Advertisement

ಉತ್ತರ ಕರ್ನಾಟಕಕ್ಕೆ ಜಾಕ್‌ಪಾಟ್‌

03:06 PM Oct 10, 2019 | Naveen |

ಅಮರೇಗೌಡ ಗೋನವಾರ
ಹುಬ್ಬಳ್ಳಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಅಡ್ಡಿ ತಪ್ಪಿಸಲು ವಿವಿಧ ನಿಗಮ-ಮಂಡಳಿಗಳ ನೇಮಕ ಬಳುವಳಿ ಮೂಲಕ ತನ್ನದೇ ಪಕ್ಷದ ಟಿಕೆಟ್‌ ಆಕಾಂಕ್ಷಿಗಳನ್ನು ಸಂತೈಸಲು, ಬಂಡಾಯ-ಪಕ್ಷಾಂತರ ತಡೆಗೆ ಮುಂದಾಗಿರುವ ಬಿಜೆಪಿ ಉತ್ತರ ಕರ್ನಾಟಕಕ್ಕೆ ಜಾಕ್‌ಪಾಟ್‌ ನೀಡಿದೆ!

Advertisement

ಅನರ್ಹಗೊಂಡ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದರೆ ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಲು ಆಯಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತವರು, ಮಾಜಿ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ತಮ್ಮ ಸ್ಪರ್ಧೆ ಖಚಿತ ಎಂದು ಕೆಲವರು ಸ್ಪಷ್ಟಪಡಿಸಿದ್ದರು.

ಇದರಿಂದ ದಿಗಿಲುಗೊಂಡ ಅನರ್ಹ ಶಾಸಕರು, ಬಿಜೆಪಿ ಮುಖಂಡರ ಸ್ಪರ್ಧೆ ತಡೆಯುವಂತೆ ವರಿಷ್ಠರ ಮೇಲೆ ತೀವ್ರ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಂಡಾಯ ಶಮನ ಹಾಗೂ ಅನ್ಯ ಪಕ್ಷಗಳಿಗೆ ವಲಸೆ ತಪ್ಪಿಸಲು ಸಿಎಂ ಬಿಎಸ್‌ ವೈ ದಿಢೀರ್‌ 8 ಜನ ಬಿಜೆಪಿ ಮುಖಂಡರಿಗೆ ಸಚಿವ ಸಂಪುಟ ದರ್ಜೆ ಸ್ಥಾನದ ವಿವಿಧ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಉ.ಕಕ್ಕೆ ಸಿಂಹಪಾಲು ಲಭಿಸಿದೆ.

8ರಲ್ಲಿ 6 ಉಕಕ್ಕೆ: ವಿವಿಧ ನಿಗಮ-ಮಂಡಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ವಿಜಯದಶಮಿ ಮರುದಿನವೇ (ಅ.9)ಆದೇಶ ಹೊರಡಿಸಲಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದ ಅಶೋಕ ಪೂಜಾರಿ ಅವರನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಾಗವಾಡದ ಭರಮಗೌಡ (ರಾಜು)ಕಾಗೆ ಅವರನ್ನು ಬೆಳಗಾವಿ ಮಲಪ್ರಭಾ-ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಯೋಜನೆ (ಕಾಡಾ) ಅಧ್ಯಕ್ಷರನ್ನಾಗಿ, ಹಾವೇರಿ ಜಿಲ್ಲೆ ಹಿರೆಕೇರೂರಿನ ಯು.ಬಿ.ಬಣಕಾರ ಅವರನ್ನು ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ ಅಧ್ಯಕ್ಷರನ್ನಾಗಿ, ರಾಯಚೂರು ಜಿಲ್ಲೆ ಮಸ್ಕಿಯ ಬಸನಗೌಡ ತುರವಿಹಾಳ ಅವರನ್ನು ಮುನಿರಾಬಾದ್‌ ನ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಯೋಜನೆ (ಕಾಡಾ) ಅಧ್ಯಕ್ಷರನ್ನಾಗಿ, ಉ.ಕನ್ನಡ ಜಿಲ್ಲೆ ಮುಂಡಗೋಡದ ವಿ.ಎಸ್‌.ಪಾಟೀಲ ಅವರನ್ನು ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರನ್ನಾಗಿ, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಎಚ್‌.ಆರ್‌.ಗವಿಯಪ್ಪ ಅವರನ್ನು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಬೆಂಗಳೂರಿನ ನಂದೀಶ ರೆಡ್ಡಿ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉಪಾಧ್ಯಕ್ಷನ್ನಾಗಿ, ಹೊಸಕೋಟೆಯ ಶರತ್‌ ಬಚ್ಚೇಗೌಡ ಅವರನ್ನು ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Advertisement

ಅನರ್ಹರಿಗೆ ಅನುಕೂಲ ಯತ್ನ: ಕಾಂಗ್ರೆಸ್‌-ಜೆಡಿಎಸ್‌ ನಿಂದ ಗೆದ್ದಿದ್ದ ಕೆಲ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಾದರೂ ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್‌ ರಮೇಶ ಕುಮಾರ ರಾಜೀನಾಮೆ ಅಂಗೀಕರಿಸದೆ 17 ಶಾಸಕರನ್ನು ಅನರ್ಹಗೊಳಿಸಿದ್ದರು.

