Advertisement

ಗಂಗಾ ಕಲ್ಯಾಣ ಯೋಜನೆ ನಿಮಗೆಷ್ಟು ಗೊತ್ತು? ಯಾರು ಅರ್ಹರು

01:03 PM Jul 15, 2022 | Team Udayavani |

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಎಷ್ಟೋ ಯೋಜನೆಗಳು ಮಾಹಿತಿ ಇದ್ದವರ ಅಥವಾ ಪ್ರಭಾವಿಗಳ ಪಾಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಗತ್ಯವಿರುವ ಜನರಿಗೆ ಈ ಮಾಹಿತಿಗಳು ತಲುಪುವುದೇ ಇಲ್ಲ. ಅರ್ಹರಿಗೆ ವಿವಿಧ ಯೋಜನೆಗಳ ಪ್ರಯೋಜನ ಸಿಗಬೇಕೆನ್ನುವುದು ಈ “ಪ್ರಯೋಜನ’ ಅಂಕಣದ ಉದ್ದೇಶ.

Advertisement

ಸಣ್ಣ ಹಾಗೂ ಅತಿ ಸಣ್ಣ ರೈತರು ಉಚಿತವಾಗಿ ಕೊಳವೆ ಬಾವಿ/ ತೆರೆದ ಬಾವಿ ನಿರ್ಮಾಣಕ್ಕೆ ಈ ಯೋಜನೆಯಡಿ ಧನ ಸಹಾಯ ಪಡೆಯಬಹುದಾಗಿದೆ. ಹೀಗೆ ನೆರವಾಗುವ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗಲಿದೆ.

ಏನಿದು ಯೋಜನೆ?
ಬೋರ್‌ವೆಲ್‌ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್‌ ಸಂಪರ್ಕ ಕಲ್ಪಿಸಿ ಪಂಪ್‌-ಮೋಟಾರ್‌ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶವಾಗಿದೆ.

ಯಾವ್ಯಾವ ಜಿಲ್ಲೆ?
ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಘಟಕದ ವೆಚ್ಚವನ್ನು 4 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. 3.5 ಲಕ್ಷ ಸಹಾಯಧನವಾಗಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇತರೆ ಜಿಲ್ಲೆಗಳ ರೈತರಿಗೆ 2ಲಕ್ಷ ಸಹಾಯಧನವಿದ್ದು 50 ಸಾವಿರವನ್ನು ವಾರ್ಷಿಕ ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ.

ಯಾವ್ಯಾವ ನಿಗಮಗಳಿಂದ ಅರ್ಜಿ ಕರೆಯುತ್ತಾರೆ?
* ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
*ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿ ನಿಗಮ
*ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
*ವಿಶ್ವಕರ್ಮ ಅಭಿವೃದ್ಧಿ ನಿಗಮ
*ಉಪ್ಪಾರ ಅಭಿವೃದ್ಧಿ ನಿಗಮ
*ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
* ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
* ಬೋವಿ ಸಮುದಾಯದ ಅಭಿವೃದ್ಧಿ ನಿಗಮ

Advertisement

ಪಡೆಯಲು ಯಾರು ಅರ್ಹರು?
*ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
* ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
* ಕನಿಷ್ಠ 1.20 ಎಕರೆ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
* ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕರೆ ಇದ್ದರೆ ಸಾಕು.
*ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು.
* ರಾಜ್ಯ ಕಾಯಂ ನಿವಾಸಿ ಆಗಿರಬೇಕು.

ವೈಯಕ್ತಿಕ ಕೊಳವೆ ಬಾವಿಗೆ ಪಾವತಿಸಬೇಕಾದ ಠೇವಣಿ
* ನೋಂದಣಿ ಶುಲ್ಕ – 50 ರೂ., ಪ್ಲಸ್‌ ಶೇ.18 ಜಿಎಸ್‌ಟಿ
* ಭದ್ರತಾ ಠೇವಣಿ ಶುಲ್ಕ- 1290 ರೂ., 1 ಎಚ್‌ಪಿಗೆ
* ಮೀಟರ್‌ ಸುರಕ್ಷಾ ಠೇವಣಿ- 3 ಸಾವಿರ ರೂ.,
* ಮೀಟರ್‌ ಬಾಕ್ಸ್‌- 2100 ರೂ.,
* ಮೇಲ್ವಿಚಾರಣಾ ಶುಲ್ಕ-150 ರೂ., ಪ್ಲಸ್‌ ಶೇ.18 ಜಿಎಸ್‌ಟಿ

ದಾಖಲೆಗಳು ಏನೇನು ಬೇಕು?
ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಫ‌ಲಾನುಭವಿಗಳ ಭಾವಚಿತ್ರ, ಬ್ಯಾಂಕ್‌ ಪಾಸ್‌ಬುಕ್‌, ಹೊಲದ ದಾಖಲೆ, ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಅವಶ್ಯ.

ಆಯ್ಕೆ ಪಟ್ಟಿ, ವಿಧಾನ ಹೇಗೆ?
ಜಿಲ್ಲಾ ವ್ಯವಸ್ಥಾಪಕರು ಜಾಹೀರಾತು ನೀಡಿ ಆನ್‌ಲೈನ್‌ ಮೂಲಕ ಪ್ರತಿ ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸುತ್ತಾರೆ. ದಾಖಲಾತಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ವರ್ಗಾಯಿಸುತ್ತಾರೆ. ನಂತರ ಸಮಿತಿಯು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಕಳುಹಿಸುತ್ತದೆ. ಈ ಸಂಬಂಧ ಗಂಗಾ ಕಲ್ಯಾಣ ಯೋಜನೆಯ ವಿವರಗಳನ್ನು https://kmvstdcl.karnataka.gov.in/info-2/Ganga+Kalyana+ Scheme/en ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಅರ್ಹರು +91 08022864720ಕ್ಕೆ ಸಂಪರ್ಕಿಸಬಹುದು.

● ಹರೀಶ್‌ ಹಾಡೋನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next