Advertisement

ಶಿಕ್ಷಣ ಗುಣಮಟ್ಟ ಹೆಚ್ಚದೆ ವಿಶ್ವಮಾನ್ಯತೆ ಅಸಾಧ್ಯ

01:20 PM Apr 23, 2017 | Team Udayavani |

ದಾವಣಗೆರೆ: ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕೈಗೊಳ್ಳುವ ಸಂಶೋಧನೆ ಮತ್ತು ಶಿಕ್ಷಣ ಮಟ್ಟದ ಸುಧಾರಣೆ ಆಗದೇ ವಿಶ್ವದರ್ಜೆಗೆ ಏರುವುದು ಕನಸಿನ ಮಾತು ಎಂದು ವಿಶ್ವೇಶರಾಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಪ್ರೊ|ಎಚ್‌.ಪಿ. ಖೀಂಚಾ ಅಭಿಪ್ರಾಯಪಟ್ಟರು. 

Advertisement

ತಾಲ್ಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೂಸ ಅನುದಾನಿತ ವಿವಿಗಳ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಾವು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಹವಣಿಕೆ  ಹೊಂದಿದ್ದೇವೆ.

ಆದರೆ, ನಮ್ಮ ಸಂಶೋಧನೆ, ಶೈಕ್ಷಣಿಕ ಗುಣಮಟ್ಟ ಇಂದಿಗೂ ಆ ಮಟ್ಟಕ್ಕೆ ಏರಿಲ್ಲ ಎಂದರು. ಸಮಾಜದಲ್ಲಿ ಇಂದು ವ್ಯಕ್ತಿ ಗಳಿಸಿದ ಅಂಕಕ್ಕಿಂತ ಪ್ರತಿಭೆ ಗುರುತಿಸಲಾಗುತ್ತಿದೆ. ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಕೌಶಲ್ಯಭಿವೃದ್ಧಿ ಮತ್ತು ಜ್ಞಾನಮಟ್ಟದ ವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. 

ಆದರೆ, ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಂಡಿರುವುದರಿಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇಸ್ರೋದ ವೈಜ್ಞಾನಿಕ ಸಲಹೆಗಾರ ಡಾ| ಟಿ.ಜಿ.ಕೆ. ಮೂರ್ತಿ ಮಾತನಾಡಿ, ದೇಶದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಅತ್ಯಂತ ಅವಶ್ಯಕವೆಂದು ಪರಿಗಣಿಸಲ್ಪಟ್ಟಿದೆ. 

ಮಾನವ ಅಭಿವೃದ್ಧಿಗೊಂಡರೆ ಅದೇ ಸಂಪನ್ಮೂಲವಾಗಿ ಮಾರ್ಪಾಡಾಗುತ್ತದೆ. ಆದ್ದರಿಂದ ವಿಶ್ವವಿದ್ಯಾನಿಲಯಗಳು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿರುವ ಸೃಜನಶೀಲತೆ ಹೊರತರಲು ವೇದಿಕೆ ಕಲ್ಪಿಸಿಕೊಡಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಅಗತ್ಯವಿರುವ ಯುವ ಜನಾಂಗವನ್ನು ಕೊಡುಗೆಯಾಗಿ ನೀಡಬೇಕು ಎಂದರು. 

Advertisement

ಭಾರತದ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಸಡ್ಡೆ ಮಾತುಗಳನ್ನಾಡುತ್ತಿದ್ದರು. ಆದರೆ ಇಂದು ಇಸ್ರೋ ಚಂದ್ರಯಾನ ಮತ್ತು ಮಂಗಳಯಾನ ಯಶಸ್ವಿಗೊಳಿಸಿದೆ. ಒಂದೇ ಬಾರಿ ನೂರನಾಲ್ಕು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ಅಭಿವೃದ್ಧಿ ಹೊಂದಿದ ದೇಶಗಳು ಹುಬ್ಬೇರಿಸುವಂತೆ ಮಾಡಿದೆ.

ಇತರೆ ರಾಷ್ಟ್ರಗಳು ಇಂದು ತಮ್ಮ ಉಪಗ್ರಹಗಳ ಉಡಾವಣೆಗೆ ಭಾರತದ ಸಹಕಾರ ಕೋರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಬಿ.ಬಿ ಕಲಿವಾಳ ಮಾತನಾಡಿ, ಭಾರತದಲ್ಲಿಯೇ ರೂಸಾದಿಂದ ಅನುದಾನ ಪಡೆದ ಕಿರಿಯ ವಿಶ್ವವಿದ್ಯಾನಿಲಯ ನಮ್ಮದಾಗಿದೆ.

ಈ ಅನುದಾನ ಬಳಕೆ ಮಾಡಿಕೊಂಡು ಅನೇಕ ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ಅನುಕೂಲವಾಗಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂದು ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 

ರಾಜ್ಯ ಉನ್ನತ ಶಿಕ್ಷಣ ಮಂಡಳಿ  ಕಾರ್ಯಕಾರಿ ನಿರ್ದೇಶಕ ಡಾ| ಎಸ್‌.ಎ. ಕೋರಿ, ತುಮಕೂರು ವಿವಿ ಕುಲಪತಿ ಪ್ರೊ| ಎ.ಎಚ್‌. ರಾಜಾಸಾಬ್‌, ಮಂಗಳೂರು ವಿವಿ ಕುಲಪತಿ ಪ್ರೊ| ಕೆ. ಭೈರಪ್ಪ, ದಾವಿವಿ ಕುಲಸಚಿವ ಪ್ರೊ| ಎಸ್‌.ವಿ ಹಲಸೆ, ಪರೀûಾಂಗ ಕುಲಸಚಿವ ಪ್ರೊ| ಗಂಗಾನಾಯ್ಕ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next