Advertisement

ಹೈವೇ ಸಮಸ್ಯೆ: ಸರ್ಕಾರದ ಕೈ ಸೇರಿದ ಸಮೀಕ್ಷಾ ವರದಿ

10:39 AM Jul 30, 2023 | Team Udayavani |

ರಾಮನಗರ: ಎಂಟು ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ವಾಗಿರುವ ಬೆಂಗಳೂರು- ಮೈಸೂರು ದಶಪಥ ರಸ್ತೆಯ ವೈಫಲ್ಯಗಳು ವಿವಿಧ ತಂಡಗಳ ಪರಿಶೀಲನೆಯ ಬಳಿಕ ಅನಾವರಣ ಗೊಳ್ಳುತ್ತಿದ್ದು, ಅವೈಜ್ಞಾನಿಕ ರಸ್ತೆಯಿಂದ ಜೀವಗಳು ಬಲಿಯಾಗಿದ್ದು, ಈ ಸಾವಿಗೆ ಯಾರುಹೊಣೆ ಎಂಬ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ.

Advertisement

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ 99 ಮಾರಣಾಂತಿಕ, 283 ಸಾಮಾನ್ಯ ಅಪಘಾತಗಳು ಸಂಭವಿಸಿದ್ದು, 111 ಮಂದಿ ಸಾವಿಗೀಡಾಗಿದ್ದರೆ, 442 ಮಂದಿ ಗಾಯಗೊಂಡಿದ್ದಾರೆ. ನೂರಾರು ಕುಟುಂಬಗಳ ಬದುಕನ್ನು ಕರಾಳಗೊಳಿಸಿರುವ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ ಎಂಬುದು ಇದೀಗ ಸಾಲು ಸಾಲು ಪರಿಶೀಲನೆಯಿಂದ ವೇದ್ಯವಾಗಿದ್ದು, ಈ ಸಾವು ನೋವಿನ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ನಾಲ್ಕು ತಂಡದಿಂದ ಪರಿಶೀಲನೆ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ನಿರಂತರ ಅಪಘಾತಗಳ ಹಿನ್ನೆಲೆ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಪೊಲೀಸ್‌ ಇಲಾಖೆ ಹೈವೇ ಸುರಕ್ಷತಾ ನಿಯಮಗಳನ್ನು ಪರಿಶೀಲಿಸಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ತಂಡ, 18 ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ 54 ಅಂಶದ ವರದಿಯನ್ನು ನೀಡಿತ್ತು. ಇದಾದ ಬಳಿಕ ಮುಖ್ಯಕಾರ್ಯದರ್ಶಿಗಳ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ, ಎಸ್ಪಿ, ಲೋಕೋ ಪಯೋಗಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಎಕ್ಸ್‌ಪ್ರೆಸ್‌ ವೇನಲ್ಲಿ ಸುರಕ್ಷತಾ ಕ್ರಮ ಗಳು ಹಾಗೂ ಸಮಸ್ಯೆಯನ್ನು ಪರಿಶೀಲನೆ ಮಾಡಿ ಲೋಪಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ನೀಡಿ ದೆ. ಇನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌ ಎರಡು ಬಾರಿ ಎಕ್ಸ್‌ಪ್ರೆಸ್‌ ವೇನಲ್ಲಿ ಪರಿಶಿಲನೆ ನಡೆಸಿದರು.

ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂರು ಮಂದಿ ತಜ್ಞರ ಸಮಿತಿಯನ್ನು ರಚಿಸಿ ಹೆದ್ದಾರಿಯ ರಸ್ತೆ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ತಿಳಿಸಿದೆ. ಸರ್ಕಾರದ ಅಂಗಳದಲ್ಲಿ ಚಂಡು: ಎಕ್ಸ್‌ಪ್ರೆಸ್‌ ವೇಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ನಡೆಸಿರುವ ಸಮೀಕ್ಷಾ ವರದಿಗಳು ಸರ್ಕಾರದ ಕೈ ಸೇರಿವೆ. ಇನ್ನು ಎರಡು ಬಾರಿ ಹೆದ್ದಾರಿ ಪರಿಶೀಲನೆ ನಡೆಸಿದ ಎಡಿಜಿಪಿ ಅಲೋಕ್‌ಕುಮಾರ್‌, ಬಹಿರಂಗವಾಗಿಯೇ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇನ್ನು ಹೆದ್ದಾರಿ ಪ್ರಾಧಿಕಾರದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಎಡಿಜಿಪಿ ಅಲೋಕ್‌ ಕುಮಾರ್‌ ಮೌಖೀಕ ವರದಿ ನೀಡಿದ್ದಾರೆ. ಈ ಎಲ್ಲಾ ವರದಿ ಸಲ್ಲಿಕೆ ಹಿನ್ನೆಲೆ ಸರ್ಕಾರದ ಅಂಗಳದಲ್ಲಿ ಇದೀಗ ಚಂಡಿದ್ದು, ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಕಾಯ್ದು ನೋಡಬೇಕಿದೆ.

ತಜ್ಞರ ವರದಿ ನಿರೀಕ್ಷೆ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿಯಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ ಜು.17ರಿಂದ ಜು.20ರವರೆಗೆ ಎನ್‌ಎಚ್‌ಎಐ ರಚಿಸಿದ ರಸ್ತೆ ಸುರಕ್ಷತಾ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ತಂಡ ಜು.30ರೊಗಳಗೆ ವರದಿ ನೀಡಬೇಕಿದೆ. ಇನ್ನೂ ಈ ಸಮಿತಿಯ ವರದಿ ಹೊರ ಬರದಿರುವ ಹಿನ್ನೆಲೆ ಈ ಸಮಿತಿಯ ವರದಿಯನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

Advertisement

ಹೈವೇನಲ್ಲಿ ಹತ್ತಾರು ಸಮಸ್ಯೆ: ಶಾಶ್ವತ ಪರಿಹಾರ ಯಾವಾಗ?: ಎಕ್ಸ್‌ಪ್ರೆಸ್‌ ಹೈವೇ ಕಾಮಗಾರಿ ಆರಂಭದಿಂದಲೂ ಲೋಪದಿಂದ ಕೂಡಿದೆ ಎಂದು ಹೇಳಲಾಗುತಿತ್ತು. ಇದೀಗ ಟ್ರಯಲ್‌ ಬೇಸ್‌ನಲ್ಲಿ ಇದು ಸಾಬೀತಾಗಿದ್ದು, ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ ಎಂಬುದಕ್ಕೆ ಇಷ್ಟೊಂದು ಸಮಿತಿಗಳು ಪರಿಶೀಲನೆ ಮಾಡುತ್ತಿರುವುದೇ ಸಾಕ್ಷಿಯಾಗಿದೆ. ಇನ್ನು ಹೆದ್ದಾರಿಯಲ್ಲಿ ಪೊಲೀಸರನ್ನ ನಿಲ್ಲಿಸಿ ದಂಡ ಹಾಕುತ್ತಿರುವುದು ಸೇರಿದಂತೆ ಇದುವರೆಗೆ ಪೊಲೀಸ್‌ ಇಲಾಖೆ ಕೈಗೊಂಡಿರುವ ತಾತ್ಕಾಲಿಕ ಪರಿಹಾರಗಳು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಹೀಗಾಗಿ, 119 ಕಿ.ಮೀ. ಉದ್ದದ ರಸ್ತೆಯಲ್ಲಿ ಸುಮಾರು 25 ಬ್ಲಾಕ್‌ಸ್ಪಾಟ್‌ ಗಳನ್ನು ಪೊಲೀಸ್‌ ಇಲಾಖೆ ಗುರುತಿಸಿದ್ದು, ಈ ಬ್ಲಾಕ್‌ಸ್ಪಾಟ್‌ಗಳ ಬಳಿ ಸುರಕ್ಷತಾ ಕಾಮಗಾರಿ ಸೇರಿದಂತೆ ಅಗತ್ಯ ಕ್ರಮಗಳನ್ನು ಎನ್‌ಎಚ್‌ಎಐ ಯಾವಾಗ ಕೈಗೊಳ್ಳಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇನ್ನು ಎಕ್ಸ್‌ಪ್ರೆಸ್‌ ವೇನದಲ್ಲಿ ರೆಸ್ಟ್‌ ಏರಿಯಾ, ಹೆಲಿಪ್ಯಾಡ್‌, ಟ್ರಾಮ ಸೆಂಟರ್‌, ತುರ್ತು ಸನ್ನಿವೇಶಗಳಲ್ಲಿ ಎಂಟ್ರಿ-ಎಕ್ಸಿಟ್‌, ಸೂಚನಾ ಫಲಕಗಳ ಅಳವಡಿಕೆ, ಓಪನ್‌ ಟೋಲ್‌ನಿಂದ ಕ್ಲೋಸ್‌ ಟೋಲ್‌ ಮಾರ್ಪಾಡು ಸೇರಿದಂತೆ ಇನ್ನು ಅನೇಕ ಕೆಲಸ ಬಾಕಿ ಉಳಿದಿದ್ದು, ಇವುಗಳನ್ನು ಯಾವಾಗ ಪೂರ್ಣಗೊಳಿಸುವರು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ಎಕ್ಸ್‌ಪ್ರೆಸ್‌ವೇನಲ್ಲಿ ಸಮಸ್ಯೆಗಳನ್ನು ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಕೆಲವೆಡೆ ಕಾಮಗಾರಿಯಲ್ಲಿ ಲೋಪಗಳು ಕಂಡು ಬಂದಿವೆ. ಸಮಸ್ಯೆ ನಿರ್ಮಾಣವಾದ ಬಳಿಕ ಪೊಲೀಸರನ್ನು ಸರಿ ಮಾಡಲು ಬನ್ನಿ ಎನ್ನುತ್ತಿದ್ದಾರೆ. ಎಲ್ಲಾ ಸಮಸ್ಯೆಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಮೌಖೀಕ ವರದಿ ನೀಡಲಾಗಿದೆ. ಅಲೋಕ್‌ ಕುಮಾರ್‌,ಎಡಿಜಿಪಿ, ಸಂಚಾರ ಮತ್ತು ಸುರಕ್ಷತಾ ವಿಭಾಗ

ಎಕ್ಸ್‌ಪ್ರೆಸ್‌ ವೇ ಕಾಮಗಾರಿಗೆ 8 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಎನ್‌ಎಚ್‌ಎಐ ಅಧಿಕೃತ ಪ್ರಕಟಣೆ ತಿಳಿಸಿದೆ. ಇಷ್ಟೊಂದು ದುಬಾರಿ ಹಣದ ರಸ್ತೆ ಅವ್ಯವಸ್ಥೆಗಳು ಇದೀಗ ಬಯಲಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಮೃತರಾಗಿರುವ ಕುಟುಂಬಗಳಿಗೆ ಎನ್‌ಎಚ್‌ಎಐ ಹಾಗೂ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಜನರ ಜೀವ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು. ಮಲ್ಲಿಕಾರ್ಜುನ್‌, ಸಾಮಾಜಿಕ ಹೋರಾಟಗಾರ, ಕನಕಪುರ

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next