Advertisement

ಭರವಸೆಗೆ ಬಗ್ಗದೆ ಹೋರಾಟ; ಸಿಎಂ ಸ್ಥಳಕ್ಕೆ ಬರುವಂತೆ ಪಟ್ಟು

03:50 AM Mar 22, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ 2ನೇ ದಿನವಾದ ಮಂಗಳವಾರ ರಾತ್ರಿಯೂ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಕೆ ಬಗ್ಗೆ ತತ್‌ಕ್ಷಣದ ಆದೇಶ ಹೊರಡಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.

Advertisement

ಬೇಸಗೆಯ ಬಿರು ಬಿಸಿಲು ಲೆಕ್ಕಿಸದೆ ಪುಟ್ಟ ಮಕ್ಕಳ ಜತೆ ಸ್ವಾತಂತ್ರ ಉದ್ಯಾನವನ ಹಾಗೂ ಸುತ್ತಮುತ್ತಲ ರಸ್ತೆ ಮಧ್ಯೆಯೆ ಸಾವಿರಾರು ಮಂದಿ ಸರಕಾರದ ಮನವಿಗೂ ಜಗ್ಗದೆ ಹೋರಾಟ ಮುಂದುವರಿಸಿದ್ದಾರೆ. ವೇತನ ಹೆಚ್ಚಿಸಿ, ಇಲ್ಲವೇ ಲಾಠಿ ಚಾರ್ಜ್‌ ಮಾಡಿಸಿ ಜೈಲಿಗೆ ಕಳುಹಿಸಿ ಎಂದು ಅವರು ಸರಕಾರಕ್ಕೆ ಸವಾಲು ಹಾಕಿದ್ದಾರೆ. ಕನಿಷ್ಠ 10 ಸಾವಿರ ರೂ. ವೇತನ ನಿಗದಿ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.

ಸೋಮವಾರ ಬೆಳಗ್ಗೆಯಿಂದ ಆರಂಭಗೊಂಡ ಪ್ರತಿಭಟನೆ, ಧರಣಿ ಹಗಲು-ರಾತ್ರಿ ಮುಂದುವರಿ ದಿರುವುದರಿಂದ ಊಟ, ತಿಂಡಿ, ನೀರು ಇಲ್ಲದೆ ಪರದಾಡುತ್ತಿರುವುದು ಹಾಗೂ ನಿತ್ಯಕರ್ಮಕ್ಕೂ ವ್ಯವಸ್ಥೆ ಇಲ್ಲದೆ ಬಯಲು ಆಶ್ರಯಿಸಿರುವ ಶೋಚನೀಯ ಸ್ಥಿತಿಯಲ್ಲಿರುವುದು ಮನಕಲಕು ವಂತಿತ್ತು. ಸಾರ್ವಜನಿಕ,  ಸಾಮಾಜಿಕ ಜಾಲತಾಣದಲ್ಲೂ ಅಂಗನವಾಡಿ ಕಾರ್ಯಕರ್ತೆ ಯರ ಧರಣಿ ಹಾಗೂ ಸರಕಾರದ ನಿರ್ಲಕ್ಷ್ಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮತ್ತೂಂದೆಡೆ ಉಭಯ ಸದನಗಳಲ್ಲೂ ಪ್ರತಿಧ್ವನಿಸಿ, ವಿಪಕ್ಷಗಳು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು ಈಡೇರಿಸುವಂತೆ ಪಟ್ಟು ಹಿಡಿದವು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ವಾಕ್ಸಮರವೂ ನಡೆಯಿತು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಗಳ ಬಗ್ಗೆ ಸರಕಾರವು ಮುಕ್ತ ಮನಸ್ಸಿನಿಂದ ಇದ್ದು ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿ, ನಿಡುಮಾಮಿಡಿ ಮಠದ ವೀರಭದ್ರಚೆನ್ನಮಲ್ಲ ಸ್ವಾಮೀಜಿ ಸಮ್ಮುಖದಲ್ಲಿ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸಿ ಎ. 19ರಂದು ಸಭೆ ನಡೆಸುವುದಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ.

