Advertisement

ಜೇನು ಒಂದು ಕಹಿ ಕತೆ

05:50 PM Jul 06, 2019 | mahesh |

ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಕಷ್ಟ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ. ಮನುಷ್ಯ ತಿನ್ನುವ ಮೂರನೇ ಒಂದರಷ್ಟು ಅಂದರೆ ಶೇ. 70ರಷ್ಟು ಆಹಾರ ಜೇನುನೊಣಗಳನ್ನು ಅವಲಂಬಿಸಿದೆ. ಬಾಕಿ ಉಳಿದ ಶೇ. 30 ಚಿಟ್ಟೆ , ದುಂಬಿ ಸೇರಿದಂತೆ ಇತರ ಕೀಟ ಸಂತತಿಯನ್ನು ಅವಲಂಬಿಸಿದೆ. ಹೀಗಾಗಿ, ಜೇನುನೊಣಗಳು ಇಲ್ಲದೇ ಇದ್ದರೆ ನಾವು ತಿನ್ನುವ ಯಾವ ವಸ್ತುವೂ ನಮ್ಮ ಕೈಸೇರದು!

Advertisement

ಕಾಣೆಯಾಗುವುದೆ ಜೇನು !
ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೇ ಈಗ ಸಂಚಕಾರ ಬಂದಿದೆ. ಇತ್ತೀಚಿಗೆ ಹತ್ತದಿನೈದು ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ.

ಮೇ ಕೊನೆಯಲ್ಲಿ ಬಹುತೇಕ ಜೇನು ತೆಗೆಯುವ ಕೆಲಸ ನಡೆಯುತ್ತದೆ. ಆದರೆ, ಹೀಗೆ ಜೇನು ತೆಗೆಯುವವರು ಕಾಡಿನಲ್ಲಿ ಹೊಗೆ ಹಾಕಿ ಗೂಡನ್ನು ತೆಗೆಯುತ್ತಾರೆ. ಹೀಗಾಗಿ, ಗೂಡನ್ನು ಬಿಟ್ಟು ನೊಣಗಳು ಓಡುತ್ತವೆ. ಕೆಲವು ಅಲ್ಲೇ ಸಾಯುತ್ತವೆ. ಹೀಗೆ ಗೂಡು ಕಳೆದುಕೊಂಡ ಜೇನುಗಳು ನಂತರ ಆಹಾರವಿಲ್ಲದೆ ಸಾಯುತ್ತವೆ. ಯಾಕೆಂದರೆೆ, ಜೂನ್‌ ನಂತರ ಮಳೆ ಶುರುವಾಗುವುದರಿಂದ ಆ ಸಮಯದಲ್ಲಿ ಹೂಗಳು ಅರಳುವುದಿಲ್ಲ. ಪರಿಣಾಮ, ನೊಣಗಳಿಗೆ ಬೇಕಾದ ಪ್ರಮುಖ ಆಹಾರವಾದ ಮಕರಂದ‌ ಮತ್ತು ಪರಾಗ ಸಿಗುವುದಿಲ್ಲ. ಹೀಗಾಗಿ, ಹೊಟ್ಟೆಗಿಲ್ಲದೆ ಅಮಾಯಕ ಜೀವಗಳು ಸಾಯುತ್ತವೆ.

ಇನ್ನು, ಅಮೇರಿಕದಲ್ಲಿ ಕಾಲೋನಿ ಕೊಲ್ಯಾಪ್ಸ್‌ ಡಿಸಾರ್ಡರ್‌ ಎಂಬುದೊಂದು ಶುರುವಾಗಿದೆ. ಆರೋಗ್ಯವಂತ ಜೇನು ಸಂಸಾರ ಇದ್ದಕ್ಕಿದ್ದಂತೆ ಸಾಯುವುದೇ ಈ ರೋಗ. ಇದರಿಂದ ಕೆಲವೊಂದು ಪ್ರದೇಶದಲ್ಲಿ ಶೇ. 99ರಷ್ಟು ಜೇನುನೊಣಗಳು ಕಣ್ಮರೆಯಾಗಿವೆ. ಇದು ತುಂಬಾ ಆಘಾತಕಾರಿ ಬೆಳವಣಿಗೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಭವಿಷ್ಯದಲ್ಲಿ ಈ ಸಮಸ್ಯೆ ಭಾರತಕ್ಕೂ ಬಂದರೂ ಅಚ್ಚರಿಯಿಲ್ಲ. ಅದಕ್ಕಿಂತ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಷ್ಟೆ.

ಸುಖವಾದ ಜೇನು ಸಂಸಾರಕ್ಕೆ ಕಲ್ಲೆಸೆಯದಿರುವುದು ನಮ್ಮ ಕರ್ತವ್ಯ. ಒಂದೊಮ್ಮೆ ಜೇನು ತೆಗೆದರೂ ಅರ್ಧದಷ್ಟು ತುಪ್ಪವನ್ನು ಅಲ್ಲೇ ಬಿಡಬೇಕು. ಹೀಗಾದರೆ, ಇವನ್ನೇ ತಿಂದು ನೊಣಗಳು ಬದುಕುತ್ತವೆ. ಮತ್ತೆ ಹೊಸ ಜೀವನ ಆರಂಭಿಸುತ್ತವೆ. ಆದರೆ, ಗೂಡು ಸುಟ್ಟು ಜೇನು ತಿಂದು ಸಂಭ್ರಮಿಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗಿದ್ದು ನಾವೇ. ಜೊತೆಗೆ ಆಧುನಿಕ ವಿಧಾನದಲ್ಲಿ ಗೂಡಿನಲ್ಲಿ ಜೇನನ್ನು ಸಾಕುವುದು ಕೂಡ ಉತ್ತಮ ವಿಧಾನವೇ.

Advertisement

ಜೇನು ಸಮಾಜ ವ್ಯವಸ್ಥೆ
ಇವುಗಳು ಸಮೂಹ ಜೀವಿಗಳು. ಇವುಗಳಲ್ಲಿ ಮೂರು ಸ್ತರಗಳಿವೆ. ಒಂದು ಜೇನುಗೂಡಿನಲ್ಲಿ ಇಲ್ಲಿ ಒಂದು ರಾಣಿ, ನೂರಾರು ಡ್ರೋಣ್‌ ಮತ್ತು ಸಾವಿರಾರು ಕೆಲಸಗಾರ ನೊಣಗಳಿರುತ್ತವೆ. ಇವುಗಳ ಸಮನ್ವಯದ ಕೆಲಸದ ಫ‌ಲವೇ ನಮ್ಮ ಬಾಯಿ ತಣಿಸೊ ಮಧು. ಇದು ನಾಲಗೆಗೂ ಸಿಹಿ, ಆರೋಗ್ಯಕ್ಕೂ ಒಳ್ಳೆಯ ಔಷಧಿ.

ಒಂದು ಗೂಡಿನಲ್ಲಿ ಶೇ. 99ರಷ್ಟು ಕೆಲಸಗಾರ ನೊಣಗಳಿರುತ್ತವೆ. ಇವೆಲ್ಲ ಮೊಟ್ಟೆ ಇಡಲಾರದ ಹೆಣ್ಣು ನೊಣಗಳು. ಇವುಗಳು ಬದುಕಿನ ವಿವಿಧ ಸ್ತರಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತವೆ. ಲಾರ್ವಾಗೆ ಆಹಾರ ಕೊಡುವುದು, ರಾಣಿಯ ಆರೈಕೆ ಮಾಡಿ ಒಲವು ಗಿಟ್ಟಿಸಿಕೊಳ್ಳುವುದು, ಜೇನುಗೂಡನ್ನು ಸ್ವತ್ಛವಾಗಿರುವುದು, ಆಹಾರವನ್ನು ಸಂಗ್ರಹಿಸುವುದು, ಜೇನು ತಟ್ಟಿಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಜವಾಬ್ದಾರಿ ಈಕೆಯದ್ದೇ. ಗಂಡು ನೊಣಗಳನ್ನು ಡ್ರೋಣ್‌ ಎಂದು ಕರೆಯಲಾಗುತ್ತದೆ. ಇವುಗಳ ದೇಹ ದೊಡ್ಡ¨ªಾಗಿದ್ದು, ದೊಡ್ಡ ಕಣ್ಣುಗಳನ್ನೂ ಹೊಂದಿರುತ್ತವೆ. ರಾಣಿ ಜೊತೆಗೆ ಸಂಗಾತಿಯಾಗಿ ಇರುವುದು ಈ ಡ್ರೋಣ್‌ಗಳ ಕೆಲಸ. ಆದರೆ, ರಾಣಿ ಜೊತೆಗಿನ ಸಾಂಗತ್ಯದ ಅವಕಾಶ ಸಿಗುವುದು ಒಂದು ಡ್ರೋಣ್‌ಗೆ ಮಾತ್ರ! ಆದರೆ, ಹೀಗೆ ರಾಣಿ ಮತ್ತು ಡ್ರೋಣ್‌ ಒಂದುಗೂಡಿದ ತಕ್ಷಣ ಗಂಡು ನೊಣ ಸತ್ತುಹೋಗುತ್ತದೆ. ಇನ್ನು, ರಾಣಿಯೇ ಇಡೀ ಗೂಡಿಗೆ ನಾಯಕಿ. ಮೊಟ್ಟೆ ಇಡುವ ಸದಸ್ಯೆ ಈಕೆ ಮಾತ್ರ. ವಸಂತಕಾಲ ಮತ್ತು ಬೇಸಿಗೆಯಲ್ಲಿ ರಾಣಿ ದಿನಕ್ಕೆ 1,500ರಷ್ಟು ಮೊಟ್ಟೆ ಇಡುತ್ತಾಳೆ.

ಒಂದೊಮ್ಮೆ ರಾಣಿ ನೊಣ ಸತ್ತರೆ ಕೆಲಸಗಾರ ನೊಣಗಳು ಹೊಸ ಲಾರ್ವಾದ ಮೂಲಕ ಹೊಸ ರಾಣಿಯನ್ನು ಸೃಷ್ಟಿಸುತ್ತವೆ. ಅಂದರೆ ಸತ್ತ ನೊಣ ಅದಾಗಲೇ ಮೊಟ್ಟೆ ಇಟ್ಟಿದ್ದರೆ ಮಾತ್ರ ಹೊಸ ರಾಣಿಯ ಸೃಷ್ಟಿ ಸಾಧ್ಯ. ಇಲ್ಲದಿದ್ದರೆ ಇಡೀ ಸಂಸಾರವೇ ಕೊನೆಯಾಗುತ್ತದೆ. ಗಂಟೆಗೆ 25 ಕಿ.ಮೀ. ವೇಗದಲ್ಲಿ ಸಂಚರಿಸುವ ನೊಣಗಳ ರೆಕ್ಕೆಗಳು ಸೆಕೆಂಡಿಗೆ 200 ಸಲ ಬಡಿಯುತ್ತವೆ. ಕೆಲಸಗಾರ ನೊಣಗಳು ಐದರಿಂದ ಆರು ವಾರಗಳಷ್ಟು ಕಾಲ ಬದುಕುತ್ತವೆ. ರಾಣಿ ಜೇನಿನ ಜೀವತಾವಧಿ ಸುಮಾರು ಆರರಿಂದ ಏಳು ವರ್ಷ.

ಜೇನುನೊಣಗಳು ಅನ್ನದಾತರ ಮಿತ್ರ. ಬೆಳೆ ಬೆಳೆಯು ವಾಗಲೂ ಈ ನೊಣಗಳ ಪಾತ್ರ ಬಲು ಮಹತ್ವವಾದುದು. ಇದು ಹಲವರಿಗೆ ಆದಾಯದ ಮೂಲವೂ ಹೌದು. ಬದುಕಿನುದ್ದಕ್ಕೂ ಬೇರೆಯವರಿಗೇ ಸಿಹಿ ಕೊಡಲು ಕಷ್ಟಪಡುವ ಈ ಪುಟ್ಟ ಜೀವಗಳು ಈಗ ಕಹಿ ನುಂಗುತ್ತಿವೆ. ಬದುಕನ್ನೇ ಕಳೆದುಕೊಳ್ಳುತ್ತಿವೆ.

ಜೇನುನೊಣಗಳನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಅದಕ್ಕೇನು ದೊಡ್ಡ ತ್ಯಾಗ ಮಾಡಬೇಕಾಗಿಲ್ಲ. ನಾವಿದ್ದ ಪರಿಸರ ಚೆನ್ನಾಗಿಟ್ಟರೆ ಅಷ್ಟೇ ಸಾಕು. ಆದಷ್ಟು ಸಾವಯವ ಕೃಷಿ ಪದ್ಧತಿ ಅನುಸರಿಸುವುದು, ಮರಗಿಡಗಳನ್ನು ಬೆಳೆಸಬೇಕಷ್ಟೇ. ನೆನಪಿರಲಿ… ಜೇನುನೊಣವಿದ್ದರೆ ನಾವಿರುತ್ತೇವೆ.

“ಮಧುರಾಣಿ’ಗೆ ಕಿರೀಟ
ಜೇನುನೊಣಗಳು ಶ್ರಮಜೀವಿಗಳು. ಇದೇ ಶ್ರಮ ಈ ಜೀವಗಳಿಗೆ ದೊಡ್ಡ ಪಟ್ಟದ ಸಿಹಿ ತರುತ್ತಿದೆ. ರಾಜ್ಯದಲ್ಲಿ ಜೇನುನೊಣಕ್ಕೊಂದು ದೊಡ್ಡ ಕಿರೀಟ ತೊಡಿಸಲು ರಾಜ್ಯ ಜೀವವೈವಿಧ್ಯ ಮಂಡಳಿ ಪಣತೊಟ್ಟಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜೇನುನೊಣಗಳಿಗೆ “ಕರ್ನಾಟಕ ರಾಜ್ಯದ ಕೀಟ’ದ ಸ್ಥಾನ ಸಿಗಲಿದೆ. ಈ ಬಗೆಗಿನ ಪ್ರಯತ್ನದಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿ ತೊಡಗಿದ್ದಾಗಿ ಮಂಡಳಿ ಅಧ್ಯಕ್ಷ ಎಸ್‌. ಪಿ. ಶೇಷಾದ್ರಿ ಹೇಳುತ್ತಾರೆ. ಈ ಪ್ರಯತ್ನ ಸಫ‌ಲವಾದರೆ “ರಾಜ್ಯ ಕೀಟ ಪಡೆದ ಮೊದಲ ರಾಜ್ಯ’ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಅದಕ್ಕಿಂತ ದೊಡ್ಡ ಸಿಹಿ ಮತ್ತೂಂದಿಲ್ಲ. ಮಂಡಳಿಯ ಕಾರ್ಯ ನಿಜಕ್ಕೂ ಸ್ತುತ್ಯರ್ಹ. ಆದರೆ, ಬರೀ ಜೇನಿಗೆ ಪಟ್ಟ ಕೊಟ್ಟು ನಾವು ಸುಮ್ಮನಾಗುವಂತಿಲ್ಲ. ಜೇನುನೊಣಗಳ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.

ಸುನಿಲ್‌ ಬಂಗೇರ

Advertisement

Udayavani is now on Telegram. Click here to join our channel and stay updated with the latest news.

Next