Advertisement

ಕೊಳಂಬೆ ವಾಸಿಗಳಿಗೆ ಸೂರಿನ ಆಸರೆ

09:30 AM Apr 30, 2022 | Team Udayavani |

ಬೆಳ್ತಂಗಡಿ: 2019ರ ಆ. 9ರಂದು ಅಪ್ಪಳಿಸಿದ ನೆರೆಯ ಪರಿಣಾಮ, ಆಸರೆ ಕಳೆದುಕೊಂಡ ಚಾರ್ಮಾಡಿ ಗ್ರಾಮದ 12 ಕುಟುಂಬಗಳಿಗೆ ಈಗ ಸೂರಿನ ಆಸರೆ ದೊರೆಯುತ್ತಿದೆ.

Advertisement

ಭೀಕರ ನೆರೆಯಿಂದ ಮೃತ್ಯುಂಜಯ ನದಿಯೇರಿ ದಡ ದಾಟಿದ ನೀರು ಚಾರ್ಮಾಡಿ ಕೊಳಂಬೆಯ ಮೂರು ಮನೆಗಳನ್ನು ಸಂಪೂರ್ಣ ಜಲಸಮಾಧಿ ಮಾಡಿತ್ತು. ಅಕ್ಕಪಕ್ಕದ 20 ಮನೆಗಳು ಮರಳು ದಿಬ್ಬದೊಳಕ್ಕೆ ಹುದುಗಿದ್ದವು. ಕೃಷಿ ಭೂಮಿ ಮರಳು ಭೂಮಿಯಂತೆ ಕಾಣುತ್ತಿತ್ತು. ಕೊಳಂಬೆ ನಿವಾಸಿಗಳು ಊರೇ ಬಿಟ್ಟು ಹೋಗಿವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಉಜಿರೆಯ ಬದುಕು ಕಟ್ಟೋಣ ತಂಡ ಊರಿನ ಪರಿವರ್ತನೆಗೆ ಟೊಂಕ ಕಟ್ಟಿತ್ತು.

ಕೃಷಿ ಭೂಮಿ, ಆಸರೆ ಮರು ಸೃಷ್ಟಿ

ಉಜಿರೆಯ ಉದ್ಯಮಿಗಳಾದ ಮೋಹನ್‌ ಕುಮಾರ್‌ ಹಾಗೂ ರಾಜೇಶ್‌ ಪೈ ನೇತೃತ್ವದಲ್ಲಿ ನೂರಕ್ಕೂ ಅಧಿಕ ಯುವಕರ ತಂಡ ಮರಳು ತೆರವುಗೊಳಿಸಿ 20ಕ್ಕೂ ಅಧಿಕ ಕುಟುಂಬಗಳ ಪರಿವರ್ತನೆಗೆ ನಿಂತಿತು. ಇದಕ್ಕೆ ಅನೇಕರು ಕೈ ಜೋಡಿಸಿದರು. ಹಲವು ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆ, ಗ್ರಾಮಾಭಿವೃದ್ಧಿ ಯೋಜನೆ ಸೇರಿ 5,000ಕ್ಕೂ ಮಿಕ್ಕಿ ಮಂದಿ ಶ್ರಮದಾನದ ಮೂಲಕ ನೆರವಾಗಿದ್ದರು.

ಎರಡು ವರ್ಷಗಳ ಪರಿಶ್ರಮ

Advertisement

ಕೊಳಂಬೆಯಲ್ಲಿ 12 ಮನೆಗಳನ್ನು ಗುರುತಿಸಿ ಕಂದಾಯ ಇಲಾಖೆ ವರದಿ ನೀಡಿತ್ತು. ಬದುಕು ಕಟ್ಟೋಣ ತಂಡ ಎರಡು ವರ್ಷಗಳಿಂದ 20 ಮನೆಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗ್ಗಡೆ ಸಹಕಾರದೊಂದಿಗೆ ದಾನಿ ಗಳ ಸಹಕಾರದಿಂದ ಮನೆಯ ಅಡುಗೆ ಸಲ ಕರ ಣೆಯಿಂದ ಹಿಡಿದು ಜೀವನಕ್ಕೆ ಬೇಕಾಗುವ ಎಲ್ಲ ಸಲ ಕರಣೆ ಒದಗಿಸಿತ್ತು. 20ಕ್ಕೂ ಅಧಿಕ ವಿದ್ಯಾರ್ಥಿ ಗಳು ದಾಖಲೆ ಪತ್ರ ಕಳೆದುಕೊಂಡಿದ್ದರು. ಅವರಿಗೆ ಬೇಕಾದ ಪಠ್ಯ ಪುಸ್ತಕ ಒದಗಿಸಿ ಶಿಕ್ಷಣಕ್ಕೂ ದಾನಿಗಳು ನೆರವಾಗಿದ್ದರು.

