Advertisement

ಹಿರೇಕೆರೂರು ಜೋಡೆತ್ತುಗಳಲ್ಲಿ ಬಿರುಕು!

03:41 PM Nov 10, 2022 | Team Udayavani |

ಹಾವೇರಿ: ಕಳೆದ ವಿಧಾನಸಭೆ ಉಪಚುನಾವಣೆ ವೇಳೆ ಹಿರೇಕೆರೂರು ಕ್ಷೇತ್ರದಲ್ಲಿ ಜೋಡೆತ್ತು ಎಂದು ಬಿಂಬಿಸಿಕೊಂಡಿದ್ದ ಸಚಿವ ಬಿ.ಸಿ.ಪಾಟೀಲ ಹಾಗೂ ಮಾಜಿ ಶಾಸಕ ಯು.ಬಿ.ಬಣಕಾರ ಮಧ್ಯೆ ಬಿರುಕು ಮೂಡಿದ್ದು, ಒಂಟೆತ್ತುಗಳ ರಾಜಕೀಯ ಗುದ್ದಾಟಕ್ಕೆ ಮತ್ತೆ ವೇದಿಕೆ ಸಜ್ಜಾಗುತ್ತಿದೆ.

Advertisement

ಹಲವು ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಗಳಾಗಿ ಸೆಣಸಾಡಿದ್ದ ಈ ನಾಯಕರು, ಉಪಚುನಾವಣೆ ಹಾಗೂ ಬಳಿಕ ಒಂದೆರಡು ವರ್ಷ ಒಂದಾಗಿ, ಈಗ ಮತ್ತೆ ಎದುರಾಳಿಗಳಾಗಿ ಮುಂದಿನ ಚುನಾವಣೆಯಲ್ಲಿ ರಣಾಂಗಣಕ್ಕೆ ಇಳಿಯಲು ಕಾರ್ಯತಂತ್ರ ರೂಪಿಸಿದ್ದಾರೆ. ಉಭಯ ನಾಯಕರ ಈ ರಾಜಕೀಯ ನಡೆ ಕ್ಷೇತ್ರದ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು, ಉಪಚುನಾವಣೆಯಲ್ಲಿ ಗೆದ್ದ ಬಿ.ಸಿ.ಪಾಟೀಲ ಹಾಗೂ ಕ್ಷೇತ್ರ ಬಿಟ್ಟು ಕೊಟ್ಟಿದ್ದ ಯು.ಬಿ.ಬಣಕಾರ ಬೆಂಬಲಿಗರ ನಡುವಿನ ಭಿನ್ನಾಭಿಪ್ರಾಯ, ಅಸಮಾಧಾನಗಳು ಕೆಲವು ತಿಂಗಳುಗಳಿಂದ ಬೂದಿ ಮುಚ್ಚಿದ ಕೆಂಡದಂತಿತ್ತು. ಇತ್ತೀಚೆಗೆ ಮಗದಮಾಸೂರು ಕೆರೆಗೆ ಪ್ರತ್ಯೇಕವಾಗಿ ಬಾಗಿನ ಅರ್ಪಿಸಿದ ವಿಚಾರ ಮುಖಂಡರ ನಡುವಿನ ವೈಮನಸ್ಸು ಜಗಜ್ಜಾಹೀರಾಗಿತ್ತು. ಮುಖಂಡರ ನಡುವಿನ ಅಸಮಾಧಾನ ಯು.ಬಿ.ಬಣಕಾರ ಬಿಜೆಪಿಗೆ ರಾಜೀನಾಮೆ ನೀಡುವ ಮಟ್ಟಕ್ಕೆ ಬಂದು ನಿಂತಿದೆ. ಮರೆಯಾದ ತ್ಯಾಗ-ಪ್ರೀತಿ: ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಹಾಗೂ ಬಿ.ಎಸ್‌ .ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಎಂಬ ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಯು.ಬಿ.ಬಣಕಾರ, ಒಂದು ಬಾರಿ ಮಾತ್ರ ಎಂಬ ಆಂತರಿಕ ಒಪ್ಪಂದದಂತೆ ಬಿ.ಸಿ.ಪಾಟೀಲ್‌ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಆ ಸಂದರ್ಭದಲ್ಲಿನ ತ್ಯಾಗ, ಪ್ರೀತಿ ವಿಚಾರಗಳು ಪ್ರಸ್ತುತ ರಾಜಕಾರಣದಲ್ಲಿ ಮರೆಯಾಗಿದ್ದು, ಮತ್ತೆ ಇದೇ ನಾಯಕರ ನಡುವೆ ಬಹಿರಂಗ ಜಿದ್ದಾಜಿದ್ದು ಶುರುವಾಗುವ ಲಕ್ಷಣ ಗೋಚರಿಸಿದೆ.

