Advertisement

ಹೆದ್ದಾರಿ ಬದಿ ಚರಂಡಿ ನೀರು; ಬಗೆಹರಿಯದ ಗೋಳು

11:16 PM Jun 12, 2020 | Sriram |

ಉಡುಪಿ: ಜಿಲ್ಲೆಯ ಹಲವೆಡೆ ಹೆದ್ದಾರಿ ಕಾಮಗಾರಿ ಸಮರ್ಪಕ ರೀತಿಯಲ್ಲಿ ಪೂರ್ಣ ಗೊಳ್ಳದೆ ಈಗ ಮಳೆ ಬಂದು ನೀರು ಮುಖ್ಯ ರಸ್ತೆ ಹಾಗೂ ತಗ್ಗು ಪ್ರದೇಶಗಳ ಜನವಸತಿ ಇರುವ ಕಡೆಗೆ ಹರಿದು ಅಡಚಣೆ ಉಂಟಾಗುತ್ತಿದೆ.

Advertisement

ರಾ.ಹೆ. 169ರಲ್ಲಿ ಬಹುತೇಕ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪರ್ಕಳ ಭಾಗದಲ್ಲಷ್ಟೆ ಬಾಕಿಯಿದೆ. ಹೆದ್ದಾರಿ ಬದಿಯ ಚರಂಡಿ ಸಾಕಷ್ಟು ಕಡೆ ಅಪೂರ್ಣವಾಗಿದ್ದು, ಬಿರುಸಿನ ಮಳೆ ಬಂದಾಗ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಯೋಜನೆ ಯಂತೆ ಚರಂಡಿ ಕಾಮಗಾರಿ ಆರಂಭ ವಾಗಿದ್ದರೂ, ನಾನಾ ಕಾರಣಗಳಿಂದ ವಿಳಂಬವಾಗಿದೆ.

ಅಂಗಡಿ, ಹೊಟೇಲ್‌ಗೆ
ನುಗ್ಗುವ ನೀರು
ಉಡುಪಿ-ಮಣಿಪಾಲ ರಾ.ಹೆ.ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಈಗಲೂ ಮಳೆಗೆ ನಡೆಯುತ್ತಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಕೆಸರು ಮಿಶ್ರಿತ ನೀರು ರಸ್ತೆ ಹಾಗೂ ಹೆದ್ದಾರಿ ಬದಿಯ ಮನೆ, ಅಂಗಡಿ, ಹೊಟೇಲುಗಳಿಗೆ ನುಗ್ಗಿತ್ತು. ಕಲ್ಸಂಕ ಪ್ರವೇಶಿಸುವಲ್ಲಿ ರಸ್ತೆಗೆ ನೀರು ಹರಿದಿದೆ. ಸಿಂಡಿಕೇಟ್‌ ಸರ್ಕಲ್‌, ಇಂದ್ರಾಳಿ, ಲಕ್ಷ್ಮೀಂದ್ರ ನಗರ ಭಾಗಗಳಲ್ಲಿಯೂ ಸಮಸ್ಯೆ ಇದೇ ರೀತಿ ಇತ್ತು. ಅಲ್ಲಲ್ಲಿ ಕೃತಕ ನೆರೆ ಉಂಟಾಗುತ್ತಿದ್ದು, ವಾಹನ ಸವಾರರು, ಪಾದಚಾರಿಗಳು, ಸಾರ್ವಜನಿಕರು ಭಾರೀ ತೊಂದರೆ ಅನುಭವಿಸಿದರು.

ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಸಮಸ್ಯೆ

ಸಿಂಡಿಕೇಟ್‌ ಸರ್ಕಲ್‌ನಿಂದ ಉಡುಪಿ ಭಾಗ ಹಾಗೂ ಅಲ್ಲಿಂದ ಮುಂದಕ್ಕೆ ಹಾದು ಹೋಗುವ ಹೆದ್ದಾರಿ ಬದಿ ಚರಂಡಿ ಕಾಮಗಾರಿ ಅಲ್ಲಲ್ಲಿ ಮೊಟಕುಗೊಂಡಿದೆ. ಕೆಲವು ಕಡೆಗಳಲ್ಲಿ ಚರಂಡಿಯನ್ನು ಅರ್ಧಕ್ಕೆ ನಿಲ್ಲಿಸಿ, ಕಾಂಕ್ರೀಟ್‌ ಹಾಕಿ ಮುಚ್ಚಲಾಗಿದೆ. ನೀರು ಹರಿಯಲು ಪೈಪ್‌ಲೈನ್‌ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ರಾ.ಹೆ. ಮಳೆ ಬಂದಾಗ ತೋಡಿನಂತಾಗುತ್ತಿದೆ. ರಸ್ತೆ ಬದಿ ಕಾಮಗಾರಿಗೆಂದು ತೆರೆದಿಟ್ಟ ಸ್ಥಳಗಳು ನೀರು ತುಂಬಿ ಕೆರೆಗಳಂತಾಗುತ್ತಿವೆ.ತ್ಯಾಜ್ಯ ನೀರು ಹರಿದು ಹೋಗಲು
ಸಮಸ್ಯೆಯಾಗಿದೆ.

ಪರ್ಕಳದಲ್ಲಿ ಚರಂಡಿಯೇ ಮಾಯ!
ಪರ್ಕಳದ ರಾ.ಹೆ. ಬದಿಯ ಚರಂಡಿ ಸಹಿತ ವಿವಿಧ ಕಡೆಗಳಲ್ಲಿರುವ ಚರಂಡಿ ಹೂಳು ತೆರವಾಗಿಲ್ಲ. ಕೆಳಪರ್ಕಳದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಬಳಿ ನೀರು ಹರಿಯುವ ದೊಡ್ಡ ತೋಡು ಇದೆ. ಇದರಲ್ಲಿ ರಾಶಿಗಟ್ಟಲೆ ಕಸ ತುಂಬಿದ್ದು, ಮಳೆನೀರಿನ ಹರಿವಿಗೆ ಅಡಚಣೆಯಾಗುತ್ತಿದೆ. ಹೆದ್ದಾರಿ ಕಾಮಗಾರಿ ಅಪೂರ್ಣ ಸ್ಥಿತಿಯಿಂದ ರಸ್ತೆ ಬದಿಯ ಮಣ್ಣು ರಸ್ತೆಗೆ ಹರಿದು ಭಾರೀ ಅನಾಹುತಕ್ಕೆ ಕಾರಣವಾಗಿದೆ.

ಚರಂಡಿ ಅವ್ಯವಸ್ಥೆಗೆ ಆಕ್ರೋಶ
ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ ಮಳೆ ನೀರು ಹರಿದು ಹೋಗಲು ಮಳೆ ಬರುವ ಮುಂಚಿತವೇ ಸಿದ್ಧಗೊಳ್ಳ ಬೇಕಿತ್ತು. ಈಗ ಮಳೆಗೆ ತ್ಯಾಜ್ಯ ನೀರು ಚರಂಡಿಯಿಂದ ಹೊರಗೆ ಹರಿದು ರಾದ್ಧಾಂತ ಆಗುತ್ತಿದೆ. ಹೆದ್ದಾರಿ ಇಲಾಖೆಯ ಈ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಸರಿ ಎಂದು ಹೆದ್ದಾರಿ ಬದಿ ನಾಗರಿಕರು ಚರಂಡಿ ಅವ್ಯವಸ್ಥೆ ಬಗ್ಗೆ ಇಲಾಖೆಯನ್ನು ದೂರಿದ್ದಾರೆ.

