Advertisement

ಹುತಾತ್ಮ ಯೋಧನಿಗೆ ಗೌರವಪೂರ್ವಕ ವಿದಾಯ

06:23 AM Feb 17, 2019 | |

ಬೆಂಗಳೂರು: “ವೀರಯೋಧ ಗುರು ಅಮರ್‌ ರಹೇ… ಅಮರ್‌ ರಹೇ… ಹುತಾತ್ಮ ಯೋಧ ಗುರುಗೆ ಜಿಂದಾಬಾದ್‌.’ ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿ ಕಟ್ಟಡಗಳ ಮೇಲೆ ನಿಂತವರು ವಾಹನ ಸವಾರರು ಶನಿವಾರ ಒಕ್ಕೊರಲಿನಿಂದ ಮೊಳಗಿಸಿದ ಘೋಷಣೆಗಳಿವು.

Advertisement

ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಪಾರ್ಥೀವ ಶರೀರವನ್ನು ಶನಿವಾರ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ರಸ್ತೆ ಮಾರ್ಗವಾಗಿ ಹುಟ್ಟೂರಿಗೆ ಕೊಂಡೊಯ್ಯುವಾಗ ರಾಜಧಾನಿಯಲ್ಲಿ ಗೌರವಪೂರ್ವಕ ವಿದಾಯ ದೊರೆಯಿತು.

ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಸೇನಾ ವಾಹನದಲ್ಲಿ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯುವ ವೇಳೆ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಪಾರ್ಥೀವ ಶರೀರ ಹೊತ್ತ ಸೇನಾ ವಾಹನ ತೆರಳುತ್ತಿದ್ದಾಗ ರಸ್ತೆಗಳ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಮಂದಿ, ಸೆಲ್ಯೂಟ್‌ ಹೊಡೆದು, ಕೈ ಮುಗಿದು, ಘೋಷಣೆ ಕೂಗುವ ಮೂಲಕ ಗೌರವ ಸೂಚಿಸಿದರು.

ಅಪಾರ್ಟ್‌ಮೆಂಟ್‌ಗಳು, ಕಂಪನಿ ಕಟ್ಟಡಗಳ ಮೇಲೆ ನಿಂತ ಸಾವಿರಾರು ಮಂದಿ ದೂರದಿಂದಲೇ ಸೆಲ್ಯೂಟ್‌ ಮೂಲಕ ಗೌರವ ಸೂಚಿಸುತ್ತಿದ್ದರು. ಮಾರ್ಗದ ಉದ್ದಕ್ಕೂ ಒಕ್ಕೊರಲ ಮೂಲಕ ಯೋಧ ಗುರು ಅಮರ್‌ರಹೇ ಎಂದು ಘೋಷಣೆ ಮೊಳಗಿಸಿದರು. ಗೌರವ ಸಲ್ಲಿಸುವಾಗ ಪ್ರತಿಯೊಬ್ಬರ ಕಣ್ಣಾಲಿಗಳು ತೇವಗೊಂಡಿದ್ದವು.

ಸೇನಾ ವಾಹನ ಸಾಗಿದಂತೆಲ್ಲ ಹಲವರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಹುತಾತ್ಮ ಯೋಧನಿಗೆ ಗೌರವಪೂರ್ವಕವಾಗಿ ವಿದಾಯ ಹೇಳಿದರು. ಟೌನ್‌ಹಾಲ್‌ ಮುಂಭಾಗ ಸೇನಾ ವಾಹನ ಬಂದಾಗ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ, ಪಾಲಿಕೆ ಅಧಿಕಾರಿಗಳು, ನೂರಾರು ಮಂದಿ ಗೌರವಸೂಚಿಸಿದರು. ಕೆಲ ಕ್ಷಣ ನಿಲ್ಲಿಸಿದ ಸೇನಾವಾಹನ ಸಾರ್ವಜನಿಕರ ಗೌರವ ಸ್ವೀಕರಿಸಿ ತೆರಳಿತು.

Advertisement

ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಿಂದ ಹೊರಟ ಸೇನಾವಾಹನ ಎಂಜಿ ರಸ್ತೆ, ಟೌನ್‌ಹಾಲ್‌ ಮೂಲಕ ಸಾಗಿ ಮೈಸೂರು ರಸ್ತೆ ಮಾರ್ಗವಾಗಿ ಮಂಡ್ಯದ ಕಡೆ ಸಾಗಿತು. ಮಾರ್ಗದ ಉದ್ದಕ್ಕೂ ಅಪಾರ ಸಂಖ್ಯೆಯ ಜನರು ಯೋಧಗುರುವಿನ ಪಾರ್ಥೀವ ಶರೀರಕ್ಕೆ ದೂರದಿಂದಲೇ ನಮಿಸಿ ಗೌರವ ಸೂಚಿಸಿದರು. ಮಂಡ್ಯ ತಲುಪುವ ತನಕ ವೀರಯೋಧನಿಗೆ  ಗೌರವ ವಂದನೆ ದೊರೆಯಿತು.

ಮೃತ ಯೋಧನ ಪಾರ್ಥಿವ ಶರೀರ ಬೆಂಗಳೂರಿನಿಂದ ಹುಟ್ಟೂರಿಗೆ ರವಾನೆ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸೇನಾ ಹೆಲಿಕಾಪ್ಟರ್‌ಗಾಗಿ ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದರು. ಆದರೆ, ಲಭ್ಯತೆ ಇಲ್ಲದ ಕಾರಣ ಸಿಗಲಿಲ್ಲ ಎಂದು ಹೇಳಲಾಗಿದೆ.

ಗಣ್ಯರಿಂದ ಅಂತಿಮ ಗೌರವ: ಶನಿವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಸೇನಾ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಹುತಾತ್ಮ ಯೋಧ ಗುರು ಪಾರ್ಥೀವ ಶರೀರವನ್ನು ತರಲಾಯಿತು.

ಎಚ್‌ಎಎಲ್‌ನಲ್ಲಿ ಸಿಎಂ ಕುಮಾರಸ್ವಾಮಿ, ಗೃಹ ಸಚಿವ ಎಂ.ಬಿ.ಪಾಟೀಲ್‌, ಸಂಸದರಾದ ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌, ಪಿ.ಸಿ.ಮೋಹನ್‌, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧ ಗುರುಗೆ ಅಂತಿಮ ನಮನ ಸಲ್ಲಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌, ಸೇನಾ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next