Advertisement

ಕೇಬಲ್‌ ಸಂಪರ್ಕಕ್ಕೆ ಅಧಿಕ ಶುಲ್ಕ: 13 ಸಾ. ರೂ. ದಂಡ

09:54 AM Jul 08, 2019 | Team Udayavani |

ಮಂಗಳೂರು: ಕೇಬಲ್ ಸಂಪರ್ಕ ಒದಗಿಸುವ ಸ್ಯಾಟ್‌-1 ಸಂಸ್ಥೆ ಮಾಲಕರು ಚಾನೆಲ್‌ ಸಂಪರ್ಕಕ್ಕೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ದ.ಕ.ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯು ಆರೋಪಿಗೆ 13,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಅತ್ತಾವರ ವೈದ್ಯನಾಥ ನಗರದ ಲಕ್ಷ್ಮೀಕಾಂತ್‌ ಅವರು ಸ್ಯಾಟ್‌-1 ಕೇಬಲ್‌ ಸಂಸ್ಥೆಯ ಸಂಪರ್ಕ ಪಡೆದಿದ್ದರು. 300 ರೂ. ನಿಗದಿತ ಮೌಲ್ಯಕ್ಕೆ ತಮಗೆ ಇಷ್ಟದ ಚಾನೆಲ್‌ಗ‌ಳನ್ನು ಪಡೆದಿದ್ದರು. ಆದರೆ, ಇತ್ತೀಚೆಗೆ ಅವರು ಕ್ರಿಕೆಟ್‌ ಮ್ಯಾಚ್‌ ನೋಡಲು ಸ್ಟಾರ್‌ ವಾಹಿನಿ ವೀಕ್ಷಿಸಲು ಮುಂದಾದಾಗ ಆ ಚಾನೆಲ್‌ ದೊರಕುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಪರ್ಕ ಒದಗಿಸಿದ ಕೇಬಲ್‌ ಕಂಟ್ರಾಕ್ಟರ್‌ರನ್ನು ಸಂಪರ್ಕಿಸಿದಾಗ ಆ ಚಾನೆಲ್‌ಗೆ ಇನ್ನೂ ಹೆಚ್ಚುವರಿ 20 ರೂ. ನೀಡಬೇಕು ಎಂದು ಹೇಳಿದರು. ಹೆಚ್ಚುವರಿ 20 ರೂ. ನೀಡದ ಹಿನ್ನೆಲೆಯಲ್ಲಿ ಲಕ್ಷಿಕಾಂತ್‌ ಅವರ ಮನೆಗೆ ಕೇಬಲ್‌ ಸಂಪರ್ಕ ನೀಡಿರಲಿಲ್ಲ.

ಎಲ್ಲ ಚಾನೆಲ್‌ಗ‌ಳಿಗೆ ಒಟ್ಟು 300 ರೂ. ಪ್ಯಾಕೇಜ್‌ ನಿಗದಿಪಡಿಸಲಾಗಿದ್ದರೂ, ಅಕ್ರಮವಾಗಿ ಕೇಬಲ್‌ ಕಾಂಟ್ರಾಕ್ಟರ್‌ 20 ರೂ. ಹೆಚ್ಚು ವಸೂಲಿಗೆ ಮುಂದಾಗಿದ್ದರು ಎಂದು ಆರೋಪಿಸಿ ಗ್ರಾಹಕರ ವೇದಿಕೆಗೆ ವಕೀಲ ದೀನನಾಥ್‌ ಶೆಟ್ಟಿ ಮುಖಾಂತರ ದೂರು ಸಲ್ಲಿಸಿದ್ದು, ಸ್ಯಾಟ್‌-1 ಕೇಬಲ್‌ ಕಂಟ್ರಾಕ್ಟರ್‌ಗೆ ನೋಟಿಸ್‌ ನೀಡಲಾಗಿತ್ತು.

ದ.ಕ.ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ನೀಡಿದ ನೋಟಿಸ್‌ಗೆ ಪ್ರಾರಂಭದಲ್ಲಿ ಮನ್ನಣೆ ನೀಡದೆ ಬಳಿಕ ಕೇಬಲ್‌ ಮಾಲಕರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಗ್ರಾಹಕ ಲಕ್ಷಿಕಾಂತ್‌ಗೆ ಅನ್ಯಾಯ ಆಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಸ್ಯಾಟ್‌-1 ಕೇಬಲ್‌ ಮಾಲಕರು 300 ರೂ. ಪ್ಯಾಕೇಜ್‌ನಲ್ಲೇ ಸ್ಟಾರ್‌ ಟಿವಿ ಚಾನೆಲ್‌ ಅನ್ನು ಒದಗಿಸಬೇಕು ಹಾಗೂ ಪರಿಹಾರವಾಗಿ 10,000 ರೂ. ಮತ್ತು ನ್ಯಾಯಾಲಯದ ಶುಲ್ಕ 3,000 ರೂ. ನೀಡಬೇಕೆಂದು ಆದೇಶಿಸಿದೆ. ಈ ಪರಿಹಾರ ಮೊತ್ತವನ್ನು ಆದೇಶ ಜಾರಿಗೊಳಿಸಿದ ಒಂದು ತಿಂಗಳೊಳಗಾಗಿ ನೀಡಬೇಕೆಂದು ನ್ಯಾಯಾಲಯದ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next