Advertisement

ಮಳೆ ಆರಂಭದ ಹೊತ್ತಲ್ಲೆ ಮನೆ ನಿರ್ಮಾಣಕ್ಕೆ ಆದೇಶ!

01:58 AM Jun 29, 2020 | Sriram |

ಬೆಳ್ತಂಗಡಿ: ಉಜಿರೆ ಗ್ರಾಮದ ಬಡಕೊಟ್ಟು ಎಂಬಲ್ಲಿರುವ 9 ಕೊರಗ ಕುಟುಂಬಗಳಿಗೆ ತಲಾ 3.50 ಲ.ರೂ. ಘಟಕ ವೆಚ್ಚದಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯಡಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ, ಆದೇಶ ಕೈಸೇರಿದ 15 ದಿನಗಳೊಳಗಾಗಿ ಕಾಮಗಾರಿ ಆರಂಭಿಸಿ, 6 ತಿಂಗಳೊಳಗೆ ಪೂರ್ಣ ಗೊಳಿಸಬೇಕೆಂಬ ಆದೇಶದಿಂದ ತ್ರಿಶಂಕು ಸ್ಥಿತಿ ಎದುರಾಗಿದೆ.

Advertisement

ಸಕಾಲದಲ್ಲಿ ಕಾಮಗಾರಿ ಆರಂಭವಾಗದೆ ಇದ್ದರೆ ಮಂಜೂರಾತಿಯನ್ನು ರದ್ದುಪಡಿಸುವ ಮತ್ತು 6 ತಿಂಗಳೊಳಗೆ ಮನೆ ಪೂರ್ತಿಯಾಗದಿದ್ದರೆ ಅನು ದಾನವನ್ನು ಹಿಂಪಡೆಯುವ ಹಕ್ಕು ಇಲಾಖೆಗಿದೆ. ಫೆಬ್ರವರಿಯಲ್ಲಿ ಕೈ ಸೇರಬೇಕಿದ್ದ ಆದೇಶ ಜೂನ್‌ ತಿಂಗಳಲ್ಲಿ ಬಂದಿರುವುದೇ ಈ ಸಮಸ್ಯೆಗೆ ಕಾರಣ. ಈಗಿರುವ ಮನೆಯನ್ನು ಕೆಡವಿದರೆ ಹೊಸ ಮನೆ ಆಗುವವರೆಗೆ ತಾವು ವಾಸಿಸುವುದೆಲ್ಲಿ ಎಂಬ ಪ್ರಶ್ನೆ ಈ ಕುಟುಂಬದವರದ್ದಾಗಿದೆ.

ಮೂರು ಬಾರಿ ಮನೆ ನಿರ್ಮಾಣ
ಸುಮಾರು 20 ವರ್ಷಗಳಿಂದ ಈ ಕುಟುಂಬಗಳಿಗೆ ಇಲಾಖೆಗಳು ಮೂರು ಬಾರಿ ಮನೆ ನಿರ್ಮಿಸಿ ಕೊಟ್ಟಿದ್ದರೂ ಗುಣಮಟ್ಟದ ಕೊರತೆಯಿಂದಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಮೊದಲ ಬಾರಿ ಹಂಚಿನ ಮನೆಗಳನ್ನು ಇಲಾಖೆ ನಿರ್ಮಿಸಿ ಕೊಟ್ಟಿತ್ತು. ಬಳಿಕ ಐಟಿಡಿಪಿ ಇಲಾಖೆಯಿಂದ ಕಾಂಕ್ರೀಟ್‌ ಮನೆ ನಿರ್ಮಿಸಿ ಕೊಟ್ಟಿತ್ತು. ನಿರ್ಮಿತಿ ಕೇಂದ್ರದವರು ನಿರ್ಮಿಸಿದ್ದ ಈ ಮನೆಗಳು ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲದೆ ಗೂಡಿನಂತಿದ್ದವು. ಅದರೊಳಗೆ ಇರಲಾಗದೆ ಮನೆಮಂದಿ ಅಂಗಳದಲ್ಲಿ ಟರ್ಪಾಲು ಚಪ್ಪರ ಹಾಕಿ ದಿನದೂಡುತ್ತಿದ್ದರು.

ಈಗ ಇವರು ವಾಸಿಸುತ್ತಿರುವ ಮನೆಗಳು ನಿರ್ಮಾಣವಾಗಿ ಕೇವಲ ಒಂದು ದಶಕ ಕಳೆದಿದೆ. ಈಗಲೇ ಅವು ಕುಸಿದು ಬೀಳುವ ಸ್ಥಿತಿಗೆ ತಲುಪಿವೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ ಹೊಸ ಮನೆಗಳನ್ನು ನಿರ್ಮಿಸಿಕೊಡುವಂತೆ ಕೇಳಿಕೊಳ್ಳಲಾಗಿತ್ತು.

ನಿರ್ಲಕ್ಷ್ಯದಿಂದ ಆದೇಶ ತಡ
ಇದರಂತೆ ಲೋಕೋಪಯೋಗಿ ಇಲಾಖೆ ಪರಿಶೀಲಿಸಿ 2020ರ ಜನವರಿ ಮೊದಲ ವಾರದಲ್ಲಿ ವರದಿ ನೀಡಿತ್ತು. ಆದರೆ ಸಮಗ್ರ ಗಿರಿಜನಾಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆದೇಶ ತಡವಾಗಿದೆ. ಈ ನಿಟ್ಟಿನಲ್ಲಿ ವರದಿಯನ್ನು ಪರಿಷ್ಕರಿಸಿ ನವೆಂಬರ್‌ ಬಳಿಕ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಅಥವಾ ತಾತ್ಕಾಲಿಕ ವಸತಿಗೆ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ಕುಟುಂಬದವರಿಂದ ಕೇಳಿ ಬರುತ್ತಿದೆ.

Advertisement

ಅಧಿಕಾರಿಗಳ ಬಳಿ ಚರ್ಚೆ
ನಾನು ರಜೆಯಲ್ಲಿದ್ದು 15 ದಿನಗಳ ಹಿಂದೆ ಕಚೇರಿಗೆ ಹಾಜರಾಗಿದ್ದೇನೆ. ಆದೇಶ ತಲುಪಿದ್ದಲ್ಲಿ ಮನೆ ನಿರ್ಮಿಸಬೇಕಿದೆ. ಹೊಸ ಮನೆ ನಿರ್ಮಾಣಕ್ಕೆ ಬೇರೆಡೆ ಸ್ಥಳಾವಕಾಶ ಇರುವ ಅಥವಾ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ತಾಲೂಕು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ.
-ಹೇಮಲತಾ, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ, ಮಂಗಳೂರು

ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ
ಮನೆ ನಿರ್ಮಾಣಕ್ಕೆ ತಲಾ ಒಂದು ಲಕ್ಷದಂತೆ ತನ್ನ ಸ್ವಂತ ಅನುದಾನ ಒದಗಿ ಸುವುದಾಗಿ ಶಾಸಕರು ಭರವಸೆ ನೀಡಿ ದ್ದಾರೆ. ಶಾಸಕರ ಬಳಿ ಚರ್ಚಿಸಿ ಶೀಘ್ರದಲ್ಲೇ ಮನೆ ನಿರ್ಮಾಣ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಲಾಗುವುದು.
-ಹೇಮಚಂದ್ರ, ಪ್ರಭಾರ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next