Advertisement

ಹೊರರಾಜ್ಯದವರಿಗೆ ಹೋಂ ಕ್ವಾರಂಟೈನ್‌, ವಿದೇಶದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯ

11:07 AM Jun 11, 2020 | sudhir |

ಉಡುಪಿ: ಇನ್ನು ಮುಂದೆ ಹೊರರಾಜ್ಯಗಳಿಂದ ಬರುವವರನ್ನು 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗುವುದು. ವಿದೇಶದಿಂದ ಬರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಿ ಅವರ ಪರೀಕ್ಷಾ ವರದಿ ಬಂದ ಬಳಿಕ ಆಸ್ಪತ್ರೆಗೋ ಮನೆಗೋ ಎಂದು ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಹೊರರಾಜ್ಯದವರು ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದರೆ ಅದಾಗಿಯೇ ಮಾನ್ಯವಾಗುತ್ತದೆ. ಮಹಾರಾಷ್ಟ್ರದವರು ಅರ್ಜಿ ಸಲ್ಲಿಸಿದರೆ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ನೀಡಲಾಗುತ್ತದೆ. ಅವರು ಜಿಲ್ಲೆಗೆ ಪ್ರವೇಶಿಸುವಲ್ಲಿ ಆರೋಗ್ಯ ತಪಾಸಣೆ ಮಾಡಿ ಕೊರೊನಾ ಲಕ್ಷಣಗಳಿದ್ದರೆ ಚಿಕಿತ್ಸೆ ನೀಡಲಾಗುವುದು ಎಂದರು.

ನೆರೆಮನೆಯವರೂ ಹೊಣೆ
ಕ್ವಾರಂಟೈನ್‌ಗೆ ಒಳಪಟ್ಟವರ ಮನೆ ಹೊರಗೆ ಸ್ಟಿಕ್ಕರ್‌ ಅಂಟಿಸಲಾಗುತ್ತದೆ. ಅಕ್ಕಪಕ್ಕದ ಎರಡು ಮನೆಯವರಿಗೆ ಸೂಚನೆ ನೀಡಲಾಗುತ್ತದೆ. ಅವರು ಮನೆಯಿಂದ ಹೊರಗೆ ಬಂದರೆ ಪಕ್ಕದ ಮನೆಯವರು ಹೇಳಬೇಕು. ಅಂಥವರ ಮೇಲೆ ಎಫ್ಐಆರ್‌ ದಾಖಲಿಸಲಾಗುತ್ತದೆ. ಹೇಳದೆ ಇದ್ದರೆ ಅದು ಕೂಡ ಕಾಯಿದೆಯ ಉಲ್ಲಂಘನೆಯಾಗುತ್ತದೆ ಎಂದರು.

ಗ್ರಾಮೀಣ ಭಾಗದಲ್ಲಿ ಆಯಾ ಗ್ರಾ.ಪಂ.ಗೆ ಹೊಣೆ ವಹಿಸಿದ್ದು ಕಾರ್ಯಪಡೆ ನಿಗಾ ವಹಿಸಲಿದೆ. ನಗರ ಭಾಗದಲ್ಲಿ ವಾರ್ಡ್‌ವಾರು ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಉಡುಪಿಯಲ್ಲಿ ಮಾತ್ರ ರೈಲು ನಿಲುಗಡೆ
ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರೈಲು ಉಡುಪಿ ನಿಲ್ದಾಣದಲ್ಲಿ ಮಾತ್ರ ಜೂ. 11ರಿಂದ ನಿಲುಗಡೆಯಾಗಲಿದೆ.
ಜಿಲ್ಲೆಯಲ್ಲಿ ಹಾದು ಹೋಗುವ ರೈಲುಗಳಿಗೆ ಒಂದು ಕಡೆ ನಿಲುಗಡೆ ಮಾತ್ರ ಕೊಡಬೇಕೆಂದು ಜಿಲ್ಲಾಧಿಕಾರಿಯವರು ಕೋರಿದಂತೆ ಉಡುಪಿ ಜಿಲ್ಲೆಯಲ್ಲಿ ಉಡುಪಿ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಕೊಡಲಾಗುತ್ತದೆ. ಉಡುಪಿ ನಿಲ್ದಾಣದಲ್ಲಿ ಜಿಲ್ಲಾಡಳಿತ ಕೌಂಟರ್‌ ಒಂದನ್ನು ತೆರೆದು ಅಲ್ಲಿ ಬಂದವರಿಗೆ ಕ್ವಾರಂಟೈನ್‌ಗೆ ಕಳುಹಿಸಲಿದೆ.

Advertisement

ಯಾರು ಬರಬಾರದು?
ಮನೆಯಲ್ಲಿ ಪ್ರತ್ಯೇಕ ಇರುವ ವ್ಯವಸ್ಥೆ ಇರುವವರು ಮಾತ್ರ ಹೊರರಾಜ್ಯಗಳಿಂದ ಬರಬೇಕು. ಆ ಮನೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿದ್ದರೆ ಅವಕಾಶ ಕೊಡುತ್ತೇವೆ. ಅನಿವಾರ್ಯ ಸಂದರ್ಭ ಹೊರತು ಬಾರದೆ ಇರುವುದು ಉತ್ತಮ. ಬಂದರೆ 14 ದಿನ ಮನೆಯ ಇತರ ಸದಸ್ಯರ ಜತೆ ಮನೆಯೊಳಗೆ ಇರಬೇಕು ಎಂದರು.

ಆಧಾರರಹಿತ ಆರೋಪ: ಎಚ್ಚರಿಕೆ
ಇಷ್ಟರವರೆಗೆ 900ಕ್ಕೂ ಹೆಚ್ಚು ಪ್ರಕರಣದವರಿಗೆ ಚಿಕಿತ್ಸೆ ನೀಡಲಾಗಿದೆ. ಡಾ| ಟಿಎಂಎ ಪೈ ಆಸ್ಪತ್ರೆಯವರು ಉಚಿತವಾಗಿ ಇಡೀ ಆಸ್ಪತ್ರೆಯನ್ನು ನೀಡಿದ್ದಾರೆ. ಜಾಲತಾಣಗಳಲ್ಲಿ ಹಣ ಪಡೆಯುತ್ತಾರೆಂದು ಆಧಾರರಹಿತ ಆರೋಪ ಮಾಡುವುದು ತಪ್ಪು. ಅವರ ವಿರುದ್ಧ ಕಠಿನ ಕ್ರಮ ಜರಗಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ದೂರು ನೀಡಿ
ಹೋಂ ಕ್ವಾರಂಟೈನ್‌ನಲ್ಲಿರುವವರು ಮನೆಯಿಂದ ಹೊರಗೆ ಓಡಾಡಿದರೆ 100 ದೂರವಾಣಿ ಸಂಖ್ಯೆಗೆ ತಿಳಿಸಬಹುದು. ಕೂಡಲೇ ಪೊಲೀಸರು ಗಮನ ಹರಿಸುತ್ತಾರೆ.
– ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

ಸಹಾಯವಾಣಿ
ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿಯನ್ನು ಆರಂಭಿಸ ಲಾಗಿದೆ. ಜನರು ದೂರವಾಣಿ ಮೂಲಕ ಅಥವಾ ವಾಟ್ಸ್‌ ಆ್ಯಪ್‌ ಮೂಲಕ ತಮ್ಮ ಕಡತ, ಮನವಿ ಮತ್ತು ಅರ್ಜಿಗಳ ಪ್ರಸ್ತುತ ಸ್ಥಿತಿಯನ್ನು ಪಡೆಯಬಹುದು. ತೀರಾ ಅಗತ್ಯವಿದ್ದರೆ ಕಚೇರಿಗೆ ಬನ್ನಿ ಎಂದು ಡಿಸಿ ತಿಳಿಸಿದ್ದಾರೆ.

ದೂರವಾಣಿ: 0820 2574931, 2571500
ವಾಟ್ಸ್‌ ಆ್ಯಪ್‌: 9880831516
ಇಮೇಲ್‌ ವಿಳಾಸ: udupidc.helpline@gmail.com

Advertisement

Udayavani is now on Telegram. Click here to join our channel and stay updated with the latest news.

Next