40 ಎಕ್ರೆಯ ಚಿತ್ರಣವೇ ಬದಲು

ಕೊಳಂಬೆಯಲ್ಲಿ 20 ಕುಟುಂಬದ ಒಟ್ಟು 40 ಎಕ್ರೆ ಸ್ಥಳವಿದ್ದು, ಎರಡು ವರ್ಷಗಳಲ್ಲಿ ಸಂಪೂರ್ಣ ಕೃಷಿ ಚಟುವಟಿಕೆ ಮರುಸ್ಥಾಪನೆ ಮಾಡಲಾಗಿದೆ. ಸುಮಾರು 5 ಎಕ್ರೆಯಷ್ಟು ವಿಸ್ತಾರದ ಗದ್ದೆಯ ಮರಳು ತೆರವುಗೊಳಿಸಲಾಗಿದೆ.

ಒದಗಿ ಬಂದ ಆಸರೆ

ಮನೆ ಕಳೆದುಕೊಂಡವರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರೂ. ಘೋಷಣೆ ಮಾಡಿದ್ದರು. 12 ಮನೆಗಳಿಗೆ ಸರಕಾರದಿಂದ ಬಂದ ತಲಾ 5 ಲಕ್ಷ ರೂ., ಶಾಸಕ ಹರೀಶ್‌ ಪೂಂಜ ಅವರ ಕಾಳಜಿ ಫಂಡ್‌ ರಿಲೀಫ್‌ ಫಂಡ್‌ ನಿಂದ ತಲಾ 1 ಲಕ್ಷ ರೂ., ಫಲಾನುಭವಿಗಳಿಂದ ತಲಾ 2 ಲಕ್ಷ ರೂ., ಉಳಿದ ಮೊತ್ತವನ್ನು ಬದುಕು ಕಟ್ಟೋಣ ತಂಡವೇ ಭರಿಸಿ ತಲಾ 13.50 ಲಕ್ಷ ರೂ. ನಲ್ಲಿ ಪ್ರತೀ ಮನೆ ನಿರ್ಮಿಸಲಾಗಿದೆ.

ಮನೆಗಳ ವಿಶೇಷತೆ

ವಾಸ್ತು ಪ್ರಕಾರವೇ ಅಚ್ಚುಕಟ್ಟಾಗಿ ಮನೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ನೆರೆ ಸಂಭವಿಸಿದರೂ ಹಾನಿಯಾಗದಂತೆ ಎಂಜಿನಿಯರ್‌ ಮಾರ್ಗದರ್ಶನದಲ್ಲಿ ಕಾಂಕ್ರಿಟ್‌ ಪಿಲ್ಲರ್‌ ಅಳವಡಿಸಿ ಅಡಿಪಾಯ ನಿರ್ಮಿಸಲಾಗಿದೆ. ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಎಂಜಿನಿಯರ್‌ ಯಶೋಧರ ಉಚಿತವಾಗಿ ಪ್ಲ್ರಾನಿಂಗ್‌ ಮಾಡಿಕೊಟ್ಟಿದ್ದಾರೆ.

ತಂಡದ ಸೇವೆ ಆದರ್ಶ

ಸಂತ್ರಸ್ತರಿಗೆ ಬದುಕು ಕಟ್ಟೋಣ ತಂಡ ಹೊಸ ಬದುಕು ಕಟ್ಟಿ ಕೊಟ್ಟಿದೆ. ಸರಕಾರದ ಅನುದಾನ, ಕಾಳಜಿ ಫಂಡ್‌ ನೆರವಿನಿಂದ ಭದ್ರ ಬುನಾದಿ ರೂಪಿಸಿದ್ದು ಸಮಾಜ ಸೇವೆಗೆ ತಂಡದ ಕಾರ್ಯ ಆದರ್ಶವಾಗಿದೆ. ಹರೀಶ್‌ ಪೂಂಜ, ಶಾಸಕರು

ಸಂತೃಪ್ತಿ ಇದೆ

ಸಮಾಜದ ಅಭಿವೃದ್ಧಿಗಾಗಿ ಸಮರ್ಪಣ ಭಾವದಿಂದ ನೆರವಾಗಿದ್ದೇವೆ. ಸಂತ್ರಸ್ತರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ ಎಂಬ ತೃಪ್ತಿ ನಮಗಿದೆ. ಮೋಹನ್‌ ಕುಮಾರ್‌, ಸಂಚಾಲಕರು, ಬದುಕು ಕಟ್ಟೋಣ ತಂಡ

ದಾನಿಗಳ ಪರಿಶ್ರಮ

ನಮ್ಮ ಬದುಕು ಮತ್ತೆ ಹೊಸತನಕ್ಕೆ ಸಾಕ್ಷಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಇಂದು ಹೊಸ ಮನೆ ಕನಸು ನನಸಾಗಿದೆ ಎಂದರೆ ಅದು ದಾನಿಗಳ ಪರಿಶ್ರಮ. ನಿಶಾಂತ್‌ ಕೊಳಂಬೆ, ಸಂತ್ರಸ್ತ

ಚೈತ್ರೇಶ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next