Advertisement

ಮಳೆ ಅನಾಹುತ ತಪ್ಪಿಸಲು ಪಾಲಿಕೆ ಎಷ್ಟು ಸಿದ್ಧ?

07:02 AM May 27, 2020 | Lakshmi GovindaRaj |

ಬೆಂಗಳೂರು: ಮುಂಗಾರು ಪೂರ್ವ ಮಳೆಗೆ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮಳೆ ಪ್ರಾರಂಭಕ್ಕೂ ಮುನ್ನವೇ ತಕ್ಕಮಟ್ಟಿನ ಸಿದ್ಧತೆಯಾದರೂ ಪಾಲಿಕೆ ಮಾಡಿಕೊಳ್ಳುತ್ತಿತ್ತು. ಆದರೆ,  ಸದ್ಯ ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ನಗರದ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಅದರಲ್ಲಿ ಮಳೆ ಮುಂಜಾಗ್ರತೆ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ನಿಲ್ಲುವುದನ್ನು ತಡೆಯುವ ಪ್ರಕ್ರಿಯೆಯೂ ಒಂದಾಗಿದೆ.

Advertisement

ಕೋವಿಡ್‌ 19  ಭೀತಿ ಹಿನ್ನೆಲೆಯಲ್ಲಿ ಮಳೆ ಅನಾಹುತ ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಿಯಾ ಯೋಜನೆ, ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಪ್ರವಾಹ ಪರಿಸ್ಥಿತಿ ತಪ್ಪಿಸಲು ಪ್ರಾಯೋಗಿಕವಾಗಿ ನಗರದ ಪ್ರಮುಖ ಜಂಕ್ಷನ್‌, ಅಂಡರ್‌  ಪಾಸ್‌ಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಇಂಗುಗುಂಡಿ ನಿರ್ಮಾಣ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಇದಕ್ಕೆ ಹಿನ್ನಡೆ ಉಂಟಾಗಿದೆ. ಈ ವಾರ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು  ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ.

ಸಾಕಷ್ಟು ಪೂರ್ವ ತಯಾರಿ ಮಧ್ಯೆಯೂ ನಗರದಲ್ಲಿ ಮಳೆಯಿಂದ ಒಂದಿಲ್ಲೊಂದು ಅವಘಡ ಸಂಭವಿಸುತ್ತಿತ್ತು. ಈಗ ಕೋವಿಡ್‌ 19ದಿಂದ ಪೂರ್ವತಯಾರಿಗೆ ಹಿನ್ನಡೆಯಾಗುತ್ತಿರುವ  ಸೂಚನೆ ಸಿಕ್ಕಿದೆ. ಅಲ್ಲದೆ, ಇದೇ ಅವಕಾಶದಿಂದ ಕೆಲವು ಅಧಿಕಾರಿಗಳು ಮೈಮರೆಯುವ ಸಾಧ್ಯತೆ ಇದೆ. ಸಣ್ಣ ಮಳೆಗೂ ಮೆಜೆಸ್ಟಿಕ್‌ ಬಳಿಯ ಓಕಳಿಪುರ ಜಂಕ್ಷನ್‌ನ ಅಂಡರ್‌ಪಾಸ್‌ ಸೇರಿ ಹಲವು ಅಂಡರ್‌ ಪಾಸ್‌ಗಳಲ್ಲಿ ಮಳೆ ನೀರು  ನಿಲ್ಲುತ್ತದೆ.

ಮೇಖೀ ವೃತ್ತ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಕಾವೇರಿ ಚಿತ್ರಮಂದಿರ, ಕೆ.ಆರ್‌.ವೃತ್ತ, ಸ್ಯಾಂಕಿ ರಸ್ತೆ ಅಂಡರ್‌ ಪಾಸ್‌ಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದ್ದು ಪಾಲಿಕೆ ಮಳೆ ಅನಾಹುತ ಹೇಗೆ ತಪ್ಪಿಸಲಿದೆ ಎಂಬ ಪ್ರಶ್ನೆ  ಎದುರಾಗಿದೆ. ನಗರದಲ್ಲಿ ಮರದ ರೆಂಬೆ, ಕೊಂಬೆ ಕಡಿಯುವುದು, ಮಳೆಯಿಂದ ನೆಲಕ್ಕುರುಳುವ ರೆಂಬೆ- ಕೊಂಬೆ ತೆರವು ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಪ್ರತ್ಯೇಕ  ತಂಡ ರಚನೆ ಮಾಡಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಂದಾಜು 10 ಕೋಟಿ ರೂ. ಮೊತ್ತದಲ್ಲಿ ಟೆಂಡರ್‌ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಉಪ ಅರಣ್ಯ  ಸಂರಕ್ಷಣಾಧಿಕಾರಿ  ಎಚ್‌.ಎಸ್‌.ರಂಗನಾಥಸ್ವಾಮಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ತಂಡ ರಚನೆ ಮಾಡಲಾಗುತ್ತಿದೆ. ಪ್ರತಿ ತಂಡದಲ್ಲೂ 7 ಜನ ಇರಲಿದ್ದು, 1 ವಾಹನ, ಮರ ತೆರವು ಮಾಡಲು ಬೇಕಾದ ಎಲ್ಲಾ ವಸ್ತುಗಳು ಇರಲಿವೆ. ಮಳೆಯಿಂದ ಹಾಗೂ  ಮಳೆಗೆ ಮುನ್ನ ಮರದ ರೆಂಬೆ, ಕೊಂಬೆ ಕೂಡಲೇ ತೆರವು ಮಾಡಲು ಸಹಾಯವಾಗಲಿದೆ. ಅಲ್ಲದೆ, ಈ ತಂಡಗಳು, ಮರದ ರೆಂಬೆ, ಕೊಂಬೆಗಳನ್ನು 24 ಗಂಟೆ ಒಳಗಾಗಿ ಕತ್ತರಿಸಿದ ಭಾಗ ತೆರವುಗೊಳಿಸದಿದ್ದಲ್ಲಿ ಪಾಲಿಕೆ ವತಿಯಿಂದ  ತೆರವುಗೊಳಿಸಿ, ತಗಲುವ ವೆಚ್ಚವನ್ನು ಸಂಬಂಧಪಟ್ಟ ಅರಣ್ಯ ತಂಡಗಳ ಮೂಲಕ ವಸೂಲಿ ಮಾಡಲಾಗುವುದೆಂದರು.

Advertisement

ಚುರುಕಾಗದ ಕ್ರಿಯಾ ಯೋಜನೆ: ನಗರದಲ್ಲಿ ಮಳೆ ಅನಾಹುತ ತಪ್ಪಿಸಲು ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತೆ ಬಗ್ಗೆ ಕಂದಾಯ ಸಚಿವ ಆರ್‌.ಅಶೋಕ್‌ ಏ.30ರಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ಮೇಯರ್‌  ಎಂ.ಗೌತಮ್‌ಕುಮಾರ್‌ ಒಳಗೊಂಡಂತೆ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಕೆಲವು ನಿರ್ದಿಷ್ಟ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಕೆಲವು ಕಾರ್ಯಗಳು ಮಾತ್ರ ಚುರುಕು ಪಡೆದುಕೊಂಡಿವೆ. ಮಳೆ ಅನಾಹುತ ತಪ್ಪಿಸುವುದಕ್ಕೆ  ಟಾಸ್ಕ್ಫೋರ್ಸ್‌, 9 ಕಡೆ ಶಾಶ್ವತ ನಿಯಂತ್ರಣ ಕೊಠಡಿ, ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿ ಸೇರಿ ಹಲವು ನಿರ್ದೇಶನಗಳನ್ನು ನೀಡಲಾಗಿತ್ತು. ಇದರಲ್ಲಿ ಕೆಲವು ಮಾತ್ರ ಕಾರ್ಯರೂಪಕ್ಕೆ ಬರುವ ಹಂತದಲ್ಲಿದೆ. ಆದರೆ, ಬಹುತೇಕ ನಿರ್ದೇಶನ ಪಾಲನೆಯಾಗಿಲ್ಲ.

ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ: ಆಯುಕ್ತ ಅನಿಲ್‌ಕುಮಾರ್‌: ನಗರದಲ್ಲಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ವಲಯಗಳಲ್ಲಿ 63 ತಾತ್ಕಾಲಿಕ ಸಹಾಯವಾಣಿ ಪ್ರಾರಂಭಿಸಲಾಗಿದೆ  ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು. “ಉದಯವಾಣಿ’ ಯೊಂದಿಗೆ ಮಾತನಾಡಿ, 8 ವಲಯಗಳಲ್ಲಿ ಪ್ರಹಾರಿ ತಂಡಗಳನ್ನು ರಚನೆ ಮಾಡಿಕೊಳ್ಳಲಾಗಿದೆ. ಮರದ ರೆಂಬೆ, ಕೊಂಬೆಗೆ ತಂಡಗಳ ರಚನೆ ಮಾಡಿಕೊಳ್ಳಲಾಗಿದೆ. ಮಳೆಗೆ ಸಂಬಂಧಿಸಿದಂತೆ ಟಾಸ್ಕ್ಫೋರ್ಸ್‌ ಸಹ ರಚನೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ನಗರದಲ್ಲಿ ಮಳೆ ನೀರು ಸೇರುವ ತಗ್ಗು ಪ್ರದೇಶಗಳಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ  ನೀಡಲಾಗಿದೆ ಎಂದರು.

ಪಾಲಿಕೆ ಮಾಡಿಕೊಂಡಿರುವ ಸಿದ್ಧತೆಗಳೇನು?: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿ ಸ್ಥಾಪನೆ. ಇದಕ್ಕೆ 5 ಕೋಟಿ ರೂ. ನಿಗದಿ ಮಾಡಲಾಗಿದೆ. ಅಲ್ಲದೆ, ಈ ಕಚೇರಿಗಳು ಸಂಜೆ 6.00 ರಿಂದ ಬೆಳಗ್ಗೆ 6.00  ಗಂಟೆವರೆಗೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ. ಮಳೆ ಅನಾಹುತ ತಪ್ಪಿಸಲು ಟಾಸ್ಕ್ಫೋರ್ಸ್‌ ರಚನೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ನೀರುಗಾಲುವೆಗಳಿಂದ ಕೆರೆಗಳಿಗೆ ನೀರು ಹರಿಯುವ ಇನ್ಲಟ್‌ಗಳಲ್ಲಿನ ಹೂಳೆತ್ತುವುದು ನಡೆದಿದೆ.  ಈ ಎಲ್ಲಾ ಸಿದ್ಧತೆಗಳ ಅಸಲಿಯತ್ತು ನಗರದಲ್ಲಿ ಮಳೆ ಬಂದ ಮೇಲೆ ತಿಳಿಯಲಿದೆ.

* ಹಿತೇಶ್ ‌ವೈ

Advertisement

Udayavani is now on Telegram. Click here to join our channel and stay updated with the latest news.

Next