Advertisement

ರಂಗೇರುತ್ತಿದೆ ಹೋಳಿ…

01:00 AM Mar 19, 2019 | Harsha Rao |

ಕೋಟ/ಬ್ರಹ್ಮಾವರ:  ಹೋಳಿ ಉತ್ತರ ಭಾರತದಲ್ಲಿ ಪ್ರಸಿದ್ಧಿಯನ್ನು ಪಡೆದ ಹಬ್ಬ ಹಾಗೂ ದಕ್ಷಿಣದಲ್ಲಿ ಇದರ ಆಚರಣೆ ಸ್ವಲ್ಪ ಮಟ್ಟಿಗೆ ಕಡಿಮೆ. ಆದರೆ ತಲೆತಲಾಂತರದ ಹಿಂದೆ ಉತ್ತರದಿಂದ ವಲಸೆ ಬಂದು ಕರಾವಳಿಯಲ್ಲಿ ನೆಲೆಸಿರುವ ಕುಡುಬಿ ಹಾಗೂ ಮರಾಠಿ ಜನಾಂಗದವರು ಈ ಹಬ್ಬವನ್ನು ಈ ಭಾಗದಲ್ಲೂ ವಿಶಿಷ್ಠವಾಗಿ ಆಚರಿಸುತ್ತಾರೆ.  ಹೋಳಿ ಹಣ್ಣಿಮೆಗೆ ಐದು ದಿನ ಮುಂಚಿತವಾಗಿ ಆರಂಭಗೊಂಡು ಹುಣ್ಣಿಮೆಯಂದು ಕೊನೆಗೊಳ್ಳುವ ಇವರ ಆಚರಣೆಗಳು ಅತ್ಯಂತ ವಿಶಿಷ್ಠವಾದದ್ದು.  ಈ ಬಾರಿ ಮಾ.17ರಂದು ಹಬ್ಬ ಆರಂಭಗೊಂಡಿದ್ದು, ಮಾ.21ರಂದು ಹುಣ್ಣಿಮೆಯ ತನಕ ನಡೆಯಲಿದೆ.

Advertisement

ಹೋಳಿ ಹಬ್ಬದ ಆಚರಣೆಯೇ ವಿಶೇಷ 
ಹೋಳಿಯ ಪ್ರತಿ ತಂಡಕ್ಕೆ ಗುರಿಕಾರರು ಹಾಗೂ ಯಜಮಾನರು ಇರುತ್ತಾರೆ. ಕೂಡುಕಟ್ಟಿನ ಎಲ್ಲಾ ಸದಸ್ಯರು ಗುರಿಕಾರರ ಮನೆಯಲ್ಲಿ ಒಗ್ಗೂಡಿ. ಮುಂಜಾನೆ ಬೇಗ ಎದ್ದು ಅಭ್ಯಂಜನ ಸ್ನಾನಗೆ„ದು ಶುಚಿಯಾಗಿ ಹೋಳಿ ವೇಷ ಕಟ್ಟಿಕೊಳ್ಳಲು ತೊಡಗುತ್ತಾರೆ. ನೆರಿಗೆ ತೆಗೆದ ಸೀರೆಯನ್ನುಟ್ಟು, ಕಾಲಿಗೆ ಗೆಜ್ಜೆಕಟ್ಟಿ, ತುಂಬು ತೋಳಿನ ಬಿಳಿ ಅಂಗಿ ಧರಿಸಿ ತಲೆಗೆ ಮುಂಡಾಸ್ಸು ಸುತ್ತಿ. ಅದಕ್ಕೆ ಕೆಂಪು ಬಣ್ಣದ ಕಾಗದ, ಕನಕಾಂಬರ,  ಸುರಿಗೆ ಹೂಗಳನ್ನು ಸುತ್ತಿಕೊಂಡು, ಕಪ್ಪು ಬಣ್ಣದ ಭೀಮರಾಜ ಹಕ್ಕಿ ಹಾಗೂ ಬಿಳಿ ಮತ್ತು ಕೆಂಪು ಬಣ್ಣದ ಹಟ್ಟಿಮುದ್ದಾ ಹಕ್ಕಿಯ ಗರಿಯನ್ನು ಸಿಕ್ಕಿಸಿ ಬಣ್ಣ ಬಣ್ಣದ ಪಟ್ಟೆಗಳನ್ನು ಹೊದ್ದು ಕೈಯಲ್ಲಿ ಗುಮ್ಟೆಗಳನ್ನು ಹಿಡಿದು ಗುರಿಕಾರರ ಮನೆಯ ತುಳಸಿ ಕಟ್ಟೆಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಕುಡುಬಿ ಭಾಷೆಯ ಸಾಲು ಗಳೊಂದಿಗೆ ಕುಲ ದೇವರ ಹಾಡುಗಳ ಮೂಲಕ ಆರಾಧಿ ಸಲಾಗುತ್ತದೆ. 

