Advertisement
ಭಾರತೀಯರ ಬಗೆಗೆ ವಿದೇಶಿಯರ, ಮುಖ್ಯವಾಗಿ ಐರೋಪ್ಯ ವಿದ್ವಾಂಸರ ಒಂದು ವಾಸ್ತವಿಕ ವ್ಯಾಖ್ಯೆ ಇದು “ವಿಶ್ವವೇ ಬೆರಗಾಗುವ ಸಂಗತಿಗಳು ಈ ನೆಲದ ಉದ್ದಕ್ಕೂ ಪಸರಿಸಿವೆ. ಆದರೆ… ಈ ಬಗೆಗೆ ಕರಾರುವಕ್ಕಾಗಿ ದಾಖಲಿತ ಅಂಶಗಳು ಮಾತ್ರ ತೀರಾ ಅತ್ಯಲ್ಪ’. ಪ್ರಾಯಶಃ ಇದನ್ನೇ ಬಂಡವಾಳವಾಗಿಟ್ಟುಕೊಡು, ಕೆಲವರು ಸಂಸ್ಕೃತವನ್ನೂ ಅಭ್ಯಸಿಸಿ, ತಮ್ಮದೇ “ಭಾರತ ಇತಿಹಾಸ ಎಂದರೆ ಇದೇ’ ಎಂಬುದಾಗಿ ಲೇಖನಿ ಹರಿಸಿದರು. ಮುಂದೆ ಅದನ್ನೇ ಸಾಧಾರವಾಗಿರಿಸಿ ಆರ್ಯರ ಆಗಮನ, ಅಲೆಕ್ಸಾಂಡರ್ ದಿ ಗ್ರೇಟ್, ಮೊಗಲ ದೊರೆಗಳ ವಂಶಾವಳಿ ಪಟ್ಟಿ, ರಾಬರ್ಟ್ ಕ್ಲೈವ್ನ ಪ್ಲಾಸಿ ಕದನ ಹೀಗೆ ಚರಿತ್ರೆಯ ಸಾಲು ಸಾಲುಗಳನ್ನು ಉರು ಹೊಡೆಯುವ ಅನಿವಾರ್ಯತೆಗೆ ನಮ್ಮನ್ನು ನಾವೇ ತಳ್ಳಿಕೊಂಡೆವು. ಧನುಷೊಟಿಯಿಂದ ಶ್ರೀಲಂಕಾದವರೆಗಿನ ಶ್ರೀರಾಮ ಸೇತುವಿನ ಬಗೆಗೆ ಒಂದಿಷ್ಟೂ ಅರಿಯಲಾರದ ಮಂದಿ ಅದನ್ನೇ “ಆಡಮ್ಸ್ ಬ್ರಿಡ್ಜ್’ ಎಂಬ ಆದಿಪುರುಷನ ನಾಮಧೇಯವಿರಿಸಿ, ಅದನ್ನೇ “ಆಕ್ಸ್ ಫರ್ಡ್ ಅಟ್ಲಾಸ್’ನಲ್ಲಿ ಛಾಪಿಸಿ ಕೈ ತೊಳೆದುಕೊಂಡರು!. ಅಂತೆಯೇ ಅಯೋಧ್ಯೆ, ಚಿತ್ರಕೂಟ, ರಾಮೇಶ್ವರ, ಕುರುಕ್ಷೇತ್ರ, ಸರಯೂ, ಗಂಗೆ ಈ ಎಲ್ಲವೂ ಯಥಾವತ್ತಾಗಿ ಚಿತ್ರಿತಗೊಂಡ ಕ್ರಿಸ್ತಪೂರ್ವದ ವಾಸ್ತವಿಕ ರಾಮಾಯಣ, ಮಹಾಭಾರತ ಚರಿತ್ರೆಯನ್ನು “ಕೇವಲ ಮಹಾಕಾವ್ಯ’ ಎಂಬುದಾಗಿ ಸಣ್ಣ ಮಣೆಯಲ್ಲಿ ಕುಳ್ಳಿರಿಸಲಾಯಿತು!.
