Advertisement

ಹೊಸಪೇಟೆಗಿದೆ ಐತಿಹಾಸಿಕ ಮಹತ್ವ

11:12 AM Jul 29, 2019 | Naveen |

ಹೊಸಪೇಟೆ: ಸಾಹಿತ್ಯಿಕ, ಐತಿಹಾಸಿಕವಾಗಿ ಹೊಸಪೇಟೆ ತಾಲೂಕಿಗೆ ತನ್ನದೇ ಆದ ಸಾಂಸ್ಕೃತಿಕ ಮಹತ್ವ ಇರುವುದನ್ನು ಹಂಪಿ ಪ್ರಾಚೀನ ಕವಿಗಳಿಂದ, ಶಾಸನಗಳು ಹಾಗೂ ದೇವಾಲಯಗಳಿಂದ ತಿಳಿಯುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ರವೀಂದ್ರನಾಥ ಅಭಿಪ್ರಾಯ ಪಟ್ಟರು.

Advertisement

ಸ್ಥಳೀಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕೈಗಾರಿಕೆ, ನೀರಾವರಿ, ಉದ್ಯೋಗ ಕುರಿತಂತೆ ಎರಡು ಕವಿಗೋಷ್ಠಿಗಳು ಮತ್ತು ಉದಯೋನ್ಮುಖ ಕವಿಗಳಿಗೆ ವೇದಿಕೆಯನ್ನು ಒದಗಿಸುವ ಹಾಗೂ ಕಾವ್ಯ ಕ್ರಿಯೆಯಲ್ಲಿ ಕೈ ಪಳಗಿಸಿಕೊಂಡಿರುವ ಹಿರಿಯ ಕವಿಗಳ ಒಂದು ಕವಿಗೋಷ್ಠಿಯನ್ನು ಆಯೋಜಿಸಿರುವುದು ಸಮ್ಮೇಳನದ ಹೆಗ್ಗಳಿಕೆಯಾಗಿದೆ ಎಂದರು.

ಮರಿಯಮ್ಮನಹಳ್ಳಿ ಗುರಪಾದದೇವರ ಮಠದ ಮಲ್ಲಿಕಾರ್ಜುನ ಶಿವಚಾರ್ಯ ಶ್ರಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ರಂಗೋಪಂತ ನಾಗರಾಜರಾಯರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಮ ಕಲ್ಮಠ, ತಾಲೂಕು ಅಧ್ಯಕ್ಷ ಯತ್ನಳ್ಳಿ ಮಲ್ಲಯ್ಯ, ಕನ್ನಡ ವಿವಿ ಉಪ ಕುಲಸಚಿವ ಡಾ| ಎ. ವೆಂಕಟೇಶ, ಎಚ್.ಶ್ರೀನಿವಾಸ ರಾವ್‌, ಡಾ| ದಯಾನಂದ ಕಿನ್ನಾಳ, ಹೇಮಯ್ಯ ಸ್ವಾಮಿ, ಚಂದ್ರಶೇಖರ ಗೌಡ, ಡಾ| ವಸುಂಧರ ಭೂಪತಿ ಹಾಗೂ ನಾಗರಾಜ ಇನ್ನಿತರಿದ್ದರು. ಎನ್‌.ನಾಗರಾಜ ನಿರೂಪಿಸಿದರು. ವಾಸುದೇವ ಭಟ್ ಸ್ವಾಗತಿಸಿದರು. ಎನ್‌. ರಾಮಕೃಷ್ಣ ವಂದಿಸಿದರು.

ಸಮ್ಮೇಳನದ ಪ್ರಮುಖ ನಿರ್ಣಯಗಳು: ಕನ್ನಡ ಭವನ ನಿರ್ಮಾಣಕ್ಕೆ ಶೀಘ್ರವೇ ನಿವೇಶನ ಹಂಚಿಕೆ ಮಾಡಬೇಕು. ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ನಗರಸಭೆ ಬಳಿ ಇರುವ ಎಂ.ಪಿ. ಪ್ರಕಾಶ ಕಲಾ ಮಂದಿರವನ್ನು ಸಂಪೂರ್ಣ ಕೆಡವಿ, ಸುಸಜ್ಜಿತವಾದ ಸಾಂಸ್ಕೃತಿಕ ಕಲಾ ಕೇಂದ್ರವನ್ನಾಗಿ ರೂಪಿಸಬೇಕು. ಎಂ.ಪಿ.ಪ್ರಕಾಶರ ಹೆಸರನ್ನೇ ಮುಂದುವರಿಸಬೇಕು. ನಗರದ ಕೃಷಿ ಉತ್ಪನ್ನ ಮಾರಾಟ ಸಮಿತಿ ವೃತ್ತದಿಂದ ತುಂಗಭದ್ರಾ ಅಣೆಕಟ್ಟು ವೃತ್ತದವರೆಗಿನ ರಸ್ತೆಗೆ ವರನಟ ರಾಜಕುಮಾರ ರಸ್ತೆ ಎಂದು ನಾಮಕರಣ ಮಾಡಬೇಕು. ಈಗಿರುವ ಕಾಲೇಜು ರಸ್ತೆಗೆ ಅಂದರೆ ಅಶೋಕ ಬುಕ್‌ಸ್ಟಾಲ್ನಿಂದ ಡ್ಯಾಂ ರಸ್ತೆಯ ಸಾಯಿಬಾಬ ವೃತ್ತದವರೆಗಿನ ರಸ್ತೆಗೆ ಸಿ.ಬಿ. ಚಂದ್ರಶೇಖರಪ್ಪ ರಸ್ತೆ ಎಂದು ನಾಮಕರಣ ಮಾಡಬೇಕು. ಸ್ಥಳೀಯ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಅಂಕಿ-ಅಂಶಗಳನ್ನು ನೀಡಬೇಕು. ಖಾಸಗಿ ಕಂಪನಿಗಳು ಅಥವಾ ಸಂಘ-ಸಂಸ್ಥೆಗಳು ಸರ್ಕಾರಿ ಕಚೇರಿಗಳೊಂದಿಗೆ ಪತ್ರ ವ್ಯವಹಾರವನ್ನು ಕನ್ನಡದಲ್ಲಿಯೇ ಮಾಡಬೇಕು. ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕನ್ನಡದಲ್ಲಿರುವ ಪತ್ರಗಳನ್ನಷ್ಟೇ ಸ್ವೀಕರಿಸಬೇಕು. ಹೊಸಪೇಟೆ ತಾಲೂಕಿನ ಕೃಷಿ ಭೂಮಿಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಪರಭಾರೆ ಅಥವಾ ಮಾರಾಟ ಮಾಡಬಾರದು. ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕದ ಕಚೇರಿಗೆ ನಗರಸಭೆಯಿಂದ ತಾತ್ಕಾಲಿಕವಾಗಿ ಕೊಠಡಿ ಒದಗಿಸಬೇಕು. ಹಂಪಿ ಉತ್ಸವವನ್ನು ಪ್ರತಿ ವರ್ಷ ನವಂಬರ್‌ ತಿಂಗಳಲ್ಲಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಮತ್ತು ಉತ್ಸವದಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next