ಆರತಿ ದೀಪವನ್ನು ಬೆಳಗುತ್ತಾ ತಮ್ಮ ಕುಲದೇವರು ಮಲ್ಲಿಕಾರ್ಜುನನ್ನು  ತಂಡದ ಯಜಮಾನ ಮನದಲ್ಲಿ ನೆನದು ಸರ್ವಸದಸ್ಯರ ಹಣೆಗೆ ಕುಂಕುಮ ಹಚ್ಚಿ ನಿರ್ವಿಘ್ನವಾಗಿ ಹೋಳಿ ನೆಡೆಯುವಂತೆ ಕೋರಿಕೊಳ್ಳುತ್ತಾನೆ. ಅನಂತರ ಸಮಸ್ತ ದೇವರ ಹೊಗಳುವಿಕೆ, ರಾಮಾಯಣ, ಮಹಾಭಾರತದ ಚಿತ್ರಣವನ್ನು ಪದ್ಯದ ಮೂಲಕ ಕಟ್ಟಿಕೊಡುವುದರೊಂದಿಗೆ ಹೋಳಿ ಕುಣಿತ ಆರಂಭಗೊಳ್ಳುತ್ತದೆ.

ಗುರಿಕಾರರ ಮನೆಯಲ್ಲಿ ಹೋಳಿ ಕುಣಿತದ ಮೊದಲ ಪ್ರದರ್ಶನ ನಡೆದ ಮೇಲೆ ಗ್ರಾಮ ದೇವತೆಯ ಗುಡಿ, ಪ್ರಮುಖ ದೇವಸ್ಥಾನ, ಊರಿನ ಪರಂಪರೆಯ ಮನೆತನದ ಮನೆಗಳಿಗೆ ಸಾಗಿ ಕುಣಿತದ ಪ್ರದರ್ಶನವನ್ನು ನೀಡಲಾಗುತ್ತದೆ ಹಾಗೂ ತಂಡದ ಸದಸ್ಯರಿಗೆ ಬೆಳ್ತಿಗೆ ಅಕ್ಕಿ, ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಕಾಣಿಕೆಗಳನ್ನು ನೀಡಿ ಗೌರವದಿಂದ ಬೀಳ್ಕೊಡಲಾಗುತ್ತದೆ.

ಐದು ದಿನಗಳ ಕಾಲ ನೆಡೆಯುವ ಈ  ಆಚರಣೆ ಮೊದಲೆರಡು ದಿನ ಪಕ್ಕದೂರುಗಳಲ್ಲಿ ಹಾಗೂ ಕೊನೆಗೆರಡು ದಿನ ತಮ್ಮೂರಿನಲ್ಲಿ ನಡೆಸುತ್ತಾರೆ. ಜತೆಗೆ ಅನ್ಯಜಾತಿ ಮನೆಗಳಲ್ಲೂ ಹೋಳಿ ಕುಣಿತದ ಪ್ರದರ್ಶನ ಮಾಡುವಂತೆ ಹರಕೆ ಕಟ್ಟಿಕೊಳ್ಳುವುದು ಉಂಟು.

