Advertisement

ವಸತಿ ಯೋಜನೆ: ಶುಲ್ಕ ಇಳಿಕೆಗೆ ಚಿಂತನೆ

11:10 PM Jan 21, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಒಂದು ಮನೆಗೆ ನಿಗದಿಪಡಿಸಿರುವ ಆರೇಳು ಲಕ್ಷ ರೂ. ಮೊತ್ತವನ್ನು 2-3 ಲಕ್ಷ ರೂ.ಗೆ ಇಳಿಸಲು ಚಿಂತಿಸಲಾಗುವುದು. ಜತೆಗೆ ಕೊಳೆಗೇರಿ ನಿವಾಸಿಗಳು ಸೇರಿ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವಾಗ ಅವುಗಳನ್ನು ಹೆಣ್ಣು ಮಕ್ಕಳ ಹೆಸರಿಗೆ ನೋಂದಣಿ ಮಾಡಲು ಗಂಭೀರ ಚಿಂತನೆ ನಡೆದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ವಿಧಾನಸೌಧದಲ್ಲಿ ಮಂಗಳವಾರವೂ ವಸತಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಯಡಿ ಫ‌ಲಾನುಭವಿಗಳು ಏಳು ಲಕ್ಷ ರೂ. ಭರಿಸಬೇಕಿದ್ದು, ನನಗೂ ಮುಜುಗರವಾಗಿದೆ. ನಾನಾ ರೂಪದಲ್ಲಿ ಆರ್ಥಿಕ ನೆರವು ಪಡೆದು 2-3 ಲಕ್ಷ ರೂ.ಗೆ ಇಳಿಕೆ ಮಾಡಲು ಚಿಂತಿಸಲಾಗುವುದು. ಹಾಗೆಯೇ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕಲ್ಪಿ ಸುವ ಪ್ರಯತ್ನವೂ ನಡೆದಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಎಂಟು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ 332 ಎಕರೆ ಪ್ರದೇಶದಲ್ಲಿ 46,000 ಮನೆಗಳ ನಿರ್ಮಾಣ ಕಾಮಗಾರಿಯನ್ನು ಫೆ. 15ರಿಂದ 20ರೊಳಗೆ ಆರಂಭಿಸಲಾಗುವುದು. 12ರಿಂದ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮನೆ ಹಂಚಿಕೆ ಮಾಡಲಾಗುವುದು ಎಂದರು.

ಈಗಾಗಲೇ ಬಿಡಿಎ ತನ್ನ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಎಲ್ಲ ಯೋಜನೆಗಳಿಗೆ ನಿರಾಕ್ಷೇಪಣಾ ಪತ್ರ ನೀಡಿದೆ. ನೆಲಮಂಗಲ, ಆನೇಕಲ್‌, ಕನಕಪುರ ಪ್ರಾಧಿಕಾರವು 2- 3 ದಿನದಲ್ಲಿ ಅನುಮತಿ ನೀಡಲಿವೆ ಎಂದು ಹೇಳಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 300 ಎಕರೆ ಸೇರಿದಂತೆ ಕ್ವಾರಿಗಳನ್ನು ಹೊರತುಪಡಿಸಿ 700 ಎಕರೆ ಜಾಗವನ್ನು 15- 20 ದಿನದಲ್ಲಿ ಇಲಾಖೆಗೆ ನೀಡುತ್ತಿದ್ದಾರೆ. ಆ ಪ್ರದೇಶದಲ್ಲಿ ಬಾಕಿ ಉಳಿದ 54,000 ಮನೆಗಳನ್ನು ನಿರ್ಮಿಸ ಲಾಗುವುದು ಎಂದರು.

ಹೆಣ್ಣು ಮಕ್ಕಳ ಹೆಸರಿನಲ್ಲಿ ನೋಂದಣಿ: ಕೊಳೆಗೇರಿ ಸೇರಿದಂತೆ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವಾಗ ಶೇ. 99ರಷ್ಟು ಪ್ರಕರಣದಲ್ಲಿ ಹೆಣ್ಣು ಮಕ್ಕಳ ಹೆಸರಿಗೆ ನೋಂದಣಿ ಮಾಡಲು ಗಂಭೀರ ಚಿಂತನೆ ನಡೆದಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1.80 ಲಕ್ಷ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಈ ಪೈಕಿ 6000 ದಿಂದ 8000 ಮನೆಗಳ ನಿರ್ಮಾಣ ಒಂದು ಹಂತಕ್ಕೆ ಬಂದಿದೆ. ಉಳಿಕೆ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

