Advertisement

ಮನೆ ಮನೆಯಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಿ!

11:29 PM Jun 07, 2019 | mahesh |

ಮಹಾನಗರ: ಮಳೆಗಾಗಿ ಜನರು ಕಾಯುತ್ತಿದ್ದಾರೆ. ಇದು ಬಿಸಿಲ ಬೇಗೆಯಿಂದ ಪಾರಾಗಲು ಅಲ್ಲ; ಬದಲಾಗಿ ಕುಡಿಯುವ ನೀರಿನ ಹಾಹಾಕಾರಕ್ಕೆ ಮುಕ್ತಿ ದೊರೆಯತ್ತಲೆಂದು. ಈ ಮಧ್ಯೆಯೇ ಕೆಲವು ವರ್ಷಗಳಿಂದ ಹಲವರು ಇಂಥದೊಂದು ಸ್ಥಿತಿಯಿಂದ ಪಾರಾಗಲು ತಮ್ಮದೇ ಆದ ಉಪಾಯವನ್ನು ಕಂಡುಕೊಂಡಿದ್ದಾರೆ. ಮಳೆ ನೀರು ವ್ಯರ್ಥವಾಗಿ ಹರಿಯಲು ಬಿಡದೇ ಹಿಡಿದಿಟ್ಟು ಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಲ್ಲದೇ ಈ ವರ್ಷದ ಬೇಸಗೆ ಕಲಿಸಿದ ಪಾಠದಿಂದ ಈ ಬಾರಿ ಮಳೆ ಕೊಯ್ಲು ಅಳವಡಿಕೆಗೆ ಆಸಕ್ತಿ ವಹಿಸಿದ್ದಾರೆ. ಇಂಥವರಿಗೆ ನೆರವಾಗುವುದು ಸುದಿನದ ಉದ್ದೇಶ. ಮಳೆ ಕೊಯ್ಲು ಪದ್ಧತಿ ಅಳವಡಿಸುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

Advertisement

ತಾರಸಿಯ ನೀರು ಸಂಪಿಗೆ ಹರಿಸಿ
ಮನೆ/ಕಟ್ಟಡದ ಛಾವಣಿ ಅಥವಾ ತಾರಸಿ, ಕಿಟಕಿ, ಬಾಗಿಲಿನ ಸಜ್ಜಾದ ಮೇಲೆ ಬೀಳುವ ಮಳೆ ನೀರು ಹರಿದು ಪೋಲಾಗದಂತೆ ಕೊಳವೆಗಳ ಮೂಲಕ ಒಂದೆಡೆ ಸಂಗ್ರಹಿಸಬೇಕು. ಇದಕ್ಕಾಗಿ ನೀರು ಸಂಗ್ರಹ ಜಾಗವನ್ನು (ಸಂಪು) ಸಿದ್ಧಪಡಿಸಿಟ್ಟುಕೊಳ್ಳಬೇಕು. ಬಳಿಕ ತಾರಸಿ ಮೇಲಿನ ನೀರು ಹರಿಸಲು ಪೈಪ್‌ಲೈನ್‌ ವ್ಯವಸ್ಥೆ ಮಾಡಬೇಕು. ಮೊದಲ ಮಳೆಗೆ ಮಣ್ಣು-ಕಸವೆಲ್ಲವೂ ಬಂದು ಸಂಪುವಿಗೆ ಬೀಳುವುದರಿಂದ ಮೊದಲೆರಡು ಮಳೆಯ ಬಳಿಕ ನೀರು ಸಂಗ್ರಹಿಸಿ. ಹೀಗೆ ಸಂಗ್ರಹಿಸುವಾಗ ಸಂಪುವಿಗೆ ನೀರು ಹರಿದು ಬರುವ ಪೈಪ್‌ನಲ್ಲಿ ಒಂದು ಸೋಸುವ ವಿಧಾನವನ್ನು (ಜಾಳಿ) ಅಳವಡಿಸಿ. ಇದಕ್ಕೆ ಒಟ್ಟೂ ವೆಚ್ಚ 5,000-6,000 ರೂ.ಗಳಾಗಬಹುದು. ಅದರಲ್ಲೂ ತಾರಸಿ ಮತ್ತು ಸಂಪುವಿಗೆ ಇರುವ ದೂರವನ್ನು ಆಧರಿಸಿ ಪೈಪ್‌ಗ್ಳನ್ನು ಅಳವಡಿಸಬೇಕು. ಹಾಗಾಗಿ ಮನೆ ವಿಸ್ತೀರ್ಣಕ್ಕೆ ಹೊಂದಿಕೊಂಡು ವೆಚ್ಚ ಕೊಂಚ ಹೆಚ್ಚು-ಕಡಿಮೆ ಆಗಬಹುದು.