Advertisement

ಜನನಿಬಿಡ ಪ್ರದೇಶಗಳು
ಜಿಲ್ಲೆಯ ಬಾರಕೂರು, ಕೊಕ್ಕರ್ಣೆ, ಗೋಳಿಯಂಗಡಿ, ಆವರ್ಸೆ, ಶಂಕರನಾರಾಯಣ, ಅಮಾವಾಸ್ಯೆಬೈಲು, ಚೇರ್ಕಾಡಿ, ಆರೂರು, ಕುಂಜಾಲು, ಸಂತೆಕಟ್ಟೆ, ಹೆಬ್ರಿ, ಪೆರ್ಡೂರು, ಕಾರ್ಕಳ, ಹಿರಿಯಡ್ಕ, ಪರ್ಕಳ, ಅಲೆವೂರು ಮೊದಲಾದೆಡೆ ಜನನಿಬಿಡ ಮರಾಟಿ ಸಮುದಾಯದವರಿದ್ದಾರೆ. ಸಾೖಬ್ರಕಟ್ಟೆ, ಮಂದಾರ್ತಿ, ಕೊಕ್ಕರ್ಣೆ, ಮುದ್ದೂರು, ಯಡ್ತಾಡಿ, ಮರೂರು ಮುಂತಾದೆಡೆ ಕುಡುಬಿ ಸಮುದಾಯದವರಿದ್ದಾರೆ. ಮರಾಟಿ ಮತ್ತು ಕುಡುಬಿ ಸಮುದಾಯದ ನಡುವೆ ಆಚರಣೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡು ಬಂದರೂ ಬಹುತೇಕ ಅಂಶಗಳಲ್ಲಿ ಸಾಮ್ಯತೆ ಇದೆ.  
ಕೆಲವೊಂದು ತಂಡಗಳಲ್ಲಿ ಗರಿಷ್ಠ 100 ಮಂದಿಯೂ ಇರುತ್ತಾರೆ. ಐದು ದಿನಗಳ ವರೆಗೆ ಹಗಲು ರಾತ್ರಿಯೆನ್ನದೆ ತಿರುಗಾಟ ಮಾಡಿ ಹುಣ್ಣಿಮೆಯಂದು ಮೇಳವು ಮರಳಿ ಹತ್ತರ ಕಟ್ಟೆ ಸೇರುತ್ತದೆ. ಈ ಸಂದರ್ಭದಲ್ಲಿಯೂ ಹಲವು ಕ್ರಮಗಳಿವೆ. ನಂತರ ಸಾಮೂಹಿಕ ಸ್ನಾನ, ಕಾಮದಹನ ಮುಖ್ಯ ಸಂಪ್ರದಾಯಗಳು. 

ಪ್ರದರ್ಶನದ ಸಮಾಪ್ತಿ
ಹೋಳಿ ಹುಣ್ಣಿಮೆಯ ದಿನ ಮತ್ತೆ ಪುನಃ ಗುರಿಕಾರರ ಮನೆಯಲ್ಲಿ ಒಗ್ಗೂಡುವ ತಂಡ ಪ್ರದರ್ಶನಗೆ„ದು ವೇಷ ಕಳಚಿ ಕಾಮದಹನ ನಡೆಸಿ ಸಿಹಿ ಭೋಜನ ಊಟ ಮಾಡುವುದರೊಂದಿಗೆ ಹಬ್ಬ ಸಮಾಪ್ತಿಗೊಳ್ಳುತ್ತದೆ.

