Advertisement

ಉಳ್ಳಾಗಡ್ಡಿ ತಂದ ಕಣ್ಣೀರು; ತರಕಾರಿ ಆಗುತ್ತಿದೆ ದುಬಾರಿ

01:21 PM Nov 27, 2019 | Naveen |

ಬಸವರಾಜ ಹೂಗಾರ
ಹುಬ್ಬಳ್ಳಿ:
ನಿನ್ನೆ ಮೊನ್ನೆಯಷ್ಟೇ ತೀವ್ರ ಬೆಲೆ ಕುಸಿತದಿಂದ ರೈತರಿಗೆ ಕಣ್ಣೀರು ತರಿಸಿದ್ದ ಉಳ್ಳಾಗಡ್ಡಿ, ಇದೀಗ ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಉಳ್ಳಾಗಡ್ಡಿ ಎಂದರೆ ಸಾಕು ಒಂದು ರೈತರಿಗೆ, ಇಲ್ಲವೇ ಗ್ರಾಹಕರಿಗೆ ಕಣ್ಣೀರು ತರಿಸದೇ ಇರದು. ಉಳ್ಳಾಗಡ್ಡಿಗೆ ಉತ್ತಮ ದರ ದೊರೆಯುತ್ತಿಲ್ಲವೆಂದು ರೈತರು ಬೀದಿಗಿಳಿದು ಹೋರಾಟ ಮಾಡಿದ್ದಾರಾದರೂ, ಇದೀಗ ದರ ಕೇಳಿದರೆ ಗಾಬರಿಪಡುವಷ್ಟು ಎತ್ತರಕ್ಕೇರಿದೆ. ಕೆಲ ಮಾರುಕಟ್ಟೆಗಳಲ್ಲಿ ಉಳ್ಳಾಗಡ್ಡಿ ದರ ದಿನಕ್ಕಲ್ಲ, ಗಂಟೆಗಳ ಲೆಕ್ಕದಲ್ಲಿ ಹೆಚ್ಚಳವಾಗತೊಡಗಿದೆ. ಎಪಿಎಂಸಿಯ ಅಂಗಡಿಗಳಲ್ಲೇ ಒಂದು ಕೆಜಿ ಉಳ್ಳಾಗಡ್ಡಿಗೆ 60 ರೂ. ದರ ಇದ್ದರೆ, ಮಾರುಕಟ್ಟೆಯಲ್ಲಿ 80ರಿಂದ 100 ರೂ.ಗೆ ಮಾರಾಟವಾಗತೊಡಗಿದೆ.

Advertisement

ಕೆಜಿಗಟ್ಟಲೇ ಉಳ್ಳಾಗಡ್ಡಿ ತರುವವರು ದರ ಕಂಡು ದಂಗಾಗಿದ್ದು, ಗ್ರಾಂ ಲೆಕ್ಕದಲ್ಲಿ ತರುವಂತಾಗಿದೆ. ದರ ಹೆಚ್ಚಳ ಹೋಟೆಲ್‌ ಉದ್ಯಮದ ಮೇಲೆ ಪರಿಣಾಮ ಬೀರಿದೆ. 10 ಕೆಜಿ ಉಳ್ಳಾಗಡ್ಡಿ ತಂದರೆ ಬಳಸುವುದರೊಳಗೆ ಸುಮಾರು 2 ಕೆಜಿಯಷ್ಟು ಉಳ್ಳಾಗಡ್ಡಿ ಕೊಳೆತು ಹೋಗಿರುತ್ತದೆ.

ತರಕಾರಿಯೂ ದುಬಾರಿ: ಉಳ್ಳಾಗಡ್ಡಿ ಕಥೆ ಬಿಡಿ ಇತರೆ ತರಕಾರಿಗಳ ದರಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ವಿವಿಧ ತರಕಾರಿ, ಪಲ್ಯಗಳ ದರವೂ ಗಗನಮುಖೀಯಾಗಿದ್ದು, ಬಡವರು ಹಾಗೂ ಮಧ್ಯಮ ವರ್ಗದವರು ಪರಿತಪಿಸುವಂತಾಗಿದೆ. ಸುಗ್ಗಿಯ ಹಬ್ಬವೆಂದೇ ಕರೆಯುವ ಸಂಕ್ರಾಂತಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ತರಕಾರಿ-ಪಲ್ಯ, ಕಾಳುಗಳು ಕೈಸುಡುವಂತೆ ಭಾಸವಾಗತೊಡಗಿವೆ.

ಸುಗ್ಗಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ-ಪಲ್ಯ ಹಾಗೂ ಕಾಳುಗಳ ದರ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಬರ ಹಾಗೂ ನೆರೆಯಿಂದ ಈ ಬಾರಿ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ದರ ಗಗನಮುಖೀಯಾಗಿದೆ. ಕಡು ಬೇಸಿಗೆಯಲ್ಲಿ ಇರಬೇಕಾದ ದರ ಸುಗ್ಗಿ ಸಂದರ್ಭದಲ್ಲೇ ಇರುವಂತಾಗಿದೆ. ಹಸಿ ಮೆಣಸಿನಕಾಯಿ ಕೆಜಿಗೆ 60ರಿಂದ 80 ರೂ. ಇದ್ದರೆ, ಟೊಮೆಟೊ 60ರಿಂದ 80 ರೂ., ಬದನೆಕಾಯಿ 80ರೂ., ಸೌತೇಕಾಯಿ 80ರಿಂದ 100 ರೂ., ಬೀನ್ಸ್‌ 80ರಿಂದ 100ರೂ., ಚೌಳಿಕಾಯಿ 60ರಿಂದ 80 ರೂ.ಗೆ ಏರಿಕೆಯಾಗಿದೆ. ಮಾರುಕಟ್ಟೆಗೆ ತರಕಾರಿ ನೋಡುವುದಕ್ಕೆ ಹೋಗಬೇಕು, ಖರೀದಿಗಲ್ಲ ಎಂಬ ಸ್ಥಿತಿ ಬಡ-ಮಧ್ಯಮ ವರ್ಗದವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next