Advertisement

ಮುಖ್ಯಮಂತ್ರಿಯವರು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡ ಮಾರುತಿ ಮಾನ್ಪಡೆ, ಬೇಡಿಕೆ ಈಡೇರಿಕೆಗೆ ಭರವಸೆ ದೊರೆತಿರುವುದರಿಂದ ಪ್ರತಿಭಟನೆ ವಾಪಸ್‌ ಪಡೆದಿರುವುದಾಗಿ ಘೋಷಿಸಿದರು. ಆದರೆ ಸಭೆಯಲ್ಲಿ ಭಾಗವಹಿಸಿದ್ದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮೀ, ಉಪ ಚುನಾವಣೆ ಅನಂತರ ನಮ್ಮ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಬೇಡಿಕೆ‌ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. ಹಗಲಿರುಳು ಪ್ರತಿಭಟನೆ, ಧರಣಿ ಮುಂದುವರಿಯುತ್ತದೆ. ಯುಗಾದಿ ಹಬ್ಬವನ್ನೂ ಇಲ್ಲೇ ಆಚರಿಸುತ್ತೇವೆ ಎಂದು ಪ್ರಕಟಿಸಿದರು. ಪ್ರತಿ ಬಾರಿ ಪ್ರತಿಭಟನೆ ಮಾಡಿದಾಗಲೂ ಕೆಲವೇ ರೂ.ಗಳ ಗೌರವ ಧನ ಹೆಚ್ಚಳ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ಬಾಯಿ ಮುಚ್ಚಿಸಲಾಗುತ್ತಿದೆ. ಕಳೆದ 26 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರ ಬೇಡಿಕೆಗಳ ಈಡೇರಿಕೆಗೆ ಒಪ್ಪುತ್ತಿಲ್ಲ. ಈ ಬಾರಿ ವೇತನ ಹೆಚ್ಚಳ ಮಾಡಿ ಸೇವಾ ನಿಯಮ ಸರಳಗೊಳಿಸಬೇಕು. ಅಲ್ಲಿಯವರೆಗೆ ಹೋರಾಟ ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವ ಸಿ.ಟಿ. ರವಿ, ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯರಾದ ವಿ.ಎಸ್‌. ಉಗ್ರಪ್ಪ, ಜಯಮಾಲಾ ಹಾಗೂ ಆಮ್‌ ಆದ್ಮಿ ಪಕ್ಷದ ನಾಯಕರು ಸಹಿತ ಹಲವಾರು ನಾಯಕರು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನನಿರತರ ಜತೆ ಚರ್ಚಿಸಿದರು.

ವಿಪಕ್ಷ ಬಿಜೆಪಿ ಐದು ವರ್ಷ ಅಧಿಕಾರ ನಡೆಸಿ ಕೇವಲ 700 ರೂ. ವೇತನ ಹೆಚ್ಚಿಸಿತ್ತು. ನಮ್ಮ ಸರಕಾರ ಪ್ರತಿವರ್ಷ 500 ರೂ.ನಂತೆ 4 ವರ್ಷಗಳಲ್ಲಿ 2,000 ರೂ. ವೇತನ ಹೆಚ್ಚಿಸಿದೆ. ಈ ವರ್ಷ ಒಂದು ಸಾವಿರ ರೂ. ಹೆಚ್ಚಿಸಿದೆ. ಕೇಂದ್ರ ಸರಕಾರ ಮೊದಲು ಶೇ.90ರಷ್ಟು ಅನುದಾನ ಕೊಡುತ್ತಿತ್ತು. ಈಗ ಶೇ.40ಕ್ಕೆ ಇಳಿಸಿದೆ. ಹೀಗಾಗಿ, ರಾಜ್ಯ ಸರಕಾರಕ್ಕೆ ಹೊರೆಯಾಗಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next