ದಾವಣಗೆರೆ: ಹಿಜಾಬ್ ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ ಕಾಲೇಜು ಪುನರರಾಂಭದ ಎರಡನೇ ದಿನ ಗುರುವಾರ ಹಿಜಾಬ್ ವಿಚಾರ ಭುಗಿಲೆದ್ದಿದ್ದು, ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗಳಿಗೆ ತೆರಳಿದ್ದರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೆಲ ವಿದ್ಯಾರ್ಥಿನಿಯರು, ನಮಗೆ ಹಿಜಾಬ್ ಮತ್ತು ಶಿಕ್ಷಣ ಎರಡೂ ಮುಖ್ಯ ಹಾಗಾಗಿಯೇ ಕಾಲೇಜಿಗೆ ಬಂದಿದ್ದೇವೆ. ಇಲ್ಲ ಎಂದರೆ ಮನೆಯಲ್ಲೇ ಇರುತ್ತಿದ್ದೆವು. ನಮಗೆ ಧರ್ಮ, ಸಂಪ್ರದಾಯ ಆಚರಣೆ ಮುಖ್ಯ. ಹಾಗಾಗಿ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕು. ನ್ಯಾಯಾಲಯದ ಆದೇಶ ಬರುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಬೇರೆಯವರು ನಮ್ಮ ಹಕ್ಕು ಕಿತ್ತುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ನಾವು ನಮ್ಮ ಹಕ್ಕುಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಶಾಲಾ ಕಾಲೇಜುಗಳಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಧರ್ಮ, ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಜೊತೆಗೆ ಪೋಷಕರು ಸಹ ಆಗಮಿಸಿದ ಕಾರಣ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು.