Advertisement

ಆಟೋ ಚಾಲಕರಿಗೆ ವಸತಿ ಭರವಸೆ

12:21 PM Apr 10, 2018 | |

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಆಟೋ ಚಾಲಕರಿಗೆ ಪ್ರತ್ಯೇಕ ನಿವೇಶನ ಗುರುತಿಸಿ, ಹೊಸ ಕಾಲೋನಿ ರಚನೆ ಮಾಡಿ, ವಸತಿ ಸಮುತ್ಛಯ ನಿರ್ಮಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಬಿಜೆಪಿ ವತಿಯಿಂದ ಸೋಮವಾರ ನಗರದ ಜಸ್ಮಾದೇವಿ ಭವನದಲ್ಲಿ ಹಮ್ಮಿಕೊಂಡಿದ್ದ ಆಟೋ ಚಾಲಕರೊಂದಿಗಿನ ಸಂವಾದಕ್ಕೆ ಡಾಲರ್ ಕಾಲೋನಿಯಲ್ಲಿರುವ ತಮ್ಮ  ನಿವಾಸದಿಂದ ಆಟೋದಲ್ಲೇ  ಆಗಮಿಸಿದ ಅವರು ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಿದರು.

ನಂತರ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 1.50 ಲಕ್ಷ ಹಾಗೂ ರಾಜ್ಯದಲ್ಲಿ 3.50 ಲಕ್ಷ ಆಟೋ ಚಾಲಕರಿದ್ದಾರೆ. ಅವರು ನಿತ್ಯವೂ ಹತ್ತು ಹನ್ನೊಂದು ಗಂಟೆ ಕೆಲಸ ಮಾಡಿದರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಆಟೋ ಚಾಲಕರಿಗಾಗಿ ಪ್ರತ್ಯೇಕ ನಿವೇಶನ ಗುರುತಿಸಿ, ವಸತಿ ಸಮುತ್ಛಯ ನಿರ್ಮಿಸಿ, ಒಂದು ಅಥವಾ ಎರಡು ಕೋಣೆ ಹೊಂದಿರುವ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂಬ ಭರವಸೆ ನೀಡಿದರು.

ಚಾಲಕರ ಅಭಿವೃದ್ಧಿ ನಿಗಮ: ಆಟೋ, ಟ್ಯಾಕ್ಸಿ ಹಾಗೂ ಲಾರಿ ಸೇರಿದಂತೆ ಎಲ್ಲಾ ಬಾಡಿಗೆ ವಾಹನಗಳ ಚಾಲಕರ ಸಮಸ್ಯೆಯೂ ಒಂದೇ ರೀತಿಯಲ್ಲಿದೆ. ಚಾಲಕರ ಸಮಗ್ರ ಕಲ್ಯಾಣಕ್ಕಾಗಿ ಆಟೋ ಹಾಗೂ ಉಳಿದ ವಾಹನಗಳ ಚಾಲಕರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು. ಈ ನಿಗಮದ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ ಚಾಲಕರ ಜೀವನ ಮಟ್ಟ ಮತ್ತು ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.

ಆಟೋ ಚಾಲಕರು ನಾಗರಿಕರ ಸೇವೆಯಲ್ಲಿ ಹಗಲಿರುಳು ದುಡಿಯುತ್ತಿರುತ್ತಾರೆ. ಜನರಿಗೆ ಉತ್ತಮವಾದ ಸಾರಿಗೆ ಸೇವೆಯನ್ನು ಕಲ್ಪಿಸುತ್ತಿದ್ದಾರೆ. ಕನ್ನಡ ಭಾಷೆಯ ಉಳಿವಿಕೆಗಾಗಿ ನಡೆಯುವ ಹೋರಾಟದಲ್ಲಿ ಆಟೋಚಾಲಕರ ಪಾತ್ರ ನಿರ್ಣಾಯಕವಾಗಿದೆ. ಸವಾಲಿನ ಮಧ್ಯೆ ಜೀವನ ನಡೆಸುವ ಆಟೋಚಾಲಕರು ಕನ್ನಡಾಭಿಮಾನದ ರಾಯಭಾರಿಗಳು ಎಂದು ಶ್ಲಾ ಸಿದರು.

