Advertisement

ಹೀಗಾದರೆ ನವ ಭಾರತ

01:12 AM May 30, 2019 | Team Udayavani |

ವಿಶ್ವ ಭೂಪಟದತ್ತ ದೃಷ್ಟಿ ಹಾಯಿಸಿದಾಗ ಭಾರತ ಉಳಿದೆಲ್ಲ ದೇಶಗಳಿಂದಲೂ ಸಂಪೂರ್ಣ ಭಿನ್ನವಾಗಿದ್ದು, ತನ್ನದೇ ಆದ ಪ್ರಾಕೃತಿಕ, ಜನಜೀವನ ಶೈಲಿಯನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಭಾರತ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ. ವಿಶ್ವದ ಯಾವುದೇ ಒಂದು ದೇಶಕ್ಕೆ ಹೋಲಿಸಿದಲ್ಲಿ ಭಾರತದಲ್ಲಿ ಕಾಣ ಸಿಗದಷ್ಟು ಜಾತಿ-ಮತ-ಧರ್ಮಗಳ ಜನರು, ಆಚಾರ -ವಿಚಾರಗಳು, ಸಂಸ್ಕೃತಿಗಳನ್ನು ನಾವು ಕಾಣಬಹುದು. ಇದರಿಂದಾಗಿಯೇ ಭಾರತ ಅಭಿವೃದ್ಧಿ ಸಹಿತ ಪ್ರತಿ ಯೊಂದೂ ವಿಚಾರದಲ್ಲಿಯೂ ಹತ್ತು ಹಲವು ಸವಾಲು ಗಳನ್ನು ಎದುರಿಸುತ್ತಿದೆಯಾದರೂ ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಲೇ ಬಂದಿದೆ.

Advertisement

ಮೂಲ ಸಮಸ್ಯೆಗಳಿಗೆ ಪರಿಹಾರ

ಬಡತನ ದೇಶದ ಮೂಲ ಸಮಸ್ಯೆಗಳಲ್ಲೊಂದಾಗಿದ್ದು ಇದರ ನಿವಾರಣೆ ನಮ್ಮ ಆಡಳಿತಾರೂಢರಿಗೆ ಬಲುದೊಡ್ಡ ಸವಾಲಾಗಿ ಕಾಡುತ್ತಲೇ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದ ಬಡತನ ನಿವಾರಣೆ ರಾಜಕೀಯ ಪಕ್ಷಗಳ ಚುನಾವಣ ಪ್ರಣಾಳಿಕೆಯ ಖಾಯಂ ಭರವಸೆಗಳಲ್ಲೊಂದು. ಏಳು ದಶಕಗಳು ಸಂದರೂ ಈ ವಿಚಾರದಲ್ಲಿ ನಾವೆಷ್ಟು ಯಶಸ್ವಿಯಾಗಿದ್ದೇವೆ ಎಂಬುದನ್ನು ನೋಡಲು ಭೂತಕನ್ನಡಿಯ ಅಗತ್ಯವಿಲ್ಲ. ನಮ್ಮನ್ನುಕಾಡುತ್ತಿರುವ ಇನ್ನೊಂದು ಪ್ರಮುಖ ಸಮಸ್ಯೆ ಮೂಲಸೌಕರ್ಯ ವ್ಯವಸ್ಥೆಗಳು. ಪ್ರತಿ ಕುಟುಂಬಕ್ಕೂ ಸೂರು, ಶುದ್ಧ ಕುಡಿಯುವ ನೀರು, ಆಹಾರ, ಆರೋಗ್ಯ, ಹಳ್ಳಿ-ಹಳ್ಳಿಗಳ ನಡುವೆ ರಸ್ತೆ ಸಂಪರ್ಕ, ಮಕ್ಕಳಿಗೆ ಸೂಕ್ತ ಶಿಕ್ಷಣ ವ್ಯವಸ್ಥೆ ..ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವುದು ಸರಕಾರದ ಪಾಲಿಗೆ ಇನ್ನೂ ಕಬ್ಬಿಣದ ಕಡಲೆಯೇ. ಇವೆಲ್ಲವುಗಳ ಕೊರತೆಯಿಂದಾಗಿ ಜನರು ಗ್ರಾಮೀಣ ಪ್ರದೇಶ ಗಳಿಂದ ನಗರಗಳತ್ತ ವಲಸೆ ಹೋಗುತ್ತಿದ್ದು ಇದು ನಗರಗಳಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ. ಮೂಲಸೌಕರ್ಯ ವ್ಯವಸ್ಥೆಗಳ ಒದಗಣೆ ಮತ್ತು ನವೀಕರಣ ನಿರಂತರ ಪ್ರಕ್ರಿಯೆ. ಈ ದಿಸೆಯಲ್ಲಿ ಜನತೆ ಹೊಸ ಸರಕಾರದತ್ತ ಆಶಾಭಾವದ ದೃಷ್ಟಿಯನ್ನು ಹೊಂದಿದೆ.

