Advertisement

ನೀರಿನ ಬಿಲ್‌ ಯಾವಾಗ ಕೊಡ್ತೀರಿ?

01:25 PM Jul 11, 2022 | Team Udayavani |

ಹುಬ್ಬಳ್ಳಿ: ಯಾಕ್ರಿ ಇನ್ನೂ ನೀರಿನ ಬಿಲ್‌ ಬಂದಿಲ್ಲ?.. ಅಂದ್ಹಂಗ ಯಾವಾಗ ಬಿಲ್‌ ಕೊಡ್ತೀರಿ?..ಅಲ್ರಿ ಒಮ್ಯಾಕಲೆ ನಾಲ್ಕೈದು ತಿಂಗಳ ಸೇರ್ಸಿ ಬಿಲ್‌ ಕೊಟ್ರ ಹೆಂಗ್ರಿ ತುಂಬೋದು. ತಿಂಗಳ ತಿಂಗಳ ಬಿಲ್‌ ಕೊಟ್ರ ಚಲೋರಿ.

Advertisement

ಇದು. ಪ್ರತಿ ತಿಂಗಳು ಬಳಸಿದ ನೀರಿಗೆ ಜಲಮಂಡಳಿಗೆ ಶುಲ್ಕ ಕಟ್ಟುತ್ತಿರುವ ಹುಬ್ಬಳ್ಳಿ-ಧಾರವಾಡ ಜನ ಸಾಮಾನ್ಯರ ಸದ್ಯದ ಪ್ರಶ್ನೆಯಾಗಿದೆ. ಕಳೆದ ಎರಡು ತಿಂಗಳಿಂದ ಮಹಾನಗರ ವಾಪ್ತಿಯಲ್ಲಿ ನೀರು ಬಳಕೆಗೆ ಬಿಲ್‌ ಬಂದಿಲ್ಲ. ಜಲಮಂಡಳಿ ವ್ಯಾಪ್ತಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರರು ಹಾಗೂ ಮಹಾನಗರ ಪಾಲಿಕೆ ನಡುವಿನ ತಿಕ್ಕಾಟದಿಂದ ಮೀಟರ್‌ ರೀಡಿಂಗ್‌ ಸ್ಥಗಿತಗೊಂಡಿದೆ. ಈ ನೌಕರರ ಕೆಲ ಬೇಡಿಕೆಗಳಿಗೆ ಮಹಾನಗರ ಪಾಲಿಕೆ ಮೌನ ತಾಳಿದ್ದು, ನೌಕರರು ಕೂಡ ಒಂದು ರೀತಿಯಲ್ಲಿ ಅಸಹಕಾರ ಚಳವಳಿಗೆ ಮುಂದಾಗಿದ್ದಾರೆ.

ಮಹಾನಗರದ ಜನತೆಗೆ ನೀರಿನ ಸಮಸ್ಯೆ ಆಗಬಾರದು ಎಂದು ನೀರು ಸರಬರಾಜಿಗೆ ಸಮಸ್ಯೆ ಮಾಡದೆ ಉಳಿದ ಎಲ್ಲಾ ಕೆಲಸಗಳಿಗೆ ಆಸಕ್ತಿ ತೋರುತ್ತಿಲ್ಲ. ನಿರ್ವಹಣೆ ಜವಾಬ್ದಾರಿ ಪಡೆದಿರುವ ಎಲ್‌ ಆ್ಯಂಡ್‌ ಟಿ ಕಂಪನಿ ಈ ನೌಕರರ ಕೆಲಸ ತೆಗೆದುಕೊಳ್ಳಲು ಸಶಕ್ತವಾಗಿರದ ಕಾರಣ ಈ ಗೊಂದಲ ನಿರ್ಮಾಣವಾಗಿದೆ.

