Advertisement

ಹನಿಟ್ರ್ಯಾಪ್‌: 6 ಮಂದಿ ಬಂಧನ; ನಾಲ್ವರಿಗೆ ಶೋಧ

01:15 AM Sep 28, 2019 | mahesh |

ಮಡಿಕೇರಿ: ಯುವತಿಯನ್ನು ಬಳಸಿ ಓರ್ವರನ್ನು ಹನಿಟ್ರ್ಯಾಪ್‌ ಸಂಚಿನಲ್ಲಿ ಸಿಲುಕಿಸಿ, 3.80 ಲ.ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ. ನಾಪೋಕ್ಲುವಿನ ಮಹಮ್ಮದ್‌ ಅಜರುದ್ದೀನ್‌(24), ಅಬೂಬಕರ್‌ ಸಿದ್ದಿಕ್‌ (33), ಹಸೇನರ್‌ ಅಲಿಯಾಸ್‌ ಅಚ್ಚು (27), ಇರ್ಷಾದ್‌ ಅಲಿ(27), ಎ.ಎ.ಸಮೀರ್‌(28) ಹಾಗೂ ಓರ್ವ ಕಾಲೇಜು ವಿದ್ಯಾರ್ಥಿನಿ ಬಂಧಿತರು. ಇವರಿಂದ 1 ಲ.ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಪ್ರಕರಣದಲ್ಲಿ ಒಟ್ಟು 10 ಮಂದಿ ಶಾಮೀಲಾಗಿದ್ದು, ಪ್ರಮುಖ ಆರೋಪಿ ಸಹಿತ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಡಾ| ಸುಮನಾ ಡಿ. ಪನ್ನೇಕರ್‌ ತಿಳಿಸಿದ್ದಾರೆ.

ಪ್ರಕರಣದ ವಿವರ
ದುಬೈಯಲ್ಲಿದ್ದ ಎಮ್ಮೆಮಾಡು ನಿವಾಸಿ ಗಫ‌ೂರ್‌ ಆಗಸ್ಟ್‌ ತಿಂಗಳಲ್ಲಿ ಊರಿಗೆ ಬಂದಿದ್ದರು. ಹೊಸ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದ ಅವರಲ್ಲಿ ಹಣ ಇರುವ ಬಗ್ಗೆ ಮಾಹಿತಿ ಪಡೆದ ಎಮ್ಮೆಮಾಡು ನಿವಾಸಿ ಕರೀಂ ಎಂಬಾತ ಸ್ಥಳೀಯ ಯುವಕರೊಂದಿಗೆ ಸೇರಿ ಹಣವನ್ನು ಲಪಟಾಯಿಸಲು ಸಂಚು ಹೂಡಿದ್ದ. ಅದರಂತೆ ಆ. 16ರಂದು ಗಫ‌ೂರ್‌ನನ್ನು ಕರೆದುಕೊಂಡು ಮನೆ ಬಳಕೆಯ ಎಲೆಕ್ಟ್ರಿಕಲ್‌ ವಸ್ತು ಖರೀದಿಸಲೆಂದು ಉಪಾಯದಿಂದ ಮೈಸೂರಿಗೆ ಹೊರಟಿದ್ದರು. ಅದರಂತೆ ಕರೀಂ ಮತ್ತು ಅಜರುದ್ದೀನ್‌ ಅವರು ಗಫ‌ೂರ್‌ ಜತೆಯಲ್ಲಿ ಮೈಸೂರಿಗೆ ತೆರಳುತ್ತಿದ್ದಾಗ ಮೊದಲೇ ಸಂಚು ರೂಪಿಸಿದಂತೆ ಕುಶಾಲ ನಗರದಿಂದ ಕಾಲೇಜು ವಿದ್ಯಾರ್ಥಿನಿಯನ್ನು ಸೇರಿಸಿಕೊಂಡರು.

ಮೈಸೂರಿನಲ್ಲಿ ಸುಲಿಗೆ
ಮೈಸೂರಿನಲ್ಲಿ ರಾತ್ರಿ ವಿಶ್ರಾಂತಿ ಪಡೆಯಲೆಂದು ಅಲ್ಲಿನ ರಿಂಗ್‌ ರೋಡ್‌ನ‌ ಹೋಂ ಸ್ಟೇಯೊಂದಕ್ಕೆ ಯುವತಿ ಮತ್ತು ಗಫ‌ೂರ್‌ನನ್ನು ಕರೆದೊಯ್ಯಲಾಗಿತ್ತು. ಅಲ್ಲಿ ಆರೋಪಿಗಳು ಗಫ‌ೂರ್‌ಗೆ ಅಮಲು ಪದಾರ್ಥ ನೀಡಿದ್ದರು.  ಬಳಿಕ ಆರೋಪಿಗಳು ವ್ಯವಸ್ಥಿತವಾಗಿ ಗಫ‌ೂರ್‌ ಮತ್ತು ಯುವತಿಯ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ತೆಗೆದುಕೊಂಡಿದ್ದಾರೆ. ಗಫ‌ೂರ್‌ನಲ್ಲಿದ್ದ 60 ಸಾ.ರೂ., 55 ಸಾ. ಮುಖ ಬೆಲೆಯ ಫಾರಿನ್‌ ಕರೆನ್ಸಿ ಹಾಗೂ ಎಟಿಎಂ ಕಾರ್ಡನ್ನು ಕಸಿದುಕೊಂಡಿದ್ದಾರೆ. ಅಲ್ಲದೆ ಕೂಡಲೇ 50 ಲ.ರೂ. ಗಳನ್ನು ನೀಡದಿದ್ದಲ್ಲಿ ಫೋಟೋ ಮತ್ತು ವೀಡಿಯೋಗಳನ್ನು ಟಿವಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದರು. ಆತಂಕಗೊಂಡ ಗಫ‌ೂರ್‌ ಹೊಂದಿಸಿಕೊಂಡು 3.80 ಲ.ರೂ. ಗಳನ್ನು ಆರೋಪಿಗಳಿಗೆ ನೀಡಿದ್ದು, ಬಳಿಕ ಆರೋಪಿಗಳು ಅವರನ್ನು ಬಿಟ್ಟು ಕಳುಹಿಸಿದ್ದರು.