ಪರಿಸರಸಹ್ಯ ಅಭಿವೃದ್ಧಿ

ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆಯ ನೆಪದಲ್ಲಿ ಗ್ರಾಮೀಣ ಪ್ರದೇಶಗಳನ್ನು ನಗರವನ್ನಾಗಿ ಬೆಳೆಸಿದ್ದೇ ಆದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಜತೆಜತೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ, ಅಭಿವೃದ್ಧಿಯ ನೆಪದಲ್ಲಿ ಪರಿಸರದ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವತ್ತ ಗಮನಹರಿಸಬೇಕು. ಇಲ್ಲವಾದರೆ ಪರಿಸ್ಥಿತಿ ಹೇಳತೀರದು. ಇದಕ್ಕೆ ತಾಜಾ ಉದಾಹರಣೆ ಎಂದರೆ ಬೇಸಗೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ.

Advertisement

ಮಾನವ ಸಂಪನ್ಮೂಲದ ಸದ್ಬಳಕೆ

ಹೆಚ್ಚುತ್ತಿರುವ ಜನಸಂಖ್ಯೆ ಇನ್ನೊಂದು ಪ್ರಮುಖ ಸಮಸ್ಯೆ. ಕೆಲವು ದಶಕಗಳಿಂದೀಚೆಗೆ ಸರಕಾರ ಜನಸಂಖ್ಯೆ ನಿಯಂತ್ರಣಕ್ಕೆ ಕೈಗೊಂಡ ಕೆಲವು ಕಾರ್ಯಕ್ರಮ ಗಳು ಮತ್ತು ಇದರ ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿರುವುದರಿಂದ ಕೊಂಚ ಪರವಾಗಿಲ್ಲ. ಜನಸಂಖ್ಯೆಯನ್ನು ಒಂದು ಸಮಸ್ಯೆಯಾಗಿ ಪರಿಗಣಿಸದೆ ಅದನ್ನೊಂದು ಸಂಪನ್ಮೂಲ ಎಂದುಪರಿಭಾವಿಸಿ ಮಕ್ಕಳಿಗೆ ಶಿಕ್ಷಣದ ಜತೆಗೇ ಕೌಶಲಯುಕ್ತ ರನ್ನಾಗಿಸಲು ಸರಕಾರ ಆಸಕ್ತಿ ತಾಳಬೇಕು.

ರಾಜಕೀಯ ಇಚ್ಛಾಶಕ್ತಿ, ಬದ್ಧತೆ

2014ರಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವು ಯೋಜನೆಗಳನ್ನು ಘೋಷಿಸಿ, ಅನುಷ್ಠಾನಕ್ಕೆ ತಂದಿತ್ತಾದರೂ ಪ್ರಗತಿ ನಿರೀಕ್ಷಿಸಿದ್ದಷ್ಟಾಗಿಲ್ಲ. ಸರಕಾರ ಯಾವುದೇ ಪಕ್ಷದ್ದೇ ಆಗಿರಲಿ, ದೇಶದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಿದ ದೂರದೃಷ್ಟಿತ್ವದ ಯೋಜನೆಗಳನ್ನು ನಾಯಕರು ಮತ್ತು ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆ ಪ್ರದರ್ಶಿಸಿ ಜಾರಿಗೊಳಿಸಬೇಕು.

ಇಂದಿನ ಆಧುನಿಕ ಜಗತ್ತಿನಲ್ಲಿ ದೇಶಗಳ ನಡುವೆ ನಡೆಯುತ್ತಿರುವ ಅಭಿವೃದ್ಧಿ ಪೈಪೋಟಿಯಿಂದ ವಿಮುಖವಾಗದೇ, ಮೂಲ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತಾದರೆ ಮಾತ್ರ ‘ನವಭಾರತ’ದ ಪರಿಕಲ್ಪನೆ ಪರಿಪೂರ್ಣ. ‘ರಾಷ್ಟ್ರೀಯ ಮಹತ್ವಾ ಕಾಂಕ್ಷೆ; ಪ್ರಾದೇಶಿಕ ಅಭಿಲಾಷೆ ಎನ್‌ಡಿಎ ಸರಕಾರದ ಈ ಬಾರಿಯ ಉದ್ಘೋಷ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಿಸಿದ್ದಾರೆ. ಅದು ಈಡೇರಲಿ.

– ಹರೀಶ ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next