Advertisement

39,000 ಮನೆ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಿ ಏಜೆನ್ಸಿ ನಿಗದಿಪಡಿಸಲಾಗಿತ್ತು. ಆದರೆ 13- 15 ತಿಂಗಳಾದರೂ ಕಾಮಗಾರಿ ಶುರುವಾಗದ ಕಾರಣ ಟೆಂಡರ್‌ ರದ್ದುಪಡಿಸ ಲಾಗಿದೆ. ಇನ್ನು ಮುಂದೆ ಒಂದೆರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗರಿಷ್ಠ 500 ಮನೆ ನಿರ್ಮಾಣ ಕಾಮಗಾರಿಯನ್ನಷ್ಟೇ ಒಂದು ಏಜೆನ್ಸಿಗೆ ನೀಡಲಾಗುವುದು. ವಿಶೇಷ ಪ್ರಕರಣದಲ್ಲಷ್ಟೇ 800-1000 ಮನೆಗಳ ನಿರ್ಮಾಣ ಕಾಮಗಾರಿಯನ್ನು ಒಂದು ಏಜೆನ್ಸಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ 392 ಘೋಷಿತ ಕೊಳೆಗೇರಿಗಳಲ್ಲಿ 50,000 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಶೇ.70ರಿಂದ 80ರಷ್ಟು ಕೊಳೆಗೇರಿಗಳಿಗೆ ಕಾಯಕಲ್ಪ ನೀಡಿದಂತಾಗಲಿದೆ. ಫ‌ಲಾನುಭವಿಗಳು 50,000 ರೂ.ನಿಂದ 1 ಲಕ್ಷ ರೂ.ವರೆಗೆ ಭರಿಸಬೇಕಿದ್ದು, ಇದಕ್ಕೂ ಬ್ಯಾಂಕ್‌ ಸಾಲ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಹಿಂದಿನ ಸರ್ಕಾರದ ತಪ್ಪು ನಿರ್ಧಾರದಿಂದ ವಿಳಂಬ: ಮುಖ್ಯಮಂತ್ರಿಗಳ ಲಕ್ಷ ಬಹುಮಹಡಿ ವಸತಿ ಯೋಜನೆ ಜಾರಿ ವಿಳಂಬಕ್ಕೆ ಹಿಂದಿನ ಸರ್ಕಾರದ ತಪ್ಪು ನಿರ್ಧಾರ ಕಾರಣ. ಕೇಂದ್ರ ಸರ್ಕಾರ ನೆಲಮಹಡಿ ಸಹಿತ ಮೂರು ಮಹಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. ಆದರೆ ಹಿಂದಿನ ಸರ್ಕಾರ 14 ಮಹಡಿ ಕಟ್ಟಡ ನಿರ್ಮಿಸಲು ಮುಂದಾಯಿತು. ಇದು ಸಾಧ್ಯವಿಲ್ಲ. ಈ ಬಗ್ಗೆ ಗೃಹ ಮಂಡಳಿ ಹಾಗೂ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ.

ಆದರೆ ಹಿಂದೆಯೇ ಟೆಂಡರ್‌ ಕರೆದು ಕಾರ್ಯಾದೇಶ ಪತ್ರ ನೀಡಿ ಒಪ್ಪಂದ ಮಾಡಿಕೊಂಡು ಶೇ.5 ಮುಂಗಡ ಬಿಡುಗಡೆಯಾಗಿತ್ತು. ರದ್ದುಪಡಿಸಿದರೆ ಕೆಲಸವನ್ನೇ ಮಾಡದ ಏಜೆನ್ಸಿಗೆ ಹತ್ತಾರು ಕೋಟಿ ರೂ. ನೀಡಬೇಕಾದ ಕಾರಣ 46,000 ಮನೆಗಳ ನಿರ್ಮಾಣವನ್ನು ಅದೇ ರೀತಿ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ. ಬಾಕಿ ಉಳಿದ 54,000 ಮನೆಗಳನ್ನು ನೆಲಮಹಡಿ ಸಹಿತ 2 ಇಲ್ಲವೇ 3 ಮಹಡಿ ಕಟ್ಟಡದಡಿ ನಿರ್ಮಿಸಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.

ಪರ್ಯಾಯ ವ್ಯವಸ್ಥೆಗೆ ಕ್ರಮ: ಕೆಲ ಕೊಳೆಗೇರಿಗಳಲ್ಲಿ ಬಾಂಗ್ಲಾ ದೇಶದವರು ನೆಲೆಸಿರುವ ಮಾತುಗಳಿವೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಬಿಬಿಎಂಪಿ ಸರ್ವೇ ಕಾರ್ಯ ಆರಂಭಿಸಿದೆ. ಇದೊಂದು ಸೂಕ್ಷ್ಮ ವಿಚಾರ. ಸ್ಥಳೀಯ ಸಂಸ್ಥೆಗಳು ಆದ್ಯತೆ ಮೇರೆಗೆ ಈ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದು, ಸರಿ ದಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಳ್ಳಂದೂರು ವಾರ್ಡ್‌ನ ಕರಿಯಮ್ಮನ ಅಗ್ರಹಾರದಲ್ಲಿ ಖಾಸಗಿ ಭೂಮಿಯಲ್ಲಿ ನಿರ್ಮಿಸಿದ್ದ ಜೋಪಡಿ ತೆರವು ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸ ಲಾಗಿದೆ. ಪರಿಸ್ಥಿತಿ ಅವಲೋಕಿಸಿ ಅಗತ್ಯವಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಫ‌ಲಾನುಭವಿಗಳ ಆಯ್ಕೆ, ಮನೆ ಹಂಚಿಕೆಯಲ್ಲಿ ಅಕ್ರಮ ತಡೆಯೋದು ಬಹಳ ಕಠಿಣ. ಮಧ್ಯ ರಾತ್ರಿ ಫೋನ್‌ ಮಾಡಿ ಬೈತಾರೆ. “ನಿಮ್ಮಪ್ಪನ ಗಂಟು ಹೋಯ್ತಾ, ನಿನ್‌ ಕೈಯಿಂದ ಕೊಡ್ತಿಯಾ’ ಅಂತಾ ಪ್ರಶ್ನೆ ಮಾಡ್ತಾರೆ. ನಾಲ್ಕೈದು ಜನರನ್ನು ಜೈಲಿಗೆ ಹಾಕಿಸಿದೆ. ಎಷ್ಟು ಜನರನ್ನು ಜೈಲಿಗೆ ಹಾಕಿಸೋದು? ಯಾರೂ ಇದನ್ನು ಮುಟ್ಟುತ್ತಿರಲಿಲ್ಲ. ಆದರೂ ಧೈರ್ಯ ಮಾಡಿ ಪಾಪ ಕೃತ್ಯಗಳಿಗೆ ಅಂತ್ಯ ಹಾಡಲು ಮುಂದಾಗಿದ್ದೇನೆ.
-ವಿ.ಸೋಮಣ್ಣ, ವಸತಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next