ಪೊಲೀಸರಿಗೆ ಗುಂಡು ಹಾರಿಸಿ ಪರಾರಿಯಾದ ಆರೋಪಿ
ಪ್ರಕರಣದ ಬಯಲಾಗುತ್ತಿದ್ದಂತೆಯೇ ಪ್ರಮುಖ ಆರೋಪಿ ಕರೀಂನನ್ನು ಬಂಧಿಸಲು ಜಿಲ್ಲಾ ಅಪರಾಧ ಪತ್ತೆ ದಳದ ಸಹಾಯಕ ನಿರೀಕ್ಷಕ ಮತ್ತು ಇತರ ನಾಲ್ವರು ಸಿಬಂದಿ ಆತನ ಮನೆಗೆ ತೆರಳಿದ್ದರು. ಕೂಡಲೇ ಕರೀಂ ಮನೆಯೊಳಗಿದ್ದ ಬಂದೂಕಿನಿಂದ ಪೊಲೀಸರ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದು, ಎಸ್‌ಐ ಹಮೀದ್‌ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಗುಂಡು ಪಕ್ಕದಲ್ಲಿದ್ದ ತಡೆಗೋಡೆಗೆ ತಾಗಿದೆ. ಬಳಿಕ ಕರೀಂ ತನ್ನ ಇಬ್ಬರು ಪತ್ನಿಯರೊಂದಿಗೆ ಪರಾರಿಯಾಗಿದ್ದಾನೆ. ಪೊಲೀಸರಿಗೆ ಗುಂಡು ಹೊಡೆಯುವಂತೆ ಆತನ ಪತ್ನಿಯೇ ಕೋವಿಯನ್ನು ತಂದು ಕೊಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್‌ 353, 307, 325 ಮತ್ತು ಭಾರತೀಯ ಶಸ್ತ್ರಾಸ್ತ್ರ ದುರ್ಬಳಕೆ ಕಾಯಿದೆ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖ ಲಾ ಗಿದೆ. ಇದರಲ್ಲಿ ಕರೀಂ ಮತ್ತು ಆತನ ಇಬ್ಬರು ಪತ್ನಿಯರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಕರೀಂ 2015ರ ಟಿಪ್ಪು ಗಲಭೆಯಲ್ಲೂ ಪ್ರಮುಖ ಆರೋಪಿಯಾಗಿದ್ದು, ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಎಸ್‌ಪಿ ತಿಳಿಸಿದ್ದಾರೆ.

Advertisement

ತಿಂಗಳ ಬಳಿಕ ಪೊಲೀಸರಿಗೆ ಸಿಕ್ಕಿತ್ತು ಮಾಹಿತಿ
ಒಂದು ತಿಂಗಳ ಹಿಂದೆ ಹನಿಟ್ರ್ಯಾಪ್‌ ಪ್ರಕರಣ ನಡೆದಿರುವ ಬಗ್ಗೆ ಜಿಲ್ಲಾ ಅಪ ರಾಧ ಪ್ತತೆದಳಕ್ಕೆ ಖಚಿತ ಮಾಹಿತಿ ದೊರಕಿತ್ತು. ಇದನ್ನು ಆಧರಿಸಿ ತನಿಖೆ ನಡೆಸಿದ ಅಪರಾಧ ಪತ್ತೆ ದಳ ನಾಪೋಕ್ಲುವಿನ ಎಮ್ಮೆಮಾಡು ನಿವಾಸಿ ಗಫ‌ೂರ್‌ ಅವರು ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಬಳಿಕ ಪೊಲೀಸರು ಗಫ‌ೂರ್‌ ಮನವೊಲಿಸಿ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ 10 ಮಂದಿ ವಿರುದ್ಧ ದೂರು ದಾಖಲಿಸಿದ್ದರು. ನಾಪೋಕ್ಲು ಠಾಣೆಯಲ್ಲಿ ಕಲಂ 120(ಬಿ), 328, 384, 395, ಮತ್ತು 149 ಐಪಿಸಿ ಸೆಕ್ಷನ್‌ಗಳಡಿಯಲ್ಲಿ ದೂರು ದಾಖ‌ಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next