Advertisement

‘ಗುಜರಿ’ಗೆ 4 ಅಧಿಕಾರಿಗಳ ಉದ್ಯೋಗ!

01:25 PM Jun 27, 2019 | Naveen |

ಅಮರೇಗೌಡ ಗೋನವಾರ
ಹುಬ್ಬಳ್ಳಿ:
ವಾಯವ್ಯ ಸಾರಿಗೆ ಸಂಸ್ಥೆ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಗುಜರಿ ಹಾಗೂ ಬಸ್‌ಗಳ ಚಸ್ಸಿ ಬದಲು ಹಗರಣ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಮೂಲಕ ಹಗರಣ ಎಸಗುವವರಿಗೆ ತಕ್ಕಶಾಸ್ತಿಯ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

Advertisement

ನಾಲ್ಕು ವರ್ಷಗಳ ಹಿಂದೆ ಬಯಲಿಗೆ ಬಂದಿದ್ದ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅಷ್ಟೇ ಅಲ್ಲ ತನಿಖೆಗೆ ಆದೇಶಿಸಿದ್ದ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿಯನ್ನೇ ವರ್ಗಗೊಳಿಸುವ ವ್ಯವಸ್ಥಿತ ಹುನ್ನಾರವೂ ನಡೆದಿತ್ತು. ಕೊನೆಗೂ ಹಗರಣದಲ್ಲಿ ನಾಲ್ವರು ಅಧಿಕಾರಿಗಳ ವಿರುದ್ಧ ಕಠಿಣ ಕೈಗೊಂಡಿರುವುದು ಹಗರಣ ನಡೆದಿರುವುದು, ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಿರುವುದನ್ನು ಸಾಬೀತು ಪಡಿಸಿದೆ.

ಹಗರಣಗಳಿಂದ ನಲುಗಿದ ನಿಗಮ: ಪ್ರತ್ಯೇಕ ನಿಗಮ ಆದಾಗಿನಿಂದಲೂ ನಷ್ಟವನ್ನು ಬೆನ್ನಿಗೆ ಕಟ್ಟಿಕೊಂಡೇ ಸಾಗುತ್ತಿರುವ ವಾಯವ್ಯ ಸಾರಿಗೆ ಸಂಸ್ಥೆ ಹಲವು ಹಗರಣಗಳಿಂದ ನಲುಗಿದೆ. ಟೈರ್‌ಗಳ ಖರೀದಿಯಲ್ಲಿನ ಹಗರಣ ನಡೆದು ಸಂಸ್ಥೆ ಅದರಿಂದ ಹೊರಬಂದು ಒಂದಿಷ್ಟು ಸುಧಾರಣೆಯಾಗುತ್ತಿದೆ ಎನ್ನುವುದರೊಳಗೆ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಬಹುದೊಡ್ಡ ಹಗರಣವೊಂದು ಸುದ್ದಿ ಮಾಡಿತ್ತು. 2015ರಲ್ಲಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ವಿವಿಧ ಸಲಕರಣೆ, ಗುಜರಿ ಇನ್ನಿತರ ವಿಚಾರದಲ್ಲಿ ಏನೋ ಅಪರಾ ತಪರಾ ಇದೆ ಎಂಬ ಗುಮಾನಿ ಮೇರೆಗೆ ಅಂದಿನ ವ್ಯವಸ್ಥಾಪಕ ನಿರ್ದೇಶಕಿ ವಿನೋತ್‌ ಪ್ರಿಯಾ ಅವರು 2016ರ ಫೆಬ್ರವರಿಯಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದರಿಂದ, ಸಂಸ್ಥೆ-ಸರಕಾರವೇ ಗಾಬರಿಯಾಗುವ ಹಗರಣವೊಂದು ಬಯಲಿಗೆ ಬಂದಿತ್ತು.

ಪ್ರಾದೇಶಿಕ ಕಾರ್ಯಾಗಾರದಲ್ಲಿ ಹಳೇ ವಾಹನ ಖರೀದಿಯ ಟೆಂಡರ್‌ ಹಾಕಲು ಬಂದಿದ್ದ ಕೆಲ ಬಿಡ್‌ದಾರರು ವಾಹನಗಳಲ್ಲಿ ಹಲವು ಬಿಡಿಭಾಗಗಳಳೇ ಕಾಣೆಯಾಗಿವೆ ಎಂದು ಆಕ್ಷೇಪಿಸಿದ್ದರು. ಇದರಿಂದ ಸಂಶಯಗೊಂಡ ಅಂದಿನ ವ್ಯವಸ್ಥಾಪಕ ನಿರ್ದೇಶಕಿ ವಿನೋತ್‌ ಪ್ರಿಯಾ ಅವರು, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಸಂಸ್ಥೆ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಿದ್ದರು. ಅದರಂತೆ ಅಂದಿನ ಇಬ್ಬರು ತಾಂತ್ರಿಕ ಸಹಾಯಕರು ಹಾಗೂ ಪಾರುಪತ್ತೆಗಾರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಾಥಮಿಕ ತನಿಖೆ ನಡೆಸಿದಾಗ ಸುಮಾರು 152 ಆಕ್ಸೆಲ್ ಶಾಫ್ಟ್, 56 ಬ್ಯಾಟರಿ, 152 ಸಿ.ಜೆ. ಶಾಫ್ಟ್, 9 ಆಲóನೆಟರ್‌, 20 ಸ್ಟಾರ್ಟರ್‌ ಅಸೆಂಬ್ಲಿ ಕಾಣೆಯಾಗಿವೆ ಎಂದು ತಿಳಿದು ಬಂದಿದ್ದಾಗಿ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಈ ಬಗ್ಗೆ ಪೊಲೀಸ್‌ ದೂರು ನೀಡಲಾಗಿತ್ತು. ಪ್ರಕರಣ ಇಷ್ಟಕ್ಕೆ ಅಲ್ಲ ಇನ್ನೂ ಆಳಕ್ಕಿದೆ ಎಂಬ ಸಂಶಯದ ಮೇರೆಗೆ ವಿನೋತ್‌ ಪ್ರಿಯಾ ಅವರು ಪ್ರಾದೇಶಿಕ ಕಾರ್ಯಾಗಾರದ ಕಾರ್ಯಚಟುವಟಿಕೆ ಸಮಗ್ರ ತನಿಖೆಗೆ ಆದೇಶಿಸಿದ್ದರು.

Advertisement

ಬ್ರಹ್ಮಾಂಡ ದರ್ಶನ: ವಾಯವ್ಯ ಸಾರಿಗೆ ಪ್ರಾದೇಶಿಕ ಕಾರ್ಯಾಗಾರದಲ್ಲಿ ತನಿಖೆಗೆ ಮುಂದಾದಾಗ ಲೆಕ್ಕಕ್ಕಿಲ್ಲದ ಅನೇಕ ಸಲಕರಣೆಗಳು ರಾಶಿ ರಾಶಿ ರೂಪದಲ್ಲಿ ಗೋಚರಿಸಿದ್ದವು. ಅಷ್ಟೇ ಅಲ್ಲ ಬಸ್‌ಗಳ ಚಸ್ಸಿ ಸಂಖ್ಯೆಯನ್ನೇ ಬದಲು ಮಾಡಲಾಗಿತ್ತು. ಸುಸ್ಥಿತಿಯಲ್ಲಿರುವ ಬಸ್‌ಗಳ ಚಸ್ಸಿಯನ್ನೇ ಬದಲಾಯಿಸಿ ಹಳೇ ಬಸ್‌ಗಳ ಚಸ್ಸಿ ನಮೂದಿಸಿ ಗುಜರಿ ಎಂದು ನಮೂದಿಸಿ ಕಳುಹಿಸುತ್ತಿರುವುದು ಪತ್ತೆಯಾಗಿತ್ತು. ಪ್ರಾದೇಶಿಕ ಕಾರ್ಯಾಗಾರದಲ್ಲಿ ತಾಂತ್ರಿಕ ಸಿಬ್ಬಂದಿ, ಮಾನವ ಸಂಪನ್ಮೂಲ ಇದ್ದರೂ, ಕೆಲವರ ಸ್ವಾರ್ಥಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ವಾಹನ ಬಾಡಿ ನಿರ್ಮಾಣ ಇನ್ನಿತರ ಕಾರ್ಯಗಳನ್ನು ಖಾಸಗಿಯವರಿಗೆ ನೀಡುತ್ತಿರುವುದು ಸಹ ಕಂಡುಬಂದಿತ್ತು. ಗುಜರಿ ಸಾಮಗ್ರಿಗಳ ಹೆಸರಲ್ಲಿ ವಾಯವ್ಯ ಸಾರಿಗೆ ಪ್ರಾದೇಶಿಕ ಕಾರ್ಯಾಗಾರದಿಂದ ಹೊರಟಿತ್ತು ಎನ್ನಲಾಗಿದ್ದ ಲಾರಿಯೊಂದನ್ನು ಚಿತ್ರದುರ್ಗದ ಬಳಿ ತಡೆದು ಪರಿಶೀಲಿಸಿದಾಗ ಅನೇಕ ಸುಸ್ಥಿತಿಯ ಸಾಮಗ್ರಿಗಳು ಪತ್ತೆಯಾಗಿದ್ದವು!