Advertisement

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷದಲ್ಲಿ ದಲಿತರ ಕೇರಿಗೆ ಹೋಗಿಲ್ಲ. ಆಟೋ ಚಾಲಕರನ್ನು ಮಾತನಾಡಿಸಿಲ್ಲ. ಯಾವ ವ್ಯವಸ್ಥೆಯನ್ನು ಸರಿಪಡಿಸಿಲ್ಲ ಎಂದು ದೂರಿದರು.

ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕಳೆದ ಐದು ವರ್ಷದಲ್ಲಿ ಶಿವಾಜಿನಗರ ಏನೂ ಅಭಿವೃದ್ಧಿಯಾಗಿಲ್ಲ. ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಗಿತ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.

ಇನ್ನು ಮೂರ್‍ನಾಲ್ಕು ದಿನದೊಳಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ. ಆ ಪ್ರಣಾಳಿಕೆಯಲ್ಲಿ ಆಟೋ ಚಾಲಕರ ಸಮಸ್ಯೆಗೆ ಪರಿಹಾರವನ್ನು ಸೂಚಿಸಲಾಗುವುದು . ಸರ್ಕಾರ ಬಂದ ನಂತರ ಅದನ್ನು ಅನುಷ್ಠಾನಕ್ಕೂ ತರಲಿದ್ದೇವೆ. ರಿಕ್ಷಾ ಖರೀದಿಸಲು ಬ್ಯಾಂಕ್‌ ಸಾಲ , ವಿಮೆ  ಶುಲ್ಕ ಕಡಿಮೆ ಮಾಡುವ ಸಂಬಂಧ ಪರಿಶೀಲಿಸಲಾಗುವುದು.
-ಬಿ.ಎಸ್‌.ಯಡಿಯೂರಪ್ಪ 

ಆಟೋಗಳಿಗೆ ಪ್ರತಿವರ್ಷ 8,500 ರೂ. ಇನ್ಸೂರೆನ್ಸ್‌ ಪಾವತಿಸಬೇಕು. ಇದು ತುಂಬಾ ದುಬಾರಿಯಾಗುತ್ತಿದೆ. ಇನ್ಸೂರೆನ್ಸ್‌ ಹಣವನ್ನು ಕಡಿಮೆ ಮಾಡಬೇಕು.
-ನಾಗರಾಜ, ಆಟೋ ಚಾಲಕ

ಆಟೋ ಚಾಲಕರಲ್ಲಿ ಬಾಂಗ್ಲ ವಲಸಿಗರೇ ಹೆಚ್ಚಿದ್ದಾರೆ. ಅವರಿಗೆ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಮಾಡಿಸಿಕೊಡಲಾಗಿದೆ. ಇದರಿಂದ ಸ್ಥಳೀಯ ಆಟೋ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು.
-ಬಾಲಕೃಷ್ಣ, ಆಟೋ ಚಾಲಕ

ಓಲಾ, ಉಬಾರ್‌ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಟೋ ಚಾಲಕರು ಪರದಾಡುವಂತಾಗಿದೆ. ಅಂತಹ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು.
-ಅಣ್ಣಾದೊರೆ, ಆಟೋ ಚಾಲಕ

ಆಟೋ ಚಾಲಕರು ಹಗಲು ಇರುಳು ಎನ್ನದೇ ದುಡಿಯುತ್ತಾರೆ. ಆದರೆ, ಅವರಿಗೆ ಸ್ವಂತ ಮನೆ ಇರುವುದಿಲ್ಲ. ಬಹುತೇಕರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಹೀಗಾಗಿ ಆಟೋ ಚಾಲಕರಿಗೆ ವಸತಿ ನಿರ್ಮಾಣ ಮಾಡಿಕೊಡಬೇಕು.
-ದೊಡ್ಡಯ್ಯ, ಆಟೋ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next