ಬಸವಕಲ್ಯಾಣ: ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-65ರ ಮಧ್ಯದಿಂದ ಗ್ರಾಮೀಣ ಭಾಗಕ್ಕೆ ಹೋಗುವ ಕೆಲವು ತಿರುವುಗಳು ಪ್ರಯಾಣಿಕರು ಹಾಗೂ ಸಾರ್ವಜನಿಕರ ಜೀವಕ್ಕೆ ಸಂಚಕಾರವಾಗಿ ಮಾರ್ಪಟ್ಟಿವೆ!
ತಾಲೂಕಿನ ವ್ಯಾಪ್ತಿಯ ರಾಜೇಶ್ವರ ಗ್ರಾಮದಿಂದ ಹಿಡಿದು ಚಂಡಕಾಪೂರ ವರೆಗಿನ ರಾಷ್ಟ್ರೀಯ ಹೆದ್ದಾರಿಯ ರಾಜೇಶ್ವರ ಹನುಮಾನ ದೇವಸ್ಥಾನ ಸೇತುವೆ, ಕೌಡಿಯಾಳ ಕ್ರಾಸ್, ಮಂಠಾಳ ಸರ್ಕಲ್ ಹಾಗೂ ಚಂಡಕಾಪುರ ಹತ್ತಿರ ಅತಿ ಹೆಚ್ಚು ಅಪಘಾತಗಳು ಸಂಭವಿಸಿ, ಜನರು ಜೀವ ಕಳೆದುಕೊಂಡಿರುವ ಘಟನೆ ನಡೆದಿವೆ.
ಎರಡು ವರ್ಷದಲ್ಲಿ ನಾಲ್ಕು ಕ್ರಾಸ್ಗಳಲ್ಲಿ ಒಟ್ಟು 32 ಅಪಘಾತಗಳು ಸಂಭವಿಸಿ 25 ಜನ ಮೃತ ಪಟ್ಟಿದ್ದು, ಹೆಚ್ಚು ಸಂಖ್ಯೆಯಲ್ಲಿ ಬೈಕ್ ಮೇಲೆ ಹಾಗೂ ಕಾರಿನಲ್ಲಿ ಪ್ರಯಾಣಿಸುವ ಯುವಕರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ ಕೆಲವು ತಿಂಗಳ ಹಿಂದೆ ಬೈಕ್ ಮೇಲೆ ಮಂಠಾಳ ಕ್ರಾಸ್ ದಾಟುವಾಗ ತಂದೆ, ಮಗನ ಮೇಲಿಂದ ಲಾರಿ ಹರಿದು ಎರಡು ದೇಹಗಳು ಚಿದ್ರವಾಗಿ ಮೃತ ಪಟ್ಟಿರುವ ಘಟನೆ ನಡೆದಿತ್ತು. ಹಾಗೂ ಕಳೆದ ಶನಿವಾರ 30 ವರ್ಷ ಯುವಕ ಸ್ಥಳದಲ್ಲಿ ಮೃತ ಪಟ್ಟಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಅಪಘಾತ ಸಮಯದಲ್ಲಿ ಹಿಂಬದಿ ಕುಳಿತವರ ಪೈಕಿ ಬಹುತೇಕರಲ್ಲಿ ಕೆಲವರು ಅಂಗವಿಕರಾದರೆ ಮತ್ತೆ ಕೆಲವರು ಶಾಶ್ವತವಾಗಿ ಅಂಗಾಂಗಳನ್ನು ಕಳೆದುಕೊಂಡು, ಉದ್ಯೋಗ ಇಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಸಂಚಾರಿ ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು.
ಆದ್ದರಿಂದ ಜೀವ ತೆಗೆಯುವ ಇಂತಹ ತಿರುವುಗಳ ಬಳಿ ಪ್ರಯಾಣಿಕರ ಜೀವ ಉಳಿಸುವ ಉದ್ದೇಶದಿಂದ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆಯ ಫಲಕ, ಸಿಗ್ನಲ್ ವ್ಯವಸ್ಥೆ ಹಾಗೂ ಅಪಘಾತಗಳು ಸಂಭವಿಸಿದಂತೆ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ ಎಂಬುವುದು ಪ್ರಯಾಣಿಕರ ಒತ್ತಾಯವಾಗಿದೆ.
ವೀರಾರೆಡ್ಡಿ ಆರ್.ಎಸ್.