ಪ್ರಾದೇಶಿಕ ಕಾರ್ಯಾಗಾರದಲ್ಲಿ ಹಗರಣ ಕುರಿತಾಗಿ ಸರಕಾರ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಮಗ್ರ ವರದಿ ಸಲ್ಲಿಸಿದ್ದ ಅಂದಿನ ವ್ಯವಸ್ಥಾಪಕ ನಿರ್ದೇಶಕರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಪ್ರಕರಣ ನಡೆದು ನಾಲ್ಕು ವರ್ಷಗಳು ಕಳೆದ ನಂತರ ಇದೀಗ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಇನ್ನಷ್ಟು ತಪ್ಪಿತಸ್ಥರಿಗೆ ಇದು ನಡುಕ ತರಿಸಿದ್ದರೆ, ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೆಲವರು ಈಗಾಗಲೇ ಸೇವಾ ನಿವೃತ್ತಿ ಹೊಂದಿದ್ದಾರೆ.

ಪಾಠ ಕಲಿತ ಸಂಸ್ಥೆ
ವಾಯವ್ಯ ಸಾರಿಗೆ ಸಂಸ್ಥೆಗೆ ಸೇರಿದ ಸುಮಾರು 80 ಬಸ್‌ಗಳ ಚಸ್ಸಿಗಳನ್ನೇ ಬದಲಾಯಿಸಿ ಗುಜರಿ ರೂಪದಲ್ಲಿ ಸಾಗಿಸಲಾಗಿತ್ತು ಎಂಬುದು ತನಿಖೆ ವೇಳೆ ತಿಳಿದಿತ್ತು. ಇದೀಗ ಯಾವುದೇ ಗುಜರಿ ವಹಿವಾಟನ್ನು ಆನ್‌ಲೈನ್‌ ಮೂಲಕ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಗುಜರಿ ಟೆಂಡರ್‌ನಲ್ಲಿ ಭಾಗವಹಿಸಬೇಕಾದರೆ ಎಂಎಸ್‌ಟಿಸಿನಲ್ಲಿ ಸದಸ್ಯರಾಗಬೇಕು.

ವಾಯವ್ಯ ಸಾರಿಗೆ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಕರ್ಮಕಾಂಡದ ಬಗ್ಗೆ ಮಜ್ದೂರ್‌ ಸಂಘದಿಂದ ಧ್ವನಿ ಎತ್ತಿದ್ದೆವು. ಹಗರಣದ ತನಿಖೆಗೆ ಒತ್ತಾಯಿಸಿದ್ದೆವು. ಸುಮಾರು ನಾಲ್ಕು ವರ್ಷಗಳ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದು ಸಂತಸ ಮೂಡಿಸಿದೆ. ಅದೇ ರೀತಿ ತಪ್ಪಿತಸ್ಥರಿಂದ ನಷ್ಟದ ಹಣ ವಸೂಲಿಗೆ ಆದೇಶಿಸಿರುವುದು ನಮ್ಮ ಬೇಡಿಕೆ ಹಾಗೂ ಹೋರಾಟಕ್ಕೆ ಸಂದ ಜಯವಾಗಿದೆ.
•ಸುಭಾಸಸಿಂಗ್‌ ಜಮಾದಾರ,
ಮಾಜಿ ಅಧ್ಯಕ್ಷ, ವಾಯವ್ಯ ಸಾರಿಗೆ ಸಂಸ್ಥೆ ಮಜ್ದೂರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next