Advertisement
ಕಾರಣವೆಂದರೆ ಕರ್ನಾಟಕದಲ್ಲಿ ಮಕ್ಕಳು ಕಲೆಯುವುದು, ಆಡುತ್ತ ಬೆಳೆಯುವುದು, ಬೆಳೆಯುತ್ತ ಆಡುವುದು ಕನ್ನಡದಲ್ಲೇ. ಅವರು ಆಕಸ್ಮಿಕವಾಗಿ ಆಯತಪ್ಪಿ ಬಿದ್ದಾಗ ಅವರ ಬಾಯಿಂದ ಬರುವ ಉದ್ಗಾರ ‘ಅಮ್ಮ’,‘ಅಪ್ಪ’ ಎಂದೇ ಹೊರತು ‘ಮೈ ಗಾಡ್’,‘ಮೇರೆ ಬಾಪ್’ ಅಲ್ಲ. ಮಾತೃಭಾಷೆಗೆ ಹೊರತಾದ ಭಾಷೆಯಲ್ಲಿ ಪಾಠ ಹೇಳಿದರೆ/ಆಲಿಸಿದರೆ ಮಕ್ಕಳಿಗೆ ಅರ್ಥವಾಗದು. ಆದ ಕಾರಣ ಅವರು ಕಲಿಯರು. ಇದು ಅತಿ ಸರಳ ತರ್ಕ.
Related Articles
Advertisement
ಇಲ್ಲೊಂದು ಸೂಕ್ಷ್ಮವಿದೆ. ಇಂಗ್ಲಿಷ್ ಅಥವಾ ಯಾವುದೇ ಕನ್ನಡೇತರ ಭಾಷೆಯಲ್ಲಿ ಪ್ರಬಂಧವನ್ನೋ ಪತ್ರವನ್ನೋ ಬರೆಯಲು ನಮಗೆ ಸಾಧ್ಯವಾಗಬೇಕಾದರೆ ಮೊದಲಿಗೆ ಕನ್ನಡದಲ್ಲಿ ಯೋಚಿಸಿ, ಯೋಜಿಸಿದಾಗಲೇ. ಬದುಕಿನಲ್ಲಿ ಆತ್ಮವಿಶ್ವಾಸ, ನಮ್ಮ ಪರಂಪರೆಯ ಬಗ್ಗೆ ಹಿರಿಮೆ, ಅದನ್ನು ಸಂರಕ್ಷಿಸುವಲ್ಲಿ ಅನುಸರಿಸಬೇಕಾದ ಜಾಗ ರೂಕತೆ -ಇವೆಲ್ಲವೂ ಮೂಡುವುದು ಶಿಕ್ಷಣವನ್ನು ಕನ್ನಡದ ಮುಖೇನ ಪಡೆದಾಗಲೇ.
ತನ್ನ ಮಾತೃಭಾಷೆಯಲ್ಲದ ಭಾಷೆಯಲ್ಲಿ ಮಗುವಿಗೆ ಬೋಧನೆ ಯಾದರೆ ಅದು ವಿಷಯದತ್ತ ಕಣ್ಣರಳಿಸಬೇಕೋ ಇಲ್ಲವೆ ಭಾಷೆ ಯತ್ತಲೋ? ವಿದ್ಯಾಭ್ಯಾಸದ ಯಶಸ್ಸನ್ನು ಇಂಗ್ಲಿಷಿನೊಂದಿಗೆ ತಳುಕು ಹಾಕಿದರೆ ಮಕ್ಕಳಿಗೆ ತಮ್ಮ ಮಾತೃಭಾಷೆ ಬಗ್ಗೆ ಕೀಳರಿಮೆ ಉಂಟಾಗುತ್ತದೆ. ಇದು ಹಾಗಿರಲಿ. ಶಾಲೆಯಲ್ಲಿ ಇಂದು ಯಾವ ಪಾಠವಾಯಿತು, ತನಗೆಷ್ಟು ಮನನವಾಯಿತು, ಯಾವ ಪುಸ್ತಕ ಬೇಕು, ಯಾವ ವಿಷಯ ಕ್ಲಿಷ್ಟ ಮುಂತಾಗಿ ಪೋಷಕರೊಡನೆ ಹೇಳಿ ಕೊಳ್ಳಲೂ ಆಗದಷ್ಟು ಅಸಹಾಯಕರಾದಾರು ಮಕ್ಕಳು. ಇವೆಲ್ಲವನ್ನೂ ಮನಗಂಡೇ 1953ರಲ್ಲೇ ಯುನೆಸ್ಕೊ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅವರವರ ಮಾತೃಭಾಷೆಯಲ್ಲೇ ಆಗಬೇಕೆಂದು ಸ್ಪಷ್ಟಪಡಿಸಿತು. ಅಂದಹಾಗೆ ಜಾಗತಿಕ ಮಟ್ಟದಲ್ಲಿ ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಲಭ್ಯವಿಲ್ಲದ ಕಾರಣಕ್ಕೆ ಸುಮಾರು 60 ಮಿಲಿಯನ್ ಮಕ್ಕಳು ಸರ್ವ ಅನುಕೂಲವಿದ್ದರೂ ಶಾಲೆಯಿಂದ ಹೊರಗುಳಿದಿದ್ದಾರೆ. ಪರಭಾಷೆ ಯಲ್ಲಿ ಸಂವಹನವಾದರೆ ಮಕ್ಕಳ ಚಿಂತನೆ, ವಿಚಾರಶೀಲತೆ ಪುಟಿ ದೇಳಲು ಹೇಗೆ ತಾನೆ ಸಾಧ್ಯ? ಹಾಗಾಗಿ ಸರ್ಕಾರವು ಒಂದು ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವುದರ ಬದಲಿಗೆ ಅಷ್ಟೇ ಸಂಖ್ಯೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಯೋಗಾತ್ಮಕವಾಗಿ ಹೈಟೆಕ್ಗೊಳಿಸುವ ದಿಟ್ಟ ಕ್ರಮವನ್ನು ಕೈಗೊಳ್ಳಬಹುದಿತ್ತು. ಅವುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಂಗಣ ಥಳ ಥಳ ಸುಸಜ್ಜಿತಗೊಂಡರೆ ಬೇಕಿನ್ನೇನು?
ವಿಶ್ವ ಕಿರಿದಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಜನರ ವಲಸೆ ಹೆಚ್ಚಿದೆ. ಪರಿಣಾಮವಾಗಿ ಅಂತರರಾಷ್ಟ್ರೀಯ ಮಟ್ಟದ ಶಾಲೆಗಳಿಗೆ ಬೇಡಿಕೆಯೂ ಜನಪ್ರಿಯತೆಯೂ ಅಧಿಕವಾಗಿದೆ. ಆದರೆ ಇದೇ ನಿಮಿತ್ತವಾಗಿ ಸ್ವಂತಿಕೆ, ವೈವಿಧ್ಯತೆ ಸೊರಗಬಾರದು. ಮಾತೃಭಾಷಾರಾಧಿತ ಬಹುಭಾಷಾ ಶಿಕ್ಷಣ ಸಾಂಸ್ಕೃತಿಕ ಹಾಗೂ ಜಾಗತಿಕ ಅನಿವಾರ್ಯ. ಒಟ್ಟಾರೆ ನಮ್ಮ ‘ವಿವಿಧತೆಯಲ್ಲಿ ಏಕತೆ’ ಮಂತ್ರ ಪ್ರಾರಂಭವಾಗುವುದೇ ಮಾತೃಭಾಷೆಯಾದ ಕನ್ನಡವು ಶಿಕ್ಷಣ ಮಾಧ್ಯಮವಾಗುವುದರಿಂದ ಎಂಬ ತಥ್ಯವನ್ನು ನಾವು ನಿರ್ಲಕ್ಷಿಸುವಂತಿಲ್ಲ.
– ಬಿಂಡಿಗನವಿಲೆ ಭಗವಾನ್