ಟಿಕೆಟ್‌ ತಪ್ಪುವ ಸೂಚನೆ: ಪ್ರಸ್ತುತ ಬಿಜೆಪಿಯಲ್ಲಿ ಹಾಲಿ ಸಚಿವರಾಗಿರುವ ಬಿಸಿ.ಪಾಟೀಲ್‌ಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗುವ ಮುನ್ಸೂಚನೆ ಸಿಗುತ್ತಿದ್ದಂತೆ ಯು.ಬಿ.ಬಣಕಾರ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ಅವರು ಯಡಿಯೂರಪ್ಪ ಹಾಗೂ ಇತರ ಮುಖಂಡರೊಂದಿಗೆ ಸಾಕಷ್ಟು ಬಾರಿ ಮಾತನಾಡಿದ್ದು, ಕ್ಷೇತ್ರದ ಟಿಕೆಟ್‌ ಸಿಗುವುದು ಕಷ್ಟ ಎಂಬ ಸಂದೇಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ಜತೆಗೆ ಕಾಂಗ್ರೆಸ್‌ ಡಿಸೆಂಬರ್‌ ನಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಖಚಿತ ಪಟ್ಟಿದ್ದರಿಂದಲೇ ಯು.ಬಿ.ಬಣಕಾರ ರಾಜೀನಾಮೆ ಪ್ರಕಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಅವರು ಪಕ್ಷೇತರರಾಗಿ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎನ್ನುತ್ತದೆ ಅವರ ಆಪ್ತ ಬಳಗ.

ರಾಜಕೀಯ ಭವಿಷ್ಯಕ್ಕಾಗಿ ನಿರ್ಧಾರ: ಕ್ಷೇತ್ರ ತ್ಯಾಗ ಮಾಡಿದ್ದರಿಂದ ಬಣಕಾರಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನ ನೀಡಲಾಗಿತ್ತು. ಆದರೆ, ಈಗ ವಿಧಾನಸಭೆ ಚುನಾವಣೆಗೆ ಐದಾರು ತಿಂಗಳು ಕಾಲಾವಧಿ ಇರುವಾಗಲೇ ಮಾಜಿ ಶಾಸಕ ಯು.ಬಿ.ಬಣಕಾರ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ತೊರೆಯುತ್ತಿದ್ದಾರೆ. ತಮ್ಮ ಹಾಗೂ ಕಾರ್ಯಕರ್ತರ ರಾಜಕೀಯ ಭವಿಷ್ಯಕ್ಕಾಗಿ ಈ ರೀತಿಯ ನಿರ್ಧಾರ ಕೈಗೊಳ್ಳುವಂತೆ ಕ್ಷೇತ್ರದಲ್ಲಿ ಅಭಿಮಾನಿಗಳಿಂದ ಒತ್ತಡವೂ ಹೆಚ್ಚಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

Advertisement

ಆಂತರಿಕ ಒಪ್ಪಂದದಂತೆ ಬಿಜೆಪಿಯಿಂದ ಮತ್ತೆ ತಮ್ಮ ಕ್ಷೇತ್ರ ಮರಳಿ ಸಿಗಬಹುದು ಎಂಬ ಆಶಾಭಾವನೆ ಯೊಂದಿಗೆ ಈವರೆಗೆ ಬಿಜೆಪಿಯಲ್ಲೇ ಉಳಿದುಕೊಂಡಿ ದ್ದರು. ಇತ್ತೀಚೆಗೆ ಬಿ.ಸಿ.ಪಾಟೀಲ್‌ಗೆ ಈ ಬಾರಿಯೂ ಟಿಕೆಟ್‌ ಖಚಿತ ಎಂಬ ಮುನ್ಸೂಚನೆ ಅರಿತು ಚುನಾವಣೆ ತಯಾರಿ ನಡೆಸುವ ದೃಷ್ಟಿಯಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವ, ಉಗ್ರಾಣ ನಿಗಮದ ಅಧ್ಯಕ್ಷ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಪತ್ರದಲ್ಲಿ ಏನಿದೆ?

ಸಾರ್ವಜನಿಕ, ಕೌಟುಂಬಿಕ ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಎಲ್ಲರಿಗೂ ಬರುತ್ತದೆ. ನನ್ನ ತಂದೆಯವರ ಕಾಲದಿಂದಲೂ ಹಾಗೂ ನನ್ನ 38 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾವು ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ಗೌರವಿಸಿದ್ದೀರಿ. ಕೆಲವೊಂದು ನಿರ್ಣಯಗಳು ಪ್ರಾರಂಭದಲ್ಲಿ ಕೆಲವರಿಗೆ ಸರಿ ಎನ್ನಿಸದಿದ್ದರೂ ಕೊನೆಗೆ ಸಂತೋಷದಿಂದ ಸ್ವಾಗತಿಸಿದ್ದೀರಿ. ಒಳ್ಳೆಯ ಉದ್ದೇಶದಿಂದ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಂಡಾಗ ನಂತರದ ದಿನಗಳಲ್ಲಿ ಅದು ಸರಿ-ತಪ್ಪು ಎಂದು ವಿಮರ್ಶೆ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನ ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆಗಳನ್ನು ನೇರವಾಗಿ, ಮುಕ್ತವಾಗಿ ಹಂಚಿಕೊಂಡಿದ್ದೀರಿ. ನನಗೆ ಸಲಹೆ ಸೂಚನೆಗಳನ್ನು ನೀಡಿದ್ದೀರಿ. ಮತ್ತೂಮ್ಮೆ ನಿರ್ಧಾರ ತೆಗೆದುಕೊಳ್ಳುವ ಕಾಲ ಕೂಡಿ ಬಂದಿದೆ. ನಾನು ಇಂದು ಬಿಜೆಪಿ ಸದಸ್ಯತ್ವ, ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಯಾರಿಗಾದರೂ ಅಸಂತೋಷ ಬೇಸರ ಆದರೆ, ದಯವಿಟ್ಟು ನನ್ನನ್ನು ಕ್ಷಮಿಸಿ. ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next