Related Articles
Advertisement
ಈ ಬಗೆಗೆ ಒಂದು ಸಣ್ಣ ಝಲಕ್ ಹೀಗೆ ನಮೂದಿಸಬಹುದೇನೋ; ರಾಷ್ಟದ ಉದ್ದಗಲದಲ್ಲಿ ಸಾಕಷ್ಟು ದೇವ ಮಂದಿರಗಳು ಈ ಕಾಲಘಟ್ಟದಲ್ಲಿ ನವೀಕೃತಗೊಂಡಿವೆ. ಕರ್ನಾಟಕ ಕರಾವಳಿಯ ಉದಾಹರಣೆಯನ್ನೇ ಕೈಗೆತ್ತಿಕೊಳ್ಳುವುದಾದರೆ ಒಂದೆರಡು ಅಲ್ಲ, ನೂರಾರು ಸಂಖ್ಯೆಯನ್ನು ಮೀರಿ ಗ್ರಾಮದ, ಮಾಗಣೆಯ ಸಾವಿರಾರು ಹಳ್ಳಿಗಳ ಸಾಮೂಹಿಕ ನಮನದ ಹಳೆಯ ಗುಡಿಗಳ ಸಮಗ್ರ ಜೀರ್ಣೋದ್ಧಾರ, ಕಾಷ್ಠ, ಶಿಲೆ, ತಾಮ್ರ, ಬೆಳ್ಳಿ, ಬಂಗಾರದ ಕೌತುಕ ಕುಸುರಿಯೊಂದಿಗೆ ನಡೆದಿದೆ; ಕೋಟ್ಯಂತರ ರೂಪಾಯಿ ವಂತಿಗೆಯಿಂದ ಮಂದಿರಗಳು ಸುಂದರವಾಗಿ ಅರಳಿವೆ. ಆದರೆ ಕೆಲವೇ ವರ್ಷಗಳ ಬಳಿಕ, ಎಳೆಯ ಮಕ್ಕಳಿಗೆ ಈ ಬಗೆಗೆ ದೊರೆಯುವ ನೈಜ ಮಾಹಿತಿ ತೀರಾ ವಿರಳ; ಅದೇ ರೀತಿ ಅದರಲ್ಲಿ ಸ್ವತಃ ಭಾಗವಹಿಸಿದವರ ನೆನಪಿನಂಗಳದಿದಲೂ, ಮಾತಿನ ವಿವರಣೆಯ ಓಘದಿಂದಲೂ ಆ ಎಲ್ಲ ಅಂಶಗಳು, ಮಾಹಿತಿಗಳು ಮೆಲ್ಲನೆ ಜಾರಿ ಬಿಡುತ್ತವೆ!
ಹೀಗಿರುವಲ್ಲಿ, ಅಂತಹ ಮೇರು ಘಟನೆಗಳು ಅದು ಆಯಾಯ ಹಳ್ಳಿಯಲ್ಲಾಗಲೀ ನಗರ, ಪಟ್ಟಣಗಳಲ್ಲಿ ನಡೆದಿರಲಿ ಆ ಎಲ್ಲ ವಿವರಗಳನ್ನು ಆಧುನಿಕ ಶೈಲಿಯಲ್ಲೇ ಶಿಲಾಶಾಸನಗಳ ಮೂಲಕ ಅಥವಾ ತಾಮ್ರ ಫಲಕಗಳಲ್ಲಿ ಕರಾರುವಕ್ಕಾಗಿ ನಮೂದಿಸಿ, ತಲತಲಾಂತರಕ್ಕೂ ಉಳಿಸುವ ಕಾರ್ಯ ತೀರಾ ಅತ್ಯಗತ್ಯ. ಇವೆಲ್ಲವೂ ಒಂದು ಮಂದಿರದ ಸುಂದರ ಪರಿಧಿಯ ಮೂಲಕ ಸಮಕಾಲೀನ ಬದುಕಿನ ಚಿತ್ರಣಕ್ಕೆ ಬೆಳಕು ಚೆಲ್ಲಬಹುದು.ವಸ್ತು ಸಂಗ್ರಹಾಲಯವೊಂದು ಪರಿಕರಗಳ ಮೂಲಕ ಇತಿಹಾಸಕ್ಕೆ ಉಸಿರು ತುಂಬುವಂತೆ, ಸಮಕಾಲೀನ ಬದುಕಿನ ಬಗೆಗೂ ಲಿಖಿತ, ಮುದ್ರಿತ ವಿಚಾರಗಳು ಹಾಗೂ ವಿದ್ಯುನ್ಮಾನ ದಾಖಲಿತ ಅಂಶಗಳು ಸೇರಿ ಬರಲಿರುವ ನಾಳೆಗಳ ಇತಿಹಾಸಕ್ಕೆ ಉಸಿರು ತುಂಬುವ ಜೀವತಂತುಗಳು ಎನಿಸಬಲ್ಲವು. ಕೇವಲ ಧಾರ್ಮಿಕ ಮಾತ್ರವಲ್ಲ, ಪ್ರಚಲಿತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಮುಖ್ಯಾಂಶಗಳ ದಾಖಲೀಕರಣ ಇಂದಿನ ಹಾಗೂ ಮುಂದಿನ ಆವಶ್ಯಕತೆ. -ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು