Advertisement

ವೈರಸ್‌ ಕಾಟಕ್ಕೆ ಹೇಗಿದೆ ಭಾರತದ ಪ್ರತ್ಯುತ್ತರ?

01:59 PM Jun 11, 2020 | mahesh |

ಭಾರತದಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಜೂನ್‌ 4ರಿಂದ-9ರವರೆಗೆ ನಿತ್ಯ ಸರಾಸರಿ 9,830 ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ, ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಈಗಲೂ ಮರಣ ಪ್ರಮಾಣ ಕಡಿಮೆಯೇ ಇದೆ. ಗಮನಾರ್ಹ ಸಂಗತಿಯೆಂದರೆ, ನಮ್ಮಲ್ಲಿ ಚೇತರಿಕೆಯ ಪ್ರಮಾಣವೂ ವೃದ್ಧಿಸಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ ಅಧಿಕವಾಗಿದೆ. ಬುಧವಾರದ ವೇಳೆಗೆ ಭಾರತದಲ್ಲಿ ಗುಣಮುಖರಾದವರ ಪ್ರಮಾಣ 48.8 ಪ್ರತಿಶತ ದಾಖಲಾಗಿದೆ.

Advertisement

ಭಾರತದಲ್ಲಿ ಕೋವಿಡ್‌-19 ಮರಣ ಪ್ರಮಾಣ
3 ಪ್ರತಿಶತಕ್ಕಿಂತಲೂ ಕಡಿಮೆಯಿದ್ದು, ಈ ವಿಚಾರದಲ್ಲಿ ರಷ್ಯಾ ಹಾಗೂ ಪೆರುವಿನ ಅಂಕಿಸಂಖ್ಯೆ ನಮಗಿಂತ ಉತ್ತಮವಾಗಿದೆ. ಇನ್ನೊಂದೆಡೆ ಇಟಲಿಯಲ್ಲಿ ಮರಣ ಪ್ರಮಾಣ 14.45 ಪ್ರತಿಶತ ದಾಖಲಾಗಿದೆ!

ದಿಲ್ಲಿ ಆಸ್ಪತ್ರೆಗಳ ಸುಳ್ಳು
ದಿಲ್ಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಬುಧವಾರ ಸಂಜೆಯ ವೇಳೆಗೆ 31 ಸಾವಿರ ದಾಟಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಅಲ್ಲಿನ ಆಡಳಿತ ಹಾಗೂ ಆರೋಗ್ಯ ವ್ಯವಸ್ಥೆಯ ಮೇಲೆ ಬೃಹತ್‌ ಒತ್ತಡ ಸೃಷ್ಟಿಸಲಾರಂಭಿಸಿವೆ. ಕಳೆದೊಂದು ವಾರದಲ್ಲಿ, ಅರವಿಂದ್‌ ಕೇಜ್ರಿವಾಲ್‌ ಸರಕಾರ‌ ಆರು ಖಾಸಗಿ ಹಾಗೂ ಎರಡು ಸರ್ಕಾರಿ ಪ್ರಯೋಗಾಲಯಗಳಿಗೆ, ಕೋವಿಡ್‌ ಪರೀಕ್ಷೆ ನಡೆಸದಂತೆ ಆದೇಶಿಸಿದೆ. ಈ ಪ್ರಯೋಗಾಲಯಗಳು ಐಸಿಎಂಆರ್‌ ನಿಯಮಾವಳಿಯನ್ನು ಗಾಳಿಗೆ ತೂರಿದ ಆರೋಪ ಎದುರಿಸುತ್ತಿವೆ. ಗಮನಾರ್ಹ ಅಂಶವೆಂದರೆ, ಈ ಆರು ಪ್ರಯೋಗಾಲಯಗಳೇ ದಿನಕ್ಕೆ ನಾಲ್ಕು ಸಾವಿರ ಪರೀಕ್ಷೆ ನಡೆಸುತ್ತಿದ್ದವು! ಇನ್ನು, ಈಗಲೇ ದಿಲ್ಲಿಯ ಅನೇಕ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬೆಡ್‌ಗಳು ಇಲ್ಲ ಎಂದು ಸುಳ್ಳು ಹೇಳಿ ರೋಗಿಗಳನ್ನು ಸಾಗಹಾಕುತ್ತಿರುವ ಬಗ್ಗೆಯೂ ವರದಿಯಾಗುತ್ತಿದ್ದು, ಸದ್ಯಕ್ಕೆ ಕೇಜ್ರಿವಾಲ್‌ ಸರಕಾರ ಎಲ್ಲಾ ಆಸ್ಪತ್ರೆಗಳೂ ಗೇಟ್‌ಗಳ ಮುಂದೆ, ತಮ್ಮಲ್ಲಿ ಎಷ್ಟು ಬೆಡ್‌ಗಳು ಲಭ್ಯವಿವೆ ಎನ್ನುವ ಬಗ್ಗೆ ಡಿಸ್‌ಪ್ಲೇ ಹಾಕಬೇಕು ಎಂದು ಆದೇಶಿಸಿದೆ.

ಭವಿಷ್ಯದ ಬಗ್ಗೆ ಹೇಗಿದೆ ಭಾರತೀಯರ ಭಾವನೆ?
ಕೋವಿಡ್ ಹಾವಳಿಯು ಜನರ ಆರೋಗ್ಯವನ್ನಷ್ಟೇ ಅಲ್ಲದೆ, ದೇಶದ ಆರ್ಥಿಕ ಆರೋಗ್ಯಕ್ಕೂ ಹಾನಿ ಮಾಡುತ್ತಿದೆ. ಕೆಲವು ದಿನಗಳಿಂದ ಆರ್ಥಿಕತೆಯನ್ನು ಹಳಿಯೇರಿಸುವ ಪ್ರಯತ್ನಕ್ಕೆ ವೇಗ ದೊರಕಿದೆಯಾದರೂ, ಜನರಿಗೆ ಭವಿಷ್ಯದ ಬಗ್ಗೆ ಸದ್ಯಕ್ಕೆ ಭರವಸೆಯಂತೂ ಮೂಡುತ್ತಿಲ್ಲ. ಇತ್ತೀಚೆಗೆ, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ನಡೆಸಿದ್ದ ಸಮೀಕ್ಷೆಯೊಂದು ಇದೇ ಮಾತನ್ನೇ ಹೇಳುತ್ತಿದೆ.

ದಿಲ್ಲಿ-ಮುಂಬಯಿ ಕಥೆ
ಮುಂಬಯಿ ನಗರಿಯಲ್ಲಿ ಬುಧವಾರದ ವೇಳೆಗೆ 51 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರೆ, ಅದರಲ್ಲಿ 22 ಸಾವಿರಕ್ಕೂ ಅಧಿಕ ಜನ ಚೇತರಿಸಿಕೊಂಡಿದ್ದಾರೆ. ಕೆಲ ಸಮಯದಿಂದ ಸೋಂಕು ದ್ವಿಗುಣ ದರ ಮುಂಬಯಿಯಲ್ಲಿ ತಗ್ಗಿದೆಯಾದರೂ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆಯೇನೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಬೆಡ್‌ಗಳು, ವೆಂಟಿಲೇಟರ್‌ಗಳ ತೀವ್ರ ಅಭಾವ ಕಾಡಲಾರಂಭಿಸಿದೆ. ಅನ್ಯ ಭಾಗಗಳಂತೆಯೇ ಮುಂಬಯಿಯಲ್ಲೂ ರೋಗ ಲಕ್ಷಣ ಮಂದ ಪ್ರಮಾಣದಲ್ಲಿ ಇರುವವರೇ ಅಧಿಕವಿದ್ದು, ಆಸ್ಪತ್ರೆ ಬೆಡ್‌ಗಳನ್ನು ಖಾಲಿ ಮಾಡಿಸಲು ಅಲ್ಲಿನ ಆಸ್ಪತ್ರೆಗಳು ಇಂಥ ರೋಗಿಗಳನ್ನು ಬೇಗನೇ ಡಿಸಾcರ್ಜ್‌ ಮಾಡುತ್ತಿವೆ ಎಂಬ ಆರೋಪ ಎದುರಾಗುತ್ತಿದೆ. ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ಜುಲೈ-31ರ ವೇಳೆಗೆ ದಿಲ್ಲಿಯಲ್ಲಿ 5 ಲಕ್ಷ 50 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಬಹುದೆಂದು ಹೇಳುತ್ತಿದ್ದಾರೆ! ಹೀಗೇನಾದರೂ ಆದರೆ, ದಿಲ್ಲಿಯ 2.8 ಪ್ರತಿಶತದಷ್ಟು ಜನಸಂಖ್ಯೆ ಸೋಂಕಿತವಾದಂತೆ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಕರಣಗಳ ಸಂಖ್ಯೆ ವೃದ್ಧಿಸಿದರೆ, ಆಸ್ಪತ್ರೆ ಬೆಡ್‌ಗಳ ಅಗತ್ಯವೂ ಹೆಚ್ಚುತ್ತದೆ. ಅಂದರೆ‡,ಜುಲೈ ಅಂತ್ಯದ ವೇಳೆಗೆ 80 ಸಾವಿರ ಬೆಡ್‌ಗಳಾದರೂ ಬೇಕಾಗುತ್ತವಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next