಿಸದೆ ಕತ್ತರಿಸಿದರೆ, ಬೆಳೆ ಹಾನಿಯಾಗಲಿದೆ ಎಂಬ ಎಚ್ಚರಿಕೆ ಹೊಂದಬೇಕಾಗಿದೆ. ನರಸಿಂಗಪುರ ಜಿಲ್ಲೆಯಲ್ಲಿ ನಾನು ಕೈಗೊಂಡ ಜೈವಿಕ ಹಾಗೂ ಅಗ್ನಿಹೋತ್ರ ಪದ್ಧತಿ ಅನ್ವಯದ ಕೃಷಿ ಬಗ್ಗೆ ರೈತರು ಅನುಮಾನ ತೋರಿದ್ದರು. ಇದು ಸಾಧ್ಯವೇ, ಫ‌ಸಲು ಬರುವುದೇ ಎಂದು ಪ್ರಶ್ನಿಸಿದ್ದರು. ಯಾವಾಗ ನನ್ನ ಫ‌ಸಲು ದುಪ್ಪಟ್ಟು ಪ್ರಮಾಣದಲ್ಲಿ ಬಂದಿತೋ ಆಗ ರೈತರು ನನ್ನ ಪದ್ಧತಿ ಕೃಷಿ ಕಡೆಗೆ ಒಲವು ತೋರತೊಡಗಿದರು. ಇದರ ತರಬೇತಿಯನ್ನು ಆರಂಭಿಸಿದೆ. ಅನೇಕ ರೈತರು ಬರುತ್ತಿದ್ದಾರೆ. ಸುಮಾರು 100 ಪ್ರಕೃತಿ ಕೃಷಿ ಗ್ರಾಮಗಳು ರೂಪಗೊಂಡಿವೆ. ನನ್ನದೇಯಾದ ಸುಮಾರು 150 ತಂತ್ರಜ್ಞಾನವನ್ನು ಹೊಂದಿದ್ದು, ಇದರಲ್ಲಿ ಕಾಂಪೊಸ್ಟ್‌ ತಂತ್ರಜ್ಞಾವೂ ಒಂದಾಗಿದೆ ಎಂಬುದು ತಾರಾಚಂದ್‌ ಬೇಲ್‌ಜೀ ಅವರ ಅನಿಸಿಕೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next