Advertisement

ಹುಬ್ಬಳ್ಳಿ -ಧಾರವಾಡ ನವೋದ್ಯಮ ಹಬ್‌: ಜೋಶಿ

10:33 AM Jun 12, 2022 | Team Udayavani |

ಹುಬ್ಬಳ್ಳಿ: ಕರ್ನಾಟಕ ದೇಶದ ನವೋದ್ಯಮ ಹಬ್‌ ಆಗಿ ಗೋಚರಿಸುತ್ತಿದ್ದು, ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ನವೋದ್ಯಮದ ಹಬ್‌ ಆಗಿ ಗುರುತಿಸಿಕೊಂಡಿದೆ. ಇದರ ಹಿಂದೆ ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಅವರ ಕೊಡುಗೆ ಸಾಕಷ್ಟಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಗೋಕುಲ ರಸ್ತೆಯಲ್ಲಿರುವ ದೇಶಪಾಂಡೆ ಸಾರ್ಟ್‌ಅಪ್ಸ್‌ನಲ್ಲಿ ಅಭಿವೃದ್ಧಿ ಸಂವಾದದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನವೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಸಾರ್ಟ್‌ಅಪ್ಸ್‌, ಸ್ಯಾಂಡ್‌ಅಪ್‌ ಸೇರಿದಂತೆ ವಿವಿಧ ಉದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ನವೋದ್ಯಮ ಬೆಳವಣಿಗೆ, ಸಾಧನೆ ದೃಷ್ಟಿಯಿಂದ ಹು-ಧಾ ಗಮನ ಸೆಳೆಯುತ್ತಿದೆ ಎಂದರು.

ಒಂದು ಬಿಲಿಯನ್‌ ಡಾಲರ್‌ ವಾರ್ಷಿಕ ವಹಿವಾಟು ನಡೆಯುವ ನವೋದ್ಯಮಗಳನ್ನು ಯುನಿಕಾನ್ಸ್‌ ಎನ್ನಲಾಗುತ್ತಿದ್ದು, 2021ರಲ್ಲಿ 44 ಹಾಗೂ 2022ರಲ್ಲಿ ಇಲ್ಲಿವರೆಗೆ 15 ನವೋದ್ಯಮಗಳು ಇಂತಹ ಸಾಧನೆ ತೋರಿವೆ. ಮುಂದಿನ ದಿನಗಳಲ್ಲಿ ಇಂತಹ 2-3 ನವೋದ್ಯಮಗಳು ಹುಬ್ಬಳ್ಳಿ-ಧಾರವಾಡದಲ್ಲಿ ಸಾಧನೆ ಮಾಡುವಂತೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್‌ ಗಮನ ಹರಿಸಲಿ ಎಂದು ಹೇಳಿದರು.

ದೇಶಪಾಂಡೆ ಫೌಂಡೇಶನ್‌ ಜಾಗತಿಕ ನಕ್ಷೆಯಲ್ಲಿ ತನ್ನದೇ ಸ್ಥಾನ ಪಡೆದಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ ದೇಶಪಾಂಡೆ ಫೌಂಡೇಶನ್‌ ಕೆಲಸ ಕಾರ್ಯದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ ಎಂದರು.

ಇದೀಗ ನವೋದ್ಯಮ ಉತ್ತೇಜನ ನಿಟ್ಟಿನಲ್ಲಿ ಪ್ರಧಾನಿಯವರ ಆಶಯದಂತೆ ಮುದ್ರಾ ಯೋಜನೆಯಡಿ 10ರಿಂದ 50 ಲಕ್ಷ ರೂ.ವರೆಗೆ ಸಾಲ ದೊರೆತರೆ, ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ.ನಿಂದ 50 ಲಕ್ಷ ರೂ.ವರೆಗೆ ಸ್ವನಿಧಿ ಯೋಜನೆಯಡಿ ನೆರವು ದೊರೆಯುತ್ತಿದೆ. ನವೋದ್ಯಮ-ಉದ್ಯಮ ಉತ್ತೇಜಿಸಲು ಕೇಂದ್ರ ಸರಕಾರ ಆರ್ಥಿಕ ನೆರವು, ತರಬೇತಿ, ಮಾರುಕಟ್ಟೆ ಬೆಂಬಲ ಸೇರಿದಂತೆ ವಿವಿಧ ಸಹಾಯದೊಂದಿಗೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡಿದೆ. ವಿಶ್ವಕ್ಕೆ ಭಾರತ ಕೇಂದ್ರಬಿಂದು ಆಗುತ್ತಿದೆ. ಯುವಕರು ಉದ್ಯೋಗಗಳ ಬೆನ್ನು ಬೀಳದೆ ಉದ್ಯಮದತ್ತ ಬಂದು ಇತರರಿಗೆ ಉದ್ಯೋಗ ನೀಡುವಂತೆ ಆಗಬೇಕಾಗಿದೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.

Advertisement

ದೇಶಪಾಂಡೆ ಸಾರ್ಟ್‌ಅಪ್ಸ್‌ ಸಿಇಒ ಅರವಿಂದ ಚಿಂಚೋರೆ ಪ್ರಾಸ್ತಾವಿಕ ಮಾತನಾಡಿ, ಹು-ಧಾ ಸೇರಿದಂತೆ ಈ ಭಾಗದಲ್ಲಿ ನವೋದ್ಯಮ ವೇಗೋತ್ಕರ್ಷ ಪಡೆದುಕೊಳ್ಳುತ್ತಿದೆ. ಇಂದಿನ ಸಂವಾದ ಸಮಾವೇಶ ಇನ್ನಷ್ಟು ಉತ್ತೇಜನ ನೀಡಲಿದೆ ಎಂದರು.

ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ, ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ, ದೇಶಪಾಂಡೆ ಫೌಂಡೇಶನ್‌ ಸಿಇಒ ವಿವೇಕ ಪವಾರ ಇನ್ನಿತರರು ಇದ್ದರು. ಸ್ನೇಹಾ ದೀಕ್ಷಿತ್‌ ನಿರೂಪಿಸಿದರು.

ಉದ್ಯಮ ಸವಾಲು ಅನುಭವ ಹಂಚಿಕೊಂಡ ಕೇಂದ್ರ ಸಚಿವರು: ನಾನು ಪದವೀಧರನಾಗಿ ಹೊರಬಂದಾಗ ನೌಕರಿಗೆ ಅರ್ಜಿ ಹಾಕುವಂತೆ ಪಾಲಕರ ಒತ್ತಾಯವಿದ್ದರೂ ಹಾಕಲಿಲ್ಲ. ಸ್ವಂತ ಉದ್ಯಮ ಆರಂಭಿಸಬೇಕೆಂಬ ನನ್ನ ಬಯಕೆಯಂತೆ ಉದ್ಯಮ ಆರಂಭಕ್ಕೆ ಮುಂದಾದಾಗ ಯಾವುದೇ ನೆರವು, ಸೌಲಭ್ಯ, ಮಾರ್ಗದರ್ಶನಗಳು ಇರಲಿಲ್ಲ. ಬ್ಯಾಂಕ್‌ಗಳು ಸಾಲ ಕೊಡುವುದಿರಲಿ ನಮ್ಮಂತಹವರು ಬ್ಯಾಂಕ್‌ ಶಾಖಾ ವ್ಯವಸ್ಥಾಪಕರನ್ನು ಭೇಟಿಯಾಗುವುದೇ ಕಷ್ಟ ಎನ್ನುವಂತಿತ್ತು. ಮನೆ ಮನೆಗೆ ಫಿನಾಯಿಲ್‌ ಮಾರಾಟ ಮಾಡುತ್ತಿದ್ದ ನನಗೆ ಬ್ಯಾಂಕ್‌ನವರು ಸಾಲ ನೀಡಲು ಮುಂದಾಗಿರಲಿಲ್ಲ. ಇದೀಗ ನಮ್ಮ ಕಂಪೆನಿ ಸುಮಾರು 800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಭಾರತದಲ್ಲಿ ಉದ್ಯಮ ವಲಯಕ್ಕೆ ಸುವರ್ಣಯುಗ ಆರಂಭವಾಗಿದೆ. ನವೋದ್ಯಮ ಸ್ನೇಹಿ ವಾತಾವರಣ ಇದ್ದು, ನವೋದ್ಯಮಕ್ಕೆ 2-3ನೇ ಸ್ತರದ ನಗರಗಳಲ್ಲಿ ವಿಫುಲ ಅವಕಾಶಗಳು ಇವೆ ಎಂದು ನೆಟ್‌ವರ್ಕ್‌-18 ಚೇರ್ಮೇನ್‌ ಆದಿಲ್‌ ಝೈನುಲ್‌ಭಾಯ್‌ ಹೇಳಿದರು. ದೇಶಪಾಂಡೆ ಸಾರ್ಟ್‌ಅಪ್ಸ್‌ ಆಯೋಜಿಸಿದ್ದ ಅಭಿವೃದ್ಧಿ ಸಂವಾದದಲ್ಲಿ ಝೂಮ್‌ಆ್ಯಪ್‌ ಮೂಲಕ ಮಾತನಾಡಿದ ಅವರು, ದೇಶದಲ್ಲಿ ಪ್ರಸ್ತುತ ಸುಮಾರು 69 ಸಾವಿರ ನವೋದ್ಯಮಗಳು ನೋಂದಣಿ ಮಾಡಿಸಿವೆ. ಮುಂದಿನ ದಿನಗಳಲ್ಲಿ 1 ಲಕ್ಷಕ್ಕೆ ಇದು ತಲುಪುವ ಸಾಧ್ಯತೆ ಇದ್ದು, ನವೋದ್ಯಮದಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಲಿದ್ದು, ಕರ್ನಾಟಕದಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗ ನೀಡಿದ ನವೋದ್ಯಮವೂ ಇದೆ. ಮುಂದಿನ ಐದು ವರ್ಷಗಳಲ್ಲಿ ನವೋದ್ಯಮ ಚಟುವಟಿಕೆ ಹೆಚ್ಚಲಿವೆ ಎಂದರು. ಭಾರತದಲ್ಲಿ ಡಿಜಿಟಲ್‌ ಕ್ಷೇತ್ರದ ಮೂಲಸೌಲಭ್ಯಗಳಿಗೆ ಒತ್ತು ನೀಡಲಾಗಿದ್ದು, ಇದರಿಂದ ಅವಕಾಶಗಳು ಅಧಿಕವಾಗಲಿವೆ. ನವೋದ್ಯಮ ಸುಲಭದಿಂದ ಯಶಸ್ಸು ಕಾಣದು. ಕಠಿಣ ಪರಿಶ್ರಮ ಅವಶ್ಯವಾಗಿದೆ. ವಿಶ್ವಾಸ ಕಳೆದುಕೊಳ್ಳುವುದು ಬೇಡ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌, ಕೆಲ ವಿಶ್ವವಿದ್ಯಾಲಯಗಳು ಇನ್‌ಕ್ಯುಬೇಷನ್‌ ಕೇಂದ್ರ ಆರಂಭಿಸುವ ಮೂಲಕ ನವೋದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ಉದ್ಯಮಿಗಳು ನವೋದ್ಯಮಕ್ಕೆ ಮರುಹೂಡಿಕೆ ಮಾಡುತ್ತಿರುವುದು ಸಂತಸದ ವಿಚಾರ. ದೊಡ್ಡ ನಗರಗಳಲ್ಲಿ ನವೋದ್ಯಮ ಆರಂಭ, ನಿರ್ವಹಣೆಗೆ ವೆಚ್ಚ ಅಧಿಕವಾಗಲಿದೆ. ಆದರೆ 2-3ನೇ ಸ್ತರದ ನಗರಗಳಲ್ಲಿ ವೆಚ್ಚಗಳು ಕಡಿಮೆ ಆಗಲಿದೆ. –ಆದಿಲ್‌ ಝೈನುಲ್‌ಭಾಯ್‌, ನೆಟ್‌ವರ್ಕ್‌- ಚೇರ್ಮೇನ್‌

ನವೋದ್ಯಮ ಸಾಧನೆ ಬಿಚ್ಚಿಟ್ಟ ಸಾಧಕರು

ಗೋಡಂಬಿ ಗ್ರೇಡಿಂಗ್‌ ವಹಿವಾಟಿನಲ್ಲಿ ಶೇ.33 ಪಾಲು:

ಗೋಡಂಬಿ ಗ್ರೇಡಿಂಗ್‌ ಯಂತ್ರಗಳ ತಯಾರಿಕೆಯ ನ್ಯಾನೋಫಿಕ್ಸ್‌ ಸಂಸ್ಥೆ ಸಹ ಸಂಸ್ಥಾಪಕ ಸಶಿಶೇಖರ ಮಾತನಾಡಿ, ಉದ್ಯಮ ಆರಂಭಕ್ಕೆ ಮುಂದಾಗಿ ಕೆಲ ತಾಂತ್ರಿಕ ತಪ್ಪುಗಳಿಂದ ನಷ್ಟ ಅನುಭವಿಸಿದ್ದೆ. ನಂತರ ಮೇಲೆದ್ದು ಗೋಡಂಬಿ ಗ್ರೇಡಿಂಗ್‌ ಯಂತ್ರಗಳ ತಯಾರಿಕೆಗೆ ಮುಂದಾದೆ. ಇದೀಗ ದೇಶದ 26 ರಾಜ್ಯಗಳಲ್ಲಿ, 10 ದೇಶಗಳಲ್ಲಿ ನಮ್ಮ ಉತ್ಪನ್ನ ಬಳಕೆ ಆಗುತ್ತಿದೆ. ಜಾಗತಿಕ ಗೋಡಂಬಿ ಗ್ರೇಡಿಂಗ್‌ ವಹಿವಾಟಿನಲ್ಲಿ ಶೇ.33 ಪಾಲು ಪಡೆದಿದ್ದೇವೆ. ಸುಮಾರು 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾಗಿ ಹೇಳಿದರು.

9ರಿಂದ ಆರಂಭವಾಗಿ ಸಾವಿರದ ಗಡಿ ದಾಟಿತು:

ಸೇಫ್‌ಹ್ಯಾಂಡ್ಸ್‌ ಸಂಸ್ಥಾಪಕಿ ಶ್ರಾವಣಿ ಪವಾರ ಮಾತನಾಡಿ, ಸೆಕ್ಯೂರಿಟಿ ಗಾರ್ಡ್‌ನಲ್ಲಿ ಮಹಿಳಾ ಪ್ರಾತಿನಿಧ್ಯ ಇರಲಿಲ್ಲ. ಆ ಕೊರತೆ ನೀಗಿಸಬೇಕೆಂದು ಸೇಫ್‌ ಹ್ಯಾಂಡ್ಸ್‌ ಆರಂಭಿಸಿದ್ದೆ, ಅನಕ್ಷರಸ್ಥ ಮಹಿಳೆಯರಿಗೆ ಉದ್ಯೋಗ ನೀಡಲು ಹೌಸ್‌ಕೀಪಿಂಗ್‌ ಆರಂಭಿಸಿದ್ದೆ. 9 ನೌಕರರಿಂದ ಆರಂಭವಾಗಿದ್ದ ಕಂಪೆನಿ ಇದೀಗ 1000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಲಾಗಿದೆ. ದೇಶಪಾಂಡೆ ಫೌಂಡೇಶನ್‌ ನೆರವಿನಿಂದ ನನ್ನ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿದೆ ಎಂದರು.

ಲಕ್ಷ ಕರಕುಶಲಕರ್ಮಿಗಳ ಸಂಪರ್ಕಿಸುವ ಯೋಜನೆ:

ಕೋಶ್‌ ಕಂಪೆನಿಯ ವಿಜಯ ಕೃಷ್ಣಪ್ಪ ಮಾತನಾಡಿ, ಕೈಮಗ್ಗ ನೇಕಾರರ ಉತ್ಪನ್ನಗಳಲ್ಲಿ ಉತ್ಪನ್ನಗಳ ನೈಜತೆ ಖಾತ್ರಿ ಪಡಿಸಲು ಹಾಗೂ ಅವುಗಳ ಮೌಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಕಂಪೆನಿ ತಂತ್ರಜ್ಞಾನ ಬಳಸಿಕೊಂಡು ಲೇಬಲ್‌ ರೂಪಿಸಿದ್ದು, ಇದನ್ನು ಬಳಸಿಕೊಂಡು ಗ್ರಾಹಕರು ಉತ್ಪನ್ನಗಳ ನೈಜತೆ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಜತೆಗೆ ಇತರೆ ಕರಕುಶಲಕರ್ಮಿಗಳ ಉತ್ಪನ್ನಗಳಿಗೂ ಇದೇ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 2 ಸಾವಿರ ಕೈಮಗ್ಗ ನೇಕಾರರು ಹಾಗೂ 1 ಲಕ್ಷ ಕರಕುಶಲಕರ್ಮಿಗಳನ್ನು ಸಂಪರ್ಕಿಸುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next