ಇನ್ನೂ ಯಾವ ಸಿದ್ಧತೆಯೂ ಇಲ್ಲ: ಸಮರ್ಪಕ ನೀರು ಸರಬರಾಜಿಗೆ ಬೇಕಾದ ವ್ಯವಸ್ಥೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿ ಮಾಡಿಕೊಂಡಿಲ್ಲ ಎನ್ನುವ ಆರೋಪಗಳಿವೆ. ಮಲಪ್ರಭಾ ಜಲಾಶಯದ ಜಾಕ್‌ವೆಲ್‌ನಿಂದ ಮನೆಗಳಿಗೆ ನೀರು ತಲುಪುವವರೆಗೂ ಸುಮಾರು 14 ವಿವಿಧ ಹುದ್ದೆಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಕೆಲಸ ತೆಗೆದುಕೊಳ್ಳಲು ಕಂಪನಿಯಲ್ಲಿ ವ್ಯವಸ್ಥೆಯಿಲ್ಲ. ಹೀಗಿರುವಾಗ ಇಡೀ ವ್ಯವಸ್ಥೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿಗೆ ವಹಿಸಿ ಪಾಲಿಕೆ ಕೈ ತೊಳೆದುಕೊಂಡಂತೆ ಕಾಣುತ್ತಿದೆ. ಈ ಹಿಂದೆ ಜಲಮಂಡಳಿ ಹೆಸರಲ್ಲಿ ಬಿಲ್‌ ಬರುತ್ತಿದ್ದವು. ಇದೀಗ ಎಲ್ಲಾ ವ್ಯವಸ್ಥೆ ಕಂಪನಿಗೆ ವಹಿಸಿದ ಮೇಲೆ ಬಿಲ್‌ ಮಾದರಿ, ಕರ ಪಾವತಿ ಖಾತೆ ಸಂಬಂಧಿಸಿದಂತೆ ಎಲ್ಲವೂ ಬದಲಾಗಬೇಕು. ಈ ಕೆಲಸಕ್ಕೂ ನೌಕರರು ಇಲ್ಲದಂತಾಗಿದೆ. ಈ ಎಲ್ಲಾ ಪ್ರಕ್ರಿಯೆು ತಟಸ್ಥವಾಗಿರುವ ಕಾರಣ ಮೀಟರ್‌ ರೀಡಿಂಗ್‌ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಕಳೆದ ಒಂದು ವರ್ಷದ ಹಿಂದೆ ಹೊಸ ನಲ್ಲಿ ಸಂಪರ್ಕ ಪಡೆದವರ ಬಿಲ್‌ ಕೂಡ ನೀಡುತ್ತಿಲ್ಲ.

ವರದಿ ಬದಲು ಹಸ್ತಾಂತರ ಮಾಡಿ: 2003ರಲ್ಲಿ ಪಾಲಿಕೆ ಜಾಕ್‌ವೆಲ್‌, ನೀರು ಶುದ್ಧೀಕರಣ ಘಟಕ, ಪೂರೈಕೆ ಜಾಲ ಹೀಗೆ ಇಡೀ ವ್ಯವಸ್ಥೆಯನ್ನು ಜಲಮಂಡಳಿಗೆ ಹಸ್ತಾಂತರಿಸಿದಾಗ ನೌಕರರನ್ನು ಕೂಡ ಪರಿಗಣಿಸಲಾಗಿತ್ತು. ಹಿಂದೆಯೂ ಇದನ್ನೇ ಪಾಲನೆ ಮಾಡಲಾಗಿತ್ತು. ಆದರೆ ಈ ಬಾರಿ ಜಲಮಂಡಳಿಯಿಂದ ಎಲ್‌ ಆ್ಯಂಡ್‌ ಟಿ ಕಂಪನಿಗೆ ಎಲ್ಲಾ ವ್ಯವಸ್ಥೆ ನೀಡಿ ಇಲ್ಲಿನ ಕೆಲಸ ಮಾಡುತ್ತಿದ್ದ 600ಕ್ಕೂ ಹೆಚ್ಚು ನೌಕರರ ಹಸ್ತಾಂತರವಾಗದ ಕಾರಣ ಈ ಗೊಂದಲಕ್ಕೆ ಕಾರಣವಾಗಿದೆ. ಎಲ್‌ ಆ್ಯಂಡ್‌ ಟಿ ಕಂಪನಿಗೆ ಹೋಗಿ ವರದಿ ಮಾಡಿಕೊಳ್ಳುವಂತೆ ಪಾಲಿಕೆ ಆಯುಕ್ತರು ಸೂಚಿಸಿ ದ್ದಾರೆ. ಹಸ್ತಾಂತರ ಬದಲು ಹೊಸ ನಿಯಮ ಯಾಕೆ ಎನ್ನುವ ಪ್ರಶ್ನೆ ನಿರ್ಮಾಣವಾಗಿದೆ. ವರದಿ ಮಾಡಿ ಕೊಂಡರೆ ಸೇವಾನುಭವ ಇರಲ್ಲ. 2 ವರ್ಷಗಳ ನಂತರ ಕೆಲ ನೌಕರರನ್ನು ತೆಗೆಯಲಿದ್ದಾರೆ. ಇನ್ನೂ 12 ವರ್ಷಗಳ ಕಂಪನಿಯ ನಿರ್ವಹಣೆ ಅವಧಿ ನಂತರ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರು ಪಾಲಿಕೆಗೆ ಸಂಬಂಧವಿಲ್ಲ ಎನ್ನುವ ಸಾಕಷ್ಟು ಅನುಮಾನಗಳು ಎದ್ದಿವೆ.

