Advertisement

Hiriydaka: ಹಳೆ ಕಟ್ಟಡಗಳ ತೆರವಿಗೆ ದಿನ ನಿಗದಿ

06:11 PM Sep 22, 2024 | Team Udayavani |

ಹಿರಿಯಡಕ: ರಾಷ್ಟ್ರೀಯ ಹೆದ್ದಾರಿ 169ಎ ವಿಸ್ತರಣೆಗಾಗಿ ಹಿರಿಯಡಕ ಪೇಟೆಯ ಹಲವು ಹಳೆ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನ ನಿಗದಿಯಾಗಿದೆ. ಇದರೊಂದಿಗೆ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದ ವಿದ್ಯಮಾನ ನಿವಾಗುವ ಕಾಲ ಸನ್ನಿಹಿತವಾಗಿವೆ.

Advertisement

ಹಿರಿಯಡಕ ಪೇಟೆಯ ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ ಹಲವು ವರ್ಷಗಳ ಹಿಂದೆ ಯೋನೆ ರೂಪಿಸಿತ್ತು. ಆದರೆ ಹಲವಾರು ಕಾರಣಗಳಿಂದ ಯೋನೆಗೆ ತಡೆಯಾಗಿತ್ತು. ಇದೀಗ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅವುಗಳನ್ನು ತೆರವು ಮಾಡಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಇಲ್ಲಿನ ಬಹುತೇಕ ಹಳೆಕಟ್ಟಡಗಳು ಬೊಮ್ಮರಬೆಟ್ಟು ಗ್ರಾ.ಪಂ. ಅಧೀನದಲ್ಲಿವೆ. ಅಂಗಡಿ ಬಾಡಿಗೆದಾರರ ಕರಾರು ಮುಗಿದು ಒಂದು ತಿಂಗಳೇ ಕಳೆದಿದೆ. ಹೊಸ ಕರಾರು ಆಗಿಲ್ಲ. ಈ ತಿಂಗಳ 28ರೊಳಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ವ್ಯಾಪಾರಿಗಳಿಗೆ ಪಂಚಾಯತ್‌ ಸೂಚನೆ ನೀಡಿದೆ. ಸೆ. 29ರಂದು ಬಾಕಿ ಲೆಕ್ಕಾಚಾರಗಳನ್ನು ಚುಕ್ತಗೊಳಿಸಬೇಕು. ಸೆ. 30ರಿಂದ ಕಟ್ಟಡಗಳ ತೆರವು ಕಾರ್ಯಾ ಚರಣೆ ನಡೆಯಲಿದೆ ಎಂದು ಪಂಚಾಯತ್‌ ಮೂಲದಿಂದ ತಿಳಿದು ಬಂದಿದೆ. ರಾಜ್ಯ ಸರಕಾರವು ಕಟ್ಟಡ ತೆರವು ಮಾಡಿ ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಪಂಚಾಯತ್‌ಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ರುಗಲಿದೆ.

ನಿಜವೆಂದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದಾಗಲೇ ಕಟ್ಟಡ ತೆರವಿನ ಮಾತು ಕೇಳಿಬಂದಿತ್ತು. ಈ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Advertisement

ಹೆಚ್ಚಿನ ಜಾಗ ದೇವರ ಹೆಸರಲ್ಲಿ
ಹಿರಿಯಡಕ ಪೇಟೆಯ ಹೆಚ್ಚಿನ ಕಟ್ಟಡಗಳು ಶತಮಾನ ಕಂಡಿವೆ. ಪೇಟೆ ವ್ಯಾಪ್ತಿಯ ಹೆಚ್ಚಿನ ಜಾಗವು ಶ್ರೀ ವೀರಭದ್ರ ದೇವರ ಹೆಸರಿನಲ್ಲಿವೆ. ಪಂಚಾಯತ್‌ ಅಧೀನದ ಕಟ್ಟಡಗಳು ಇರುವುದೂ ಇದೇ ಜಾಗದಲ್ಲಿ. ಈಗ ಇರುವ ಕಟ್ಟಡವನ್ನು ತೆರವು ಮಾಡಿದರೆ ಮುಂದಿನ ದಿನಗಳಲ್ಲಿ ಗ್ರಾ.ಪಂ.ಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗದ ಕೊರತೆ ಆಗಲಿದೆ, ಆದಾಯಕ್ಕೂ ಹೊಡೆತ ಬೀಳಲಿದೆ.

ನೋಟಿಸ್‌ ನೀಡಲಾಗಿದೆ.
ಸರಕಾರದ ಸುತ್ತೋಲೆಯ ಹಿನ್ನೆಲೆಯಲ್ಲಿ ಪಂಚಾಯತ್‌ ಅಧಿಧೀನದಲ್ಲಿರುವ ಕಟ್ಟಡದ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಕೈ ಜೋಡಿಸಬೇಕು.ಸ್ವ ಇಚ್ಛೆಯಿಂದ ಕಟ್ಟಡಗಳನ್ನು ತೆರವುಗೊಳಿಸಿ ಪಂಚಾಯತ್‌ತೆ ಸಹಕರಿಸಬೇಕು.
-ಶಕುಂತಳಾ ಶೆಟ್ಟಿ, ಅಧ್ಯಕ್ಷರು, ಬೊಮ್ಮರಬೆಟ್ಟು ಗ್ರಾ.ಪಂ.

ಹಿರಿಯಡಕ ಜಂಕ್ಷನ್‌ ಕಾಮಗಾರಿ ತತ್‌ಕ್ಷಣ ಪ್ರಾರಂಭ
ಈಗಾಗಲೇ ತ್ರೀಡಿ ನೋಟಿಫಿಕೇಶನ್‌ ಆಗಿರುವುದರಿಂದ ಗ್ರಾಮ ಪಂಚಾಯತ್‌ ಕಟ್ಟಡಗಳ ತೆರವು ಪ್ರಕ್ರಿಯೆಯ ಜೊತೆಗೆ ಉಳಿದ ಕಟ್ಟಡಗಳ ತೆರವು ಕಾಮಗಾರಿಯೂ ಕೂಡ ನಡೆಯಲಿದೆ ಎಂದು ಹೆದ್ದಾರಿ ಪ್ರಾದಿಕಾರದಿಂದ ಮಾಹಿತಿ ಲಭಿಸಿದೆ. ಜಾಗದ ಮಾಲಕರಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ಇಲ್ಲ. ಆದರೆ ಜಾಗ ಕಳೆದುಕೊಳ್ಳುವವರಿಗೆ ಜಾಗದ ಮಾಹಿತಿ ಮತ್ತು ಸಿಗುವ ಪರಿಹಾರದ ಹಣದ ಬಗ್ಗೆ ಮಾಹಿತಿಯನ್ನು ನೀಡುವ ತಿಳಿವಳಿಕೆ ಪತ್ರವನ್ನು ನೀಡಲಾ ಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ತಿಳಿಸಿದ್ದಾರೆ.

ಹೆದ್ದಾರಿ ಕಾಮಗಾರಿ ಎಷ್ಟಾಗಿದೆ, ಎಲ್ಲೆಲ್ಲಿ ಬಾಕಿ?
• ಮಲ್ಪೆಯಿಂದ ಮೊಳಕಾಲ್ಮುರ ವರೆಗಿನ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕರಾವಳಿ ಬೈಪಾಸ್‌ನಿಂದ ಪರ್ಕಳ ಹೈಸ್ಕೂಲ್‌ ತನಕ ಮೊದಲ ಹಂತದ ಕಾಮಗಾರಿ ಮುಗಿದಿದೆ. ಪರ್ಕಳದಲ್ಲಿ ಕಾಮಗಾರಿ ಬಾಕಿ ಇದೆ.
• ಪರ್ಕಳ ಹೈಸ್ಕೂಲಿನಿಂದ ಹೆಬ್ರಿ ವರೆಗಿನ 2ನೇ ಹಂತದ ಕಾಮಗಾರಿಯಲ್ಲಿ ಪರ್ಕಳ ಹೈಸ್ಕೂಲ್‌ನಿಂದ ಮದಗ ಶೇಡಿಗುಡ್ಡೆಯವರೆಗೆ ಅಗಲೀಕರಣ ಕೆಲಸ ಪೂರ್ತಿಯಾಗಿದೆ.
• ಓಂತಿಬೆಟ್ಟು ಶಾಲೆಯಿಂದ ಹಿರಿಯಡಕದವರೆಗೆ ಬಹುತೇಕ ಮುಗಿದಿದ್ದು, ಹಿರಿಯಡಕದ ಪೇಟೆಯ ಕೆಲಸ ನಡೆದರೆ ಪರ್ಕಳ ಹೈಸ್ಕೂಲಿನಿಂದ ಹಿರಿಯಡಕದವರೆಗೆ ಏಳು ಕಿಲೋಮೀಟರ್‌ ವಿಸ್ತರಣೆ ಕೆಲಸ ಮುಗಿದಂತಾಗುತ್ತದೆ.
• ಮದಗ, ಹಿರಿಯಡಕ ಪೆರ್ಡೂರು, ಶಿವಪುರಗಳಲ್ಲಿ ಕಾಮಗಾರಿ ನಡೆಯಬೇಕಿದೆ. ಈಗಾಗಲೇ ಮದಗ ವ್ಯಾಪ್ತಿಯಲ್ಲಿ ಕೆಲಸ ಪ್ರಾರಂಭವಾಗಿದೆ.
• ಪುತ್ತಿಗೆ ಸೇತುವೆ ಪೂರ್ಣವಾಗಿದೆ. ಶಿವಪುರ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ.
• ಪೆರ್ಡೂರು ಪೇಟೆಯಲ್ಲಿ ದೇವಸ್ಥಾನದ ಮೂಲ ವಾಸ್ತುವಿಗೆ ಧಕ್ಕೆ ಬರೆದಂತೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವಂತೆ ಹೈಕೋರ್ಟ್‌ ಸೂಚಿಸಿದೆ.

-ದಿವಾಕರ ಹಿರಿಯಡಕ

Advertisement

Udayavani is now on Telegram. Click here to join our channel and stay updated with the latest news.

Next