Advertisement

ಸಮಸ್ಯೆ ನಿವಾರಣೆಗೆ ಕ್ರಮ
ಕಳೆದ ಅಕ್ಟೋಬರ್‌ ತಿಂಗಳಲ್ಲಿ ಚರಂಡಿ ಕಾಮಗಾರಿ ಆರಂಭಗೊಂಡಿತ್ತು. ಹೆದ್ದಾರಿ ಬದಿಯ ಕೆಲವು ಖಾಸಗಿ ವ್ಯಕ್ತಿಗಳು ಕಾಮಗಾರಿ ವೇಳೆ ತಕರಾರು ಮಾಡಿದ ಕಾರಣ ವಿಳಂಬವಾಗಿದೆ. ಈಗ ಮಳೆ ಬಂದಾಗ ಹೆದ್ದಾರಿ ಇಲಾಖೆಯನ್ನು ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಸಾಧ್ಯವಾದಷ್ಟು ಸಮಸ್ಯೆ ನಿವಾರಣೆಗೆ ಕ್ರಮ ವಹಿಸುತ್ತಿದ್ದೇವೆ.
-ಮಂಜುನಾಥ ನಾಯಕ್‌, ಎಂಜಿನಿಯರ್‌ , ಹೆದ್ದಾರಿ ಇಲಾಖೆ

ಕೊಲ್ಲೂರು: ಕೆಸರು ಗದ್ದೆಯಾದ ರಾ.ಹೆದ್ದಾರಿ ಮುಖ್ಯ ರಸ್ತೆ
ಕೊಲ್ಲೂರು : ಇಲ್ಲಿನ ದಳಿ ಬಳಿ ಇರುವ ಚೆಕ್‌ ಪೋಸ್ಟ್‌ ಸನಿಹದ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆ ಭಾರೀ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ತೊಡಕಾಗಿದೆ.


ಸೊಸೈಟಿಯ ಬಳಿ ಇರುವ ಎತ್ತರ ಪ್ರದೇಶದಲ್ಲಿ ಗುಡ್ಡ ಕುಸಿದು ಆ ಕೆಂಪು ನೀರು ಈ ರಸ್ತೆಯಲ್ಲಿ ಹರಿಯುತ್ತದೆ. ಇಲ್ಲಿ ಸಮರ್ಪಕ ಒಳಚರಂಡಿ ಇಲ್ಲದಿರುವುದು ಇದಕ್ಕೆ ಕಾರಣ. ಸಮೀಪದ ಹೆಗ್ಡೆ ಹಕ್ಲು ಹಾಗೂ ದಳಿಯ ನಡುವಿನ ರಾ.ಹೆದ್ದಾರಿಯ ಒಂದು ಬದಿ ಕಳೆದ ವರುಷ ಮಳೆಗಾಲ
ದಲ್ಲಿ ಕುಸಿದಿತ್ತು. ಆ ಭಾಗವನ್ನು ಜೆ.ಸಿ.ಬಿ. ಬಳಸಿ ದುರಸ್ತಿಗೊಳಿಸಿದ್ದರು. ಈ ಬಾರಿಯ ಮಳೆಗಾಲದಲ್ಲಿ ಮತ್ತೆ ರಸ್ತೆ ಕುಸಿಯುವ ಭೀತಿಯಿದೆ.

ಒಳಚರಂಡಿ ನಿರ್ಮಿಸಲು ಮನವಿ
ಈಗಾಗಲೇ ಶೃಂಗೇರಿಯಲ್ಲಿರುವ ರಾ.ಹೆದ್ದಾರಿಯ ವಿಭಾಗಕ್ಕೆ ಇಲ್ಲಿನ ರಸ್ತೆಯ ದುಃಸ್ಥಿತಿ ಬಗ್ಗೆ ಪತ್ರ ಮುಖೇನ ಮಾಹಿತಿ ನೀಡಿದ್ದು ಆ ಭಾಗದಲ್ಲಿ ಶಾಶ್ವತ ನೆಲೆಯಲ್ಲಿ ಒಳ ಚರಂಡಿ ನಿರ್ಮಿಸುವಂತೆ ಮನವಿ ಮಾಡಲಾಗಿದೆ.
-ರಾಜೇಶ್‌, ಪಿಡಿಒ. ಕೊಲ್ಲೂರು ಗ್ರಾ.ಪಂ.

