Advertisement

ಪ್ರಚಲಿತ ಇತಿಹಾಸದ ಕದ ತೆರೆಯೋಣ

12:03 AM Oct 18, 2022 | Team Udayavani |

“ಭಾರತದ ಭವ್ಯ ಇತಿಹಾಸ’ ಎಂದಾಗ “ಸಾವಿರಾರು ವರ್ಷಗಳು’ ಎಂಬ ಪದಪುಂಜವನ್ನು ಭಾಷಣದಲ್ಲಿ, ಘೋಷಣೆಯಲ್ಲಿ ಅಂತೆಯೇ, ಪ್ರೌಢ ಪ್ರಬಂಧಗಳಲ್ಲಿ ಪ್ರತಿಧ್ವನಿಸುತ್ತೇವೆ. ಆದರೆ “ಪ್ರಚಲಿತ ಕಾಲಘಟ್ಟವೇ ಬರಲಿರುವ ನಾಳೆಗಳ ಇತಿವೃತ್ತಾಂತ ಅರ್ಥಾತ್‌ ಚರಿತ್ರೆ’ ಎಂಬ ವಿಚಾರವನ್ನು ನಾವು ಬಹುತೇಕ ಗಂಭೀರವಾಗಿ ಪರಿಗಣಿಸುತ್ತೇವೆಯೇ? ಇದೊಂದು ಸ್ವಗತದ ಪ್ರಶ್ನೆ. “ಸಮಯ ಮತ್ತು ಸಮುದ್ರದ ಅಲೆ ಯಾರನ್ನೂ ಕಾಯುವುದಿಲ್ಲ’ (Time and Tide do wait for none)ಎಂಬ ಜಾಣ್ನುಡಿಯೊಂದಿದೆ. ಕಳೆದ ನಿನ್ನೆಗಳ ದಾಖಲಿತ ಸಂಗತಿಗಳು, ಕಲಾಕೃತಿಗಳು ಚಾರಿತ್ರಿಕ ಅವಶೇಷಗಳು, ವೈವಿಧ್ಯಮಯ ಗುಡಿ ಗೋಪುರಗಳನ್ನು ಆಧರಿಸಿಯೇ ಇಂದಿನ ಇತಿಹಾಸ ಸೃಜಿಸಲ್ಪಟ್ಟಿದೆ.

Advertisement

ಭಾರತೀಯರ ಬಗೆಗೆ ವಿದೇಶಿಯರ, ಮುಖ್ಯವಾಗಿ ಐರೋಪ್ಯ ವಿದ್ವಾಂಸರ ಒಂದು ವಾಸ್ತವಿಕ ವ್ಯಾಖ್ಯೆ ಇದು “ವಿಶ್ವವೇ ಬೆರಗಾಗುವ ಸಂಗತಿಗಳು ಈ ನೆಲದ ಉದ್ದಕ್ಕೂ ಪಸರಿಸಿವೆ. ಆದರೆ… ಈ ಬಗೆಗೆ ಕರಾರುವಕ್ಕಾಗಿ ದಾಖಲಿತ ಅಂಶಗಳು ಮಾತ್ರ ತೀರಾ ಅತ್ಯಲ್ಪ’. ಪ್ರಾಯಶಃ ಇದನ್ನೇ ಬಂಡವಾಳವಾಗಿಟ್ಟುಕೊಡು, ಕೆಲವರು ಸಂಸ್ಕೃತವನ್ನೂ ಅಭ್ಯಸಿಸಿ, ತಮ್ಮದೇ “ಭಾರತ ಇತಿಹಾಸ ಎಂದರೆ ಇದೇ’ ಎಂಬುದಾಗಿ ಲೇಖನಿ ಹರಿಸಿದರು. ಮುಂದೆ ಅದನ್ನೇ ಸಾಧಾರವಾಗಿರಿಸಿ ಆರ್ಯರ ಆಗಮನ, ಅಲೆಕ್ಸಾಂಡರ್ ದಿ ಗ್ರೇಟ್‌, ಮೊಗಲ ದೊರೆಗಳ ವಂಶಾವಳಿ ಪಟ್ಟಿ, ರಾಬರ್ಟ್‌ ಕ್ಲೈವ್‌ನ ಪ್ಲಾಸಿ ಕದನ ಹೀಗೆ ಚರಿತ್ರೆಯ ಸಾಲು ಸಾಲುಗಳನ್ನು ಉರು ಹೊಡೆಯುವ ಅನಿವಾರ್ಯತೆಗೆ ನಮ್ಮನ್ನು ನಾವೇ ತಳ್ಳಿಕೊಂಡೆವು. ಧನುಷೊಟಿಯಿಂದ ಶ್ರೀಲಂಕಾದವರೆಗಿನ ಶ್ರೀರಾಮ ಸೇತುವಿನ ಬಗೆಗೆ ಒಂದಿಷ್ಟೂ ಅರಿಯಲಾರದ ಮಂದಿ ಅದನ್ನೇ “ಆಡಮ್ಸ್‌ ಬ್ರಿಡ್ಜ್’ ಎಂಬ ಆದಿಪುರುಷನ ನಾಮಧೇಯವಿರಿಸಿ, ಅದನ್ನೇ “ಆಕ್ಸ್‌ ಫ‌ರ್ಡ್‌ ಅಟ್ಲಾಸ್‌’ನಲ್ಲಿ ಛಾಪಿಸಿ ಕೈ ತೊಳೆದುಕೊಂಡರು!. ಅಂತೆಯೇ ಅಯೋಧ್ಯೆ, ಚಿತ್ರಕೂಟ, ರಾಮೇಶ್ವರ, ಕುರುಕ್ಷೇತ್ರ, ಸರಯೂ, ಗಂಗೆ ಈ ಎಲ್ಲವೂ ಯಥಾವತ್ತಾಗಿ ಚಿತ್ರಿತಗೊಂಡ ಕ್ರಿಸ್ತಪೂರ್ವದ ವಾಸ್ತವಿಕ ರಾಮಾಯಣ, ಮಹಾಭಾರತ ಚರಿತ್ರೆಯನ್ನು “ಕೇವಲ ಮಹಾಕಾವ್ಯ’ ಎಂಬುದಾಗಿ ಸಣ್ಣ ಮಣೆಯಲ್ಲಿ ಕುಳ್ಳಿರಿಸಲಾಯಿತು!.

ಈ ವಾಸ್ತವಿಕತೆಯ ಬೆಳಕಿನಲ್ಲಿ ಮುಂದಿನ ಜ್ವಲಂತ ಇತಿಹಾಸ ಎನಿಸುವ ಪ್ರಚಲಿತ ವರ್ತಮಾನಗಳ ಬಗೆಗಿನ ದಾಖಲಾತಿಯ ಕೊರತೆಯತ್ತ ಗಮನ ಹರಿಸಲೇಬೇಕಿದೆ. ಕಾಲವನ್ನು ಚಕ್ರ ಎಂದು ಸಮೀಕರಿಸಿ “ಕಾಲ ಚಕ್ರದ ಪರಿಭ್ರಮಣೆ’ ಎಂಬ ಶಬ್ದಕ್ಕೆ ಅರ್ಥ ತುಂಬುತ್ತೇವೆ. “ಕಳೆದ ನಿನ್ನೆಗಳ ರಾಜಕೀಯ ಪ್ರಚಲಿತ ಇತಿಹಾಸ; ಇಂದಿನ ರಾಜಕೀಯ ಮುಂದಿನ ಇತಿಹಾಸ’ ಎಂಬ ಪ್ರಾಸಬದ್ಧ, ನಿಜಾಂಶದ ವಾಕ್ಯವಿದೆ. ಆದರೆ ಪ್ರಚಲಿತ ಕಂಪ್ಯೂಟರ್‌ ಯುಗದಲ್ಲಿ, ಸ್ಪರ್ಧಾತ್ಮಕ ಆರ್ಥಿಕ, ರಾಜಕೀಯ ಸಾಮಾಜಿಕ ಸಂದಿಗ್ಧತೆಯ ಮಧ್ಯದಲ್ಲಿ, ಬರುವ ನಾಳೆಗಳ ಚಾರಿತ್ರಿಕ ಅಂಶಗಳನ್ನು ತೀರಾ ನಗಣ್ಯವಾಗಿಸುವ ಮನೋಸ್ಥಿತಿಯಿದೆ. ವರ್ತಮಾನದ ಸಮಗ್ರ ಬದುಕು ಎಂಬುದು ಶೂನ್ಯದಿಂದ ಉದಿಸಿ ಬಂದುದಲ್ಲ. ಚುಕ್ಕಿ ಇರಿಸಲಾರದಷ್ಟು ನಿನ್ನೆಗಳ ಗಟ್ಟಿ ನೆಲದಲ್ಲಿ ನಿಂತ “ಇಂದು”ಗಳ ಯಥಾಚಿತ್ರಣ ಬರುವ “ನಾಳೆ’ಗಳ ಕೌತುಕದ ಅಂಶಗಳೇ ಆಗಬಲ್ಲದು.

“ಮಹಾನ್‌ ವ್ಯಕ್ತಿಗಳು ಸ್ವಯಂ ಇತಿಹಾಸ ಸೃಷ್ಟಿಸುತ್ತಾರೆ; ಇತಿಹಾಸವೇ ಮಹಾನ್‌ ವ್ಯಕ್ತಿಗಳನ್ನು ರೂಪಿಸುತ್ತದೆ’ ಎಂಬ ಉತ್ತಮ ಘೋಷವಾಕ್ಯ ವೊಂದಿದೆ. ಇತಿಹಾಸದ ಉದರದಲ್ಲಿ, ಪದರದಲ್ಲಿ ಅನೇಕ ಸತ್ಯಗಳು, ದಾರಿ ಸೂಚನ ಫ‌ಲಕಗಳು, ಸೋಲು ಗೆಲುವಿನ ಕಾರಣಗಳು, ಸೂಚ್ಯಂಕಗಳು,ಮಾರ್ಗದರ್ಶನಗಳು ಹೇರಳವಾಗಿ ಬಿದ್ದಿರುತ್ತವೆ. ಇದನ್ನು ಆಧರಿಸಿ ಭವಿಷ್ಯವನ್ನು ರೂಪಿಸುವಲ್ಲಿ ನಾವು ಬಹುತೇಕ ಎಡವುತ್ತೇವೆ. ಹೀಗಾಗಿ “ಇತಿಹಾಸ ಕಲಿಸುವ ಒಂದೇ ಒಂದು ಪಾಠ ಎಂದರೆ ಇತಿಹಾಸದಿಂದ ನಾವೇನನ್ನು ಕಲಿತಿಲ್ಲ’ ಎಂಬ ಉಕ್ತಿಯೂ ಮಿಂಚುತ್ತದೆ. “ಇತಿಹಾಸ ತನ್ನಿಂದ ತಾನೇ ಮರುಕಳಿಸುತ್ತದೆ’ (History repeats itself) ಎಂಬ ಎಚ್ಚರದ, ಉತ್ಛಸ್ವರವೂ ಕೇಳಿ ಬರುವಂತಹದು.

ಇತಿಹಾಸವನ್ನು ಯಥಾವತ್ತಾಗಿ ದಾಖಲಿಸಿ, ಬರಲಿರುವ ನಾಳೆಗಳ ಸೂರ್ಯೋದಯಗಳನ್ನು ಕಾಣುವ, ಇನ್ನೂ ಹುಟ್ಟಿರದ ಭವಿಷ್ಯಗಳ ಲೆಕ್ಕವಿರಿಸಲಾರದ ನಾಳೆಗಳ ಪೀಳಿಗೆಗೆ ನಾವು ಯಥಾವತ್ತಾದ ಚಿತ್ರಣ ನೀಡಬÇÉೆವೆ? ಈ ಸ್ಪುಟ್ನಿಕ್‌ ಯುಗದಲ್ಲಿ, ಧನ ಸಂಗ್ರಹವೇ ಸರ್ವಸ್ವ ಎನ್ನುವ ಚಿಂತನಾ ಲಹರಿಯ ಪ್ರಚಲಿತ ಕಾಲಘಟ್ಟದಲ್ಲಿ ಸಮಗ್ರ ಚಿತ್ರಣವನ್ನು ಅದು ಗ್ರಾಮಾಂತರ ಇರಬಹುದು, ಪೇಟೆ-ನಗರಗಳ ಬದುಕು ಇರಬಹುದು, ರಾಜ್ಯ, ರಾಷ್ಟ್ರದ ಹಾಗೂ ಸಮಗ್ರ ವಿಶ್ವದ ಆಗುಹೋಗುಗಳ ಪ್ರಮುಖ ತಿರುವುಗಳಿರಬಹುದು- ಅವೆಲ್ಲವನ್ನೂ ದಾಖಲಿಸುವ ಸತ್‌ಯತ್ನ ಇನ್ನಷ್ಟು ಹೆಚ್ಚಬೇಕಾಗಿದೆ.

