Advertisement

ಗ್ರಾಪಂ ಕಚೇರಿಗೆ ಬೀಗ-ಪ್ರತಿಭಟನೆ

09:58 AM May 16, 2019 | Naveen |

ಹೊನ್ನಾಳಿ: ಪಟ್ಟಣದಿಂದ ಕೇವಲ 3 ಕಿ.ಮೀ. ದೂರದ ತುಂಗಾ ಮೇಲ್ದಂಡೆ ಯೋಜನೆ ಬಳಿ ಇರುವ ಎಚ್.ಕಡದಕಟ್ಟೆ ಹ್ಯಾಂಡ್‌ ಪೋಸ್ಟ್‌ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಳೆದ ಎರಡು ತಿಂಗಳಿನಿಂದ ಸಮಸ್ಯೆ ಇದ್ದು, ಸಮಸ್ಯೆ ತೀವ್ರಗೊಂಡ ಪ್ರಯುಕ್ತ ಬುಧವಾರ ಗ್ರಾಮಸ್ಥರು ಗ್ರಾ.ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಗ್ರಾಮದಲ್ಲಿನ ಎರಡು ಕೊಳವೆ ಬಾವಿಗಳ ನೀರು ಬತ್ತಿ ಹೋದ ಕಾರಣ ಗ್ರಾಪಂ ವತಿಯಿಂದ ಇತರೆಡೆಯ ಕೊಳವೆ ಬಾವಿಗಳಿಂದ ಟ್ಯಾಂಕರ್‌ ಮೂಲಕ ನೀರು ತಂದು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ಮೂಲಕ ಸರಬರಾಜು ಮಾಡುವ ನೀರು ಸಾಕಾಗುವುದಿಲ್ಲ, ಸರಿಯಾದ ಸಮಯಕ್ಕೆ ನೀರು ಸರಬರಾಜು ಮಾಡುತ್ತಿಲ್ಲ. ಹಾಗೂ ಅಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಆಗಮಿಸಿದ ಪಿಡಿಒ ರವಿಕುಮಾರ್‌, ಸದ್ಯಕ್ಕೆ ನೀರು ಲಭ್ಯವಿರುವ ಕೊಳವೆ ಬಾವಿಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಪೈಪ್‌ಲೈನ್‌ ಅಳವಡಿಸಿ ಶಾಶ್ವತ ನೀರು ಸರಬರಾಜು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನೆ ವಾಪಸ್‌ ಪಡೆಯಲು ಮನವಿ ಮಾಡಿದರು.

ಪಿಡಿಒ ಮನವಿಗೆ ಜಗ್ಗದ ಪ್ರತಿಭಟನಾಕಾರರು, ಗ್ರಾ.ಪಂ ಅಧ್ಯಕ್ಷರು ಹಾಗೂ ತಾ.ಪಂ ಇಒ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಕೇಳಿ, ಬೇಗನೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದರೆ ಮಾತ್ರ ಪ್ರತಿಭಟನೆ ವಾಪಸ್‌ ಪಡೆಯುವುದಾಗಿ ಸ್ಪಷ್ಟಪಡಿಸಿದರು.

ಎಚ್.ಕಡದಕಟ್ಟೆ ಹ್ಯಾಂಡ್‌ಪೋಸ್ಟ್‌ ಗ್ರಾಮದಲ್ಲಿ ಕೇವಲ ನೂರು ಮನೆಗಳಿದ್ದು ಗ್ರಾಮದಿಂದ ತುಂಗಭದ್ರಾ ನದಿ ಕೇವಲ 4 ಕಿ.ಮೀ. ದೂರದಲ್ಲಿ ಹರಿಯುತ್ತಿದೆ. ಆದರೂ ಗ್ರಾಮಕ್ಕೆ ಶಾಶ್ವತ ನೀರು ಸರಬರಾಜು ವ್ಯವಸ್ಥೆ ಮಾಡಿಲ್ಲ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಗಿದ್ದಾರೆ ನೋಡಿ ಸ್ವಾಮಿ ಎಂದು ಗ್ರಾಮದ ಮುಖಂಡರಾದ ಬಸವರಾಜಪ್ಪ, ಚನ್ನೇಶ್‌ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

ಒಂದು ದಿನಕ್ಕೆ ಇಡೀ ಗ್ರಾಮಕ್ಕೆ ಕೇವಲ 3 ಟ್ಯಾಂಕರ್‌ ನೀರು ಕೊಡುತ್ತಿದ್ದಾರೆ. ಒಂದು ಮನೆಗೆ ಒಂದು ಡ್ರಮ್‌ ನೀರು ಮಾತ್ರ ದೊರೆಯುತ್ತದೆ. ಅದರಲ್ಲೇ ಅಡುಗೆ, ಪಾತ್ರೆ ಹಾಗೂ ಬಟ್ಟೆ ತೊಳೆಯಲು ಸಾಧ್ಯವೇ ಎಂದು ಬಸಮ್ಮ, ಶಾಂತಮ್ಮ, ಆಂಜನೇಯ, ಲೋಕೇಶ್‌ ಪ್ರಶ್ನಿಸಿದರು.

ಗ್ರಾಮದವರೆಲ್ಲಾ ಕೂಲಿ ಮಾಡಲು ಹೋದಾಗ ಮಧ್ಯಾಹ್ನ ನೀರಿನ ಟ್ಯಾಂಕರ್‌ ಬರುತ್ತದೆ. ಆ ಸಮಯದಲ್ಲಿ ನೀರನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕು. ಟ್ಯಾಂಕರ್‌ ನೀರು ಕುಡಿದು ಹಲವು ಜನರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ರೇಣುಕಪ್ಪ ನೊಂದು ನುಡಿದರು.

ಸಂಜೆ 4.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ತಾ.ಪಂ ಇಒ ರಾಘವೇಂದ್ರ ಸಮಸ್ಯೆ ಆಲಿಸಿ, ಸದ್ಯಕ್ಕೆ ಬೇಡಿಕೆಗನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಂಕರ್‌ ನೀರು ಪೂರೈಸಲಾಗುವುದು. ಮುಂದಿನ ನಾಲ್ಕು ದಿನಗಳಲ್ಲಿ ಹೊಸದಾಗಿ ಕೊಳವೆ ಬಾವಿ ತೋಡಿಸಿ ನೀರು ಸರಬರಾಜು ಮಾಡಲಾಗುವುದು. ಗ್ರಾಮದ ಸುತ್ತಮುತ್ತ ಇರುವ ತೋಟ ಹಾಗೂ ಇತರ ಕೊಳವೆ ಬಾವಿಗಳ ಮಾಲೀಕರು ನೀರು ಕೊಟ್ಟರೆ ತಿಂಗಳಿಗೆ ರೂ.10 ಸಾವಿರ ಪಾವತಿಸಿ ಜನರಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು. ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದರು. ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಮಾದಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next