ಅನರ್ಹ ಶಾಸಕರು ಉಪ ಚುನಾವಣೆ ಎದುರಾದರೆ ಬಿಜೆಪಿಯಿಂದ ಟಿಕೆಟ್‌ ಪಡೆಯುವ ಖಾತ್ರಿಯೊಂದಿಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು ಎಂದು ಹೇಳಲಾಗುತ್ತಿದೆ.  ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇವಲ ಒಂದೂವರೆ ವರ್ಷದ ಹಿಂದೆಯಷ್ಟೇ ಯಾರ ವಿರುದ್ಧ ಸೆಣಸಾಡಿ ಸೋತಿದ್ದೆವೋ, ಇದೀಗ ಅವರನ್ನೇ ಪಕ್ಷದ ಅಭ್ಯರ್ಥಿಯಾಗಿಸಿ, ಅವರ ಪರ ಪ್ರಚಾರ ಮಾಡುವುದಾದರು ಹೇಗೆ, ಮುಂದಿನ ನಮ್ಮ ರಾಜಕೀಯ ಭವಿಷ್ಯದ ಕಥೆ ಏನು ಎಂಬುದು ಬಿಜೆಪಿಯಿಂದ ಸ್ಪರ್ಧಿಸಿ ಸೋತ ಹಾಗೂ ಮಾಜಿ ಶಾಸಕರ ಪ್ರಶ್ನೆಯಾಗಿದೆ.

ಇನ್ನು ಕೆಲವರು ಬಹಿರಂಗವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಟಿಕೆಟ್‌ ದೊರೆಯದಿದ್ದರೆ ಬಂಡಾಯ, ಅನ್ಯಪಕ್ಷ
ಇಲ್ಲವೆ ಪಕ್ಷೇತರ ಸ್ಪರ್ಧೆ ಸಂದೇಶ ರವಾನಿಸಿದ್ದರು. ಇದು ಬಿಜೆಪಿ ನಾಯಕರಿಗೆ ಇರುಸು- ಮುರುಸು ತರಿಸಿತ್ತಲ್ಲದೆ, ಅನರ್ಹಗೊಂಡ ಶಾಸಕರಲ್ಲಿ ಅನೇಕರಿಗೆ ಆತಂಕ ಹೆಚ್ಚುವಂತೆ ಮಾಡಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶ್ರೀಮಂತಗೌಡ ಪಾಟೀಲ, ಬಿಜೆಪಿಯ ಭರಮಗೌಡ (ರಾಜು)ಕಾಗೆ ವಿರುದ್ಧ 32,942 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಬಿಜೆಪಿಯ ಅಶೋಕ ಪೂಜಾರ ವಿರುದ್ಧ 14,280 ಮತಗಳಿಂದ ಗೆದ್ದಿದ್ದರು. ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಎಸ್‌.ಪಾಟೀಲ ಬಿಜೆಪಿಯ ಯು.ಬಿ.ಬಣಕಾರ ವಿರುದ್ಧ ಕೇವಲ 555 ಮತಗಳಿಂದ ಪ್ರಯಾಸದ ಗೆಲುವು ಸಾಧಿಸಿದ್ದರು.

ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರತಾಪಗೌಡ ಪಾಟೀಲ ಬಿಜೆಪಿಯ ಬಸನಗೌಡ ತುರವಿಹಾಳ ವಿರುದ್ಧ 213 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಆಗಮಿಸಿ ಸ್ಪರ್ಧಿಸಿದ್ದ ಆನಂದ ಸಿಂಗ್‌ ಬಿಜೆಪಿಯ ಎಚ್‌.ಆರ್‌. ಗವಿಯಪ್ಪ ವಿರುದ್ಧ 8,228 ಮತಗಳಿಂದ ಗೆಲುವು ಸಾಧಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವರಾಮ ಹೆಬ್ಟಾರ ಬಿಜೆಪಿಯ ವಿ.ಎಸ್‌.ಪಾಟೀಲ ವಿರುದ್ಧ ಕೇವಲ 1,483 ಮತಗಳಿಂದ ಗೆಲುವು ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next