Advertisement

ಜನರ ಸಮಸ್ಯೆ ಬಗೆಹರಿಸಿ

01:20 PM May 16, 2019 | Naveen |

ಹೊನ್ನಾಳಿ: ಕಳೆದ 2 ತಿಂಗಳಿನಿಂದಲೂ ರಾಜಕಾರಣಿಗಳು ಹಾಗೂ ಸರ್ಕಾರಗಳು ಬರಗಾಲ ಹಾಗೂ ಕುಡಿಯುವ ನೀರಿನ ತೊಂದರೆಗಳ ಬಗ್ಗೆ ಗಮನಹರಿಸದೆ ಚುನಾವಣೆ, ನೀತಿ ಸಂಹಿತೆ, ಫಲಿತಾಂಶ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಅಖಂಡ ಕರ್ನಾಟ ರೈತ ಸಂಘದ ರಾಜ್ಯಾಧ್ಯಕ್ಷ ಸೋಮನಗುದ್ದು ರಂಗಸ್ವಾಮಿ ಹೇಳಿದರು.

Advertisement

ಗುರುಭವನದಲ್ಲಿ ಬುಧವಾರ ತಾಲೂಕು ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ ವತಿಯಿಂದ ಹಮ್ಮಿಕೊಂಡಿದ್ದ 37ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬರುವ ದಿನಗಳಲ್ಲಾದರೂ ಆಳುವ ಜನಪ್ರತಿನಿಧಿಗಳು ಕಾಲಹರಣ ಮಾಡದೆ ನೀರಿನ ಬವಣೆಯನ್ನು ನಿವಾರಿಸಲು ಮುಂದಾಗಬೇಕು. ಸಾಲಮನ್ನಾ ಯೋಜನೆಯಡಿ ಜಿಲ್ಲೆಜಿಲ್ಲೆಗೆ ಇರುವ ತಾರತಮ್ಯ ಹೋಗಲಾಡಿಸಿ ಸಣ್ಣ, ದೊಡ್ಡ ರೈತರೆನ್ನದೆ, ಜಾತಿ ಮತಗಳೆನ್ನದೇ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಳ್ಳಿ ನಾಗರಾಜಪ್ಪ ಮಾತನಾಡಿ, ಮಳೆ ಬಿದ್ದ ತಕ್ಷಣ ರೈತರಿಗೆ ಗುಣವåಟ್ಟದ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು. ಬಗರ್‌ ಹುಕುಂ ಸಮಿತಿ ರಚನೆಯಾಗಬೇಕು. ತಾಲೂಕಿನ ಸರ್ವೆ ಇಲಾಖೆಯಲ್ಲಿನ ಕಾರ್ಯಗಳು ಮಂದ ಗತಿಯಲ್ಲಿ ಸಾಗಿದ್ದು, ರೈತರು ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದರು.

ಹಾಲಿಗೆ ನೀಡುವ ಪ್ರೋತ್ಸಾಹ ಧ‌ನವನ್ನು 6 ರೂ.ಗಳಿಂದ 10 ರೂ.ಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

Advertisement

ಸಂಘದ ನ್ಯಾಮತಿ ತಾಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶ ಮಾತನಾಡಿ, ನ್ಯಾಮತಿ ತಾಲೂಕಿನ ವ್ಯಾಪ್ತಿಯಲ್ಲಿರುವ ಸುಮಾರು 50 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಮುಂದಾಗಬೇಕು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಮಾತನಾಡಿ, ಸರ್ಕಾರಿ ಅಧಿಕಾರಿಗಳು ರೈತರನ್ನು ಗುಲಾಮರಂತೆ ಕಾಣುತ್ತಿದ್ದು. ಇದನ್ನು ವಿರೋಧಿಸಲು ರೈತ ಸಂಘಟನೆ ಬಲಗೊಳ್ಳಬೇಕು. ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗುವ ಸರ್ಕಾರಗಳು ರೈತರನ್ನು ಸಾವಿನ ದವಡೆಗೆ ದೂಡುತ್ತಿವೆ. ರೈತರ ಪರ ಕೆಲಸಗಳಿಗೆ ಕೇಂದ್ರ ಸರ್ಕಾರವು ರಾಜ್ಯದತ್ತ ಹಾಗೂ ರಾಜ್ಯ ಸರ್ಕಾರವು ಕೇಂದ್ರದತ್ತ ಬೆರಳು ತೋರಿಸುವ ಪ್ರವೃತ್ತಿ ಕೊನೆಗೊಳ್ಳಬೇಕೆಂದು ಒತ್ತ್ತಾಯಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮುನ್ನ ಕಡದಕಟ್ಟೆ ವೃತ್ತದಲ್ಲಿರುವ ಎಚ್.ಎಸ್‌. ರುದ್ರಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೈತ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರೈತ ಮುಖಂಡರಾದ ಹಾವೇರಿ ಪ್ರಕಾಶ ಬಾರ್ಕಿ, ಹಿರೇಕೆರೂರು ಬಸವನಗೌಡ, ಹೊಸಜೋಗ ಮುರುಗೇಶಪ್ಪ, ಸುಂಕದಕಟ್ಟೆ ಕರಿಬಸಪ್ಪ, ನೀಲಕಂಠ ರಾಯ್ಕರ, ಗೋಪಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಮುಖ್ಯಮಂತ್ರಿಗಳು ಈಗಾಗಲೇ ಮತದಾನ ಮುಗಿದು ಮತಯಂತ್ರದಲ್ಲಿ ಮತಗಳು ಭದ್ರವಾಗಿದ್ದನ್ನು ತಿಳಿದಿದ್ದರೂ ಮಗನ ಗೆಲುವಿಗೆ ದೇವರ ಮೊರೆ ಹೋಗುತ್ತಿದ್ದಾರೆ. ದೇವರು ಮತಪೆಟ್ಟಿಗೆಯಲ್ಲಿರುವ ಮತವನ್ನು ಬದಲಿಸಲು ಸಾಧ್ಯವೇ?
ಸೋಮನಗುದ್ದು ರಂಗಸ್ವಾಮಿ,
ರಾಜ್ಯಾಧ್ಯಕ್ಷ, ರೈತ ಸಂಘ

Advertisement

Udayavani is now on Telegram. Click here to join our channel and stay updated with the latest news.

Next