ಗುಮಟೆಯ ವೈಶಿಷ್ಟ
ಎರಡೂ ಸಮುದಾಯದವರು ಹೋಳಿಗೆ ಬಳಸುವ ವಾದನ ಗುಮಟೆ. ಇದನ್ನು ಆವೆಮಣ್ಣಿನಿಂದ ಮಾಡಲಾಗಿರುತ್ತದೆ. ಒಂದು ಭಾಗ ತುಂಬಾ ಅಗಲವಾಗಿಯೂ, ಇನ್ನೊಂದು ಭಾಗ ತುಂಬಾ ಕಿರಿದಾಗಿಯೂ ಇರುತ್ತದೆ. ಮಡಿಕೆಯಂತಹ ಇದರ ಅಗಲವಾದ ಭಾಗಕ್ಕೆ ಉಡದ ಚರ್ಮವನ್ನು ಬಿಗಿಯಲಾಗುತ್ತದೆ. ಹಿನ್ನಲೆಯಲ್ಲಿ ತಾಳ ಮತ್ತು ಜಾಗಟೆಗಳನ್ನು ಬಳಸುತ್ತಾರೆ. ಹೋಳಿಯ ವೇಷಭೂಷಣಗಳಲ್ಲಿ ಕುಡುಬಿ ಮತ್ತು ಮರಾಟಿಗರಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಹೋಳಿಯಲ್ಲಿ ಹಾಡುವ ಗುಮಟೆ ಹಾಡುಗಳು ಹೆಚ್ಚಾಗಿ ಪುರಾಣದ ಚಿಕ್ಕ ಚಿಕ್ಕ ಕಥಾಭಾಗವನ್ನು ನಿರೂಪಿಸುತ್ತದೆ. ಆಧುನಿಕ ಭರಾಟೆಯ ಈ ದಿನಗಳಲ್ಲಿ ಹೋಳಿ ಸಂಪ್ರದಾಯ ಉಳಿದಿರುವುದು ವಿಶೇಷವೇ ಸರಿ. – ಜಾನಪದ ಕಲೆ ಸಮಾಜದ ಜೀವಾಳ. ಜನರು ವಿದ್ಯಾವಂತರಾದಂತೆ ಜಾನಪದ ಕಲೆ ನಶಿಸುವುದೋ ಅಥವಾ ಮೂಲ ಸಂಪ್ರದಾಯದಿಂದ ದೂರವಾಗುವುದು ನಿಶ್ಚಿತ. ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳು ಜಾನಪದ ಕಲೆಯಲ್ಲಿವೆ.

ವಿಶಿಷ್ಠ ಧಾರ್ಮಿಕ ಪರಂಪರೆಯ ಆಚರಣೆ
ಐದು ದಿನಗಳ ಕಾಲ ನಡೆಯುವ ಹೋಳಿ ಹಬ್ಬದಲ್ಲಿ ನಮ್ಮ ಜನಾಂಗದ ಸಂಸ್ಕೃತಿ ಸಂಸ್ಕಾರಗಳು ಅಡಗಿದೆ. ಹೋಳಿ ಕುಣಿತದಲ್ಲಿ ಸಮಾಜದ ಪ್ರತಿಯೊಂದು ಮನೆಯವರು ಇದರಲ್ಲಿ ಶೃದ್ಧಾಭಕ್ತಿಯಿಂದ ಭಾಗವಹಿಸುತ್ತಾರೆ. ಈ ಆಚರಣೆಯಲ್ಲಿ ವಿಶಿಷ್ಠವಾದ ಧಾರ್ಮಿಕ ನಂಬಿಕೆ ಅಡಗಿದೆ. ಆಧುನಿಕತೆ ಎಷ್ಟೇ ಬೆಳೆದರು ನಮ್ಮ ಆಚರಣೆ ಯಾವುದೇ ಧಕ್ಕೆ ಇಲ್ಲ.
-ರಾಮ ನಾಯ್ಕ,  ಶಿರಿಯಾರ ಕೊಳ್ಕೆಬೈಲು ಕೂಡುಕಟ್ಟು  ತಂಡದ ಯಜಮಾನರು

– ರಾಜೇಶ್‌ ಗಾಣಿಗ/ಪ್ರವೀಣ್‌

Advertisement

Udayavani is now on Telegram. Click here to join our channel and stay updated with the latest news.

Next