ಮಳೆ ನೀರನ್ನು ಬಾವಿಗೆ ಹಾಕಿ
ಮನೆ ಅಂಗಳ-ವ್ಯಾಪ್ತಿಯಲ್ಲಿ ಬಾವಿ, ಬೋರ್‌ವೆಲ್ಗಳಿದ್ದರೆ ಮಳೆ ನೀರನ್ನು ಪರಿಣಾಮಕಾರಿಯಾಗಿ ಇಂಗಿಸಬಹುದು. ತಾರಸಿಗಳಿಂದ, ಹಂಚಿನ ದಂಬೆ ಗಳಿಂದ ಇಳಿಯುವ ಮಳೆ ನೀರನ್ನು ಬಾವಿಗೆ ಮರು ಪೂರಣ ಮಾಡಬಹುದು. ಇಲ್ಲೂ ಪೈಪ್‌ಗ್ಳನ್ನು ಅಳವಡಿಸಬೇಕು. ನೇರವಾಗಿ ಬಾವಿಗೆ ನೀರು ರಭಸವಾಗಿ ಹರಿದರೆ ಬಾವಿಯ ಮಣ್ಣು ನೀರಿನಲ್ಲಿ ಮಿಳಿತವಾಗಿ ಕೆಸರಾಗಬಹುದು. ಆದ್ದರಿಂದ ಪೈಪ್‌ನ ಕೊನೆಯಲ್ಲಿ ‘ಶವರ್‌’ ಅಳವಡಿಸಿ. ದೊಡ್ಡ ಮಟ್ಟದ ಬಾವಿಗೆ ಎಷ್ಟೇ ಪ್ರಮಾಣದ ನೀರು ಹಾಕಿದರೂ ಅದು ಉಕ್ಕುವುದಿಲ್ಲ. ಬದಲಾಗಿ ಬಾವಿಯಲ್ಲಿ ಇಂಗುವುದು, ಒಸರಿನ ದಾರಿಯ ಮೂಲಕ ನೀರು ಭೂಮಿಯಡಿಯಲ್ಲಿ ಹರಿಯುತ್ತದೆ. ಹೀಗಾಗಿ ಬಾವಿ ಸುತ್ತಮುತ್ತಲಿನ ವ್ಯಾಪ್ತಿ ಯಲ್ಲೂ ಕೆಲವು ಸಮಯದ ಬಳಿಕ ನೀರಿನ ಲಭ್ಯತೆ ಹೆಚ್ಚಬಹುದು. ಇದೂ 5 ರಿಂದ 6 ಸಾವಿರ ರೂ.ಗಳೊಳಗಿನ ಲೆಕ್ಕಾಚಾರ ಎನ್ನುತ್ತಾರೆ ಪರಿಣತರು.

ಬೋರ್‌ವೆಲ್‌ಗೆ “ಜಲ ಮರುಪೂರಣ’
ತಾರಸಿ, ಹಂಚಿನ ದಂಬೆಯಿಂದ ಸಂಗ್ರಹವಾಗುವ ನೀರನ್ನು ಪೈಪ್‌ಗ್ಳ ಮೂಲಕ ನೇರವಾಗಿ ಬೋರ್‌ವೆಲ್‌ಗ‌ಳ ಒಳಗೆ ಹರಿಸಬಹುದು. ಅಲ್ಲವಾದರೆ, ಬೋರ್‌ವೆಲ್‌ಗ‌ಳಿಗೆ “ಜಲಮರುಪೂರಣ’ ವ್ಯವಸ್ಥೆ ಮಾಡಬಹುದು. ಅಂದರೆ, ಬೋರ್‌ವೆಲ್‌ನ ಸುತ್ತ ಸುಮಾರು ಸುಮಾರು 3 ಅಡಿ ಅಗಲದ 10 ಅಡಿ ಆಳದ ಹೊಂಡ ತೆಗೆಯಬೇಕು. ಅದಕ್ಕೆ ಜಲ್ಲಿ ಅದರ ಮೇಲೆ ಬೇಬಿ ಜಲ್ಲಿ ಹಾಕಿ, ಬಳಿಕ ಮರಳು ಹಾಕಬೇಕು. ಸುತ್ತ ರಿಂಗ್‌ ಹಾಕಿದರೆ ಉತ್ತಮ. ಅದಾದ ನಂತರ ಮಳೆ ನೀರು ಹರಿಸಿದರೆ ಅದು ಇಂಗುತ್ತದೆ. ಕೆಲವೇ ವರ್ಷದಲ್ಲಿ ಇಂಗಿದ ನೀರಿನ ಲಾಭ ಬೋರ್‌ವೆಲ್‌ ಮೂಲಕ ಗೊತ್ತಾಗುತ್ತದೆ. ಒಂದು ಅಂದಾಜಿನ ಪ್ರಕಾರ ಒಂದು ಬೋರ್‌ವೆಲ್‌ 2,73,000 ಲೀ.ನೀರನ್ನು ಒಮ್ಮೆಗೆ ತೆಗೆದುಕೊಳ್ಳುವ ಸಾಮರ್ಥಯ ಹೊಂದಿದೆ.

“ಇಂಗುಗುಂಡಿ’ಯ ಮೂಲಕ ನೀರು ಇಂಗಿಸಿ
ಛಾವಣಿಯ ನೀರು ಪೈಪಿನ ಮೂಲಕ ಇಳಿಯುವ ವ್ಯವಸ್ಥೆ ಇಲ್ಲದ ಮನೆಗಳಲ್ಲಿ ಪೈಪಿಗಾಗಿ ಹಣ ವ್ಯಯ ಮಾಡುವುದು ಕಷ್ಟ ಎನ್ನುವವರು “ಇಂಗುಗುಂಡಿ’ಗಳನ್ನು ತೋಡಬಹುದು. ಛಾವಣಿ ಮತ್ತು ಅಂಗಳದ ನೀರು ಒಟ್ಟಾಗಿ ಹೊರಗೆ ಹರಿಯುವ ಮಾರ್ಗವನ್ನು ಗುರುತಿಸಿ ಮನೆಯ ಸುತ್ತ ಇಂತಹ ಕೆಲವು ಇಂಗುಗುಂಡಿಗಳನ್ನು ರಚಿಸಬಹುದು. ತೆಂಗಿನ ಮರದ ಸುತ್ತಲೂ ಈ ಕ್ರಮ ಅನುಸರಿಸಬಹುದು. ಇಂಗುಗುಂಡಿ ಇಂತಿಷ್ಟೇ ಅಳತೆಯಲ್ಲಿರಬೇಕು ಎಂಬ ನಿರ್ಬಂಧವಿಲ್ಲ. ಹರಿದು ಹೋಗುವ ಬಹುಪಾಲು ನೀರನ್ನು ತಡೆಹಿಡಿದು ಇಂಗಿಸುವಂತಿದ್ದರೆ ಸಾಕು. ಸಾಮಾನ್ಯವಾಗಿ ಒಂದು ಮೀಟರ್‌ ಉದ್ದ, ತಲಾ ಅರ್ಧ ಮೀಟರ್‌ ಅಗಲ ಹಾಗೂ ಆಳವಿದ್ದರೆ ಸಾಕು. ಈ ಯೋಜನೆಯ ಮೂಲಕ ನಮ್ಮ ಜಿಲ್ಲೆಯ ಮಳೆಯ ಪ್ರಮಾಣವನ್ನು ಲೆಕ್ಕಹಾಕಿದರೆ ಲಕ್ಷಗಟ್ಟಲೆ ಲೀಟರ್‌ ನೀರನ್ನು ಇಂಗಿಸಲು ಸಾಧ್ಯ.

Advertisement

ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

ಮಳೆ ನೀರು; ಮನೆಯ ವ್ಯಾಪ್ತಿಯಲ್ಲೇ ಇರಲಿ!
ಸಂಪು/ ತೊಟ್ಟಿಯಲ್ಲಿ ಸಂಗ್ರಹಿಸಿದ ಮಳೆ ನೀರು ಆ ಮನೆಗೆ ಮಳೆಗಾಲ ಪೂರ್ಣ ಬಳಕೆಗೆ ಲಭ್ಯವಾಗಬಹುದು. ಇದರಿಂದಾಗಿ ಮಳೆಗಾಲದ ಸಮಯದಲ್ಲಿ ಜನರು ನೇತ್ರಾವತಿಯ ನೀರನ್ನು ಅವಲಂಬಿಸಬೇಕಿಲ್ಲ. ಇನ್ನು ದೊಡ್ಡ ಮಟ್ಟದ ಸಂಪು/ ಟ್ಯಾಂಕಿ ಇದ್ದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಬಹುದು. ಈ ಮಧ್ಯೆ ಸಂಪು ತುಂಬಿದ ಬಳಿಕ ಉಳಿದ ನೀರನ್ನು ಬಾವಿಗೆ ಬಿಡಬಹುದು. ಬಾವಿಗೆ ನೀರು ಇಂಗಿಸುವ ಮೂಲಕ ಭವಿಷ್ಯದ ದಿನಗಳಿಗೆ ಉಳಿಸಿಕೊಳ್ಳಬಹುದು. ಇನ್ನು ಬೋರ್‌ವೆಲ್ಗೆ ಜಲಮರುಪೂರಣ ಮಾಡಿದರೆ ಸುದೀರ್ಘ‌ ವರ್ಷಗಳ ಕಾಲ ಬೋರ್‌ವೆಲ್ನಲ್ಲಿ ಜೀವವಿರುತ್ತದೆ. ನಗರದಲ್ಲಿರುವ ಒಂದೊಂದು ವಸತಿಗೃಹಗಳು, ಸರಕಾರಿ ಕಟ್ಟಡಗಳು ಮಳೆನೀರು ಕೊಯ್ಲು ಯೋಜನೆಯಡಿ ಬಾವಿ ಅಥವಾ ಬೋರ್‌ವೆಲ್ಗಳಲ್ಲಿ ನೀರನ್ನು ಇಂಗಿಸುವಂತೆ ಮಾಡಿದರೆ ಉತ್ತಮ.

ಮನೆ-ಮನೆಗೆ ಮಳೆಕೊಯ್ಲು ಸುದಿನ ಅಭಿಯಾನ

ಮಳೆಕೊಯ್ಲು ವ್ಯವಸ್ಥೆಯ ಅಳವಡಿಕೆಯನ್ನು ಉತ್ತೇಜಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿ ಸಲೆಂದೇ ‘ಸುದಿನ’ವು ‘ಮನೆ-ಮನೆಗೆ ಮಳೆಕೊಯ್ಲು’ ಎನ್ನುವ ಅಭಿಯಾನ ಪ್ರಾರಂಭಿಸಿದೆ. ಇದರಲ್ಲಿ ಮಳೆಕೊಯ್ಲು ಅಳವಡಿಸುವ ಬಗೆ, ಅದರಿಂದಾಗುವ ಪ್ರಯೋಜನ, ಖರ್ಚು-ವೆಚ್ಚ ಹಾಗೂ ಮಳೆಕೊಯ್ಲು ಸಾಧಕರ ಯಶೋಗಾಥೆಗಳನ್ನು ವಿವರಿಸಲಾಗುವುದು.

ನಗರದ ಭವಿಷ್ಯಕ್ಕೆ ಅಗತ್ಯ

ಮಳೆ ನೀರು ಕೊಯ್ಲು ಒಂದು ಉತ್ತಮ ಉಪಾಯ. ಹರಿದು ಪೋಲಾಗುವ ನೀರನ್ನು ತಡೆದು ನಿಲ್ಲಿಸಿದರೆ ಸಾಕು; ಅದು ಭೂಮಿಯೊಳಗೆ ಇಂಗಿ ಕೆರೆ, ಬಾವಿಗಳಿಗೆ ನೀರುಣಿಸುತ್ತದೆ. ಅಂತರ್ಜಲವನ್ನುಹೆಚ್ಚಿಸುತ್ತದೆ. ನಗರದ ಮನೆ ಮನೆಯಲ್ಲಿಯೂ ಈ ಕ್ರಮವನ್ನು ಅನುಷ್ಠಾನಿಸಬಹುದು. ನಗರದ ಜನರ ಭವಿಷ್ಯದ ದಿನಗಳಿಗೆ ಇದು ಅತ್ಯಂತ ಲಾಭದಾಯಕ.
– ಭರತ್‌ರಾಜ ಮುಂಡೋಳಿ, ಮಳೆ ನೀರು ಕೊಯ್ಲು ತಜ್ಞರು

ಬಹುಪಾಲು ನೀರು ಉಳಿಕೆ

ಮಳೆನೀರು ಕೊಯ್ಲು ಯೋಜನೆಯನ್ನು ನಗರದ ಜನರು ಪರಿಣಾಮಕಾರಿ ರೀತಿಯಲ್ಲಿ ಅನುಷ್ಠಾನಿಸಿದರೆ ಬಹುಪಾಲು ನೀರು ಉಳಿಸಲು ಸಾಧ್ಯ. ಮನೆಯ ತಾರಸಿಗಳಿಂದ ಅಥವಾ ಹಂಚಿನ ದಂಬೆಗಳಿಂದ ಇಳಿಯುವ ನೀರನ್ನು ಸಂಪು, ಬಾವಿ, ಬೋರ್‌ವೆಲ್ಗಳಿಗೆ ಹರಿಸಿ ಕಾಪಿಟ್ಟುಕೊಳ್ಳಬಹುದು. ಜತೆಗೆ ಇಂಗುಗುಂಡಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು.
– ಡಾ| ಶ್ರೀಶ ಕುಮಾರ ಎಂ.ಕೆ., ಮಳೆ ನೀರು ಕೊಯ್ಲು ತಜ್ಞರು
ದಿನೇಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next