Advertisement

ಆದಾಯಕ್ಕೆ ಕತ್ತರಿ, ವೇತನವಿಲ್ಲ: ಮೇ-ಜೂನ್‌ ತಿಂಗಳ ಮೀಟರ್‌ ರೀಡಿಂಗ್‌ ಆಗದೆ ಆದಾಯ ಸಂಪೂರ್ಣ ಸ್ಥಗಿತಗೊಂಡಿದೆ. ನೀರು ಪೂರೈಕೆಯೊಂದನ್ನು ಬಿಟ್ಟರೆ ಉಳಿದೆಲ್ಲ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿಗೆ 2 ತಿಂಗಳಿಂದ ವೇತನವಾಗಿಲ್ಲ. ಇನ್ನೂ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 500 ಕಡೆಗಳಲ್ಲಿ ಪೈಪ್‌ಲೈನ್‌ನಲ್ಲಿ ಸೋರಿಕೆಯಿದ್ದು, ದುರಸ್ತಿ ಮಾಡಿಸುವ ಕೆಲಸ ಆಗುತ್ತಿಲ್ಲ. ನಿತ್ಯವೂ ಕೆಲಸಕ್ಕೆ ಬರುತ್ತಿದ್ದೇವೆ. ಆದರೆ ಈ ಕೆಲಸ ಮಾಡಿ ಎನ್ನುವ ಅಧಿಕಾರಿಗಳಿಲ್ಲ ಎನ್ನುವುದು ನೌಕರರ ವಾದವಾಗಿದೆ.

ಎಷು ತಿಂಗಳಾಗುತ್ತೋ ಗೊತ್ತಿಲ್ಲ?

ಏಪ್ರಿಲ್‌ ತಿಂಗಳ ಮುಷ್ಕರ ನಂತರ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಎಲ್‌ ಆ್ಯಂಡ್‌ ಟಿ ಕಂಪನಿ ಹಾಜರಾತಿ ಪಡೆದಿತ್ತು. ವೇತನ ಪಡೆಯಲು ಪ್ರತಿಯೊಬ್ಬರು ಕಂಪನಿಗೆ ವರದಿ ಮಾಡಿಕೊಳ್ಳಬೇಕು ಎಂದು ಕಳೆದ 15 ದಿನಗಳಿಂದ ಹಾಜರಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಗುತ್ತಿಗೆ ನೌಕರರು ಹಾಗೂ ಮಹಾನಗರ ಪಾಲಿಕೆ, ಎಲ್‌ ಆ್ಯಂಡ್‌ ಟಿ ಕಂಪನಿಯ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಮೀಟರ್‌ ರೀಡಿಂಗ್‌ ಕಾರ್ಯ ಅಸಾಧ್ಯ ಎನ್ನಲಾಗುತ್ತಿದ್ದು, ಇವರ ತಪ್ಪಿನಿಂದಾಗಿ ಬಾಕಿ ಶುಲ್ಕಕ್ಕೆ ಬಡ್ಡಿ ಅಥವಾ ದಂಡ ಜನರ ಮೇಲೆ ಬೀಳಲಿದೆ ಎನ್ನುವ ಆಕ್ರೋಶ ಸಾರ್ವಜನಿಕರದ್ದಾಗಿದೆ.

