Advertisement

ಜಗುಲಿಯಲ್ಲಿದ್ದ ಹೊಸಾಳ ಶಾಲೆಗೆ ಬಂಡಾರಕೇರಿ ಮಠ ಸ್ಥಳದಾನ

12:19 AM Nov 09, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬ್ರಹ್ಮಾವರ: ಗ್ರಾಮೀಣ ಭಾಗದ ಜನತೆಗೆ ಅಕ್ಷರದ ಅರಿವು ಮೂಡಿಸುವ ಮಹತ್ವಾಕಾಂಕ್ಷೆಯಿಂದ ಹೊಸಾಳ ಶಾಲೆಯು 1910ರಲ್ಲಿ ದಿ. ಆದಪ್ಪ ಶೆಟ್ಟಿ ನಾಗರಮಠ ಅವರ ಮನೆಯ ಜಗಲಿಯಲ್ಲಿ ಆರಂಭಗೊಂಡಿತು.

ಹೊಸಾಳ ಭಾಗದ ಹೆಚ್ಚಿನ ವಿದ್ಯಾರ್ಥಿ ಗಳ ಕಲಿಕೆಯ ಅನುಕೂಲತೆಯ ದೃಷ್ಟಿ ಯಿಂದ ಈ ಶಾಲೆಯು ನಾಗರಮಠದಿಂದ ಧೂಮ ಪೂಜಾರಿ ಹಾಡಿಮನೆ ಹೊಸಾಳ ಅವರ ಮನೆಯ ಜಗಲಿಗೆ ಸ್ಥಳಾಂತರ ಗೊಂಡಿತು. ನಂತರದ ದಿನಗಳಲ್ಲಿ ಹೊಸಾಳದ ಶಿಕ್ಷಣ ಪ್ರೇಮಿ ದಿ. ಕೆ. ಯಜ್ಞನಾರಾಯಣ ರಾವ್‌ ಅವರು ಬಂಡಾರಕೇರಿ ಮಠದಿಂದ ಸ್ಥಳಾವಕಾಶ ಪಡೆದು ಸ್ವಂತ ಶಾಲಾ ಕಟ್ಟಡ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದರು.

ಶಾಲಾ ಪ್ರಾರಂಭದ ದಿನಗಳು
ಪ್ರಾರಂಭದ ದಿನಗಳಲ್ಲಿ ಮಂಜುನಾಥ ನಾಯಕ್‌ ಅವರು ಏಕೋಪಾಧ್ಯಾಯರಾಗಿದ್ದರು ಎನ್ನಲಾಗಿದೆ. ಶಾಲೆ ಒಂದು ಕಾಲದಲ್ಲಿ ಸುಮಾರು 600 ವಿದ್ಯಾರ್ಥಿಗಳವರೆಗೂ ದಾಖಲಾತಿಯನ್ನು ಹೊಂದಿತ್ತು. ಶಾಲಾ ಪ್ರಾರಂಭದ ದಿನಗಳಲ್ಲಿ ಹೊಸಾಳ, ನಾಗರಮಠ, ಚಂಡೆ, ಹೇರಾಡಿ, ಸಂಕಾಡಿ, ಮಸ್ಕಿಬೈಲು, ಚೌಳಿಕೆರೆ, ಬಾೖರ್‌ಬೆಟ್ಟು ಮತ್ತು ಬಾಕೂìರು ಪ್ರದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಈಗ ಈ ವ್ಯಾಪ್ತಿಯಲ್ಲಿ 4 ಶಾಲೆಗಳಿವೆ.

ಪ್ರಸ್ತುತ 44 ವಿದ್ಯಾರ್ಥಿಗಳ ವ್ಯಾಸಂಗ
ಪ್ರಸ್ತುತ ಶಾಲೆಯಲ್ಲಿ 44 ವಿದ್ಯಾರ್ಥಿಗಳಿದ್ದು, 4 ಜನ ಖಾಯಂ ಶಿಕ್ಷಕರು ಮತ್ತು ಒಬ್ಬರು ಗೌರವ ಶಿಕ್ಷಕಿ ಸೇವೆ ಸಲ್ಲಿಸುತ್ತಿದ್ದಾರೆ ಇನೆ³„ಯರ್‌ ಅವಾರ್ಡ್‌ನಲ್ಲಿ ರಾಜ್ಯ ಮಟ್ಟ, ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

Advertisement

ಕೊಡುಗೆ
ಭಂಡಾರಕೇರಿ ಮಠದವರು 1.15 ಎಕ್ರೆ ಸ್ಥಳ ಶಾಲೆಗೆ ದಾನವಾಗಿ ನೀಡಿದ್ದು, ದಿ. ಆದಪ್ಪ ಶೆಟ್ಟಿ ಅವರು 0.20 ಎಕ್ರೆ ಸ್ಥಳ ದಾನ ನೀಡಿರುತ್ತಾರೆ. ಸರ್ಕಾರದಿಂದ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಆಟದ ಮೈದಾನಕ್ಕೆ 0.75 ಎಕ್ರೆ ಸ್ಥಳ ಮಂಜೂರಾಗಿದೆ. ಗ್ರಾಮೀಣ ಭಾಗದ ಶಾಲೆಯಾದರೂ ಉತ್ತಮ ಮೂಲಭೂತ ಸೌಕರ್ಯ ಹೊಂದಿದೆ. ವಿದ್ಯಾರ್ಥಿಗಳಿಗೆ ಶಾಲಾವನ, ಸುಸಜ್ಜಿತ ಶೌಚಾಲಯ, ಅತ್ಯುತ್ತಮ ಕ್ರೀಡಾಂಗಣ, ರಂಗಮಂದಿರ, 3000ಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ, 6 ಕಂಪ್ಯೂಟರ್‌ಗಳನ್ನು ಹೊಂದಿದ ಕಂಪ್ಯೂಟರ್‌ ಶಿಕ್ಷಣ, ವಿದ್ಯಾರ್ಥಿಗಳ ಕ್ರೀಡೆಗಾಗಿ ಬಾಲವನ, ಸ್ಮಾರ್ಟ್‌ ಕ್ಲಾಸ್‌ ರೂಂ, ಹೂದೋಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳು ಇಲ್ಲಿವೆ.

ವಿವಿಧ ಪ್ರಶಸ್ತಿಗಳು
2018-19ರಲ್ಲಿ ಶಾಲಾವನ, ಹಳ್ಳಿ ಔಷಧಿ ಗಿಡಗಳ ತೋಟ, ತರಕಾರಿ ತೋಟ ರಚನೆಗಾಗಿ ಕಿತ್ತಳೆ ಶಾಲೆ ಪ್ರಶಸ್ತಿ, ಜಿಲ್ಲಾ ಮಟ್ಟದ ಅತ್ಯುತ್ತಮ ಹಳೆ ವಿದ್ಯಾರ್ಥಿ ಸಂಘ ಪ್ರಶಸ್ತಿ ದೊರೆತಿದೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಶಿಕ್ಷಕರು ಜನಮೆಚ್ಚಿದ ಶಿಕ್ಷಕ, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ನಿವೃತ್ತ ಶಿಕ್ಷಕ ವಾಸುದೇವ ಕಾಮತ್‌ ನಾಗರಮಠ ಅವರು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಯಾಗಿ ತದನಂತರ ಸರ್ಕಾರಿ ವೈದ್ಯಾಧಿಕಾರಿಯಾಗಿ 32 ವರ್ಷಗಳ ಕಾಲ ಸುದೀರ್ಘ‌ ಸೇವೆ ಸಲ್ಲಿಸಲು ಈ ಸಂಸ್ಥೆಯ ಗುರುಗಳು ನೀಡಿದ ಶಿಕ್ಷಣ ಹಾಗೂ ಮಾಡಿದ ಆಶೀರ್ವಾದವೇ ಕಾರಣ.
– ಡಾ| ಅಪ್ಪು ಸೇರ್ವೆಗಾರ್‌, (ಹಳೆ ವಿದ್ಯಾರ್ಥಿ)

ಶ‌ತಮಾನೋತ್ಸವ ಕಂಡ ಹೊಸಾಳ ಸ.ಹಿ.ಪ್ರಾ. ಶಾಲೆ ಯನ್ನು ಉಳಿಸುವ ನಿಟ್ಟಿನಲ್ಲಿ ಊರ ಪರ ಊರ ದಾನಿಗಳು, ಹಳೆ ವಿದ್ಯಾರ್ಥಿಗಳು, ಎಸ್‌.ಡಿ.ಎಂ.ಸಿ., ಪೋಷಕರು, ಶಿಕ್ಷಕರ ಶ್ರಮ ಅಮೂಲ್ಯವಾದದ್ದು. ವರ್ಷಂಪ್ರತಿ ಹಳೆ ವಿದ್ಯಾರ್ಥಿಗಳ ಜತೆ ಸ್ನೇಹ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗುತ್ತಿದೆ.
– ಶ್ಯಾಮಸುಂದರ್‌ ಶೆಟ್ಟಿ ಎನ್‌. ಪ್ರಭಾರ ಮುಖ್ಯೋಪಾಧ್ಯಾಯರು

-ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next