ಮಟ್ಟು ಸೇತುವೆ: ಕಾಮಗಾರಿ ಮಣ್ಣು ತೆರವು
ಕಟಪಾಡಿ: ಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿಯುತ್ತಿರುವ ಪಿನಾಕಿನಿ ಹೊಳೆಗೆ ಹೊಸದಾಗಿ ಮಟ್ಟು ಸೇತುವೆ ನಿರ್ಮಾಣ ಪ್ರದೇಶದಲ್ಲಿ ಕಾಮಗಾರಿಗಾಗಿ ಹೊಳೆಗೆ ಅಡ್ಡಲಾಗಿ ತುಂಬಲಾಗಿದ್ದ ಮಣ್ಣನ್ನು ಜೂ.12ರಂದು ತೆರವುಗೊಳಿಸಿ, ಹೊಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡ ಲಾಯಿತು.


ಪಿನಾಕಿನಿ ಹೊಳೆಗೆ 9.25 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳು ತ್ತಿರುವ ಈ ಸೇತುವೆಯ ಕಾಮಗಾರಿಗಾಗಿ ಹೊಳೆಗೆ ಮಣ್ಣನ್ನು ತುಂಬಿ ಕಾಮಗಾರಿ ನಡೆಸಲಾಗುತ್ತಿತ್ತು. ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವುದರಲ್ಲಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಕಾಮಗಾರಿಯಲ್ಲಿ ವ್ಯತ್ಯಯ ಉಂಟಾಗಿ ಸೇತುವೆ ಪೂರ್ಣಗೊಂಡಿಲ್ಲ. ಅದಕ್ಕಾಗಿ ತುಂಬಿಸಲಾಗಿದ್ದ ಮಣ್ಣಿನಿಂದ ತುಂಬಿ ಹರಿಯು ತ್ತಿರುವ ಮಟ್ಟು ಪಿನಾಕಿನಿ ನೀರಿನ ಸರಾಗ ಹರಿಯುವಿಕೆಗೆ ಸಮಸ್ಯೆ ಉಂಟಾಗಿತ್ತು.

ಮಳೆಗಾಲ ವಿಪತ್ತು ನಿರ್ವಹಣೆಗೆ ಕಂಟ್ರೋಲ್‌ ರೂಂ
ಉಡುಪಿ ನಗರಸಭೆ ಕಂಟ್ರೋಲ್‌ ರೂಂ. 0820-2593366/2520306
ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್‌ ರೂಂ. 0820-2574802
ಉಡುಪಿ ಕೇಂದ್ರ ಶಶಿರೇಖಾ (ಕಿರಿಯ ಆರೋಗ್ಯ ನಿರೀಕ್ಷಕಿ) 8296840456
ಪಾಂಡುರಂಗ (ಕಂದಾಯ ನಿರೀಕ್ಷಕ) 9980250642
ಜಿಲ್ಲಾ ಕೇಂದ್ರ (ಜಿಲ್ಲಾಧಿಕಾರಿ ಕಚೇರಿ) ಹೆಲ್ಪ್ಲೈನ್‌ 1077
ಜಿಲ್ಲಾಸ್ಪತ್ರೆ ಉಡುಪಿ ಸಹಾಯವಾಣಿ 9449827833
ಕುಂದಾಪುರ 9740881226
ಕುಂದಾಪುರದ ತುರ್ತು ಸಂಪರ್ಕಗಳು
ಮೆಸ್ಕಾಂ 08254230382
ತಾಲೂಕು ಕಚೇರಿ 08254230357
ಎಎಸ್‌ಪಿ ಕಚೇರಿ 08254232338
ಅಗ್ನಿಶಾಮಕ ಕಚೇರಿ 08254230724
ಪುರಸಭೆ 08254230410

Advertisement

Udayavani is now on Telegram. Click here to join our channel and stay updated with the latest news.

Next