Advertisement

ಈ ಬಗೆಗೆ ಒಂದು ಸಣ್ಣ ಝಲಕ್‌ ಹೀಗೆ ನಮೂದಿಸಬಹುದೇನೋ; ರಾಷ್ಟದ ಉದ್ದಗಲದಲ್ಲಿ ಸಾಕಷ್ಟು ದೇವ ಮಂದಿರಗಳು ಈ ಕಾಲಘಟ್ಟದಲ್ಲಿ ನವೀಕೃತಗೊಂಡಿವೆ. ಕರ್ನಾಟಕ ಕರಾವಳಿಯ ಉದಾಹರಣೆಯನ್ನೇ ಕೈಗೆತ್ತಿಕೊಳ್ಳುವುದಾದರೆ ಒಂದೆರಡು ಅಲ್ಲ, ನೂರಾರು ಸಂಖ್ಯೆಯನ್ನು ಮೀರಿ ಗ್ರಾಮದ, ಮಾಗಣೆಯ ಸಾವಿರಾರು ಹಳ್ಳಿಗಳ ಸಾಮೂಹಿಕ ನಮನದ ಹಳೆಯ ಗುಡಿಗಳ ಸಮಗ್ರ ಜೀರ್ಣೋದ್ಧಾರ, ಕಾಷ್ಠ, ಶಿಲೆ, ತಾಮ್ರ, ಬೆಳ್ಳಿ, ಬಂಗಾರದ ಕೌತುಕ ಕುಸುರಿಯೊಂದಿಗೆ ನಡೆದಿದೆ; ಕೋಟ್ಯಂತರ ರೂಪಾಯಿ ವಂತಿಗೆಯಿಂದ ಮಂದಿರಗಳು ಸುಂದರವಾಗಿ ಅರಳಿವೆ. ಆದರೆ ಕೆಲವೇ ವರ್ಷಗಳ ಬಳಿಕ, ಎಳೆಯ ಮಕ್ಕಳಿಗೆ ಈ ಬಗೆಗೆ ದೊರೆಯುವ ನೈಜ ಮಾಹಿತಿ ತೀರಾ ವಿರಳ; ಅದೇ ರೀತಿ ಅದರಲ್ಲಿ ಸ್ವತಃ ಭಾಗವಹಿಸಿದವರ ನೆನಪಿನಂಗಳದಿದಲೂ, ಮಾತಿನ ವಿವರಣೆಯ ಓಘದಿಂದಲೂ ಆ ಎಲ್ಲ ಅಂಶಗಳು, ಮಾಹಿತಿಗಳು ಮೆಲ್ಲನೆ ಜಾರಿ ಬಿಡುತ್ತವೆ!

ಹೀಗಿರುವಲ್ಲಿ, ಅಂತಹ ಮೇರು ಘಟನೆಗಳು ಅದು ಆಯಾಯ ಹಳ್ಳಿಯಲ್ಲಾಗಲೀ ನಗರ, ಪಟ್ಟಣಗಳಲ್ಲಿ ನಡೆದಿರಲಿ ಆ ಎಲ್ಲ ವಿವರಗಳನ್ನು ಆಧುನಿಕ ಶೈಲಿಯಲ್ಲೇ ಶಿಲಾಶಾಸನಗಳ ಮೂಲಕ ಅಥವಾ ತಾಮ್ರ ಫ‌ಲಕಗಳಲ್ಲಿ ಕರಾರುವಕ್ಕಾಗಿ ನಮೂದಿಸಿ, ತಲತಲಾಂತರಕ್ಕೂ ಉಳಿಸುವ ಕಾರ್ಯ ತೀರಾ ಅತ್ಯಗತ್ಯ. ಇವೆಲ್ಲವೂ ಒಂದು ಮಂದಿರದ ಸುಂದರ ಪರಿಧಿಯ ಮೂಲಕ ಸಮಕಾಲೀನ ಬದುಕಿನ ಚಿತ್ರಣಕ್ಕೆ ಬೆಳಕು ಚೆಲ್ಲಬಹುದು.
ವಸ್ತು ಸಂಗ್ರಹಾಲಯವೊಂದು ಪರಿಕರಗಳ ಮೂಲಕ ಇತಿಹಾಸಕ್ಕೆ ಉಸಿರು ತುಂಬುವಂತೆ, ಸಮಕಾಲೀನ ಬದುಕಿನ ಬಗೆಗೂ ಲಿಖಿತ, ಮುದ್ರಿತ ವಿಚಾರಗಳು ಹಾಗೂ ವಿದ್ಯುನ್ಮಾನ ದಾಖಲಿತ ಅಂಶಗಳು ಸೇರಿ ಬರಲಿರುವ ನಾಳೆಗಳ ಇತಿಹಾಸಕ್ಕೆ ಉಸಿರು ತುಂಬುವ ಜೀವತಂತುಗಳು ಎನಿಸಬಲ್ಲವು. ಕೇವಲ ಧಾರ್ಮಿಕ ಮಾತ್ರವಲ್ಲ, ಪ್ರಚಲಿತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಮುಖ್ಯಾಂಶಗಳ ದಾಖಲೀಕರಣ ಇಂದಿನ ಹಾಗೂ ಮುಂದಿನ ಆವಶ್ಯಕತೆ.

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next