Advertisement

ಉಡುಪಿ ತಾಲೂಕಿಗೆ ಅತ್ಯಧಿಕ ಕಡತ ವಿಲೇವಾರಿಯ ಹೆಗ್ಗಳಿಕೆ

09:12 AM Apr 14, 2021 | Team Udayavani |

ಉಡುಪಿ: ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿ ಆಗಿ ಪರಿವರ್ತಿಸಲು ವರ್ಷಗಟ್ಟಲೆ ವಿಳಂಬಕ್ಕೆ ತಡೆ ಹಾಗೂ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಜಾರಿಗೆ ತಂದ  ಅಫಿದವಿತ್‌ ಆಧಾರಿತ ಆನ್‌ಲೈನ್‌ ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಕಡತಗಳನ್ನು ವಿಲೇವಾರಿ ಮಾಡಿರುವ ಹೆಗ್ಗಳಿಕೆಗೆ ಉಡುಪಿ ಜಿಲ್ಲೆ ಪಾತ್ರವಾಗಿದೆ.

Advertisement

ಹಿಂದೆ ಅರ್ಜಿ ಸಲ್ಲಿಕೆಯ ಅನಂತರ ಭೂ ಪರಿವರ್ತನೆಗೆ ಕನಿಷ್ಠ ಆರೇಳು ತಿಂಗಳು ಬೇಕಾಗುತ್ತಿತ್ತು. 20ರಿಂದ 25 ದಾಖಲೆ ಪತ್ರ ಸಲ್ಲಿಕೆ ಜತೆಗೆ ಹಲವಾರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಇದನ್ನು ತಪ್ಪಿಸಲು 2019ರಲ್ಲಿ ರಾಜ್ಯ ಸರಕಾರ ಅಫಿದವಿತ್‌ ಆಧಾರಿತ ಆನ್‌ಲೈನ್‌ ಭೂ ಪರಿವರ್ತನೆ ಜಾರಿಗೆ ತಂದಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 1,15,228 ಅರ್ಜಿಗಳು ಸಲ್ಲಿಕೆಯಾಗಿದ್ದು, 36,626 ವಿಲೇವಾರಿಯಾಗಿವೆ. 24,876 ಅರ್ಜಿಗಳು ತಿರಸ್ಕೃತಗೊಂಡಿದ್ದು, 53,726 ವಿವಿಧ ಹಂತಗಳಲ್ಲಿ ಬಾಕಿ ಇವೆ.

ಅಧಿಕ ಕಡತ ವಿಲೇವಾರಿ :

ಉಡುಪಿ ಜಿಲ್ಲೆಯಲ್ಲಿ 8,594 ಅರ್ಜಿಗಳ ಸಲ್ಲಿಕೆಯಾಗಿದ್ದು, ಅತ್ಯಧಿಕ 4,635 ವಿಲೇವಾರಿ ಆಗಿವೆ. 841 ತಿರಸ್ಕೃತಗೊಂಡಿವೆ. ಉಳಿದವು ವಿವಿಧ ಹಂತಗಳಲ್ಲಿ ಬಾಕಿ ಇವೆ. ದ.ಕ. ಜಿಲ್ಲೆಯಲ್ಲಿ 9,140 ಅರ್ಜಿಗಳು ಸಲ್ಲಿಕೆಯಾಗಿದ್ದು, 3,225ನ್ನು ವಿಲೇವಾರಿ ಮಾಡಲಾಗಿದೆ. 899 ಅರ್ಜಿಗಳು ತಿರಸ್ಕೃತಗೊಂಡಿದ್ದು, ಉಳಿದ ಅರ್ಜಿಗಳು ವಿವಿಧ ವಿಭಾಗದಲ್ಲಿ ಬಾಕಿ ಇವೆ. ಬೆಂಗಳೂರು ಗ್ರಾಮಾಂತರದಲ್ಲಿ 5,492 ಅರ್ಜಿ ಸಲ್ಲಿಕೆಯಾಗಿದ್ದು, 1,295 ಮಾತ್ರ ವಿಲೇವಾರಿಯಾಗಿವೆ.

ಮಧ್ಯವರ್ತಿಗಳು ಬೇಕಿಲ್ಲ :

Advertisement

ಅರ್ಜಿದಾರರು ಭೂ ಪರಿವರ್ತನೆಗೆ ಆನ್‌ಲೈನ್‌ ಮೂಲಕ ಅಥವಾ landrecords.karnataka.gov.in  ನಲ್ಲಿ Citizen login for revenue service link affidevit based cinversion module ಲಿಂಕ್‌ನ ಮೂಲಕ ತಾವೇ ಅಕೌಂಟ್‌ ಮತ್ತು ಲಾಗಿನ್‌ ಐಡಿ ಕ್ರಿಯೇಟ್‌ ಮಾಡಿ ಅರ್ಜಿ ಸಲ್ಲಿಸಬೇಕು. ದಾಖಲೆ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿಗಳು ಹೊರಡಿಸುವ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹವನ್ನು ಅರ್ಜಿದಾರರು ಸ್ವತಃ ತಾವೇ ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳ ಬಹುದು.

ಕುಂದಾಪುರ ಮುಂಚೂಣಿ :

ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭೂ ಪರಿವರ್ತನೆ ಅರ್ಜಿ ಸಲ್ಲಿಕೆಯಾಗಿದ್ದರೂ ಕಡತ ವಿಲೇವಾರಿಯಲ್ಲಿ ಕುಂದಾಪುರ ತಾಲೂಕು ಮಂಚೂಣಿಯಲ್ಲಿದೆ.

ತಾಲೂಕು           ಅರ್ಜಿ ಸಲ್ಲಿಕೆ     ವಿಲೇವಾರಿ

ಉಡುಪಿ               1,651     1081

ಕುಂದಾಪುರ      1,899     527

ಕಾರ್ಕಳ               1,211     723

ಬೈಂದೂರು        903         507

ಬ್ರಹ್ಮಾವರ         1,321     789

ಕಾಪು    1,361     748

ಹೆಬ್ರಿ     248         160

ದ.ಕ.ದಲ್ಲಿ ಬಂಟ್ವಾಳ ಮುಂದೆ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಅಧಿಕ ಅರ್ಜಿ ಸಲ್ಲಿಕೆಯಾದರೂ ಬಂಟ್ವಾಳ ತಾಲೂಕಿನಲ್ಲಿ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿವೆ.

ತಾಲೂಕು           ಅರ್ಜಿ ಸಲ್ಲಿಕೆ     ವಿಲೇವಾರಿ

ಮಂಗಳೂರು     4,078     744

ಬಂಟ್ವಾಳ           2,250     1,167

ಬೆಳ್ತಂಗಡಿ           986         524

ಪುತ್ತೂರು            696         261

ಸುಳ್ಯ    132         71

ಮೂಡುಬಿದಿರೆ 714         332

ಕಡಬ   284         126

ಶೇ.75ಕ್ಕೆ ಏರಿಸುವ ಗುರಿ :

ಭೂ ಪರಿವರ್ತನೆ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಕಳೆದೆರಡು ತಿಂಗಳಿನಿಂದ ಆಗಾಗ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ತಿಂಗಳಿಗೆ ಶೇ. 30ರಷ್ಟು ಅರ್ಜಿಗಳು ವಿಲೇವಾರಿಯಾಗುತ್ತಿದ್ದರೆ ಇದೀಗ ಶೇ. 60ರಷ್ಟು ವಿಲೇವಾರಿಯಾಗುತ್ತಿವೆ. ಇದನ್ನು ಶೇ.75ಕ್ಕೆ ಏರಿಸುವ ಗುರಿ ಇದೆ.ಜಿ. ಜಗದೀಶ್‌,   ಉಡುಪಿ ಜಿಲ್ಲಾಧಿಕಾರಿ

 

ತೃಪ್ತಿ ಕುಮ್ರಗೋಡು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next