ಯಾವ ಸಿದ್ಧತೆ ಮಾಡಿಕೊಳ್ಳದೆ ನೀರು ವ್ಯವಸ್ಥೆಯನ್ನು ಕಂಪನಿಗೆ ವಹಿಸಿರುವುದು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ. ಬಹುತೇಕ ಸಿಬ್ಬಂದಿ ಖಾಲಿ ಕುಳಿತು ಮನೆಗೆ ಹೋಗುತ್ತಿದ್ದಾರೆ. ಯಾರನ್ನು ಯಾವ ಕೆಲಸಕ್ಕೆ ನಿಯೋಜಿಸಬೇಕು ಎನ್ನುವ ಪೂರ್ವ ತಯಾರಿ, ಯೋಜನೆ ಕಂಪನಿ ಮಾಡಿಕೊಂಡಿಲ್ಲ. ದಿನ ಕಳೆದಂತೆ ಹಲವು ನ್ಯೂನತೆಗಳು ಬಯಲಿಗೆ ಬರಲಿವೆ. -ವಿಕಾಸ ಸೊಪ್ಪಿನ, ಆಮ್‌ ಆದ್ಮಿ ಮುಖಂಡ

ನೌಕರರ ಹಸ್ತಾಂತರ ವಿಚಾರದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ತಾತ್ಕಾಲಿಕ ನೌಕರರ ಎಂದು ಪರಿಗಣಿಸಲು 2019ರಲ್ಲಿ ಹಿಂದೆ ಇಂಡಸ್ಟ್ರಿಯಲ್‌ ಟ್ರಿಬ್ಯುನಲ್‌ ನೀಡಿದ ಆದೇಶವನ್ನು ಜಲಮಂಡಳಿ ಅನುಷ್ಠಾನ ಮಾಡಲಿಲ್ಲ. ತಾತ್ಕಾಲಿಕ ಸಿಬ್ಬಂದಿ ಎಂದು ಪರಿಗಣಿಸಬೇಕು ಇಲ್ಲವೆ ಜಲಮಂಡಳಿಯಿಂದ ಕಂಪನಿಗೆ ನೌಕರರನ್ನು ಹಸ್ತಾಂತರಿಸಬೇಕು. ಇವರ ವೈಫಲ್ಯದಿಂದಾಗಿ ಕೆಲಸ ತೆಗೆದುಕೊಳ್ಳದ ಪರಿಣಾಮ ಹೊರ ಗುತ್ತಿಗೆ ನೌಕರರಿಗೆ ವೇತನ ಇಲ್ಲದಂತಾಗಿದೆ. -ವಿ.ಎನ್‌.ಹಳಕಟ್ಟಿ, ಅಧ್ಯಕ್ಷರು, ಹು-ಧಾ ಮಹಾನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘ

ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ನಲ್ಲಿ ಸಂಪರ್ಕ ಪಡೆಯಲಾಗಿತ್ತು. ಇದೀಗ ಒಂದು ವರ್ಷ ಕಳೆದರೂ ನೀರಿ ಬಿಲ್‌ ಬರುತ್ತಿಲ್ಲ. ಕಚೇರಿಗೆ ಹೋಗಿ ಇಲ್ಲಿಗೆ ಬರುತ್ತಿದ್ದ ಜಲಮಂಡಳಿ ನೌಕರರನ್ನು ಕೇಳಿದರೆ ಮುಂದಿನ ತಿಂಗಳು ಬರುತ್ತೆ ಎಂದು ಇಲ್ಲಿಯವರೆಗೆ ದೂಡಿಕೊಂಡು ಬಂದಿದ್ದಾರೆ. ಇದೀಗ ಕೇಳಿದರೆ ಎಲ್‌ ಆ್ಯಂಡ್‌ ಟಿಗೆ ವರ್ಗಾಯಿಸಿರುವುದರಿಂದ ಯಾರು ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಿಲ್ಲ. ನಿಮ್ಮ ಬಿಲ್‌ ಬರುವುದು ಇನ್ನೂ ತಡವಾಗಲಿದೆ ಎನ್ನುತ್ತಿದ್ದಾರೆ. –ದೇವೇಂದ್ರಪ್ಪ ಕಾಮದೇನು, ಸನ್ಮಾನ ಕಾಲೋನಿ ನಿವಾಸಿ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next